ಆ್ಯಪ್ನಗರ

ರೋಮಾಂಚನಗೊಳಿಸಿದ ಎತ್ತಿನ ಗಾಡಿ ಓಟದ ಸ್ಪರ್ಧೆ

ತಮ್ಮ ಸಂಗಾತಿ ಎತ್ತುಗಳಿಗೆ ಬಾರುಕೋಲಿನಿಂದ ಫಳೀರನೆ ಸದ್ದು ಹೊರಡಿಸಿದ ರೈತರು ಗಾಡಿಯನ್ನು ಗೆಲುವಿನ ಗೆರೆಯತ್ತ ಓಡಿಸುತ್ತಿದ್ದರೆ ಅಕ್ಕಪಕ್ಕದ ನೆರೆದಿದ್ದ ಜನಸ್ತೋಮ ಕೇಕೆ ಹಾಕಿ ರೈತರಿಗೆ ಮತ್ತಷ್ಟು ಹುಮ್ಮಸ್ಸು ನೀಡುತ್ತಿತ್ತು. ಗೆರೆ ದಾಟಿದ ಬಹುಮಾನಕ್ಕೆ ಅರ್ಹರಾದ ಎತ್ತುಗಳು ಮತ್ತು ರೈತನನ್ನು ಮುತ್ತಿಕೊಂಡ ಜನ ಜಯ ಘೋಷಣೆ ಮೊಳಗಿಸಿದರು.

Vijaya Karnataka 26 Jan 2019, 5:00 am
ಶಿವಮೊಗ್ಗ : ತಮ್ಮ ಸಂಗಾತಿ ಎತ್ತುಗಳಿಗೆ ಬಾರುಕೋಲಿನಿಂದ ಫಳೀರನೆ ಸದ್ದು ಹೊರಡಿಸಿದ ರೈತರು ಗಾಡಿಯನ್ನು ಗೆಲುವಿನ ಗೆರೆಯತ್ತ ಓಡಿಸುತ್ತಿದ್ದರೆ ಅಕ್ಕಪಕ್ಕದ ನೆರೆದಿದ್ದ ಜನಸ್ತೋಮ ಕೇಕೆ ಹಾಕಿ ರೈತರಿಗೆ ಮತ್ತಷ್ಟು ಹುಮ್ಮಸ್ಸು ನೀಡುತ್ತಿತ್ತು. ಗೆರೆ ದಾಟಿದ ಬಹುಮಾನಕ್ಕೆ ಅರ್ಹರಾದ ಎತ್ತುಗಳು ಮತ್ತು ರೈತನನ್ನು ಮುತ್ತಿಕೊಂಡ ಜನ ಜಯ ಘೋಷಣೆ ಮೊಳಗಿಸಿದರು.
Vijaya Karnataka Web SMG-2501-2-15-25SMG Run


ನಗರ ಸಮೀಪದ ಅಬ್ಬಲಗೆರೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಹ್ಯಾದ್ರಿ ಉತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಎತ್ತಿನಗಾಡಿ ಓಟದ ಸ್ಪರ್ಧೆ ವೀಕ್ಷಣೆಗೆ ಸಾವಿರಾರು ಜನರು ಆಗಮಿಸಿದ್ದರು. ಸ್ಪರ್ಧಿಗಳ ಜತೆಗೆ ಅವರ ಊರಿನ ಜನ ಸಮೂಹವೇ ಬಂದಿತ್ತು. ಹೀಗಾಗಿ ಸ್ಪರ್ಧೆ ಬಹಳ ಪೈಪೋಟಿಯಿಂದ ಕೂಡಿತ್ತು. ಸ್ಪರ್ಧೆಯಲ್ಲಿ 32 ಎತ್ತಿನಗಾಡಿಗಳು ಭಾಗವಹಿಸಿದ್ದವು. ಮೂರು ಹಂತದ ಸ್ಪರ್ಧೆ ನಡೆಸಿ ವಿಜೇತರನ್ನು ಆಯ್ಕೆ ಮಾಡಲಾಯಿತು.

ಸ್ಪರ್ಧೆಯಲ್ಲಿ ಎಳೆ ಹೋರಿಗಳು ಮಿಂಚಿನಂತೆ ಓಡಿ ನೆರೆದವರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿದವು. ಮಲೆನಾಡಿನ ಗಿಡ್ಡ ತಳಿಗಳು ದ್ವಿತೀಯ ಸ್ಥಾನ ಗಳಿಸುವ ಮೂಲಕ ತಾವೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದವು. ಎತ್ತಿನಗಾಡಿಗಳು ಶರವೇಗದಲ್ಲಿ ಮುನ್ನುಗ್ಗುತ್ತಿದ್ದರೆ ಯಾವ ಗಾಡಿ ಮುಂದೆ ಬರುತ್ತಿದೆ ಎಂದು ನೋಡಲು ಜನ ಮುಗಿಬೀಳುತ್ತಿದ್ದರು. ಅದರ ನಡುವೆ ಫೋಟೊ ತೆಗೆದುಕೊಳ್ಳಲು, ವಿಡಿಯೊ ಮಾಡುವವರೂ ಬಹಳಷ್ಟು ಮಂದಿ ಇದ್ದರು.

ಮೊದಲ ಹಂತದ ಸ್ಪರ್ಧೆಯಲ್ಲಿ ಗಾಡಿಯೊಂದರಲ್ಲಿ ಚಗಿಬಿದ್ದು ಓಡುತ್ತಿದ್ದ ಎತ್ತುಗಳಲ್ಲಿ ಒಂದು ಎತ್ತು ನೊಗಕ್ಕೆ ಕಟ್ಟಿದ್ದ ಪಟಕಣ್ಣಿ ಕಳಚಿಕೊಂಡಿದ್ದರಿಂದ ಗಾಬರಿಗೊಂಡು ಪೇರಿ ಕಿತ್ತಿತು. ಈ ಹಂತದಲ್ಲಿ ಮತ್ತೊಂದು ಎತ್ತು ಒಂಟಿಯಾಗಿ ಗಾಡಿಯನ್ನು ಎಳೆದು ನೋಡುಗರ ಎದೆ ಜಲ್ಲೆನ್ನುವಂತೆ ಮಾಡಿತು. ಒಂಟಿ ಎತ್ತು ಸರಿಸಮಾನ ಪೈಪೋಟಿ ನೀಡಿ ಜನರ ಮೆಚ್ಚುಗೆಯನ್ನೂ ಗಳಿಸಿತು. ಹೀಗಾಗಿ ಅವುಗಳಿಗೆ ಮತ್ತೊಂದು ಅವಕಾಶ ನೀಡಲಾಯಿತು. ಆದರೆ, ಎರಡನೇ ಸುತ್ತಿನಲ್ಲಿ ಅವುಗಳು ಸೋಲನುಭವಿಸಿದವು.

ಎತ್ತಿನಗಾಡಿ ಸ್ಪರ್ಧೆಯನ್ನು ಎರೆಹುಳ ಗೊಬ್ಬರ ಖ್ಯಾತಿಯ ದುಮ್ಮಳ್ಳಿ ಶಿವಮ್ಮ ಉದ್ಘಾಟಿಸಿದರು. ಶಾಸಕ ಕೆ.ಬಿ.ಅಶೋಕ ನಾಯ್ಕ, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್‌.ಕುಮಾರ್‌, ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌, ಅಪರ ಜಿಲ್ಲಾಧಿಕಾರಿ ಅನುರಾಧ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹನುಮನಾಯ್ಕ್‌ ಮತ್ತಿತರರು ಹಾಜರಿದ್ದರು.

------------------
ವಿಜೇತರು


ಎಸ್‌.ಎಂ.ಯೋಗರಾಜ, ಸುರಹೊನ್ನೆ (ಪ್ರ)- 10ಸಾವಿರ ರೂ.

ರುದ್ರಪ್ಪ, ರಾಮನಗರ(ದ್ವಿ)- 8ಸಾವಿರ ರೂ.

ಹನುಮ ನಾಯ್ಕ್‌, ಬೀರನಕೆರೆ(ತೃ)-5 ಸಾವಿರ ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ