ಆ್ಯಪ್ನಗರ

ಬೆಳೆ ವಿಮೆ ಪಾವತಿ ದಿನಾಂಕ ಮುಂದೂಡಲು ಮನವಿ

ಸರಕಾರಿ ಸವಲತ್ತು ಸಾರ್ವಜನಿಕರು, ರೈತರು ಹಾಗೂ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ದೊರೆಯುತ್ತಿರುವ ಬಗ್ಗೆ ಪರಿಶೀಲನೆಗಾಗಿ ತಾಲೂಕಿನ ಎಲ್ಲ ನಾಡ ಕಚೇರಿ ಹಾಗೂ ಗ್ರಾ.ಪಂ.ಗಳಿಗೆ ಭೇಟಿ ನೀಡುತ್ತಿರುವುದಾಗಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ತಿಳಿಸಿದರು.

Vijaya Karnataka 7 Jul 2019, 5:00 am
ಆನವಟ್ಟಿ: ಸರಕಾರಿ ಸವಲತ್ತು ಸಾರ್ವಜನಿಕರು, ರೈತರು ಹಾಗೂ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ದೊರೆಯುತ್ತಿರುವ ಬಗ್ಗೆ ಪರಿಶೀಲನೆಗಾಗಿ ತಾಲೂಕಿನ ಎಲ್ಲ ನಾಡ ಕಚೇರಿ ಹಾಗೂ ಗ್ರಾ.ಪಂ.ಗಳಿಗೆ ಭೇಟಿ ನೀಡುತ್ತಿರುವುದಾಗಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ತಿಳಿಸಿದರು.
Vijaya Karnataka Web SMR-05AVTP1


ಗ್ರಾಮದ ನಾಡ ಕಚೇರಿಗೆ ಶುಕ್ರವಾರ ಶಾಸಕರು, ಎಸಿ ಹಾಗೂ ಅಧಿಕಾರಿಗಳೊಂದಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ವೈದ್ಯರು ಹಾಗೂ ಪಶು ವೈದ್ಯರ ಕೊರತೆ, ವಿದ್ಯಾರ್ಥಿಗಳಿಗೆ ಹಾಸ್ಟೆಲ್‌, ಬಸ್‌ ಕೊರತೆ, ಹಂದಿ ಹಾವಳಿ, ಮುಖ್ಯ ರಸ್ತೆ ಅಪೂರ್ಣ ಕಾಮಗಾರಿ, ಸಂತೆ ಮಾರ್ಕೆಟ್‌ ಕಾಮಗಾರಿ ಮಂದಗತಿ, ಪಹಣಿ, ಆಧಾರ್‌ ಮತ್ತಿತರ ದಾಖಲೆ ನೀಡಲು ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರು ಡಿಸಿಗೆ ದೂರುಗಳ ಸರಮಾಲೆಯನ್ನೇ ನೀಡಿದರು. ಕೊರತೆ ನೀಗಿಸಲು ಕಾನೂನು ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಭರವಸೆ ನೀಡಿದರು.

ಆನವಟ್ಟಿಯಲ್ಲಿ ಚರಂಡಿಗಳ ಅಸಮರ್ಪಕ ನಿರ್ವಹಣೆ, ಹಂದಿ, ನಾಯಿಗಳ ಹಾವಳಿ, ಮುಖ್ಯರಸ್ತೆ ಕಾಮಗಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ ಅಧಿಕಾರಿಗಳಿಗೆ ಸೂಚಿಸಿದರು. ವಾರದೊಳಗೆ ಚರಂಡಿ ಸ್ವಚ್ಛಗೊಳಿಸಿ ವರದಿ ಸಲ್ಲಿಸುವಂತೆ ಪಿಡಿಒಗೆ ತಾಕೀತು ಮಾಡಿದರು.

ಶಾಸಕ ಕುಮಾರ್‌ಬಂಗಾರಪ್ಪ ಮಾತನಾಡಿ, ಕೆರೆಗಳಿಗೆ ನೀರು ಬಾರದೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಭಾರಂಗಿ, ಕುಪ್ಪಗಡ್ಡೆ, ಜಡೆ, ಮೂಡಿ ಭಾಗಗಳಿಂದ ಶಾಲೆಗೆ ಬರಲು ಬಸ್‌ ಬಿಡಿಸಲು ಈಗಾಗಲೆ ಡಿಪೋ ವ್ಯವಸ್ಥಾಪಕರ ಬಳಿ ಮಾತನಾಡಲಾಗಿದೆ. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸ್ಥಳಾವಕಾಶ ಇಲ್ಲದಿರುವುದರಿಂದ ಹೆಚ್ಚುವರಿ ಹಾಸ್ಟೆಲ್‌ಗೆ ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಈಗಿನ ಬಸ್‌ಸ್ಟಾಂಡ್‌ನಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ಕೋಟೆ ಜಾಗದಲ್ಲಿ ನೂತನ ಬಸ್‌ ನಿಲ್ದಾಣಕ್ಕೆ ಜಾಗ ಗುರುತಿಸಲಾಗಿದ್ದು, ನಿರ್ಮಾಣಕ್ಕೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಬೆಳೆವಿಮೆ ಸಮರ್ಪಕವಾಗಿ ಕಳೆದ ವರ್ಷ ರೈತರಿಗೆ ತಲುಪಿಲ್ಲ ಹಾಗೂ ಪ್ರಸ್ತುತ ವರ್ಷದ ಬೆಳೆವಿಮೆ ಕಟ್ಟಲು ದಿನಾಂಕ ಮುಂದೂಡಬೇಕೆಂದು ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿತು.

ಗ್ರಾ.ಪಂ. ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಕೇಶವ ರಾಯ್ಕರ್‌, ಸದಸ್ಯರಾದ ಉಮೇಶ್‌ ಉಡುಗಣಿ, ಕೆ.ಮಂಜಪ್ಪ, ಕೃಷ್ಣಮೂರ್ತಿ, ನಾಗರಾಜ, ವಿಜಯಮ್ಮ ತಾ.ಪಂ. ಸದಸ್ಯ ಹನುಮಂತಪ್ಪ, ಮುಖಂಡರಾದ ಎ.ಎಲ್‌.ಅರವಿಂದ್‌, ಪಿ.ಎಸ್‌. ಪ್ರಶಾಂತ್‌, ಮಲ್ಲಿಕಾರ್ಜುನ ಗುತ್ತೇರ, ಭಾರಂಗಿ ಬಸಣ್ಣ, ವೃತ್ತಿಕೊಪ್ಪ ಮಲ್ಲಿಕಾರ್ಜುನ, ಮಹೇಶ್‌ ಮೂಡಿ, ಶಬ್ಬೀರ್‌ ಅಹ್ಮದ್‌ ಖಿಲ್ಲೇದಾರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ