ಆ್ಯಪ್ನಗರ

ಹುಣಸೋಡು ಸ್ಫೋಟ: ಶಿವಮೊಗ್ಗ ಸುತ್ತಮುತ್ತ ಕಲ್ಲು ಕ್ವಾರಿಯ ಕರಾಳ ಕಥೆಗಳು...

ಅಕ್ರಮ ಗಣಿಗಾರಿಕೆಗೆ ಕುಖ್ಯಾತಿ ಪಡೆದ ಬಳ್ಳಾರಿ ಜಿಲ್ಲೆಗಳಲ್ಲಿ ಇರುವಷ್ಟೇ 100-150 ಅಡಿ ಆಳದ ದೊಡ್ಡ ದೊಡ್ಡ ಕುಳಿಗಳು ಇಲ್ಲವೆ. ಇಲ್ಲಿ ಕೆಲಸ ಮಾಡಲು ಬಿಹಾರ, ಆಂಧ್ರ, ಕೇರಳ, ಜಾರ್ಖಂಡ್‌ಗಳ ಕೂಲಿ ಕಾರ್ಮಿಕರನ್ನು ಬಳಕೆ ಮಾಡಲಾಗುತ್ತದೆ.

Vijaya Karnataka Web 23 Jan 2021, 4:26 pm
ಶಿವಮೊಗ್ಗ: ಶಿವಮೊಗ್ಗ ತಾಲೂಕು ಹುಣಸೋಡು ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭಾರಿ ಸ್ಫೋಟ ಇಡೀ ಮಲೆನಾಡಿನಲ್ಲಿ ನಡುಕು ಹುಟ್ಟಿಸಿದರೂ ಸ್ಫೋಟದೊಂದಿಗೆ ಆದ ದುರ್ಘಟನೆ ಶಿವಮೊಗ್ಗದ ಪಾಲಿಗೆ ಅನಿರೀಕ್ಷಿತವೇನಲ್ಲ. ಆದರೆ, ಸೋಟದ ಸದ್ದು ಮತ್ತು ತೀವ್ರತೆ ಮಾತ್ರ ಹಿಂದೆಂದೂ ಕೇಳಿರಲಿಲ್ಲ, ಅನುಭವಿಸಿರಲಿಲ್ಲ.
Vijaya Karnataka Web ಕಲ್ಲು ಗಣಿಗಾರಿಕೆ
ಕಲ್ಲು ಗಣಿಗಾರಿಕೆ


ಜಿಲ್ಲಾ ಕೇಂದ್ರವಾದ ಶಿವಮೊಗ್ಗ ನಗರದಿಂದ ಕೇವಲ 5ರಿಂದ 10 ಕಿ.ಮೀ. ಅಂತರದಲ್ಲಿರುವ ಹುಣಸೋಡು, ಕಲ್ಲುಗಂಗೂರು, ಬಸವನಗಂಗೂರು, ಗೆಜ್ಜೇನಹಳ್ಳಿ, ಮೋಜಪ್ಪನ ಹೊಸೂರು, ದೇವಕಾತಿಕೊಪ್ಪ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಕ್ರಷರ್‌ಗಳು ದಿನದ 23 ತಾಸು ಧೂಳೆಬ್ಬಿಸುತ್ತ ಸದ್ದು ಮಾಡುತ್ತವೆ. 150ಕ್ಕೂ ಹೆಚ್ಚು ಕಲ್ಲು ಕ್ವಾರಿಗಳಲ್ಲಿ ಕತ್ತಲಾಗುತ್ತಿದ್ದಂತೆ ಸ್ಫೋಟಿಸಲು ಆರಂಭವಾಗುತ್ತವೆ. ಹೀಗಾಗಿ ಎಂದಾದರೂ ಒಂದು ದಿನ ದೊಡ್ಡ ಮಟ್ಟದ ಅನಾಹುತ ಸಂಭವಿಸುತ್ತದೆ ಎಂಬುದನ್ನು ಜನರು ಎಂದೋ ಊಹೆ ಮಾಡಿದ್ದರು.

ಗುಲಾಮಗಿರಿ ಬದುಕು

ಅಕ್ರಮ ಗಣಿಗಾರಿಕೆಗೆ ಕುಖ್ಯಾತಿ ಪಡೆದ ಬಳ್ಳಾರಿ ಜಿಲ್ಲೆಗಳಲ್ಲಿ ಇರುವಷ್ಟೇ 100-150 ಅಡಿ ಆಳದ ದೊಡ್ಡ ದೊಡ್ಡ ಕುಳಿಗಳು ಇಲ್ಲವೆ. ಇಲ್ಲಿ ಕೆಲಸ ಮಾಡಲು ಬಿಹಾರ, ಆಂಧ್ರ, ಕೇರಳ, ಜಾರ್ಖಂಡ್‌ಗಳ ಕೂಲಿ ಕಾರ್ಮಿಕರನ್ನು ಬಳಕೆ ಮಾಡಲಾಗುತ್ತದೆ. ವಿವಿಧ ರಾಜ್ಯಗಳ 1 ಸಾವಿರಕ್ಕೂ ಅಧಿಕ ಕಾರ್ಮಿಕರು ಇಲ್ಲಿದ್ದಾರೆ. ಕೆಲವರು ಮಕ್ಕಳ ಸಮೇತ ಇಲ್ಲಿಯೇ ವಾಸ ಮಾಡುತ್ತಿದ್ದಾರೆ. ಬಡ ಕಾರ್ಮಿಕರನ್ನು ಪ್ರಾಣಿಗಳಿಗಿಂತಲೂ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತದೆ. ಪ್ರಾಣಿಗಳು ವಾಸಿಸಲೂ ಯೋಗ್ಯವಲ್ಲದಂತಹ ಗೂಡುಗಳಲ್ಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಲಾಗಿದ್ದು ಗುಲಾಮರಂತೆ ನಡೆಸಿಕೊಳ್ಳಲಾಗುತ್ತದೆ.

ನಗರದ ಮಗ್ಗುಲಲ್ಲೇ ನಿತ್ಯವೂ ಧೂಳು ಚಿಮ್ಮುವ, ಅನಾಹುತಕ್ಕೆ ಆಹ್ವಾನ ನೀಡುವ, ಜಲ್ಲಿ ಮತ್ತು ಗಣಿ ಮರಳು(ಎಂ ಸ್ಯಾಂಡ್) ತುಂಬಿಕೊಂಡ ಲಾರಿಗಳು ಮೈ ಮೇಲೆ ದೆವ್ವ ಬಂದಂತೆ ಜನರ ಮೇಲೆ ನುಗ್ಗಿ ಬರುವ ಪರಿಗೆ ಹೆದರಿ ಸಾವಿರಾರು ದೂರುಗಳು ಸಲ್ಲಿಕೆಯಾಗಿವೆ. ಪ್ರತಿ 2-3 ತಿಂಗಳಿಗೊಮ್ಮೆ ಪ್ರತಿಭಟನೆ ಆಗುತ್ತವೆ. ಆದರೂ ಅಕ್ರಮ ಕಲ್ಲು ಗಣಿಗಾರಿಕೆ, ಜಲ್ಲಿ ಮತ್ತು ಎಂ ಸ್ಯಾಂಡ್ ಕ್ರಷರ್‌ಗಳ ಕೆಲಸ ನಿಲ್ಲುವುದೇ ಇಲ್ಲ. ಅಭಿವೃದ್ಧಿ ನೆಪದಲ್ಲಿ ಅವುಗಳಿಗೆ ರಕ್ಷಣೆ ಸಿಗುತ್ತಿವೆ.

ಅನಾಹುತಗಳು ಸಾಮಾನ್ಯ


ಇಲ್ಲಿ ಅನಾಹುತಗಳು ಮನುಷ್ಯ ಎಡವಿದಷ್ಟೇ ಸಾಮಾನ್ಯ. ಸಾವು-ನೋವು ಎನ್ನುವುದು ಕುರಿ ಕೋಳಿಗಳನ್ನು ಕೊಯ್ದಷ್ಟೇ ಸಹಜ ಎಂಬಂತೆ ಆಗಿಹೋಗಿದೆ. ಡಿಸೆಂಬರ್ 25ರಂದು ಡೈನಮೇಟ್ ಸಿಡಿದು ಗೆಜ್ಜೇನಹಳ್ಳಿಯ 18 ವರ್ಷದ ಮೋಹನ ಮತ್ತು ರಘು ಮೃತಪಟ್ಟಿದ್ದರು. ಅದಕ್ಕೆ ಕೇವಲ 15 ದಿನ ಮೊದಲು ಬಿಹಾರ ಮೂಲದ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದರು. ಇಲ್ಲಿ ಹೊರ ಜಿಲ್ಲೆ ಮತ್ತು ರಾಜ್ಯದ ಬಡ ಕೂಲಿ ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುವುದರಿಂದ ಅನಾಹುತಗಳಾದಾಗ ಉಂಟಾದ ಸಾವು ನೋವುಗಳು ಹೊರಜಗತ್ತಿಗೆ ಗೊತ್ತಾಗುವುದೇ ಇಲ್ಲ.

ವಿಕ ಗಮನಸೆಳೆದಿತ್ತು

ಐದು ವರ್ಷಗಳ ಹಿಂದೆ ‘ವಿಜಯ ಕರ್ನಾಟಕ’ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ 3ರಿಂದ 15 ವರ್ಷದೊಳಗಿನ ನೂರಕ್ಕೂ ಅಧಿಕ ಮಕ್ಕಳು ಇರುವುದನ್ನು ಪತ್ತೆ ಮಾಡಿ ವಿಶೇಷ ವರದಿ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಹಾಗೂ ಶಿಕ್ಷಣ ಇಲಾಖೆಯಿಂದ ಟೆಂಟ್ ಶಾಲೆ ತೆರೆಯಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ