ಆ್ಯಪ್ನಗರ

ಶರಾವತಿಗಾಗಿ ಒಂದಾಯಿತು ಶಿವಮೊಗ್ಗ

ಜೀವನದಿ ಶರಾವತಿಯನ್ನು ಬೆಂಗಳೂರಿಗೆ ಹರಿಸುವ ರಾಜ್ಯ ಸರಕಾರದ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಮಲೆನಾಡಿನಲ್ಲಿ ಆರಂಭವಾಗಿರುವ ಹೋರಾಟಕ್ಕೆ ಜಿಲ್ಲಾ ಕೇಂದ್ರದಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

Vijaya Karnataka 28 Jun 2019, 8:03 am
ಶಿವಮೊಗ್ಗ: ಜೀವನದಿ ಶರಾವತಿಯನ್ನು ಬೆಂಗಳೂರಿಗೆ ಹರಿಸುವ ರಾಜ್ಯ ಸರಕಾರದ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಮಲೆನಾಡಿನಲ್ಲಿ ಆರಂಭವಾಗಿರುವ ಹೋರಾಟಕ್ಕೆ ಜಿಲ್ಲಾ ಕೇಂದ್ರದಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
Vijaya Karnataka Web 27SMG6


ಶರಾವತಿ ಉಳಿಸುವ ಹೋರಾಟಕ್ಕೆ ಜಿಲ್ಲಾ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಲೆನಾಡಿನ ಜೀವಜಲ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಗೆ ನಗರದ 20ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಖುದ್ದಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಿಸಿ ಜಿಲ್ಲೆಯ ಪಶ್ಚಿಮಘಟ್ಟದ ಕಣಿವೆ ಪ್ರದೇಶವನ್ನು ಆಪೋಶನ ತೆಗೆದುಕೊಂಡಿರುವ ಸರಕಾರ ಈಗ ಮತ್ತೊಮ್ಮೆ ಇಡೀ ಶರಾವತಿಯನ್ನು ಬೆಂಗಳೂರಿಗೆ ತಿರುಗಿಸಿ ನದಿಯನ್ನು ಸಂಪೂರ್ಣವಾಗಿ ಬರಿದಾಗಿಸಲು ಹೊರಟಿದೆ. ಅವೈಜ್ಞಾನಿಕ ಯೋಜನೆ ಮೂಲಕ ಶರಾವತಿ ನದಿಯನ್ನು ಬತ್ತಿಸುವುದರ ಜತೆಗೆ ಬದುಕಿಗಾಗಿ ನದಿ ನೀರನ್ನೇ ಅವಲಂಬಿಸಿದವರನ್ನು ಬೀದಿ ಪಾಲು ಮಾಡಲು ಹೊರಟಿದೆ ಎಂದು ಟೀಕಿಸಿದರು.

ಯೋಜನೆಗೆ ಜಲಾಶಯ ನಿರ್ಮಿಸುವುದಿಲ್ಲ ಎಂದು ಸರಕಾರ ಹೇಳಿದೆಯಾದರೂ ನೀರೆತ್ತಲು ಬೃಹತ್‌ ಯಂತ್ರಗಳ ಸ್ಥಾಪನೆ ಮತ್ತು ಬೃಹತ್‌ ಗಾತ್ರದ ಪೈಪ್‌ಗಳ ಮೂಲಕ ಬೆಂಗಳೂರಿಗೆ ನೀರು ಸಾಗಿಸಲು ಸಾವಿರಾರು ಎಕರೆ ಅರಣ್ಯ ನಾಶವಂತೂ ಖಚಿತ. ಮಲೆನಾಡಿನಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕೆಂದರೂ ಅರಣ್ಯ ನಾಶವಿಲ್ಲದೆ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೆ ಪರಿಸರಕ್ಕೆ ದೊಡ್ಡ ಹಾನಿ ಉಂಟು ಮಾಡಿರುವ ಸರಕಾರವು ಈಗ ಮತ್ತಷ್ಟು ಹಾನಿ ಮಾಡಲು ಹೊರಟಿದೆ ಎಂದು ಆಪಾದಿಸಿದರು.

ಪ್ರತಿಭಟನೆಗೆ ರೈತಸಂಘ, ದಲಿತ ಸಂಘರ್ಷ ಸಮಿತಿ, ಜಿಲ್ಲಾ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ತುಂಗಾ ರಕ್ಷಣಾ ವೇದಿಕೆ, ನಮ್ಮ ಹಕ್ಕು ವೇದಿಕೆ, ದುರ್ಗಿಗುಡಿ ಕನ್ನಡ ಸಂಘ, ಹೊಯ್ಸಳ ಕರ್ನಾಟಕ ಪತ್ತಿನ ಸಹಕಾರ ಸಂಘ, ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಚೆನ್ನುಡಿ ಬಳಗ, ಖಾಸಗಿ ಬಸ್‌ ಮಾಲೀಕರ ಸಂಘ, ಜಯ ಕರ್ನಾಟಕ ಸಂಘಟನೆ, ನವ ಕರ್ನಾಟಕ ನಿರ್ಮಾಣ ವೇದಿಕೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಜಮಾತೆ ಇಸ್ಲಾಮಿ ಹಿಂದ್‌ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.

ಪ್ರತಿಭಟನೆಯಲ್ಲಿ ಕೆ.ಟಿ.ಗಂಗಾಧರ್‌, ಎಂ.ಗುರುಮೂರ್ತಿ, ಕೆ.ಎಲ್‌.ಅಶೋಕ್‌, ಶಿವಕುಮಾರ್‌, ಕಾಂತೇಶ್‌ ಕದರಮಂಡಲಗಿ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಕೆ.ಎಲ್‌.ಜನಾರ್ದನ್‌, ಅಶೋಕ್‌ಕುಮಾರ್‌, ರಮೇಶ್‌ ಬಾಬು, ಟಿ.ಎಸ್‌.ಅಶ್ವತ್ಥ ನಾರಾಯಣಶೆಟ್ಟಿ, ಖಂಡೋಬರಾವ್‌, ಡಾ. ಸತೀಶ್‌ಕುಮಾರ್‌ ಶೆಟ್ಟಿ, ರಮೇಶ್‌, ಡಾ. ಶೇಖರ್‌ ಗೌಳೇರ್‌, ದೇವಿಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

-----------------------------
ಮಲೆನಾಡಿನ ದುರಂತ: ಬೆಕ್ಕಿನ ಕಲ್ಮಠ ಶ್ರೀ
ಬೆಂಗಳೂರಿಗೆ ಶರಾವತಿ ನೀರನ್ನು ಒಯ್ಯಲು ಮುಂದಾಗಿರುವುದು ಮಲೆನಾಡಿನ ದೊಡ್ಡ ದುರಂತ ಎಂದು ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ವಿದ್ಯುತ್‌ ಉತ್ಪಾದನೆ ಮತ್ತು ನೀರಾವರಿಗಾಗಿ 6 ಜಲಾಶಯಗಳನ್ನು ನಿರ್ಮಿಸಿ ಜನರ ಜೀವನವನ್ನು ಮುಳುಗಿಸಿದ ಸರಕಾರ ಸಂತ್ರಸ್ತರಿಗೆ ಸೂಕ್ತ ಪರಿಹಾರ, ಭೂಮಿ ನೀಡದೆ ಕಳೆದ 6 ದಶಕಗಳಿಂದ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಹಲವು ಜಲಾಶಯಗಳ ನಿರ್ಮಾಣದಿಂದ ಅರಣ್ಯ ನಾಶವಾಗಿ ಪರಿಸರದಲ್ಲಿ ತೀವ್ರ ಏರುಪೇರು ಉಂಟಾಗಿದೆ. ಮಳೆಗಾಲದ ದಿನಗಳು ಕಡಿಮೆಯಾಗಿ ನದಿಗಳು ಹರಿಯಲಾರದ, ಜಲಾಶಯಗಳು ತುಂಬಲಾರದ ಸ್ಥಿತಿಗೆ ತಲುಪಿವೆ. ಜಲಾಶಯಗಳಿದ್ದರೂ ಅವುಗಳಲ್ಲಿ ವಿದ್ಯುತ್‌ ಉತ್ಪಾದನೆ ಅಥವಾ ನೀರಾವರಿ ಇರಲಿ ಕುಡಿಯುವುದಕ್ಕೂ ನೀರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಮತ್ತೊಂದು ಯೋಜನೆ ಜಾರಿಗೊಳಿಸುವುದು ಎಷ್ಟರಮಟ್ಟಿಗೆ ಸರಿ. ಹೀಗಾಗಿ ಸರಕಾರ ತನ್ನ ಯೋಜನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ ಅವರು ಮಾತನಾಡಿ, ಬೆಂಗಳೂರಲ್ಲಿ ವಾರ್ಷಿಕ 720 ಮಿ.ಮೀ. ಮಳೆಯಾಗುತ್ತಿದೆ. ಈಗಾಗಲೆ 19 ಟಿಎಂಸಿ ಕಾವೇರಿ ನೀರನ್ನು ಬಳಕೆ ಮಾಡಲಾಗುತ್ತಿದೆ. ಮಳೆ ನೀರನ್ನು ವ್ಯರ್ಥ ಮಾಡದೆ ಸಮರ್ಥವಾಗಿ ಬಳಸಿಕೊಂಡಲ್ಲಿ ಬೇರೆ ನೀರು ಬೇಕಾಗಿಲ್ಲ. ಮಲೆನಾಡು ಸಂತ್ರಸ್ತರ ಬೀಡಾಗಿದೆ. ಮೇಲಿಂದ ಮೇಲೆ ಪೆಟ್ಟು ತಡೆದುಕೊಳ್ಳುವ ಶಕ್ತಿ ನಮಗಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ