ಆ್ಯಪ್ನಗರ

ವೇದ ಉಪನಿಷತ್‌ ಭಗವಂತನ ಕಾನೂನು ರೂಪ

ಮನುಷ್ಯ ಭಗವಂತನನ್ನು ಸ್ಮರಣೆ ಮಾಡುವುದರಿಂದ ಭಗವಂತನಿಗೆ ಯಾವುದೇ ಲಾಭ ಇಲ್ಲ. ದೇವರ ಸ್ಮರಣೆ ಮಾಡುವುದರಿಂದ ಸ್ವತಃ ನೆಮ್ಮದಿ ಜೀವನ ಸಾಧ್ಯ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

Vijaya Karnataka 24 May 2019, 9:24 pm
ಶಿವಮೊಗ್ಗ : ಮನುಷ್ಯ ಭಗವಂತನನ್ನು ಸ್ಮರಣೆ ಮಾಡುವುದರಿಂದ ಭಗವಂತನಿಗೆ ಯಾವುದೇ ಲಾಭ ಇಲ್ಲ. ದೇವರ ಸ್ಮರಣೆ ಮಾಡುವುದರಿಂದ ಸ್ವತಃ ನೆಮ್ಮದಿ ಜೀವನ ಸಾಧ್ಯ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
Vijaya Karnataka Web 001


ನಗರದ ಶೃಂಗೇರಿ ಶಂಕರಮಠದಲ್ಲಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸಭಾಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣದಲ್ಲಿ ಅವರು ಮಾತನಡಿದರು.

ರಾಜ್ಯವನ್ನು ಆಳುವ ಅರಸ ಅಲ್ಲಿನ ಜನಸಾಮಾನ್ಯರ ಏಳಿಗಾಗಿ ಕೆಲವು ಕಾನೂನು ರೂಪಿಸುತ್ತಾನೆ. ಆ ಕಾನೂನಿಗೆ ಅನುಗುಣವಾಗಿ ಪ್ರಜೆಗಳು ನಡೆದರೆ ನೆಮ್ಮದಿ ಜೀವನ ಸಿಗುತ್ತದೆ. ಅದೇ ರೀತಿ ಈ ಲೋಕಕ್ಕೆ ಅಧಿಪತಿಯಾಗಿರುವ ಭಗವಂತ ಮನುಷ್ಯನ ಉದ್ಧಾರಕ್ಕಾಗಿ ಒಂದಿಷ್ಟು ಕಾನೂನು ರೂಪಿಸಿ ವೇದ, ಉಪನಿಷತ್‌ಗಳಲ್ಲಿ ಅಡಕಗೊಳಿಸಿದ್ದಾನೆ. ಅವುಗಳನ್ನು ಜೀವನದಲ್ಲಿ ಅನುಸರಿಸಿದರೆ ನೆಮ್ಮದಿ ಜೀವನವನ್ನು ನಡೆಸಬಹುದಾಗಿದೆ ಎಂದರು.

ಇಡೀ ಜಗತ್ತಿನ ಜ್ಞಾನ ಸಂಪತ್ತಿಗೆ ವೇದ-ಉಪ ನಿಷತ್ತುಗಳು ಅತ್ಯುತ್ತಮ ಸಂಪನ್ಮೂಲ. ವೇದ, ಉಪನಿಷತ್ತುಗಳಲ್ಲಿ ಎಲ್ಲವೂ ಅಡಗಿದೆ. ವೇದಗಳಲ್ಲಿ ಇಲ್ಲದೇ ಇರುವುದು ಇಡೀ ಜಗತ್ತಿನಲ್ಲಿ ಏನೂ ಇಲ್ಲ. ಶ್ರುತಿ, ಸ್ಮೃತಿ, ವೇದ, ಉಪನಿಷತ್ತುಗಳು ಹಾಗೂ ಧರ್ಮ ಭಾರತೀಯರಿಗೆ ಮಾತ್ರ ಸೀಮಿತವಾಗಿಲ್ಲ. ಅವೆಲ್ಲಾ ಇಡೀ ಜಗತ್ತಿಗೆ ಸೇರುವಂಥವು ಎಂದು ಅವರು ವಿಶ್ಲೇಷಿಸಿದರು.

ವೇದಗಳು ಅಪೌರುಶೇಯವಾದವು. ಅವನ್ನು ಯಾವೊಬ್ಬ ವ್ಯಕ್ತಿ ಕೂತು ಬರೆದಿದ್ದಲ್ಲ. ಋುಷಿಮುನಿಗಳು ತಪಸ್ಸಿಗೆ ಕೂತ ಸಮಯದಲ್ಲಿ ದರುಶನವಾದಂಥವು. ವೇದಗಳಲ್ಲಿ ಜ್ಞಾನ ಮತ್ತು ಬ್ರಹ್ಮ ಜ್ಞಾನ ಎರಡೂ ಅಡಗಿವೆ. ವೇದ, ಶ್ರುತಿ, ಸ್ಮೃತಿ ಹಾಗೂ ಉಪನಿಷತ್ತುಗಳು ಪರಮಾತ್ಮ ಗ್ರಹಿಸುವಂಥವು. ಮಾನವನ ಯೋಚನಾಶಕ್ತಿಗೆ ನಿಲುಕುವಂಥವಲ್ಲ. ಹೀಗಾಗಿ, ವೇದ ಉಪನಿಷತ್ತುಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಪ್ರತಿಪಾದಿಸಿದರು.

ಶಿವಮೊಗ್ಗ ಶಂಕರಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್‌, ನಟರಾಜ್‌ ಭಾಗವತ್‌, ವೇಣುಗೋಪಾಲ್‌, ದತ್ತಾತ್ರಿ, ಶಿವಶಂಕರ್‌ ಮತ್ತಿತರರು ಉಪಸ್ಥಿತಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ