ಆ್ಯಪ್ನಗರ

ಮತದಾರನ ಗಮನ ಸೆಳೆದ ರೋಡ್‌ ಶೋ

ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರದಲ್ಲಿ ಅಬ್ಬರಿಸಿ ಬೊಬ್ಬಿರಿದ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಕಡೇ ದಿನ ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

Vijaya Karnataka 11 May 2018, 5:00 am
ಶಿವಮೊಗ್ಗ : ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರದಲ್ಲಿ ಅಬ್ಬರಿಸಿ ಬೊಬ್ಬಿರಿದ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಕಡೇ ದಿನ ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.
Vijaya Karnataka Web road show attracted by voter
ಮತದಾರನ ಗಮನ ಸೆಳೆದ ರೋಡ್‌ ಶೋ


ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಜನರನ್ನು ಸೇರಿಸಿ ಪೇಟೆ ಮತ್ತು ನಗರದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ನಡೆಸುವ ಮೂಲಕ ಜನರ ಗಮನ ಸೆಳೆದರು. ಸಂಜೆಗೆ ಬಹಿರಂಗ ಪ್ರಚಾರ ಅಂತ್ಯವಾದ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ರೋಡ್‌ ಶೋ ನಡೆಸಲಾಯಿತು.

ಶಿವಮೊಗ್ಗ ನಗರ: ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಬೃಹತ್‌ ರೋಡ್‌ ಶೋ ನಡೆಸಿದರು. ತಾವೇನು ಕಡಿಮೆ ಇಲ್ಲ ಎಂಬಂತೆ ಪಕ್ಷೇತರ ಅಭ್ಯರ್ಥಿ ನರಸಿಂಹಮೂರ್ತಿ ಸಹ ರೋಡ್‌ ಶೋ ನಡೆಸಿ ಗಮನ ಸೆಳೆದರು.

ಬಿಜೆಪಿ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗಾಂಧಿಬಜಾರ್‌, ಅಮೀರ್‌ ಅಹಮ್ಮದ್‌ ವೃತ್ತ, ಗೋಪಿ ವೃತ್ತ, ಜೈಲ್‌ ವೃತ್ತದವರೆಗೆ ರೋಡ್‌ ಶೋ ನಡೆಸಿದರು. ಪಕ್ಷದ ಚಿಹ್ನೆಯನ್ನು ತೋರಿಸುವ ಟೋಪಿ, ಶಲ್ಯ, ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಹಾದಿಯುದ್ದಕ್ಕೂ ಜನರತ್ತ ಕೈ ಬೀಸಿ ಗಮನ ಸೆಳೆದರು. ಪಕ್ಷದ ಪರವಾಗಿ ಮತ್ತು ಅಭ್ಯರ್ಥಿ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು.

ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್‌, ಜಿಲ್ಲಾಧ್ಯಕ್ಷ ಎಸ್‌.ರುದ್ರೇಗೌಡ, ಆಯನೂರು ಮಂಜುನಾಥ್‌, ಆರ್‌.ಕೆ.ಸಿದ್ದರಾಮಣ್ಣ, ಜ್ಯೋತಿ ಪ್ರಕಾಶ್‌, ಡಿ.ಎಸ್‌.ಅರುಣ್‌, ದತ್ತಾತ್ರಿ ಮತ್ತಿತರರು ರೋಡ್‌ ಶೋದಲ್ಲಿ ಭಾಗವಹಿಸಿದ್ದರು. ಬಳಿಕ ಜೈಲ್‌ ವೃತ್ತದಲ್ಲಿ ನಡೆದ ಕಾರ್ನರ್‌ ಮೀಟಿಂಗ್‌ನಲ್ಲಿ ಆರ್‌ಎಸ್‌ಎಸ್‌ ಪ್ರಮುಖ ಪಟ್ಟಾಭಿರಾಮ್‌ ಮಾತನಾಡಿದರು.

ಕಾಂಗ್ರೆಸ್‌ ವತಿಯಿಂದ ನಡೆದ ರೋಡ್‌ ಶೋದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಲಕ್ಷ್ಮೇ ಚಿತ್ರಮಂದಿರದ ವರೆಗೆ ಜಾಥಾ ನಡೆಯಿತು. ರೋಡ್‌ ಶೋದಲ್ಲಿ ಡೊಳ್ಳು, ಹಲಗೆಗಳು ಮೊಳಗಿದವು. ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್‌ ಅವರನ್ನು ಕೆಲವೆಡೆ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಪಕ್ಷದ ಮತ್ತು ಮುಖಂಡ ಪರ ಘೋಷಣೆಗಳನ್ನು ಕೂಗಿದರು. ರೋಡ್‌ ಶೋ ಅಂತ್ಯದಲ್ಲಿ ಲಕ್ಷ್ಮಿ ಚಿತ್ರಮಂದಿರದ ಬಳಿಕ ಕಾರ್ನರ್‌ ಮೀಟಿಂಗ್‌ ನಡೆಸಿದರು. ಜಾಥಾದಲ್ಲಿ ಮುಖಂಡರಾದ ಎಸ್‌.ಪಿ.ಶೇಷಾದ್ರಿ, ಇಸ್ಮಾಯಿಲ್‌ ಖಾನ್‌, ವಿಶ್ವನಾಥ ಕಾಶಿ, ಎಚ್‌.ಎಂ.ಮಧು, ಸಿದ್ದಪ್ಪ ಮತ್ತಿತರು ಭಾಗವಹಿಸಿದ್ದರು.

ಪಕ್ಷೇತರ ಅಭ್ಯರ್ಥಿ ನರಸಿಂಹಮೂರ್ತಿ(ಬಾಬಣ್ಣ) ಸಹ ಪ್ರಮುಖ ಪಕ್ಷಗಳಂತೆ ಬೃಹತ್‌ ರೋಡ್‌ ಶೋ ನಡೆಸಿದರು. ಜೈಲ್‌ ರಸ್ತೆ, ದುರ್ಗಿಗುಡಿ ರಸ್ತೆ, ನೆಹರೂ ರಸ್ತೆ, ಬಸ್‌ ನಿಲ್ದಾಣ ಮುಂತಾದಡೆ ರೋಡ್‌ ಶೋ ನಡೆಸಿದರು. ಜೆಡಿಎಸ್‌ ಅಭ್ಯರ್ಥಿ ಎಚ್‌.ಎನ್‌.ನಿರಂಜನ್‌ ಅವರು ಕಡೇ ದಿನ ಸಹ ಪಕ್ಷದ ಕಾರ್ಯಕರ್ತರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು.

ತೀರ್ಥಹಳ್ಳಿಯಲ್ಲಿ ಕೇಂದ್ರ ಸಚಿವ ಹರ್ಷವರ್ಧನ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ನೇತೃತ್ವದಲ್ಲಿ ಪ್ರತ್ಯೇಕ ರೋಡ್‌ ಶೋ ನಡೆಸಿದರೆ, ಜೆಡಿಎಸ್‌ ಅಭ್ಯರ್ಥಿ ಆರ್‌.ಎಂ.ಮಂಜುನಾಥಗೌಡ ಅವರು ಪಕ್ಷದ ಕಾರ್ಯಕರ್ತರೊಂದಿಗೆ ರೋಡ್‌ ಶೋ ನಡೆಸಿದರು. ಕಾಂಗ್ರೆಸ್‌ ಅಭ್ಯರ್ಥಿ ಕಿಮ್ಮನೆ ರತ್ನಾಕರ್‌ ಅವರು ಕಡೆ ದಿನ ಸಹ ಮನೆ ಮನೆ ಭೇಟಿ ಪ್ರಚಾರ ನಡೆಸಿದರು.

ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕಾರ್ಯಕರ್ತರೊಂದಿಗೆ ರೋಡ್‌ ಶೋ ನಡೆಸಿದರೆ, ಇವರಿಗೆ ಚಲನಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಸಾಥ್‌ ನೀಡಿದರು. ಕಾಂಗ್ರೆಸ್‌ ಅಭ್ಯರ್ಥಿ ಗೋಣಿ ಮಾಲತೇಶ್‌ ಸಹ ಶಕ್ತಿ ಪ್ರದರ್ಶನ ಮಾಡಿದರು. ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಅವರು ರೋಡ್‌ ಶೋ ನಡೆಸಿದರು. ಸೊರಬದಲ್ಲಿ ಕುಮಾರ್‌ ಬಂಗಾರಪ್ಪ ಮತ್ತು ಮಧುಬಂಗಾರಪ್ಪ ರೋಡ್‌ ಶೋ ನಡೆಸಿದರು.

ಜೆಡಿಎಸ್‌ ಅಭ್ಯರ್ಥಿ ಎಂ.ಜೆ.ಅಪ್ಪಾಜಿ ತಮ್ಮ ಬೆಂಬಲಿಗರೊಂದಿಗೆ ಕೆಲವೆಡೆ ರೋಡ್‌ ಶೋ ನಡೆಸಿ, ಇನ್ನು ಕೆಲವೆಡೆ ಮನೆ ಮನೆ ಭೇಟಿ ನೀಡಿ ಮತಯಚಿಸಿದರೆ. ಸಂಗಮೇಶ್‌ ಅವರು ಪಕ್ಷದ ಶಕ್ತಿ ಪ್ರದರ್ಶನ ಮಾಡಿದರು. ಗ್ರಾಮಾಂತರದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಮನೆ ಮನೆ ಭೇಟಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ