ಆ್ಯಪ್ನಗರ

‘ತುಂಗೆ’ ಪಾತ್ರದ ಜಾಗ ಒತ್ತು‘ವರಿ’

ಮಲೆನಾಡಿನಲ್ಲಿ ಮಳೆ ಇಲ್ಲದಂತಹ ವಾತಾವರಣವಿರುವ ಹೊತ್ತಲ್ಲೇ ತುಂಗಾನದಿ ಹರಿವಿನ ಜಾಗಕ್ಕೆ ಬೇಲಿ ಸುತ್ತುವ ಪ್ರಯತ್ನ ಆರಂಭವಾಗಿದೆ. ತಾಲೂಕಿನ ಹೆದ್ದೂರು, ಹೊಸಹಳ್ಳಿ ಗ್ರಾಮದಲ್ಲಿ ತುಂಗಾನದಿ ಹರಿವಿನ ಜಾಗಕ್ಕೆ ಹೊಸದಾಗಿ ಮಣ್ಣು ತುಂಬಿ ಆಕ್ರಮಿಸಲಾಗಿದೆ.

Vijaya Karnataka 20 Jul 2019, 5:00 am
ರಾಘವೇಂದ್ರ ಮೇಗರವಳ್ಳಿ
Vijaya Karnataka Web tunga river fields
‘ತುಂಗೆ’ ಪಾತ್ರದ ಜಾಗ ಒತ್ತು‘ವರಿ’


ತೀರ್ಥಹಳ್ಳಿ :
ಮಲೆನಾಡಿನಲ್ಲಿ ಮಳೆ ಇಲ್ಲದಂತಹ ವಾತಾವರಣವಿರುವ ಹೊತ್ತಲ್ಲೇ ತುಂಗಾನದಿ ಹರಿವಿನ ಜಾಗಕ್ಕೆ ಬೇಲಿ ಸುತ್ತುವ ಪ್ರಯತ್ನ ಆರಂಭವಾಗಿದೆ. ತಾಲೂಕಿನ ಹೆದ್ದೂರು, ಹೊಸಹಳ್ಳಿ ಗ್ರಾಮದಲ್ಲಿ ತುಂಗಾನದಿ ಹರಿವಿನ ಜಾಗಕ್ಕೆ ಹೊಸದಾಗಿ ಮಣ್ಣು ತುಂಬಿ ಆಕ್ರಮಿಸಲಾಗಿದೆ.

ತುಂಗಾನದಿ ಹರಿವಿನ ಪ್ರದೇಶದ ನದಿಪಾತ್ರ ಜಾಗದ ಒತ್ತುವರಿ ಪ್ರಕರಣವನ್ನು ಜಿಲ್ಲಾ, ತಾಲೂಕು ಆಡಳಿತ ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ನದಿ ಪಾತ್ರದ ಪಕ್ಕದಲ್ಲಿದ್ದ ದಲಿತ ಕುಟುಂಬಗಳ ಒಡೆತನದ ಭೂ ಪ್ರದೇಶವೂ ದಬ್ಬಾಳಿಕೆಗೆ ಬಲಿ ಆಗಿದೆ. ತುಂಗಾನದಿ ಪ್ರದೇಶದ ಒತ್ತುವರಿಯಲ್ಲಿ ರಾಜಕೀಯ ಪ್ರಭಾವಿಗಳು ಸೇರಿಕೊಂಡಿದ್ದಾರೆ.

ಹೆದ್ದೂರು, ಹೊಸಳ್ಳಿಯಲ್ಲಿ ಸತತವಾಗಿ ತುಂಗಾನದಿ ದೌರ್ಜನ್ಯಕ್ಕೆ ಒಳಗಾಗಿದೆ. ನೀರಿನ ಹರಿವು ಬದಲಾಗುವಂತಹ ರೀತಿಯಲ್ಲಿ ನದಿಪಾತ್ರದ ಜಾಗ ಕಬಳಿಸಲಾಗುತ್ತಿದೆ. ಸಾವಿರಾರು ಲಾರಿಲೋಡ್‌ ಮಣ್ಣನ್ನು ನದಿಗೆ ಸುರಿದು ಜಾಗ ಒತ್ತುವರಿ ಮಾಡಿರುವ ಪ್ರಕರಣವೂ ಸ್ಥಳೀಯ ಆಡಳಿತದ ಗಮನಕ್ಕೆ ಬಾರದಿರುವುದು ಸೋಜಿಗ ಎನಿಸಿದೆ.

ಮುಂಡುವಳ್ಳಿ ಅರಣ್ಯ ಪ್ರದೇಶದಲ್ಲಿ ಮಣ್ಣು ಅಗೆದು ತುಂಗಾನದಿ ಪಾತ್ರದಲ್ಲಿ ಸುರಿಯಲಾಗಿದೆ. ನದಿಪಾತ್ರದಲ್ಲಿ ಪ್ರಕೃತಿ ನಾಶದ ಕೃತ್ಯಗಳು ನಿರಂತರವಾಗಿದ್ದರೂ ಸಂಬಂಧಪಟ್ಟ ಇಲಾಖೆಗಳು ಮಾತ್ರ ಗಪ್‌ಚುಪ್‌ ಆಗಿದೆ. ಒತ್ತುವರಿದಾರರ ರಕ್ಷಿಸುವಲ್ಲಿ 'ರಾಜಕೀಯ ಪ್ರಭಾವ' ಯಶಸ್ವಿ ಆದಂತಿದೆ.

ದುರಾಸೆಗೆ ನದಿ ಬಲಿ:
ಕೆಲ ಜನರ ದುರಾಸೆಗೆ ಸಿಕ್ಕು ಬೆಂಡಾಗಿರುವ ತುಂಗೆ ಆಕ್ರಂದನ ಸದ್ಯಕ್ಕೆ ಯಾರಿಗೂ ಕೇಳಿಸುತ್ತಿಲ್ಲ. ತುಂಗೆ ಒಡಲು ಒತ್ತುವರಿಯಿಂದ ಕಂಗೆಟ್ಟಿದೆ. ಜೀವನದಿ ಜೀವನ ಅರ್ಥವಾಗದ ಜನರಿಂದ ನಿರಂತರವಾಗಿ ಹಾನಿ ಕೃತ್ಯ ನಡೆಯುತ್ತಿವೆ. ಹೆದ್ದೂರು, ಹೊಸಳ್ಳಿಯ ಸ.ನಂ.146ರಲ್ಲಿ ತುಂಗಾನದಿ ಪಾತ್ರದ ಪ್ರದೇಶ ಒತ್ತುವರಿಗೊಂಡಿದೆ. ನೀರಿನ ಹರಿವು ಬದಲಾಗುವ ಧಾರುಣ ಸ್ಥಿತಿ ನದಿ ಪಾತ್ರದಲ್ಲಿ ನಿರ್ಮಾಣವಾಗಿದೆ. ಒತ್ತುವರಿ ಭೀತಿಯಲ್ಲಿ ನಲುಗಿರುವ ತುಂಗಾನದಿ ಕಾಪಾಡೋರಾರ‍ಯರು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ.

ನದಿಪಕ್ಕ ಮಣ್ಣು ರಾಶಿ :
ಸಾವಿರಾರು ಲಾರಿ ಲೋಡ್‌ ಮಣ್ಣನ್ನು ನದಿಪಾತ್ರಕ್ಕೆ ತಂದು ರಾಶಿ ಹಾಕಿ ನದಿ ಜಾಗವನ್ನು ಸುಲಭವಾಗಿ ಒತ್ತುವರಿ ಮಾಡಲಾಗಿದೆ. ಗುಡ್ಡದಷ್ಟು ಎತ್ತರವಾಗಿ ಮಣ್ಣು ರಾಶಿ ಹಾಕಿ ಸಮತಟ್ಟುಗೊಳಿಸಲಾಗಿದೆ. ನದಿ ಪ್ರದೇಶ ಸಂರಕ್ಷಣೆ ಜವಾಬ್ದಾರಿ ಅರಣ್ಯ ಮತ್ತು ಜೀವಿಶಾಸ್ತ್ರ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಮೀನುಗಾರಿಕೆ ಇಲಾಖೆಗೆ ಪ್ರಮುಖವಾಗಿ ಸೇರಿದೆ. ಅಡಕೆ ಬೆಳೆಗೆ ಧಾರಣೆ ಹೆಚ್ಚಾದ ನಂತರದ ವರ್ಷಗಳಲ್ಲಿ ತುಂಗಾನದಿ ಪಾತ್ರ ಅಪಾಯದಂಚಿಗೆ ತಲುಪಿದೆ. ಹೊಸಳ್ಳಿ, ಹೆದ್ದೂರು ಗ್ರಾಮದಲ್ಲಿ ತುಂಗಾ ನದಿ ಪಾತ್ರದಲ್ಲಿ ಮಣ್ಣು ತಂದು ಒತ್ತುವರಿ ಮಾಡಿರುವ ಪ್ರಕರಣ ಆಡಳಿತಕ್ಕೆ ಸವಾಲೆಸೆಯುವಂತಿದೆ.

ಅಧ್ಯಕ್ಷ ವಿರುದ್ಧ ಆರೋಪ :
ತುಂಗಾನದಿ ಪಾತ್ರ ಪ್ರದೇಶ ಒತ್ತುವರಿ ಕುರಿತು 2019 ಜುಲೈ 16ರಂದು ಹೆದ್ದೂರು ಗ್ರಾಮದ ಧನಂಜಯ್‌ ಶಿವಮೊಗ್ಗ ಡಿಸಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಹೆದ್ದೂರು ಗ್ರಾ.ಪಂ. ಅಧ್ಯಕ್ಷ ಮಹೇಶ್‌ ತುಂಗಾನದಿ ಪಾತ್ರದಲ್ಲಿ ಮಣ್ಣು ರಾಶಿ ಹಾಕಿ ನದಿ ನೀರಿನ ಹರಿವಿನ ಜಾಗ ಒತ್ತುವರಿ ಮಾಡಿದ್ದಾರೆ ಎಂಬ ಅಂಶವನ್ನು ದೂರಿನಲ್ಲಿ ವಿವರಿಸಿದ್ದಾರೆ. ಹೆದ್ದೂರು, ಹೊಸಳ್ಳಿ ಗ್ರಾಮದ ಸರ್ವೇ ನಂ 278, 264ರಲ್ಲಿ ದರಖಾಸ್ತು ಯೋಜನೆಯಡಿ ತುಂಗಾನದಿ ಪಾತ್ರದಲ್ಲಿ ದಲಿತ ಕುಟುಂಬಗಳಿಗೆ ಸರಕಾರ ಮಂಜೂರು ಮಾಡಿದ ಪ್ರದೇಶವೂ ಒತ್ತುವರಿ ಆಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ನದಿ ಪಕ್ಕದ ಜಾಗ ಒತ್ತುವರಿ ಮಾಡಿ ಬೇಲಿ ಸುತ್ತುವ ಪ್ರಯತ್ನ ಆರಂಭವಾಗಿದೆ.


ರಾಜಕೀಯ ಸಂಘರ್ಷಕ್ಕೆ ತುಂಗೆ ಬಲಿ!
ಸ್ಥಳೀಯ ರಾಜಕಾರಣದ ಜಿದ್ದಾಜಿದ್ದು ತುಂಗೆಯನ್ನು ಬಲಿ ಪಡೆಯಲು ಹೊರಟಂತಿದೆ. ನದಿಗೆ ಎದುರಾಗಿರುವ ಆಪತ್ತು ಪ್ರಶ್ನಿಸಲೇಬಾರದು ಎಂಬಂತಹ ದರ್ಪ ಸಾರ್ವಜನಿಕವಾಗಿ ಆತಂಕ ಸೃಷ್ಟಿಸಿದೆ. ತುಂಗೆ ಒಡಲು ಒತ್ತುವರಿ ಆಗುವುದನ್ನು ಕಂಡು ಕಾಣದಂತಿರಬೇಕೆಂಬ ಒತ್ತಡವನ್ನು ರಾಜಕೀಯ ಪ್ರಭಾವದಲ್ಲಿ ಸೃಷ್ಟಿಸಲಾಗುತ್ತಿದೆ.


ಅರಣ್ಯ ಪ್ರದೇಶದ ಮಣ್ಣು ಲೂಟಿ!

ಮುಂಡುವಳ್ಳಿ ಅರಣ್ಯ ಪ್ರದೇಶದಲ್ಲಿ ಹೇರಳವಾಗಿ ಮಣ್ಣು ಅಗೆದು ತುಂಗಾನದಿಪಾತ್ರದಲ್ಲಿ ಸುರಿದು ಒತ್ತುವರಿ ಮಾಡಲಾಗಿದೆ. ಇಷ್ಟೆಲ್ಲಾ ಪರಿಸರ ಹಾನಿ ಕೃತ್ಯ ದಿನಗಟ್ಟಲೆ ನಡೆದಿರುವುದು ಸಾರ್ವಜನಿಕರ ಗಮನಕ್ಕೆ ಬಂದರೂ ಅರಣ್ಯ ಇಲಾಖೆ ಗಮನಕ್ಕೆ ಮಾತ್ರ ಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ