ಆ್ಯಪ್ನಗರ

ಭೂಗರ್ಭ ಶಾಸ್ತ್ರಜ್ಞರ ತಂಡ ರಚನೆಗೆ ಆಗ್ರಹ

ಪ್ರವಾಹ ಸಂದರ್ಭ ಮಲೆನಾಡು ಭಾಗದ ಹಲವು ಕಡೆ ಗುಡ್ಡ ಕುಸಿತಗೊಂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಭೂ ಗರ್ಭ ಶಾಸ್ತ್ರಜ್ಞರ ವಿಶೇಷ ತಂಡ ರಚಿಸಿ ಸಂಶೋಧನೆಗೆ ಸರಕಾರ ಕ್ರಮವಹಿಸಬೇಕೆಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಆಗ್ರಹಿಸಿದರು.

Vijaya Karnataka 22 Aug 2019, 5:00 am
ತೀರ್ಥಹಳ್ಳಿ: ಪ್ರವಾಹ ಸಂದರ್ಭ ಮಲೆನಾಡು ಭಾಗದ ಹಲವು ಕಡೆ ಗುಡ್ಡ ಕುಸಿತಗೊಂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಭೂ ಗರ್ಭ ಶಾಸ್ತ್ರಜ್ಞರ ವಿಶೇಷ ತಂಡ ರಚಿಸಿ ಸಂಶೋಧನೆಗೆ ಸರಕಾರ ಕ್ರಮವಹಿಸಬೇಕೆಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಆಗ್ರಹಿಸಿದರು.
Vijaya Karnataka Web urging to arrange team geologist
ಭೂಗರ್ಭ ಶಾಸ್ತ್ರಜ್ಞರ ತಂಡ ರಚನೆಗೆ ಆಗ್ರಹ


ಬುಧವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಳೆ, ಪ್ರವಾಹದಿಂದಾದ ಹಾನಿಯ ಘಟನೆಗಳನ್ನು ಕಡೆಗಣಿಸಬಾರದು. ಪ್ರಾಕೃತಿಕ ವಿಕೋಪಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಬೇಕು. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ ಅರಣ್ಯ ಪ್ರದೇಶದ ಹಲವು ಕಡೆ ಗುಡ್ಡ ಕುಸಿತಗೊಂಡಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಜ್ಞಾನಿಗಳು ಈವರೆಗೂ ಸ್ಥಳ ಪರಿಶೀಲಿಸಿಲ್ಲ ಎಂದು ಆರೋಪಿಸಿದರು.

ಹೆಗಲತ್ತಿ ಸೇರಿದಂತೆ ಹಲವು ಭಾಗದಲ್ಲಿ ಗುಡ್ಡ ಕುಸಿತಗೊಂಡ ಪ್ರದೇಶದಲ್ಲಿ ಮಾನವರಿಂದ, ಯಂತ್ರೋಪಕರಣಗಳಿಂದ ಹಾನಿ ಆಗಿಲ್ಲ. ಸಹಜವಾಗಿದ್ದ ಗುಡ್ಡಗಳು ಕುಸಿತಗೊಂಡಿದ್ದು ಅಪಾಯದ ಮುನ್ಸೂಚನೆಯಂತಿದೆ. ಜನರು ಆತಂಕದಲ್ಲಿ ಇದ್ದು ಸರಕಾರ ತಕ್ಷಣ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮಂಜುನಾಥಗೌಡ ಒತ್ತಾಯಿಸಿದರು.

ಪ್ರವಾಹದಿಂದ ಸಾಗುವಳಿ ಪ್ರದೇಶದಲ್ಲಿ ಮರಳು, ಮಣ್ಣು ರಾಶಿಗೊಂಡಿದೆ. ಮೊದಲಿನಂತೆ ಸಾಗುವಳಿ ಭೂಮಿ ಸಿದ್ಧಪಡಿಸುವುದು ಸಣ್ಣ, ಅತಿ ಸಣ್ಣ ರೈತರಿಗೆ ಸಾಧ್ಯವಾಗದು. ಅಲ್ಪಸ್ವಲ್ಪ ಪರಿಹಾರ ವಿತರಣೆಯಿಂದ ಸಂತ್ರಸ್ತರಿಗೆ ಪ್ರಯೋಜನವಾಗದು. ಶಾಶ್ವತ ಪರಿಹಾರ ಕ್ರಮ ರೂಪಿಸಬೇಕಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ. ಡಿಸಿಸಿ ಬ್ಯಾಂಕ್‌, ಜಿಲ್ಲಾ ಹಾಲು ಒಕ್ಕೂಟದಿಂದ ಪರಿಹಾರ ವಿತರಣೆಗಾಗಿ ಸರಕಾರದ ನಿಧಿಗೆ ಹೆಚ್ಚಿನ ಸಹಕಾರ ನೀಡಲಾಗುತ್ತದೆ ಎಂದರು.

ಸಾಗರ, ಹೊಸನಗರ, ಆಗುಂಬೆ ಭಾಗದಲ್ಲಿ ಅಡಕೆ ಬೆಳೆಗೆ ವಿಪರೀತ ಪ್ರಮಾಣದಲ್ಲಿ ಕೊಳೆರೋಗ ತಗುಲಿದೆ. ಪ್ರವಾಹ, ಅಧಿಕ ಮಳೆಯಿಂದಾಗಿ ಉಂಟಾಗಿರುವ ಹಾನಿಗೆ ಪರಿಹಾರ ವಿತರಿಸುವಾಗ ಸಾಗುವಳಿ ಭೂಮಿಯ ದಾಖಲೆಗಳನ್ನು ಪರಿಗಣಿಸುವ ನಿಯಮ ಕೈ ಬಿಡಬೇಕು. ಹಾನಿ ಪ್ರಮಾಣ ಗುರುತಿಸಿ ಪರಿಹಾರ ನೀಡುವ ಕ್ರಮ ಅನುಸರಿಸಬೇಕು. ಬಗರ್‌ಹುಕುಂ ಸಾಗುವಳಿಗೆ ಉಂಟಾದ ಹಾನಿಗೆ ಪರಿಹಾರ ನೀಡದಿರುವುದು ರೈತ ವಿರೋಧಿ ಕ್ರಮವಾಗುತ್ತದೆ ಎಂದು ಮಂಜುನಾಥಗೌಡ ಹೇಳಿದರು.

ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿ ಸಮೀಪ ತುಂಗಾನದಿ ತೀರದಲ್ಲಿರುವ ಜೋಪಡಿ ನಿವಾಸಿಗಳಿಗೆ ಶಾಶ್ವತ ನೆಲೆ ಒದಗಿಸಬೇಕು. ಜಿಲ್ಲಾ, ತಾಲೂಕು ಆಡಳಿತ ಈ ವಿಷಯವಾಗಿ ನಿಧಾನಗತಿ ಧೋರಣೆ ತಾಳಬಾರದು. ಸುಮಾರು 80 ವರ್ಷಗಳಿಂದ ನದಿ ತೀರದ ಅಪಾಯ ಸ್ಥಳದಲ್ಲಿ ವಾಸ ಮಾಡುತ್ತಿರುವ ಜೋಪಡಿ ವಾಸಿಗಳ ಸ್ಥಿತಿ ತೀರ್ಥಹಳ್ಳಿ ಸಂಸ್ಕೃತಿಗೆ ಘನತೆ ತಾರದು. ನಿವೇಶನ ಜಾಗ ಗುರುತಿಸಿ ತಕ್ಷಣ ವಸತಿ ಸೌಕರ‍್ಯ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮಂಜುನಾಥಗೌಡ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್‌ ಉಪಾಧ್ಯಕ್ಷೆ ಜೀನಾವಿಕ್ಟರ್‌, ತಾಲೂಕು ಅಧ್ಯಕ್ಷ ಡಾ. ಟಿ.ಎಲ್‌.ಸುಂದರೇಶ್‌, ಪಕ್ಷದ ಮುಖಂಡರಾದ ಹೆದ್ದೂರು ನಟರಾಜ್‌, ವಿದ್ಯಾಧರ್‌, ಮಟ್ಟಿನಮನೆ ರಾಮಚಂದ್ರ, ಹಾಲಗದ್ದೆ ಉಮೇಶ್‌, ಶಚೀಂದ್ರಹೆಗ್ಡೆ, ರಾಘವೇಂದ್ರಶೆಟ್ಟಿ, ಕಟ್ಟೆಹಕ್ಕಲು ಕಿರಣ್‌, ಬಿ.ಟಿ.ಬಸವರಾಜ್‌, ಹೊರಬೈಲು ರಾಮಕೃಷ್ಣ , ಸುಧೀರ್‌ ಮತ್ತಿತರರು ಇದ್ದರು.


ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಜೆಡಿಎಸ್‌ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ಕಾಂಗ್ರೆಸ್‌ ಮುಖಂಡರು ನಿರೀಕ್ಷಿಸಿದ್ದರೆ ಅದು ಸುಳ್ಳು. ಕಾಂಗ್ರೆಸ್‌ನ ಕೈಕಾಲು ಹಿಡಿಯುವ ಅವಶ್ಯಕತೆ ಜೆಡಿಎಸ್‌ಗಿಲ್ಲ.

- ಆರ್‌.ಎಂ.ಮಂಜುನಾಥಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ