ಆ್ಯಪ್ನಗರ

ದುಷ್ಕರ್ಮಿಗಳಿಂದ ಕೆಳದಿ ಅರಸರ ಸಮಾಧಿ ಧ್ವಂಸ

ಐತಿಹಾಸಿಕ ಹಿನ್ನೆಲೆಯ ಬಿದನೂರಿನ ಕೆಳದಿ ಸಂಸ್ಥಾನದ ಅರಸರ ಸಮಾಧಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

Vijaya Karnataka 15 Jul 2019, 5:00 am
ಹೊಸನಗರ (ಶಿವಮೊಗ್ಗ) : ಐತಿಹಾಸಿಕ ಹಿನ್ನೆಲೆಯ ಬಿದನೂರಿನ ಕೆಳದಿ ಸಂಸ್ಥಾನದ ಅರಸರ ಸಮಾಧಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
Vijaya Karnataka Web SMR-14HOSP5


ತಾಲೂಕಿನ ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀಧರಪುರದಲ್ಲಿರುವ ಕೆಳದಿ ಅರಸರ ಸಮಾಧಿಯನ್ನು ದುಷ್ಕರ್ಮಿಗಳು ಅಗೆದಿರುವುದು ಭಾನುವಾರ ಬೆಳಕಿಗೆ ಬಂದಿದೆ. ಈ ಜಾಗದಲ್ಲಿ ಅರಸರ 10ಕ್ಕೂ ಹೆಚ್ಚು ಸಮಾಧಿಗಳಿದ್ದು, ಕಳೆದ ವರ್ಷ ಸಹಾ ಒಂದು ಸಮಾಧಿಯನ್ನು ಹಾನಿಗೆಡವಿದ್ದರು.

ಸಮಾಧಿ ಸುತ್ತಲೂ ನಿಂಬೆ ಹಣ್ಣು, ಕುಂಕುಮ ಬಿದ್ದಿದ್ದು, ನಿಧಿಯಾಸೆಗೆ ಕೃತ್ಯ ನಡೆಸಿರುವ ಅನುಮಾನ ದಟ್ಟವಾಗಿದೆ. ಸಮಾಧಿ ಜಾಗದಲ್ಲಿ ಗುಂಡಿ ತೋಡಲಾಗಿದೆ. ಮಣ್ಣನ್ನು ಹೊರಗೆ ಚೆಲ್ಲಿದ್ದು, ಸಮಾಧಿ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳಿಸಲಾಗಿದೆ. ಇತಿಹಾಸ ಪ್ರಸಿದ್ಧಿ ಪಡೆದಿರುವ ಇಂತಹ ಸ್ಥಳಗಳು ಪದೇಪದೆ ಹಾನಿಗೀಡಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ.

ಸಂರಕ್ಷ ಣೆಗೆ ಆಗ್ರಹ:


90ರ ದಶಕದಲ್ಲಿ ಇತಿಹಾಸ ಸಂಶೋಧಕ ಡಿ.ಶಂಕರನಾರಾಯಣರಾವ್‌ ಬಿದನೂರಿನಲ್ಲಿರುವ ಕೆಳದಿ ಅರಸರ ಸಮಾಧಿಗಳ ಕುರಿತು ಸಂಶೋಧನೆ ಕೈಗೊಂಡಿದ್ದರು. ಪಾಳುಬಿದ್ದ ಸಮಾಧಿ ಸ್ಥಳದ ಸಂರಕ್ಷ ಣೆ ನಿಟ್ಟಿನಲ್ಲಿ ಪುರಾತತ್ವ ಇಲಾಖೆ ಕಬ್ಬಿಣದ ಬೇಲಿ ನಿರ್ಮಾಣ ಮಾಡಿತ್ತು. ಆದರೆ ಕಬ್ಬಿಣದ ಗೇಟುಗಳು ಕಳ್ಳತನವಾಗಿದ್ದು, ಸಮಾಧಿ ಸ್ಥಳಕ್ಕೆ ಯಾವುದೇ ಭದ್ರತೆ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಬಂದು ಹೋಗುತ್ತಾರೆಯೇ ವಿನಃ ಸ್ಮಾರಕಗಳ ಸಂರಕ್ಷ ಣೆಗೆ ನಿಗಾ ವಹಿಸುತ್ತಿಲ್ಲ ಎನ್ನುವ ಆರೋಪ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಕೆಲ ವರ್ಷಗಳಿಂದಲೂ ಈ ಭಾಗದಲ್ಲಿ ನಿರಂತರವಾಗಿ ದುಷ್ಕರ್ಮಿಗಳಿಂದ ನಿಧಿ ಶೋಧನೆ ನಡೆಯುತ್ತಲೇ ಇದೆ. ಸಮಾಧಿ ಸ್ಥಳವಲ್ಲದೇ ಬಿದನೂರು ಕೋಟೆ, ಗಳಿಗೆಬಟ್ಟಲು, ಬರೇಕಲ್‌ ಬತೇರಿ, ಶೂಲದಗುಡ್ಡ, ದರಗಲಗುಡ್ಡ ಮೊದಲಾದ ಕಡೆಗಳಲ್ಲಿ ಭೂ ಅಗೆತ ನಡೆದಿದೆ. ದುಷ್ಕೃತ್ಯಗಳ ಕೃತ್ಯಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಇನ್ನುಳಿದ ಸಮಾಧಿಗಳು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ