ಆ್ಯಪ್ನಗರ

ಮಾಸಾಂತ್ಯದೊಳಗೆ ಕ್ರಿಯಾ ಯೋಜನೆ ಸಲ್ಲಿಸಿ

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಜೂನ್‌ನಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕೆಂಬ ಸರಕಾರದ ಸೂಚನೆ ಪಾಲಿಸದ ಅಧಿಕಾರಿಗಳನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಭೈರೇಗೌಡ ಅವರು ತರಾಟೆಗೆ ತೆಗೆದುಕೊಂಡರು.

Vijaya Karnataka 20 Jun 2019, 5:00 am
ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಜೂನ್‌ನಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕೆಂಬ ಸರಕಾರದ ಸೂಚನೆ ಪಾಲಿಸದ ಅಧಿಕಾರಿಗಳನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಭೈರೇಗೌಡ ಅವರು ತರಾಟೆಗೆ ತೆಗೆದುಕೊಂಡರು.
Vijaya Karnataka Web SMG-1906-2-15-19SMG4


ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕುಡಿಯುವ ನೀರು, ಬರ ನಿರ್ವಹಣೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೂನ್‌ 3ನೇ ವಾರ ಬಂದರೂ 2019-20ನೇ ಸಾಲಿನ ಕುಡಿಯುವ ನೀರು ಯೋಜನೆಗಳಿಗೆ ಕ್ರಿಯಾ ಯೋಜನೆ ರೂಪಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಪ್ರತಿವರ್ಷ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಅಧಿಕಾರಿಗಳು ತಮ್ಮ ಅಭ್ಯಾಸವನ್ನು ಬದಲಿಸಿಕೊಂಡು ಜೂನ್‌ನಲ್ಲೇ ಕ್ರಿಯಾ ಯೋಜನೆ ರೂಪಿಸುವಂತೆ ಏಪ್ರಿಲ್‌ ಮತ್ತು ಮೇನಲ್ಲಿ ನಡೆಸಿದ ವೀಡಿಯೋ ಕಾನ್ಫರೆನ್ಸ್‌ ಮತ್ತು ಸಭೆಗಳಲ್ಲಿ ಸೂಚನೆ ನೀಡಲಾಗಿತ್ತು. ಇಷ್ಟೆಲ್ಲ ಹೇಳಿದ ಬಳಿಕವೂ ಏಕೆ ಕೆಲಸ ಮಾಡಿಲ್ಲ. ಬೇರೆ ಜಿಲ್ಲೆಗಳಿಂದ ಈಗಾಗಲೆ ಸಲ್ಲಿಕೆಯಾಗಿದೆ. ಮಾಸಾಂತ್ಯದೊಳಗೆ ಕ್ರಿಯಾ ಯೋಜನೆ ರೂಪಿಸಿ ಕಳಿಸಿ ಒಪ್ಪಿಗೆ ಪಡೆದುಕೊಂಡು ಅಲ್ಪಾವಧಿ ಟೆಂಡರ್‌ ಮಾಡಿ ಆದಷ್ಟು ಬೇಗ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಮತ್ತೆ ತಡವಾದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ತೋಟ ನಿರ್ಮಿಸಿ: ಉದ್ಯೋಗ ಖಾತ್ರಿ ಯೋಜನೆಯಡಿ ಚೆಕ್‌ಡ್ಯಾಮ್‌, ದನದ ಕೊಟ್ಟಿಗೆಗಳು, ಶಾಲೆ ಕಾಂಪೌಂಡ್‌ ಮತ್ತು ತೋಟಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ವರ್ಷಕ್ಕೆ ಕನಿಷ್ಠ ಎರಡೂವರೆ ಸಾವಿರ ಎಕರೆ ತೋಟಗಳನ್ನು ನಿರ್ಮಿಸಬಹುದು. ಅದರಲ್ಲಿ ಅರ್ಧದಷ್ಟಾದರೂ ನಿರ್ಮಾಣಕ್ಕೆ ಅಧಿಕಾರಿಗಳು ಗಮನ ಕೊಡಬೇಕು. ಮಲೆನಾಡಿನಲ್ಲಿ ಸಣ್ಣ ಹಳ್ಳ ಮತ್ತು ಝರಿಗಳು ತುಂಬಿ ಹರಿಯುವುದರಿಂದ ಕನಿಷ್ಠ 1ಕಿ.ಮೀ.ಗೆ ಒಂದರಂತೆ ಸಣ್ಣ ಚೆಕ್‌ ಡ್ಯಾಮ್‌ಗಳನ್ನು ನಿರ್ಮಿಸಬಹುದು. ಈ ವರ್ಷ ಪ್ರತಿ ಪಂಚಾಯಿತಿಗೆ ಕನಿಷ್ಠ 5 ಚೆಕ್‌ ಡ್ಯಾಮ್‌ಗಳನ್ನು ನಿರ್ಮಿಸುವಂತೆ ಗುರಿ ನೀಡಿದರು.

ಜಿಲ್ಲೆಯ 2018 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪೈಕಿ 832 ಶಾಲೆಗಳಿಗೆ ಕಾಂಪೌಂಡ್‌ ಇಲ್ಲ. ಹಂತ ಹಂತವಾಗಿ ಎಲ್ಲ ಶಾಲೆಗಳಿಗೂ ಕಾಂಪೌಂಡ್‌ ನಿರ್ಮಿಸಬೇಕು. ಈ ವರ್ಷ ಮಳೆಗಾಲದಲ್ಲಿ ಸಂಘ ಸಂಸ್ಥೆಗಳ ನೆರವಿನೊಂದಿಗೆ ಜಿಲ್ಲೆಯಲ್ಲಿ ಕನಿಷ್ಠ 4ರಿಂದ 5 ಲಕ್ಷ ಸಸಿಗಳನ್ನು ನೆಡಬೇಕು. ಅದಕ್ಕೆ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿಗಳನ್ನು ಒದಗಿಸುವಂತೆ ಡಿಎಫ್‌ಒಗೆ ಸೂಚನೆ ನೀಡಿದರು.

ಹಳ್ಳಿಗಳಲ್ಲಿ ಕಸ ಸಂಗ್ರಹ: ಪೇಟೆ ಪಟ್ಟಣಗಳಲ್ಲಿ ಅಲ್ಲದೆ ಇನ್ನು ಮುಂದೆ ಹಳ್ಳಿಗಳಲ್ಲಿ ಕಸ ಸಂಗ್ರಹಿಸಲು ನಿರ್ಧರಿಸಲಾಗಿದೆ. ಬಹಳಷ್ಟು ಹಳ್ಳಿಗಳು ಕಸಗಳಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ಒಣ ಕಸವನ್ನು ಸಂಗ್ರಹಿಸಿ ಒಟ್ಟುಗೂಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ. ಈ ವರ್ಷ ರಾಜ್ಯದಲ್ಲಿ 1ಸಾವಿರ ಗ್ರಾಮಗಳು, ಶಿವಮೊಗ್ಗದಲ್ಲಿ 35 ಗ್ರಾಮಗಳಲ್ಲಿ ಒಣ ಕಸ ಸಂಗ್ರಹ ಆರಂಭಕ್ಕೆ ಚಾಲನೆ ನೀಡಲಾಗುತ್ತದೆ. ಈಗಾಗಲೇ ಹೊಸನಗರ ರಿಪ್ಪನ್‌ಪೇಟೆಯಲ್ಲಿ ಕಸ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ ಎಂದರು. ಜಿಪಂ ಅಧ್ಯಕ್ಷೆ ಜ್ಯೋತಿ ಎಸ್‌.ಕುಮಾರ್‌, ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ಸಿಇಒ ಕೆ.ಶಿವರಾಮೇಗೌಡ, ಡಿಸಿ ಕೆ.ಎ.ದಯಾನಂದ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಸಕರಾದ ಕುಮಾರ್‌ ಬಂಗಾರಪ್ಪ, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಆರ್‌.ಪ್ರಸನ್ನಕುಮಾರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ