ಆ್ಯಪ್ನಗರ

Shivamogga Airport: 'ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆ ಶೀಘ್ರ, ಪ್ರತಿದಿನ ಸಂಚಾರ'- ಬಿ.ವೈ.ರಾಘವೇಂದ್ರ

Shivamogga-Bengaluru flight service: ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಸಿದ್ಧತೆ ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ವಿಮಾನಗಳು ಹಾರಾಟ ನಡೆಸಲಿವೆ. ಇಂಡಿಗೋ ವಿಮಾನಯಾನ ಸಂಸ್ಥೆಯೊಂದಿಗೆ ಕರ್ನಾಟಕ ಸರಕಾರವು ಒಪ್ಪಂದ ಮಾಡಿಕೊಂಡಿದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗುತ್ತಿದೆ. ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದಾರೆ.

Edited byಹೇಮಂತ್ ಕುಮಾರ್ ಎಸ್ | Vijaya Karnataka 23 Mar 2023, 5:59 pm

ಹೈಲೈಟ್ಸ್‌:

  • ಇಂಡಿಗೋ ಏರ್‌ಲೈನ್ಸ್‌ನೊಂದಿಗೆ ರಾಜ್ಯ ಸರಕರಾದ ಒಪ್ಪಂದ
  • ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ನಿತ್ಯವೂ ವಿಮಾನ ಹಾರಾಟ
  • ಉಡಾನ್‌ ಯೋಜನೆಯಡಿ ಪ್ರತಿ ಪ್ರಯಾಣಿಕನಿಗೆ ಸರಕಾರ 500 ರೂ. ಪಾವತಿಸಬೇಕಾಗುತ್ತದೆ
  • ನವುಲೆಯಲ್ಲಿ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Indigo airlines
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ನೂತನ ಶಿವಮೊಗ್ಗ ನಿಲ್ದಾಣದಲ್ಲಿ ಮುಂದಿನ ಒಂದು ವಾರದಲ್ಲಿ ವಿಮಾನಯಾನ ಸೇವೆ ಆರಂಭವಾಗುವ ಸಾಧ್ಯತೆ ಇದೆ.
ರಾಜ್ಯ ಸರಕಾರವು ಇಂಡಿಗೋ ಏರ್‌ಲೈನ್ಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದು ಆರಂಭದಲ್ಲಿ ಶಿವಮೊಗ್ಗ-ಬೆಂಗಳೂರು (Shivamogga-Bengaluru) ನಡುವೆ ಪ್ರತಿದಿನ ಸಂಚಾರ ನಡೆಸಲು ಇಂಡಿಗೋ ಏರ್‌ಲೈನ್ಸ್‌ ಒಪ್ಪಿಗೆ ಸೂಚಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Shivamogga Airport : 449 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಏರ್‌ಪೋರ್ಟ್‌: ಉದ್ಘಾಟನೆ ಮಾಡಿದ ನರೇಂದ್ರ ಮೋದಿ
ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುವ ಮುನ್ನವೆ ಇಂಡಿಗೋ ಮತ್ತು ಸ್ಟಾರ್‌ ಏರ್‌ಲೈನ್ಸ್‌ನವರು ಶಿವಮೊಗ್ಗದಿಂದ ಬೆಂಗಳೂರು, ಮುಂಬಯಿ, ದಿಲ್ಲಿಗೆ ಸಂಚಾರ ಸೇವೆ ಒದಗಿಸುವ ಭರವಸೆ ನೀಡಿದ್ದರು. ಅದರಂತೆ ಈಗ ಇಂಡಿಗೋ ಏರ್‌ಲೈನ್ಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಉಡಾನ್‌ ಯೋಜನೆಯಡಿ ಪ್ರತಿ ಪ್ರಯಾಣಿಕನಿಗೆ ಸರಕಾರ 500 ರೂ. ನಂತೆ ದಿನಕ್ಕೆ 72 ಸಾವಿರ ರೂ. ಪಾವತಿಸಬೇಕಾಗುತ್ತದೆ ಎಂದರು.

ಪ್ರಯಾಣ ದರ, ವೇಳಾಪಟ್ಟಿಯನ್ನು ಶೀಘ್ರದಲ್ಲೆ ಪ್ರಕಟಿಸಲಾಗುತ್ತದೆ. ಇಲ್ಲಿ ಲಭ್ಯವಾಗುವ ಪ್ರತಿಕ್ರಿಯೆಗೆ ಅನುಗುಣವಾಗಿ ಇತರೆ ಸ್ಥಳಗಳಿಗೂ ಸಂಚಾರ ಸೇವೆಯನ್ನು ಒದಗಿಸಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಅತ್ಯಾಧುನಿಕ ಅಗ್ನಿಶಾಮಕ ದಳದ ಮೂರು ವಾಹನಗಳನ್ನು ಖರೀದಿ ಮಾಡಲಾಗಿದೆ. ನಿಲ್ದಾಣಕ್ಕೆ ಅಗತ್ಯವಾದ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳ ಅಳವಡಿಕೆ ಮಾಡಲಾಗಿದೆ ಎಂದರು.

ನವುಲೆಯಲ್ಲಿ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್‌

ಶಿವಮೊಗ್ಗ ನಗರದ ನವುಲೆ ಸರ್ವೆ ನಂ.112ರ 8 ಎಕರೆ ಪ್ರದೇಶದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣವಾಗಲಿದೆ.

ವಿಶ್ವವಿದ್ಯಾಲಯವು ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ವಿಶಿಷ್ಟವಾದ ವ್ಯಾಸಂಗ ಮತ್ತು ತರಬೇತಿಯನ್ನು ಒದಗಿಸುತ್ತದೆ. ಗುಜರಾತ್‌ನ ಗಾಂಧಿನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ರಾಷ್ಟ್ರೀಯ ರಕ್ಷ ವಿಶ್ವವಿದ್ಯಾಲಯವು ಅರುಣಾಚಲ ಪ್ರದೇಶದ ಪಾಸಿಘಾಟ್‌ ಮತ್ತು ಉತ್ತರ ಪ್ರದೇಶದ ಲಕ್ನೋದಲ್ಲಿ ಕ್ಯಾಂಪಸ್‌ಗಳನ್ನು ಹೊಂದಿದೆ.
Shivamogga Airport: ಬಡವರ ಭೂಮಿಗೆ ಭೂಗಳ್ಳರ ಕಣ್ಣು, ಶಿವಮೊಗ್ಗ ವಿಮಾನ ನಿಲ್ದಾಣ ಸುತ್ತಮುತ್ತ ಮಾಫಿಯಾ
ಮುಂದಿನ ಹಂತದಲ್ಲಿ ಶಿವಮೊಗ್ಗ, ಪಾಂಡಿಚೇರಿ, ಹರಿಯಾಣ ಮತ್ತು ಒಡಿಶಾದಲ್ಲಿ ಕ್ಯಾಂಪಸ್‌ಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ. ಶಿವಮೊಗ್ಗ ಕ್ಯಾಂಪಸ್‌ ನಿರ್ದೇಶಕರಾಗಿ ಡಾ. ಆನಂದಕುಮಾರ್‌ ತ್ರಿಪಾಠಿ ನೇಮಕಗೊಂಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕ್ಯಾಂಪಸ್ಸನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶುಕ್ರವಾರ ವರ್ಚುಯಲ್‌ ಮೂಲಕ ಉದ್ಘಾಟಿಸುವರು. 8 ಎಕರೆ ಜಾಗದಲ್ಲಿಅತ್ಯಾಧುನಿಕ ಕ್ಯಾಂಪಸ್‌ ನಿರ್ಮಿಸಲಾಗುತ್ತದೆ. ಇದಕ್ಕೆ ಸಂಪೂರ್ಣವಾಗಿ ಕೇಂದ್ರ ಸರಕಾರ ಅನುದಾನ ಒದಗಿಸಲಿದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಕೇಂದ್ರೀಯ ವಿದ್ಯಾಲಯವಿದ್ದ ಹಳೇ ಕಟ್ಟಡದಲ್ಲಿ ಕಚೇರಿ ಮತ್ತು ತರಗತಿಗಳು ನಡೆಯಲಿವೆ ಎಂದರು.

ಇಲ್ಲಿ ಒಂದು ವಾರದ ಸರ್ಟಿಫಿಕೇಟ್‌ ಕೋರ್ಸ್‌ ಜತೆಗೆ ಎರಡು ವರ್ಷದ ಕೋರ್ಸ್‌ಗಳೂ ಇರುತ್ತವೆ. ಪದವಿ, ಸ್ನಾತಕೋತ್ತರ ಪದವಿ ಅಲ್ಲದೆ ಸಂಶೋಧನೆಗೂ ಅವಕಾಶವಿರುತ್ತದೆ. ಜಿಲ್ಲೆಹಾಗೂ ಸುತ್ತಮುತ್ತಲ ವಿದ್ಯಾರ್ಥಿಗಳಿಗೆ ಈ ಕ್ಯಾಂಪಸ್‌ ಅಧುನಿಕ ಕೋರ್ಸ್‌ಗಳನ್ನು ಒದಗಿಸುತ್ತದೆ ಎಂದರು.
Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟವರು ನೆನಪಾಗಲಿಲ್ಲ: ರೈತರಿಗೆ ಆಹ್ವಾನವೇ ಇರಲಿಲ್ಲ!
ಬಸ್‌ ನಿಲ್ದಾಣಕ್ಕೆ ನುಗ್ಗಿದ ಲಾರಿ, ಒಬ್ಬರ ಸ್ಥಿತಿ ಗಂಭೀರ

ಶಿವಮೊಗ್ಗ: ತಾಲೂಕಿನ ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಯ ತುಪ್ಪೂರು ಗ್ರಾಮದ ಬಳಿ ಲಾರಿಯೊಂದು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಬಸ್‌ ನಿಲ್ದಾಣಕ್ಕೆ ನುಗ್ಗಿದೆ.

ಕೋಣೆ ಹೊಸೂರು ಗ್ರಾಮದ ನಿವಾಸಿ ನಾಗರಾಜ್‌ (56) ಗಾಯಗೊಂಡಿದ್ದಾರೆ. ಸಾಗರ ಕಡೆಯಿಂದ ವೇಗವಾಗಿ ಬಂದ ಲಾರಿಯು ತುಪ್ಪೂರು ಬಳಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದಲ್ಲಿ ನಿಂತಿದ್ದ ನಾಗರಾಜ್‌ ಅವರಿಗೆ ಮೊದಲು ಡಿಕ್ಕಿ ಹೊಡೆದಿದ್ದು, ಅವರನ್ನು ಎಳೆದುಕೊಂಡು ಹೋಗಿ ತುಪ್ಪೂರು ಬಸ್‌ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಗರಾಜ್‌ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿಯು ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ ನಿಲ್ದಾಣ ಸಂಪೂರ್ಣ ಹಾಳಾಗಿದೆ. ಘಟನೆ ವೇಳೆ ಬಸ್‌ ನಿಲ್ದಾಣದಲ್ಲಿ ಮೂವರು ಕುಳಿತಿದ್ದರು. ಅದೃಷ್ಟವಶಾತ್‌ ಅವರು ಬಚಾವಾಗಿದ್ದಾರೆ. ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ