ಆ್ಯಪ್ನಗರ

ಪ್ರಯಾಣಿಕನಿಗೆ ಕೊನೆಗೂ ಸಿಕ್ತು ಪರಿಹಾರ: ಶಿವಮೊಗ್ಗ ಕೆಎಸ್‌ಆರ್‌ಟಿಸಿ ತನಿಖಾಧಿಕಾರಿಗಳಿಗೆ ಬಿತ್ತು ದಂಡ!

ಬಸ್‌ನಲ್ಲಿ ಲಗೇಜ್‌ ಒಯ್ಯುತ್ತಿದ್ದ ಪ್ರಯಾಣಿಕ ಟಿಕೆಟ್‌ ಮಾಡಿಸಿದ್ದರೂ ಆಕ್ಷೇಪಿಸಿ ದಂಡ ವಿಧಿಸಿದ್ದ ತನಿಖಾಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಚಾರಣೆ ಬಳಿಕ ದಂಡ ವಿಧಿಸಿದೆ. ದಂಡದ ಮೊತ್ತ 210 ರೂ.ಗೆ ವಾರ್ಷಿಕ ಶೇ. 10ರಂತೆ ಬಡ್ಡಿ ಸೇರಿಸಿ ನೀಡಬೇಕು. ಅಲ್ಲದೆ ಪರಿಹಾರವಾಗಿ 5000 ರೂ. ನೀಡಬೇಕೆಂದು ಆದೇಶಿಸಿದೆ.

Vijaya Karnataka Web 15 Jan 2021, 8:22 am
ಸಾಗರ (ಶಿವಮೊಗ್ಗ): ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಲಗೇಜ್‌ ಒಯ್ಯುತ್ತಿದ್ದ ಪ್ರಯಾಣಿಕ, ಸೂಕ್ತ ಟಿಕೆಟ್‌ ಮಾಡಿಸಿದ್ದರೂ ಆಕ್ಷೇಪಿಸಿ ದಂಡ ವಿಧಿಸಿದ್ದ ತನಿಖಾಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಚಾರಣೆ ಬಳಿಕ ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಯಾಣಿಕನಿಗೆ ಮಾನಸಿಕ ಕಿರುಕುಳ ನೀಡಿದ್ದರಿಂದ ಸೂಕ್ತ ಪರಿಹಾರ ನೀಡಬೇಕೆಂದೂ ಆದೇಶಿಸಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಶಿವಮೊಗ್ಗದಿಂದ ಹಾವೇರಿಗೆ 2019ರ ಸೆ.30ರಂದು ಪ್ರಯಾಣ ಮಾಡುತ್ತಿದ್ದ ಚಂದ್ರಶೇಖರ ಎಂಬುವವರು ಶಿವಮೊಗ್ಗ ನಿಲ್ದಾಣದಿಂದ ಬಸ್‌ ನಂ.ಕೆಎ.17-ಎಫ್‌-1629ರ ಬಸ್‌ನಲ್ಲಿ ತಮ್ಮ ಜತೆಗೆ ತಂದಿದ್ದ ಲಗೇಜ್‌ಗೂ 84 ರೂ. ಪಾವತಿಸಿ ಕಂಡಕ್ಟರ್‌ರಿಂದ ಟಿಕೆಟ್‌ ಪಡೆದುಕೊಂಡಿದ್ದರು.

ಹೊನ್ನಾಳಿಯಲ್ಲಿ ನಿಗಮದ ತನಿಖಾಧಿಕಾರಿಗಳಾದ ಮಂಜುನಾಥ ಮತ್ತು ಎಂ.ಚಂದ್ರಪ್ಪ ಅವರು ತಪಾಸಣೆ ಮಾಡಿದ್ದು, ಈ ಸಂದರ್ಭ ಚಂದ್ರಶೇಖರ್‌ ಅವರು ತಮ್ಮ ಲಗೇಜ್‌ಗೆ ಸೂಕ್ತ ಮೊತ್ತದ ಟಿಕೆಟ್‌ ಪಡೆದುಕೊಂಡಿಲ್ಲ ಎಂದು ಅವರನ್ನು ಬೆದರಿಸಿ 210 ರೂ. ದಂಡ ವಿಧಿಸಿ ರಸೀದಿ ನೀಡಿದ್ದರು.
ಗ್ರಾಮಾಂತರಕ್ಕೆ ಬರಲಿದೆ ಎಲೆಕ್ಟ್ರಾನಿಕ್‌ ಬಸ್‌: ಬೆಂಗಳೂರಿನಿಂದ 100ಕಿಮೀ ವ್ಯಾಪ್ತಿಯ ಜಿಲ್ಲೆಗಳಿಗೆ ಬಸ್‌ ಎಂಟ್ರಿ!

ಕಂಡಕ್ಟರ್‌ ಲಗೇಜನ್ನು ನೋಡಿ ಟಿಕೆಟ್‌ ನೀಡಿದ್ದರೂ ತನಿಖಾಧಿಕಾರಿಗಳು ತಮಗೆ ಹೆದರಿಸಿ ದಂಡ ವಿಧಿಸಿರುವ ಕ್ರಮದಿಂದ ನೊಂದ ಪ್ರಯಾಣಿಕ ಚಂದ್ರಶೇಖರ್‌, ತನಿಖಾಧಿಕಾರಿಗಳ ವಿರುದ್ಧ ಶಿವಮೊಗ್ಗ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿ ಪರಿಹಾರಕ್ಕೆ ಕೋರಿದ್ದರು.

ಆಯೋಗ ವಿಚಾರಣೆ ನಡೆಸಿದ್ದು, ತನಿಖಾಧಿಕಾರಿಗಳು ಯಾವುದೇ ಕಾನೂನು ನಿಯಮಗಳನ್ನು ಹಾಗೂ ಪ್ರಕ್ರಿಯೆಗಳನ್ನು ಪಾಲನೆ ಮಾಡದೇ ಪ್ರಯಾಣಿಕ ಚಂದ್ರಶೇಖರ ಅವರಿಗೆ 210 ರೂ. ದಂಡ ವಿಧಿಸಿದ್ದಾರೆ. ಇದು ಕೇವಲ ಸೇವಾ ನ್ಯೂನತೆಯಲ್ಲದೇ, ಅವರ ಅನ್‌ಫೇರ್‌ ಟ್ರೇಡ್‌ ಪ್ರಾಕ್ಟಿಸ್‌ ಕೂಡ ಆಗಿರುತ್ತದೆ ಎಂದು ತೀರ್ಮಾನಿಸಿದೆ. ದಂಡದ ಮೊತ್ತ 210 ರೂ.ಗೆ ವಾರ್ಷಿಕ ಶೇ. 10ರಂತೆ ಬಡ್ಡಿ ಸೇರಿಸಿ ಚಂದ್ರಶೇಖರ ಅವರಿಗೆ ನೀಡಬೇಕು. ಅಲ್ಲದೆ ಪರಿಹಾರವಾಗಿ 5000 ರೂ. ನೀಡಬೇಕೆಂದು ಅಧ್ಯಕ್ಷೆ ಚಂಚಲ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಪಿ.ವಿ.ಲಿಂಗರಾಜ್‌ ಅವರನ್ನೊಳಗೊಂಡ ಆಯೋಗವು ತೀರ್ಪು ನೀಡಿದೆ. ಈ ಪ್ರಕರಣದ ಲ್ಲಿಫಿರ್ಯಾದುದಾರರ ಪರವಾಗಿ ವಕೀಲರಾದ ಪಿ.ಎನ್‌.ರಂಗನಾಥ್‌ ವಾದಿಸಿದ್ದರು.
ವಿದ್ಯಾರ್ಥಿಗಳನ್ನು ಬಿಟ್ಟು ಹೋದ ಚಾಲಕ; ಕೆಎಸ್‌ಆರ್‌ಟಿಸಿ ಬಸ್‌ ತಡೆದು ಶಿಕ್ಷಣ ಸಚಿವರ ತರಾಟೆ..!

ಕಂಡಕ್ಟರ್‌ ವಿರುದ್ಧ ಕ್ರಮ

ಇದರ ನಡುವೆ ತಖಾಧಿಕಾರಿಗಳು ಕಂಡಕ್ಟರ್‌ ವಿರುದ್ಧ ನಿಗಮದಲ್ಲಿ ಪ್ರಕರಣ ದಾಖಲಿಸಿದ್ದು, ಆ ಪ್ರಕರಣದಲ್ಲಿ ಕಂಡಕ್ಟರ್‌ ತಪ್ಪು ಸಾಬೀತಾಗಿ ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೆ ಕಾನೂನು ಪ್ರಕ್ರಿಯೆಗಳ ಪ್ರಕಾರ ನೀಡಿರುವ ಟಿಕೆಟ್‌ ಮೌಲ್ಯ ಸರಿಯೆಂದು, ಬಸ್‌ ಕಂಡಕ್ಟರ್‌ ಅವರಿಂದ ಯಾವುದೇ ಸೇವಾ ನ್ಯೂನತೆ ಆಗಿಲ್ಲವೆಂದು ಆಯೋಗವು ಕಂಡಕ್ಟರ್‌ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದೆ. ರಾಜ್ಯದಲ್ಲಿ ಇಂತಹ ಪ್ರಕರಣವೊಂದು ಮೊಟ್ಟ ಮೊದಲಿಗೆ ದಾಖಲಾಗಿ, ಪ್ರಯಾಣಿಕರೊಬ್ಬರು ಆಯೋಗದ ಮೊರೆ ಹೋದುದು ಗಮನಾರ್ಹವಾಗಿದೆ. ಸಂಬಂಧಪಟ್ಟ ನಿಗಮದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕೆನ್ನುವುದು ಗ್ರಾಹಕ ಚಂದ್ರಶೇಖರ್‌ ಅವರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ