ಆ್ಯಪ್ನಗರ

‘ಜಲಾಮೃತ’ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿ

ಕಳೆದ ಬಜೆಟ್‌ನಲ್ಲಿ ರಾಜ್ಯ ಸರಕಾರ ಘೋಷಿಸಿರುವ 'ಜಲಾಮೃತ' ಯೋಜನೆ ಅಡಿ ಕೆರೆಗಳ ಹೂಳೆತ್ತುವುದು ಸೇರಿದಂತೆ ಕೆರೆಗಳ ಪುರುಜ್ಜೀವನ ಕಾಮಗಾರಿಗಳಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಹೇಳಿದರು.

Vijaya Karnataka 16 Jul 2019, 5:00 am
ಶಿವಮೊಗ್ಗ: ಕಳೆದ ಬಜೆಟ್‌ನಲ್ಲಿ ರಾಜ್ಯ ಸರಕಾರ ಘೋಷಿಸಿರುವ 'ಜಲಾಮೃತ' ಯೋಜನೆ ಅಡಿ ಕೆರೆಗಳ ಹೂಳೆತ್ತುವುದು ಸೇರಿದಂತೆ ಕೆರೆಗಳ ಪುರುಜ್ಜೀವನ ಕಾಮಗಾರಿಗಳಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಹೇಳಿದರು.
Vijaya Karnataka Web 15SMG6


ಜಲಾಮೃತ ಯೋಜನೆ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಯೋಜನೆ ಅನುಷ್ಠಾನ ಕುರಿತು ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾಲೋಚನೆ ವೇಳೆ ಮಾತನಾಡಿದ ಅವರು, ಹೂಳೆತ್ತುವುದು ಸೇರಿದಂತೆ ಕೆರೆಗಳ ಅಭಿವೃದ್ಧಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಹಾಗೂ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆಗೆ ಈ ಹಿಂದೆಯೇ ಸೂಚನೆ ನೀಡಿದ್ದರೂ, ಇದುವರೆಗೆ ಪ್ರಸ್ತಾವನೆ ಸಲ್ಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

ಕೆರೆಗಳ ಪುನರುಜ್ಜೀವನ ಕಾಮಗಾರಿ ಕೈಗೊಳ್ಳಲು ಉತ್ತಮ ಅವಕಾಶ ಇದಾಗಿದ್ದು, ತಾಲೂಕು ಮಟ್ಟದಲ್ಲಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಮಾರ್ಗಸೂಚಿ ಪ್ರಕಾರ ಕಾಮಗಾರಿ ಕೈಗೊಳ್ಳಲು ಇದರಲ್ಲಿ ಅವಕಾಶವಿದೆ. ಈ ಯೋಜನೆಯಡಿ ಅರಣ್ಯೀಕರಣ ಕೆಲಸ ಕಾರ್ಯಗಳನ್ನು ಸಹ ಕೈಗೊಳ್ಳಬಹುದಾಗಿದೆ ಎಂದರು.

ಜಲಮೂಲಗಳಾದ ಕೆರೆ ಕಟ್ಟೆ, ಕಲ್ಯಾಣಿ, ಗೋಕಟ್ಟೆಗಳ ಅಭಿವೃದ್ಧಿ, ಬಹುಕಮಾನು ಚೆಕ್‌ಡ್ಯಾಂಗಳ ಪುನರುಜ್ಜೀವನ, ನೀರು ಸಂಗ್ರಹಣೆಗಾಗಿ ಹೊಸ ಜಲಮೂಲಗಳ ನಿರ್ಮಾಣ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ, ಜಾನುವಾರು, ಕೃಷಿ ಚಟುವಟಿಕೆಗಳಿಗಾಗಿ ಬಳಸುವ ನೀರಿನ ಆಯವ್ಯಯ ಸಿದ್ಧಪಡಿಸುವುದು. ನೀರು ಲಭ್ಯತೆ ಮೇಲೆ ಬಳಕೆಯ ಮಿತಿಯನ್ನು ನಿರ್ಧರಿಸುವುದು, ಗ್ರಾಮಗಳಲ್ಲಿ ತೆರೆದ/ಕೊಳವೆ ಬಾವಿಗಳ ಸುತ್ತ ಮಳೆ ನೀರು ರಿಚಾರ್ಜ್‌ ಘಟಕಗಳ ಸ್ಥಾಪನೆ ಇತ್ಯಾದಿಗಳನ್ನು ಕೈಗೊಳ್ಳಬೇಕಾಗಿದೆ. ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ತಗಲುವ ಒಟ್ಟು ವೆಚ್ಚದ ಶೇ.10ರಷ್ಟು ವಂತಿಗೆಯನ್ನು ಸ್ಥಳೀಯರಿಂದ ಹಣ, ಕೆಲಸ ಅಥವಾ ಬಾಡಿಗೆ ರೂಪದಲ್ಲಿ ಪರಿಕರಗಳನ್ನು ಒದಗಿಸಲು ಪ್ರೇರೇಪಿಸಬೇಕು ಎಂದು ಹೇಳಿದರು.

ಕೆರೆ ಹೂಳು ತೆಗೆಯುವ ಕಾಮಗಾರಿಯನ್ನು ಸಂಪೂರ್ಣವಾಗಿ ಜಲಾಮೃತ ಯೋಜನೆಯಡಿ ಭರಿಸಬೇಕು. ಇನ್ನುಳಿದಂತೆ ಏರಿ ಭದ್ರಪಡಿಸುವಿಕೆ, ತೂಬು, ಕೋಡಿ, ಕೋಡಿ ಕಾಲುವೆ ರಿಪೇರಿ ಇತ್ಯಾದಿ ಕಾಮಗಾರಿಗಳನ್ನು ನರೇಗಾ ಅಡಿ ಕೈಗೊಳ್ಳಬೇಕು. ಕೆರೆ ಹೂಳು ಸಾಗಣೆಯ ಲಿಫ್ಟ್‌ ಮತ್ತು ಲೀಡ್‌ ವೆಚ್ಚವನ್ನು ರೈತರೇ ಭರಿಸಬೇಕು. ಕರೆಗಳ ಅಂಗಳದಲ್ಲಿ ಸಣ್ಣ ಕೆರೆಗಳನ್ನು ನಿರ್ಮಿಸಿ ಬಹುಕಾಲ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಈ ಯೋಜನೆಯಡಿ ಬುಟ್ಟಿಯಿಂದ ಬೆಟ್ಟಕ್ಕೆ ಆಶಯದಡಿ ಬೀಜಾಮೃತದಿಂದ ಸಂಸ್ಕರಿಸಿದ ಸ್ಥಳೀಯ ಜಾತಿಯ ಮರಗಳ ಬೀಜಗಳನ್ನು ಸರಕಾರಿ ಸ್ಥಳಗಳಲ್ಲಿ/ಗುಡ್ಡಗಾಡಿನಲ್ಲಿ ಅಭಿಯಾನದ ಮಾದರಿಯಲ್ಲಿ ಬಿತ್ತುವ ಕಾರ್ಯ ನಡೆಸಬೇಕು. ಈಗಾಗಲೇ ಕಳೆದ ವಾರ ಕಲ್ಲಗಂಗೂರು ವಲಯದಲ್ಲಿ 10ಲಕ್ಷ ಕ್ಕೂ ಅಧಿಕ ಬೀಜಗಳನ್ನು ವಿದ್ಯಾರ್ಥಿಗಳ ಸಹಾಯದಿಂದ ಬಿತ್ತಲಾಗಿದೆ. ಇದೇ ರೀತಿಯ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಬೇಕಾಗಿದೆ ಎಂದರು.

* ಪ್ರಸ್ತಾವನೆ ಸಲ್ಲಿಕೆ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಜಲಾಮೃತ ಯೋಜನೆಯಡಿ ಒಟ್ಟು ಪುನರುಜ್ಜೀವನಕ್ಕಾಗಿ 37 ಕೆರೆಗಳನ್ನು ಗುರುತಿಸಲಾಗಿದೆ. ಅಂದಾಜು 5.80 ಕೋಟಿ ರೂ. ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೆಯಡಿ 133 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 177 ಬಹುಕಮಾನು ಮಾದರಿ ಚೆಕ್‌ಡ್ಯಾಂ ನಿರ್ಮಾಣದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಉಪ ಅರಣ್ಯ ಸಂರಕ್ಷ ಣಾಧಿಕಾರಿ ಅಂಟೋನಿ ಮರಿಯಪ್ಪ, ಸಾಗರ ಉಪವಿಭಾಗ ಅಧಿಕಾರಿ ದರ್ಶನ್‌, ಯೋಜನಾ ನಿರ್ದೇಶಕ ವೀರಾಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ