ಆ್ಯಪ್ನಗರ

ನಿಷ್ಕಲ್ಮಶ ಮನಸ್ಸಿನಿಂದ ರಾಮಾಯಣ ನೋಡಿ

ರಾಮಾಯಣ ಮಹಾಕಾವ್ಯವು ಜನಮಾನಸದಲ್ಲಿ ಜೀವಂತ ಕಥೆಯಾಗಿ ವ್ಯಾಪಕವಾದ ವಿಸ್ತಾರವನ್ನು ಪಡೆದುಕೊಳ್ಳುತ್ತಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಹೇಳಿದರು.

Vijaya Karnataka 26 Sep 2018, 5:00 am
ಸಾಗರ : ರಾಮಾಯಣ ಮಹಾಕಾವ್ಯವು ಜನಮಾನಸದಲ್ಲಿ ಜೀವಂತ ಕಥೆಯಾಗಿ ವ್ಯಾಪಕವಾದ ವಿಸ್ತಾರವನ್ನು ಪಡೆದುಕೊಳ್ಳುತ್ತಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಹೇಳಿದರು.
Vijaya Karnataka Web SMR-25sgr10


ತಾಲೂಕಿನ ಜೋಗ ಸಮೀಪದ ಅತಿಶಯ ಕ್ಷೇತ್ರ ವಡನ್‌ಬೈಲು ಪ್ರಕೃತಿಯ ತಾಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಶಿವಮೊಗ್ಗದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡದ ರಾಮಾಯಣಗಳು ಎನ್ನುವ ವಿಷಯದ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿಚಾರ ಸಂಕಿರಣದ ಮೂಲಕ ಕೃತಿಗೆ ಗೌರವ ಕೊಡುವ ಕೆಲಸವಾಗಬೇಕು. ವ್ಯಕ್ತಿ ಕೇಂದ್ರಿತ ಕೃತಿಯಾಗಿ, ಬಹುಕೇಂದ್ರಿತ ಕೃತಿಯಾಗಿ ಗ್ರಹಿಸುವ ಬದಲು ವಸ್ತು ಕೇಂದ್ರಿತ ಕೃತಿಯಾಗಿ ಗಮನಿಸಬೇಕು. ಬಹುತ್ವಗಳನ್ನು ಗೌರವಿಸುವ ರೀತಿಯಲ್ಲಿ ಪ್ರಜಾಸತ್ತಾತ್ಮಕ ನೆಲೆಯಲ್ಲಿ ರಾಮಾಯಣವನ್ನು ಗ್ರಹಿಸಬೇಕು. ರಾಮಾಯಣವನ್ನು ಮುಖಾಮುಖಿಯಾಗಬೇಕಾದ ಕ್ರಮಗಳ ಬಗ್ಗೆ ಚಿಂತಿಸುವ ನಿಟ್ಟಿನಲ್ಲಿ ಸಂಕಿರಣ ಸಹಕಾರಿಯಾಗಬೇಕು ಎಂದರು.

ಭಾರತವನ್ನು ಒಗ್ಗೂಡಿಸಲು ಸಹಕಾರಿಯಾದ ರಾಮಾಯಣ, ಮಹಾಭಾರತ, ಪುರಾಣ ಕಾವ್ಯಗಳು ಇಂದು ವಿಭಜಿಸುವ ಕಾರ‍್ಯಕ್ಕೆ ಸಹಕಾರಿಯಾಗುತ್ತಿರುವುದು ದುರಂತ . ಇಂದು ಧರ್ಮ ಮತ್ತು ರಾಜಕಾರಣ ದರಿದ್ರ ಹಾಗೂ ಭ್ರಷ್ಟ ಸ್ಥಿತಿಗೆ ಕುಸಿಯುತ್ತಿವೆ. ಧರ್ಮ ಮತ್ತು ರಾಜನೀತಿ ಕೆಟ್ಟುಹೋಗಿವೆ. ಧರ್ಮವು ದೀರ್ಘಕಾಲ ರಾಜನೀತಿಯಾಗಿದ್ದು, ರಾಮಾಯಣವನ್ನು ಕೇವಲ ಇಟ್ಟಿಗೆ ಮೂಲಕ ಮಾತ್ರ ನೋಡಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗಿತ್ತಿ ಮಾತನಾಡಿ. ಸಂಕಿರಣದ ಮೂಲಕ ಮತ್ತೊಂದು ವಿವಾದ ಸೃಷ್ಟಿಸುವುದು ಅಕಾಡೆಮಿ ಉದ್ದೇಶವಲ್ಲ. ಭಾರತದ ಬಹುತ್ವವನ್ನು, ಇಲ್ಲಿನ ಸಂಸ್ಕೃತಿಯ ಬಹುತ್ವವನ್ನು ಅರ್ಥಮಾಡಿಕೊಳ್ಳುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ರಾಮಾಯಣದ ವಸ್ತುರೂಪÜನ್ನು ವ್ಯಾಖ್ಯಾನಿಸುವ ಸಲುವಾಗಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ರಾಮಾಯಣವನ್ನು ನಿಷ್ಕಲ್ಮಶ ಮನಸ್ಸಿನಿಂದ ನೋಡಬೇಕಾಗಿದೆ ಎಂದರು.

ಡಾ.ಪ್ರಶಾಂತ್‌ ಬಿ. ನಾಯಕ್‌ ಪ್ರಸ್ತಾವನೆ ಮಾಡಿದರು. ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ ಮಂಜುನಾಥ್‌, ಧರ್ಮದರ್ಶಿ ಹೆಚ್‌.ಎಂ.ವೀರರಾಜ್‌ಯ್ಯ ಜೈನ್‌, ಪರಮೇಶ್ವರ ಕರೂರ್‌ ಉಪಸ್ಥಿತರಿದ್ದರು.

ಜೈನರಾಮಾಯಣ, ಆಧುನಿಕ ರಾಮಾಯಣ, ಜನಪದ ರಾಮಾಯಣ ಮುಂತಾದ ವಿಷಯಗಳ ಕುರಿತು ವಿದ್ವಾಂಸರು ಗೋಷ್ಠಿಗಳನ್ನು ನಡೆಸಿಕೊಟ್ಟರು. ಅಕಾಡೆಮಿಯ ಸದಸ್ಯರು, ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಆಸಕ್ತರು ಸಂಕಿರಣದಲ್ಲಿ ಭಾಗವಹಿಸಿದ್ದರು.

ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಎನ್‌. ಕರಿಯಪ್ಪ ಸ್ವಾಗತಿಸಿದರು. ಎಂ.ಎಂ. ಸ್ವಾಮಿ ವಂದಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ