ಆ್ಯಪ್ನಗರ

ಯೂರಿಯಾ ಕೊರತೆ, ರೈತರ ಪರದಾಟ

ತಾಲೂಕಿನಲ್ಲಿ ಒಂದು ವಾರದಿಂದ ಯೂರಿಯಾ ರಸಗೊಬ್ಬರ ಅಭಾವ ತಲೆದೋರಿದ್ದು, ರೈತರು ತಮ್ಮ ದೈನಂದಿನ ಕೆಲಸ ಬಿಟ್ಟು ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಾಗಿದೆ.

Vijaya Karnataka 22 Aug 2019, 5:00 am
ಶಿಕಾರಿಪುರ : ತಾಲೂಕಿನಲ್ಲಿ ಒಂದು ವಾರದಿಂದ ಯೂರಿಯಾ ರಸಗೊಬ್ಬರ ಅಭಾವ ತಲೆದೋರಿದ್ದು, ರೈತರು ತಮ್ಮ ದೈನಂದಿನ ಕೆಲಸ ಬಿಟ್ಟು ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಾಗಿದೆ.
Vijaya Karnataka Web uria problem farmers tention
ಯೂರಿಯಾ ಕೊರತೆ, ರೈತರ ಪರದಾಟ


ಸತತ ಮಳೆ ನಂತರ ಬೆಳೆಗಳಿಗೆ ತತಕ್ಷಣದ ಪೋಷಕಾಂಶವಾಗಿ ಯೂರಿಯಾ ಗೊಬ್ಬರ ನೀಡಬೇಕಿದೆ. ಈ ಕಾರಣಕ್ಕೆ ರೈತರು ಗೊಬ್ಬರ ಪಡೆಯಲು ಕಳೆದ ಒಂದು ವಾರದಿಂದ ಪ್ರಯತ್ನಿಸುತ್ತಿದ್ದಾರೆ. ಆದರೂ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ. ಕಳೆದು ಮೂರು ದಿನಗಳಿಂದ ಖಾಸಗಿ ಅಂಗಡಿಗಳ ಮುಂದೆ ಸರತಿ ನಿಲ್ಲುತ್ತಿರುವ ರೈತರು, ಗೊಬ್ಬರ ಬಾರದೆ ನಿರಾಸೆಯಿಂದ ಮನೆಗೆ ವಾಪಸ್‌ ಹೋಗಿರುವ ಘಟನೆ ನಡೆದಿದೆ. ಬುಧವಾರ ಸಹ ಪಟ್ಟಣದ ಟಿಎಪಿಸಿಎಂಎಸ್‌ ಸೊಸೈಟಿಗೆ 800 ಚೀಲ ಮತ್ತು ಖಾಸಗಿ ಅಂಗಡಿಯೊಂದಕ್ಕೆ 480 ಚೀಲ ಗೊಬ್ಬರ ಬಂದಿತ್ತು. ರೈತರು ಸರದಿಯಲ್ಲಿ ನಿಂತು ಮೊದಲು ಬಂದವರು ತಲಾ 4 ಚೀಲ ಪಡೆದುಕೊಂಡರು. ನಂತರ ಬಂದವರು ಮತ್ತೂ ಬರೀಗೈಯ್ಯಲ್ಲಿ ವಾಪಸಾದರು.

ಕಳೆದ ಎರಡು ವಾರದಲ್ಲಿ ಸತತ ಮಳೆ ಕಾರಣಕ್ಕೆ ಕೃಷಿ ಭೂಮಿಯಲ್ಲಿನ ಪೋಷಕಾಂಶ ಹರಿದು ಹೋಗಿದೆ. ಪ್ರಮುಖವಾಗಿ ಮೆಕ್ಕೆಜೋಳ, ಶುಂಠಿ ಮತ್ತಿತರೆ ಬೆಳೆಗಳು ಸತ್ವಹೀನವಾಗಿವೆ. ರೈತರು ತ್ವರಿತವಾಗಿ ಮತ್ತೊಂದು ಸುತ್ತಿನ ಯೂರಿಯಾ ಗೊಬ್ಬರ ಬೆಳೆಗೆ ನೀಡುವುದು ಅಗತ್ಯವಾಗಿದೆ. ಹಾಗಾಗಿ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಮಾರುಕಟ್ಟೆಯಲ್ಲಿ ಲಭಿಸುತ್ತಿಲ್ಲ. ಈ ಭಾಗದ ಬಹಳಷ್ಟು ರೈತರು ನೆರೆಯ ಮಾಸೂರು ಮತ್ತಿತರ ಕಡೆಗಳಿಂದ ಒಂದೆರಡು ಚೀಲ ಯೂರಿಯಾ ತಂದು ಬಳಸುತ್ತಿದ್ದಾರೆ. ಅದು ಯಾವುದಕ್ಕೂ ಸಾಕಾಗುತ್ತಿಲ್ಲ.

------
ಶಿಕಾರಿಪುರ ತಾಲೂಕಿನ ವಾರ್ಷಿಕ ಯೂರಿಯಾ ಗೊಬ್ಬರ ಬೇಡಿಕೆ 5000ಟನ್‌ ಆಗಿದೆ. ಈಗಾಗಲೆ 5 ಸಾವಿರ ಟನ್‌ ಪೂರೈಕೆಯಾಗಿದ್ದು, ಭತ್ತದ ಬೆಳೆಗೆ ಇನ್ನೂ ಒಂದು ತಿಂಗಳ ನಂತರ ಬೇಡಿಕೆ ಬರಬೇಕಿತ್ತು. ಶುಂಠಿ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆ ಬೆಳೆದಿರುವ ರೈತರು ಮತ್ತೊಮ್ಮೆ ಗೊಬ್ಬರ ಪಡೆಯುತ್ತಿರುವುದು ಅಭಾವದ ಸ್ಥಿತಿ ನಿರ್ಮಿಸಿದೆ. ಇನ್ನೆರಡು ದಿನಗಳಲ್ಲಿ ಗೊಬ್ಬರ ಪೂರೈಕೆ ಆಗಲಿದ್ದು ಸಹಕಾರಿ ಸಂಘಗಳ ಮೂಲಕ ವಿತರಿಸಲಾಗುವುದು. ರೈತರು ಆತಂಕ ಪಡದೆ ಸಮಾಧಾನದಿಂದ ಗೊಬ್ಬರ ಪಡೆಯಬೇಕು.

- ಕಿರಣ್‌, ಕೃಷಿ ಇಲಾಖೆ ಸಹಾಯ ನಿರ್ದೇಶಕರು, ಶಿಕಾರಿಪುರ.

--------

ರಸಗೊಬ್ಬರ ಅಭಾವ ಉಂಟಾಗಿ ಈಗಾಗಲೆ 15 ದಿನವಾಗಿದೆ. ಆದರೂ ಪೂರೈಕೆ ಆಗುತ್ತಿಲ್ಲ. ಸೂಕ್ತ ಸಮಯಕ್ಕೆ ಗೊಬ್ಬರ ನೀಡದಿದ್ದರೆ ಬೆಳೆ ಇಳುವರಿ ಬರುವುದಿಲ್ಲ ಎನ್ನುವ ಆತಂಕ ರೈತರದ್ದಾಗಿದೆ. ಸರಕಾರ ಕೂಡಲೇ ಅಗತ್ಯವಿರುವ ರಸಗೊಬ್ಬರಗಳನ್ನು ಪೂರೈಕೆ ಮಾಡಬೇಕು.

- ಕಪ್ಪನಹಳ್ಳಿ ರಾಮಪ್ಪ, ಜಿ.ಪಂ. ಮಾಜಿ ಸದಸ್ಯರು

------

ಮುಖ್ಯಮಂತ್ರಿಗಳ ಕ್ಷೇತ್ರ ಎನ್ನುವ ಕಾರಣಕ್ಕೆ ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಪೂರೈಕೆ ಆಗುತ್ತಿದೆ. ಆದರೆ, ಇಲ್ಲಿ ಪಡೆಯುವ ಕೆಲವರು ಬೇರೆ ತಾಲೂಕಿಗೆ ಗೊಬ್ಬರ ಕಳುಹಿಸುವ, ಹೆಚ್ಚಿನ ದರಕ್ಕೆ ಮಾರುವ ಬೆಳವಣಿಗೆಯೂ ನಡೆಯುತ್ತಿದೆ. ಪರಿಣಾಮವಾಗಿ ಇಲ್ಲಿನ ರೈತರಿಗೆ ಸಮರ್ಪಕ ಗೊಬ್ಬರ ಸಿಗದಂತಾಗಿದೆ.

- ನಾಗರಾಜ್‌, ಗಾಮ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ