ಅವೈಜ್ಞಾನಿಕ ಕಾಮಗಾರಿ ಸ್ಥಗಿತಕ್ಕೆ ಮನವಿ
ಸಾಗರ ತಾಲೂಕಿನ ಅಡ್ಡೇರಿ ರೈಲ್ವೆ ಕ್ರಾಸಿನ ಬಳಿ ನಡೆಯುತ್ತಿರುವ ಅಂಡರ್ಪಾಸ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಗ್ರಾಮಸ್ಥರು ಭಾನುವಾರ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹಿಸಿದ್ದಾರೆ
ತ್ಯಾಗರ್ತಿ: ಸಾಗರ ತಾಲೂಕಿನ ಅಡ್ಡೇರಿ ರೈಲ್ವೆ ಕ್ರಾಸಿನ ಬಳಿ ನಡೆಯುತ್ತಿರುವ ಅಂಡರ್ಪಾಸ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಗ್ರಾಮಸ್ಥರು ಭಾನುವಾರ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ಎಂಜಿನಿಯರ್ ಸ್ಥಳಕ್ಕೆ ಆಗಮಿಸಿ ಕಾಮಗಾರಿಯಲ್ಲಿ ಸೂಕ್ತ ಮಾರ್ಪಾಟು ಮಾಡುವವರೆಗೆ ಕೆಲಸ ಮಾಡದಂತೆ ಗ್ರಾಮಸ್ಥರು ತಡೆದಿದ್ದಾರೆ. ಕಾಸ್ಪಾಡಿಯ ರಾಷ್ಟ್ರೀಯ ಹೆದ್ದಾರಿ 206 ರಿಂದ ತ್ಯಾಗರ್ತಿ ಮಾರ್ಗವಾಗಿ ಶಿರಾಳಕೊಪ್ಪ ಸಂಪರ್ಕಿಸುವ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಅಡ್ಡೇರಿ ಬಳಿ ರೈಲ್ವೆ ಕ್ರಾಸಿಂಗ್ ಇದೆ. ಇದಕ್ಕೆ ಅಂಡರ್ಪಾಸ್ ಕಾಮಗಾರಿ ನಡೆಯುತ್ತಿದೆ.
ಈ ಕಾಮಗಾರಿಯಲ್ಲಿ ನಿರ್ಮಾಣವಾಗಿರುವ ರಸ್ತೆ ಎತ್ತರದ ತಿರುವಿನಲ್ಲಿ ನಿರ್ಮಾಣವಾಗುತ್ತಿದ್ದು, ನಿತ್ಯ ಭಾರಿ ನೂರಾರು ವಾಹನಗಳು ಸಂಚರಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಸಚಿವ ಎಚ್.ಕೆ.ಪಾಟೀಲ್ಗೆ ಮನವಿ:
ಖಾಸಗಿ ಕಾರ್ಯಕ್ರಮ ನಿಮಿತ್ತ ಈ ಮಾರ್ಗದಲ್ಲಿ ಆಗಮಿಸಿದ ಗ್ರಾಮೀಣಾಭಿವೃದ್ಧಿ ಪಂಚಾಯಿತಿ ರಾಜ್ ಸಚಿವ ಎಚ್.ಕೆ.ಪಾಟೀಲರ ಕಾರನ್ನು ತಡೆದ ಗ್ರಾಮಸ್ಥರು ರೈಲ್ವೆ ಅಂಡರ್ಪಾಸ್ ಕಾಮಗಾರಿ ಅವೈಜ್ಞಾನಿಕವಾಗಿರುವ ಬಗ್ಗೆ ಮನವಿ ಸಲ್ಲಿಸಿದರು. ತಕ್ಷ ಣ ಸಚಿವರು ಗ್ರಾ.ಪಂ.ಅಧ್ಯಕ್ಷ ರು ಹಾಗೂ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್ಗೆ ದೂರವಾಣಿ ಮೂಲಕ ಸಂಪರ್ಕಿಸಿ, ಲೋಕೋಪಯೋಗಿ ಇಲಾಖೆ ರಸ್ತೆಯನ್ನು 50 ಮೀ.ನಷ್ಟು ತಗ್ಗಿಸಿ ಸಾರ್ವಜನಿಕರಿಗೆ ಅನುಕೂಲಕರ ರೀತಿಯಲ್ಲಿ ಕಾಮಗಾರಿ ನಿರ್ವಹಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಈ ಸಂದರ್ಭ ಸಾಗರ ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ್ಹಕ್ರೆ, ಲೋಕೋಪಯೋಗಿ ಇಲಾಖೆಗೆ ಕಾಮಗಾರಿ ಕುರಿತು ಸೂಕ್ತ ಮಾರ್ಗದರ್ಶನ ನೀಡುವಂತೆ ತಿಳಿಸಿದರು.
ಹಿರೇಬಿಲಗುಂಜಿ ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾಮಂಜುನಾಥ್,ಉಪಾಧ್ಯಕ್ಷ ಕೃಷ್ಣಮೂರ್ತಿ, ಗ್ರಾಮಸ್ಥರಾದ ಅಶೋಕ್ ಅಡ್ಡೇರಿ, ವಿಶ್ವನಾಥ್, ತಿಮ್ಮಪ್ಪ, ನಾಗರಾಜ, ಸದಾಚಾರಿ ಗೌಡ ವೀರಾಪುರ, ಉಳ್ಳೂರು ಗ್ರಾ.ಪಂ.ಪಿಡಿಒ ಗಿರೀಶ್ ಮತ್ತಿತರರು ಇದ್ದರು.