ಆ್ಯಪ್ನಗರ

ಮನಸ್ಸಿನಿಂದಲೇ ತಂಬಾಕು ದೂರ ಮಾಡಿ

ಜನರು ತಂಬಾಕು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ ಅರಿತು ಕೂಡ ಅವುಗಳ ದಾಸರಾಗಿ ಅಮೂಲ್ಯ ಬದುಕನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಬೇಸರ ವ್ಯಕ್ತಪಡಿಸಿದರು.

Vijaya Karnataka 1 Jun 2019, 5:00 am
ಶಿವಮೊಗ್ಗ : ಜನರು ತಂಬಾಕು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ ಅರಿತು ಕೂಡ ಅವುಗಳ ದಾಸರಾಗಿ ಅಮೂಲ್ಯ ಬದುಕನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಬೇಸರ ವ್ಯಕ್ತಪಡಿಸಿದರು.
Vijaya Karnataka Web SMR-31GANESH4


ನಗರದ ಕೋರ್ಟ್‌ ಆವರಣದಲ್ಲಿ ಶುಕ್ರವಾರ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಕಾರ ತಂಬಾಕು ಮುಕ್ತ ಜೀವನಕ್ಕಾಗಿ ಹಲವು ಕಾನೂನು ಜಾರಿ ಮಾಡಿದ್ದರೂ ಜನರು ತಂಬಾಕಿಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಯುವ ಜನತೆ ಹೆಚ್ಚಿರುವುದು ಆತಂಕಕಾರಿ ವಿಷಯ ಎಂದರು.

ತಂಬಾಕಿನಿಂದ ಆಗುವ ದುಷ್ಪರಿಣಾಮದ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಆದರೆ, ತಂಬಾಕು ಬಳಕೆಗೆ ಮಾತ್ರ ನಿಯಂತ್ರಣ ಬಿದ್ದಿಲ್ಲ. ಎಲ್ಲಿಯವರೆಗೆ ಜನರ ಮನಸ್ಸಿನಿಂದ ತಂಬಾಕು ಪದಾರ್ಥ ದೂರ ಆಗುವುದಿಲ್ಲವೋ ಅಲ್ಲಿಯವರೆಗೆ ಸಮಾಜ ತಂಬಾಕು ಮುಕ್ತವಾಗುವುದು ಅಸಾಧ್ಯ ಎಂದರು.

ತಂಬಾಕಿನಲ್ಲಿ ಅನೇಕ ರಾಸಾಯನಿಕ ಅಂಶಗಳಿದ್ದು, ಅವುಗಳಲ್ಲಿ ಬಹುತೇಕ ಕ್ಯಾನ್ಸರ್‌ಕಾರಕಗಳಾಗಿವೆ. ಅತಿ ಹೆಚ್ಚು ಪ್ರಮಾಣದ ಕ್ಯಾನ್ಸರ್‌ ರೋಗಕ್ಕೆ ಕಾರಣ ಧೂಮಪಾನ, ತಂಬಾಕು ಜಗಿಯುವುದು, ನಶ್ಯಪುಡಿ ಹಾಗೂ ತಂಬಾಕಿನ ಉತ್ಪನ್ನಗಳ ಬಳಕೆಯೂ ಕ್ಯಾನ್ಸರ್‌ಗೆ ಮುಖ್ಯ ಕಾರಣ. ಆದ್ದರಿಂದ ಜನರು ದುಶ್ಚಟ ಬಿಟ್ಟು ಸಂಗೀತ, ಸಾಹಿತ್ಯ, ಕಲೆ, ಕ್ರೀಡೆ, ಧ್ಯಾನ ಇತರೆ ಉತ್ತಮ ಹವ್ಯಾಸಗಳಲ್ಲಿ ತೊಡಗಿಕೊಳ್ಳ ಬೇಕೆಂದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಅಪ್ರಾಪ್ತರಿಗೆ ತಂಬಾಕಿನ ಉತ್ಪನ್ನ ಮಾರಾಟ ಹಾಗೂ ಅಪ್ರಾಪ್ತರಿಂದ ತಂಬಾಕಿನ ಮಾರಾಟ ಮಾಡಿಸಬಾರದು. ಶಾಲೆಗಳಿಂದ ನಿಗದಿತ ಅಂತರದಲ್ಲಿ ಇಂತಹ ಉತ್ಪನ್ನ ಮಾರಾಟ ಮಾಡಬಾರದು. ಈ ವಿಷಯದಲ್ಲಿ ಕಾನೂನು ಬಾಹಿರ ವಿಚಾರಗಳು ತಿಳಿದು ಬಂದಲ್ಲಿ ಅಧಿಕಾರಿಗಳು ಇಲ್ಲವೆ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಸರ್ವರೂ ಕೈಜೋಡಿಸಬೇಕೆಂದರು. ಜಾಥಾದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಪ್ರಭಾವತಿ ಎಂ.ಹಿರೇಮಠ, ಸಿಇಓ ಕೆ.ಶಿವರಾಮೆಗೌಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್‌.ಸರಸ್ವತಿ, ಎಸ್ಪಿ ಡಾ.ಎಂ.ಅಶ್ವಿನಿ, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್‌ ಸುರಗೀಹಳ್ಳಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ