ಆ್ಯಪ್ನಗರ

ಸಿಲ್ಟ್‌ ತುಂಬಿ ಸಂಕುಚಿತವಾದ ರಾಜಕಾಲು‘ವೆ’

ಮಳೆ ನೀರು ಸರಾಗವಾಗಿ ಹರಿದು ಹೋಗುವ ಉದ್ದೇಶದಿಂದ ನಗರದಲ್ಲಿ ನಿರ್ಮಾಣ ಮಾಡಲಾಗಿರುವ ರಾಜಕಾಲುವೆ ಈಗ ಕಸ ಕಡ್ಡಿ, ತ್ಯಾಜ್ಯ ಮತ್ತು ಸಿಲ್ಟ್‌ನಿಂದ ತುಂಬಿಕೊಂಡಿವೆ.

Vijaya Karnataka 14 Dec 2018, 5:00 am
ಶಿವಮೊಗ್ಗ ನಗರದಲ್ಲಿ ಹರಿಯುವ ರಾಜಕಾಲುವೆಗಳು ನಿರ್ವಹಣೆ ಇಲ್ಲದೇ ದೈನೇಸಿ ಸ್ಥಿತಿಗೆ ತಲುಪಿವೆ. ಕಾಲುವೆಯುದ್ದಕ್ಕೂ ಸಿಲ್ಟ್‌, ಪ್ಲಾಸ್ಟಿಕ್‌, ಕಡಕಡ್ಡಿ ತುಂಬಿಕೊಂಡಿವೆ. ಇದರಿಂದಾಗಿ, ಸೊಳ್ಳೆ ಆವಾಸವಾಗಿ ಮಾರ್ಪಟ್ಟಿವೆ. ಆದರೆ, ಮಹಾನಗರ ಪಾಲಿಕೆಯಿಂದ ಹೂಳು ತೆಗೆಸುವ ಕೆಲಸ ಇದುವರೆಗೂ ಆಗಿಲ್ಲ. ಸಾರ್ವಜನಿಕರು ಗಬ್ಬು ವಾಸನೆಯ ನಡುವೆ ಬದುಕುವಂತಾಗಿದೆ. ರಾಜಕಾಲುವೆಯಲ್ಲಿ ಬರೀ ಹೂಳೆತ್ತುವುದಷ್ಟೇ ಅಲ್ಲದೇ, ಅಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕಿದೆ.
Vijaya Karnataka Web 13SMG1


============
ಆತೀಶ್‌ ಬಿ. ಕನ್ನಾಳೆ

ಶಿವಮೊಗ್ಗ :
ಮಳೆ ನೀರು ಸರಾಗವಾಗಿ ಹರಿದು ಹೋಗುವ ಉದ್ದೇಶದಿಂದ ನಗರದಲ್ಲಿ ನಿರ್ಮಾಣ ಮಾಡಲಾಗಿರುವ ರಾಜಕಾಲುವೆ ಈಗ ಕಸ ಕಡ್ಡಿ, ತ್ಯಾಜ್ಯ ಮತ್ತು ಸಿಲ್ಟ್‌ನಿಂದ ತುಂಬಿಕೊಂಡಿವೆ.

ನಗರದಲ್ಲಿ ರಾಜಕಾಲುವೆ ಮೂರು ಮಾರ್ಗಗಳಲ್ಲಿ ಹರಿದುಹೋಗುತ್ತವೆ. ಶರಾವತಿ ನಗರದಿಂದ ಆರಂಭಗೊಂಡು ಹೊಸಮನೆ, ವೆಂಕಟೇಶನಗರ, ಗಾಂಧಿನಗರ, ಬಸವನಗುಡಿ, ಅಮೀರ್‌ ಅಹ್ಮದ್‌ ಕಾಲೊನಿ ಮೂಲಕ ಸಾಗಿ ತುಂಗಾ ನದಿಗೆ ಸೇರುತ್ತದೆ. ಮತ್ತೊಂದು ಕಾಲುವೆ ಬಸ್‌ಸ್ಟ್ಯಾಂಡ್‌ ಬಳಿಯಿಂದ ಗಾರ್ಡನ್‌ ಏರಿಯಾ ಮೂಲಕ ಬಾಪೂಜಿನಗರ, ಶೇಷಾದ್ರಿಪುರಂ ಹಾದು ಹೋಗುತ್ತದೆ. ಇನ್ನೊಂದು ರಾಜಕಾಲುವೆ ಹಾಗೂ ಗಾಂಧಿಬಜಾರ್‌, ಲಷ್ಕರ್‌ಮೊಹಲ್ಲಾ ಮೂಲಕ ಕೋಟೆ ದೇವಸ್ಥಾನದ ಬಳಿ ತುಂಗಾ ನದಿ ಸೇರುತ್ತದೆ.

ರಾಜಕಾಲುವೆಯಲ್ಲಿ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ತ್ಯಾಜ್ಯ ತುಂಬಿಕೊಂಡಿರುವುದರಿಂದ ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ಹೀಗಾಗಿ, ಕಳೆದ ಮಳೆಗಾಲದಲ್ಲಿ ರಾಜಕಾಲುವೆ ಹರಿಯುವ ವಿನಾಯಕ ನಗರ, ಬಾಪೂಜಿ ನಗರ, ಟ್ಯಾಂಕ್‌ ಮೊಹಲ್ಲಾ, ಗಾರ್ಡನ್‌ ಏರಿಯಾ, ಆರ್‌ಎಂಎಲ್‌ ನಗರ, ಕುಂಬಾರ ಗುಂಡಿ ಸೇರಿದಂತೆ ನಾನಾ ಬಡಾವಣೆಗಳಲ್ಲಿ ನೀರು ರಸ್ತೆಗೆ ಹರಿದು ಸಾರ್ವಜನಿಕರು ಸಮಸ್ಯೆ ಎದುರಿಸಿದ್ದರು. ಪ್ರತಿ ಮಲೆಗಾಲದಲ್ಲೂ ಈ ಸಮಸ್ಯೆ ಕಾಯಂ ಆಗಿ ಬಿಟ್ಟಿದೆ. ಇಷ್ಟಾದರೂ ಮಹಾನಗರ ಪಾಲಿಕೆ ಕಾಲುವೆ ಸ್ವಚ್ಛಗೊಳಿಸುವುದಕ್ಕೆ ಮುಂದಾಗಿಲ್ಲ. ಹೂಳೆತ್ತುವಂತೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಸಲ ಆಗ್ರಹಿಸಲಾಗಿದೆ.

ಸೊಳ್ಳೆ ಆವಾಸವಾದ ರಾಜಕಾಲುವೆ
ಮಳೆಯ ನೀರಷ್ಟೇ ಹರಿದು ಹೋಗಬೇಕಾದ ರಾಜಕಾಲುವೆಯಲ್ಲೀಗ ಕೊಳಚೆ ತುಂಬಿಕೊಂಡಿದೆ. ಇದಕ್ಕೆ ಕಾರಣ, ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಇನ್ನೂ ಸಮರ್ಪಕ ಯುಜಿಡಿ ವ್ಯವಸ್ಥೆ ಇಲ್ಲದಿರುವುದು. ಕೆಲವೆಡೆ ಇದ್ದರೂ ನೀರು ಹರಿದು ಹೋಗುವುದಕ್ಕೆ ಮಾರ್ಗವೇ ಇಲ್ಲ. ಇಂತಹ ಸ್ಥಿತಿಯಲ್ಲಿ ರಾಜಕಾಲುವೆಗೆ ಚರಂಡಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದಾಗಿ, ಕಾಲುವೆ ಗಬ್ಬು ನಾರುತ್ತಿದ್ದು, ಅತಿಯಾಗಿ ಸಿಲ್ಟ್‌ ತುಂಬಿಕೊಳ್ಳುವುದರಿಂದ ಕೊಳಚೆ ನೀರು ಮುಂದೆ ಹರಿಯಲಾಗದೇ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ.

ಅಮೀರ್‌ ಅಹ್ಮದ್‌ ಕಾಲೊನಿ, ಗಾರ್ಡನ್‌ ಏರಿಯಾದಲ್ಲಿ ಹಾದುಹೋಗುವ ಕಾಲುವೆಯಲ್ಲಿ ಕಸದ ರಾಶಿಯೇ ತುಂಬಿದ್ದು, ಸೊಳ್ಳೆಗಳ ಕಾಟ ಹೆಚ್ಚಿದೆ. ಆದರೆ, ಸ್ವಚ್ಛತೆಯ ಬಗ್ಗೆ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಕಸ ಬಹಳಷ್ಟು ವರ್ಷಗಳಿಂದ ಶೇಖರಣೆಗೊಂಡಿದ್ದು, ಕೂಡಲೇ ಪಾಲಿಕೆ ಕ್ರಮಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

============
ಪ್ರತಿ ಮಳೆಗಾಲಕ್ಕೂ ಮುನ್ನ ರಾಜಕಾಲುವೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಈಗ ಸ್ವಚ್ಛಗೊಳಿಸುವ ಬಗ್ಗೆ ಯೋಜನೆ ಇಲ್ಲ. ಬರುವ ದಿನಗಳಲ್ಲೂ ತುಂಬಿರುವ ಹೂಳು ತೆಗೆಸುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು.

- ಚಾರುಲತಾ ಸೋಮಲ್‌, ಆಯುಕ್ತರು, ಮಹಾನಗರ ಪಾಲಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ