ಆ್ಯಪ್ನಗರ

ಚುನಾವಣೆಗೆ ಪ್ರತ್ಯೇಕ ಇಲಾಖೆ ಇದ್ದರೆ ಒಳಿತು

ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿದ್ದರೂ, ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಚುನಾವಣೆ ಪ್ರಕ್ರಿಯೆಗೆ ಪ್ರತ್ಯೇಕ ಇಲಾಖೆ ಇದ್ದರೆ ಮತದಾನದಲ್ಲಿ ಗರಿಷ್ಠ ಮಟ್ಟ ತಲುಪಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಅಭಿಮತ ವ್ಯಕ್ತಪಡಿಸಿದರು.

Vijaya Karnataka 26 Apr 2019, 5:00 am
ಶಿವಮೊಗ್ಗ : ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿದ್ದರೂ, ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಚುನಾವಣೆ ಪ್ರಕ್ರಿಯೆಗೆ ಪ್ರತ್ಯೇಕ ಇಲಾಖೆ ಇದ್ದರೆ ಮತದಾನದಲ್ಲಿ ಗರಿಷ್ಠ ಮಟ್ಟ ತಲುಪಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಅಭಿಮತ ವ್ಯಕ್ತಪಡಿಸಿದರು.
Vijaya Karnataka Web separate department good for election
ಚುನಾವಣೆಗೆ ಪ್ರತ್ಯೇಕ ಇಲಾಖೆ ಇದ್ದರೆ ಒಳಿತು


ಪ್ರೆಸ್‌ಟ್ರಸ್ಟ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿ, ಮತದಾನದಲ್ಲಿ ಶೇ.100 ರಷ್ಟು ಸಾಧಿಸುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಆದರೆ, ಇದನ್ನೇ ಸವಾಲಾಗಿ ಸ್ವೀಕರಿಸಿ ಅದಕ್ಕೆ ಬೇಕಾದ ಪ್ರಯತ್ನ ಮಾಡಬಹುದು. ಈ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂಬ ತೃಪ್ತಿ ಇದೆ ಎಂದರು.

ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳಲು ಪ್ರತೇಕ ಇಲಾಖೆ ಇದ್ದರೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನಕ್ಕೆ ಸಹಕಾರಿಯಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಜನರಲ್ಲಿ ಮತದಾನ ಬಗ್ಗೆ ಜಾಗೃತಿಗಿಂತ ನಿತ್ಯ ಜಾಗೃತಿಗಾಗಿ ಪ್ರತೇಕ ಇಲಾಖೆ ಇದ್ದರೆ ಮತದಾನದ ಪ್ರಮಾಣವನ್ನು ಗರಿಷ್ಠ ಮಟ್ಟಕ್ಕೆ ಕೊಂಡ್ಯೊಯ್ಯಬಹುದು ಎಂದರು.

ಉತ್ತಮ ಸ್ಪಂದನೆ ಇದ್ದರೆ ಎಂತ ಗುರಿಯನ್ನಾದರೂ ಸಲೀಸಾಗಿ ತಲುಪಬಹುದು. ಮತದಾನದಲ್ಲಿ ನಂ.1ನಲ್ಲಿ ಸೋತಿರಬಹುದು. ಮತದಾರರ ಮನ ಮುಟ್ಟುವಲ್ಲಿ ಗೆದ್ದಿದ್ದೇವೆ. ಕಳೆದ 18 ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿದೆ. ಇದೇ ಪ್ರಥಮ ಬಾರಿಗೆ ಮತದಾನ ಪ್ರಮಾಣ ಶೇ.76ರ ಗಡಿದಾಟಿದೆ. ಇದರ ಬಗ್ಗೆ ಹೆಮ್ಮೆ ಇದೆ ಎಂದರು.

ಈ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಮತದಾನವಾಗಿರುವುದರ ಹಿಂದೆ ಸಾಕಷ್ಟು ಜನರ ಪರಿಶ್ರಮವಿದೆ. ಅದರಲ್ಲಿ ಹೆಚ್ಚಿನದಾಗಿ ವಿದ್ಯಾರ್ಥಿಗಳ ಶ್ರಮವಿದೆ. ಮನೆ-ಮನೆಗೆ ಭೇಟಿ ನೀಡಿ ಮತದಾರರ ಮನವೊಲಿಸುವಲ್ಲಿ ವಿದ್ಯಾರ್ಥಿಗಳದ್ದು ಸಿಂಹಪಾಲು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಂದು ಒಳ್ಳೆಯ ಕೆಲಸ ಮಾಡಲು ಹೊರಟರೆ ಜನರಿಂದ ಖಂಡಿತ ಒಳ್ಳೆಯ ಸ್ಪಂದನೆ ಸಿಗುತ್ತದೆ ಎಂಬುದು ನಮಗೀಗ ಅರಿವಾಗಿದೆ. ವಿದ್ಯಾರ್ಥಿಗಳು, ಸಂಘಸಂಸ್ಥೆಗಳು, ಮಾಧ್ಯಮಗಳು, ಸಾರ್ವಜನಿಕರು ಹೀಗೆ ಎಲ್ಲರೂ ನಮಗೆ ಸಹಕಾರ ನೀಡಿದ್ದಾರೆ. ಒಳ್ಳೆಯದನ್ನು ಜನರು ನಿಜಕ್ಕೂ ಸ್ವಾಗತಿಸುತ್ತಾರೆ. ಪ್ರೇರೇಪಿಸುತ್ತಾರೆ. ಈ ಬಾರಿ ಹೆಚ್ಚು ಮತದಾನವಾಗಲು ಇದೇ ಕಾರಣ ಎಂದರು.

ಆಯುಕ್ತರ ವಿರುದ್ಧ ಅಸಮಾಧಾನ:

ಚುನಾವಣೆ ದಿನ ಸಿಬ್ಬಂಧಿಗಳ ಊಟ-ಉಪಚಾರದಲ್ಲಿ ಚುನಾವಣೆ ಆಯೋಗ ವಿಫಲವಾಗಿದೆ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಸಿಬ್ಬಂಧಿಗಳ ಯೋಗಕ್ಷೇಮ ನಮ್ಮದೇ ಹೊಣೆ. ಶಿವಮೊಗ್ಗ ನಗರ ವ್ಯಾಪ್ತಿ ಹೊರತು ಪಡಿಸಿ ಉಳಿದ ಯಾವ ಕ್ಷೇತ್ರದಲ್ಲಿಯೂ ಈ ರೀತಿಯ ಸಮಸ್ಯೆಯಾಗಿಲ್ಲ.

ನಗರದ ವ್ಯಾಪ್ತಿಯ ಚುನಾವಣೆ ಸಿಬ್ಬಂಧಿಗಳಿಗೆ ಸೌಕರ್ಯವನ್ನು ನಾವೇ ಒದಗಿಸುತ್ತೇವೆ ಎಂದು ಆಯುಕ್ತರು ಹೇಳಿದ್ದರು. ಹೀಗಾಗಿ ನಗರದ ವ್ಯಾಪ್ತಿ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಲಿಲ್ಲ. ಸಿಬ್ಬಂಧಿಗಳ ಉಪಚಾರದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ ಎಂದು ದೂರು ಬಂದಿದ್ದು ನಿಜ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರೆಸ್ಟ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌ ಇದ್ದರು.


ಮತದಾನ ಜಾಗೃತಿಗೆ ಹೊರಟಾಗ ನಾವು ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ ತಿಳಿಸಿಕೊಡುವ ಮೂಲಕ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆವು. ಮತದಾನ ಜಾಗೃತಿಗಾಗಿ ವಿದ್ಯಾರ್ಥಿಗಳು ಉಪವಾಸವನ್ನೇ ಮಾಡಿದರು. ಎಲ್ಲರ ಪರಿಶ್ರಮದಿಂದ ಎರಡನೇ ಹಂತದ ಚುನಾವಣೆ ಕ್ಷೇತ್ರಗಳ ಮತದಾನ ಪ್ರಮಾಣದಲ್ಲಿ ಶಿವಮೊಗ್ಗವನ್ನು ಪ್ರಥಮ ಸ್ಥಾನಕ್ಕೆ ತಂದು ನಿಲ್ಲಿಸಿದ್ದೇವೆ. ಮುಂದೆ ಮತದಾನ ಕಡಿಮೆಯಾಗಿರುವ ಬೂತ್‌ಗಳನ್ನು ಗುರುತಿಸಿ, ಪರಿಶೀಲನೆ ನಡೆಸಿ, ರಾಜ್ಯದಲ್ಲಿಯೇ ಶಿವಮೊಗ್ಗವನ್ನು ಪ್ರಥಮ ಸ್ಥಾನಕ್ಕೇರಿಸುವ ಗುರಿ ಇದೆ. ಈಗ ಸಿಕ್ಕಿರುವ ಯಶಸ್ಸಿಗೆ ನಾವು ನೆಪ ಮಾತ್ರ. ನಿಜವಾಗಿಯೂ ಇದು ಮತದಾರರ ಯಶಸ್ಸು.

-ಕೆ.ಎ.ದಯಾನಂದ್‌, ಜಿಲ್ಲಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ