ಆ್ಯಪ್ನಗರ

ಬದುಕು ಕಟ್ಟುವ ಜಾಗದಲ್ಲೇ ಮೌಲ್ಯ ಕುಸಿತ

ಜವಾಬ್ದಾರಿಯುತ ಪ್ರಜೆಗಳನ್ನು ಸಮಾಜಕ್ಕೆ ನೀಡಬೇಕಾದ ಜಾಗದಲ್ಲಿಯೇ ಮೌಲ್ಯಗಳ ಕುಸಿತವಾಗುತ್ತಿದೆ ಎಂದು ಸಹ್ಯಾದ್ರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ. ಮೋಹನ್‌ ಚಂದ್ರಗುತ್ತಿ ಪ್ರತಿಪಾದಿಸಿದರು.

Vijaya Karnataka 3 Aug 2019, 5:00 am
ಶಿವಮೊಗ್ಗ: ಜವಾಬ್ದಾರಿಯುತ ಪ್ರಜೆಗಳನ್ನು ಸಮಾಜಕ್ಕೆ ನೀಡಬೇಕಾದ ಜಾಗದಲ್ಲಿಯೇ ಮೌಲ್ಯಗಳ ಕುಸಿತವಾಗುತ್ತಿದೆ ಎಂದು ಸಹ್ಯಾದ್ರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ. ಮೋಹನ್‌ ಚಂದ್ರಗುತ್ತಿ ಪ್ರತಿಪಾದಿಸಿದರು.
Vijaya Karnataka Web SMG-0208-2-15-2SMG1


ಕಸ್ತೂರಬಾ ರಾಷ್ಟ್ರೀಯ ಬಾಲಿಕಾ ಪದವಿ ಪೂರ್ವ ಕಾಲೇಜು ವತಿಯಿಂದ ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 'ವಿದ್ಯಾರ್ಥಿನಿ ಸಂಘ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ'ದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಮಗುವಿನಲ್ಲಿ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅರಿವು ತುಂಬಿ ಪ್ರಜ್ಞಾವಂತ ಪ್ರಜೆಯನ್ನು ಕೊಡುಗೆಯಾಗಿ ನೀಡಬೇಕಾದ ಮನೆ, ಶಾಲೆ, ಕಾಲೇಜುಗಳಲ್ಲಿಯೇ ಮೌಲ್ಯಗಳು ಅಧಃಪತನಗೊಳ್ಳುತ್ತಿವೆ. ಇದರಿಂದಾಗಿ, ಸಮಾಜ ವಿಘಟನೆಯ ಕಡೆಗೆ ವಾಲುತ್ತಿದೆ ಎಂದು ಹೇಳಿದರು.

ಬಾಳುವುದು ಹೇಗೆ ಎಂಬುವುದನ್ನೇ ಹೇಳಿಕೊಡುತ್ತಿಲ್ಲ. ಅಡ್ಡದಾರಿಗಳಿಗೆ ಒತ್ತು ನೀಡಲಾಗುತ್ತಿದೆ. ಅನ್ಯಾಯ ಮಾಡಿಯಾದರೂ ಗುರಿ ಸಾಧನೆ ಮಾಡಬೇಕೆಂದು ಬೋಧಿಸಲಾಗುತ್ತಿದೆ. ನೈತಿಕತೆ ಸಂಪೂರ್ಣ ಅಧಃಪತನವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯಾ ಸಂಸ್ಥೆಗಳು ಪಠ್ಯದ ಜ್ಞಾನ ನೀಡಲಾಗುತ್ತಿದೆಯೇ ವಿನಹ ಬದುಕನ್ನು ಕಲಿಸಿಕೊಡುತ್ತಿಲ್ಲ. ಬೇರೊಬ್ಬರ ಕಣ್ಣೀರು ಒರೆಸುವ ಗುಣವನ್ನು ಮಕ್ಕಳಿಗೆ ಕಲಿಸುತ್ತಿಲ್ಲ. ಎಲ್ಲರೂ ಟಿವಿ, ಮೊಬೈಲ್‌ಗಳಲ್ಲಿ ಕಳೆದುಹೋಗಿದ್ದು, ಭ್ರಮಾಲೋಕದಲ್ಲಿ ಸಂಚರಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

* ಬಾಂಧವ್ಯದಲ್ಲೂ ಬಿರುಕು: ಅಜ್ಜಿ ಮನೆಯ ಪರಿಕಲ್ಪನೆಯೇ ಮಾಯವಾಗುತ್ತಿದೆ. ಅಜ್ಜಿಯಂದಿರಿದ್ದರೂ ಮೊಮ್ಮಕ್ಕಳಿಗಿಂತ ಧಾರವಾಹಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದರು.

ಹಸಿರು ಮತ್ತು ನೆಲದೊಂದಿಗೆ ಎಲ್ಲಿಯವರೆಗೆ ನಂಟು ಇರುತ್ತದೋ ಅಲ್ಲಿಯವರೆಗೆ ಬದುಕು ಸಮೃದ್ಧವಾಗಿರುತ್ತದೆ. ಆದರಿಂದು, ಬದುಕು ಮತ್ತು ಆಲೋಚನೆ ಬಡವಾಗುತ್ತಿದೆ. ಇದರ ಫಲವಾಗಿ, ಬಾಂಧವ್ಯದ ಮೌಲ್ಯಗಳು ಕುಸಿಯುತ್ತಿವೆ. ಅಂತರಂಗಕ್ಕಿಂತ ಬಾಹ್ಯದ ಸೌಂದರ್ಯಕ್ಕೆ ಅಧಿಕ ಆದ್ಯತೆ ನೀಡಲಾಗುತ್ತಿದೆ. ನಾನೆಂಬ ಅವಿವೇಕದಿಂದ ಹೊರಬಂದರೆ, ಆಂತರ್ಯದ ಸೌಂದರ್ಯದ ಮೌಲ್ಯ ಅರ್ಥವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಎನ್‌ಇಎಸ್‌ ಉಪಾಧ್ಯಕ್ಷ ಟಿ.ಆರ್‌.ಅಶ್ವತ್ಥ ನಾರಾಯಣ ಶೆಟ್ಟಿ ಮಾತನಾಡಿದರು. ಕಾಲೇಜು ಪ್ರಭಾರ ಪ್ರಾಂಶುಪಾಲ ಫಜ್ಲುಲ್ಲಾ ಖಾನ್‌ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ರುಕ್ಮಿಣಿ ವೇದವ್ಯಾಸ್‌, ಶಿವಕುಮಾರ್‌, ಡಿ.ಎಚ್‌.ಶ್ರೀನಿವಾಸ್‌ಮೂರ್ತಿ , ಎಸ್‌.ಎಚ್‌. ರವಿಕುಮಾರ್‌ ಮತ್ತಿತರರು ಹಾಜರಿದ್ದರು.

ಜಿ. ಅಮೃತಾ ನಿರೂಪಿಸಿ, ಹರ್ಷಿತಾ ಪ್ರಾರ್ಥಿಸಿದರು. ಎಸ್‌.ಎಸ್‌. ಸುವರ್ಣ ಸ್ವಾಗತಿಸಿ, ಸಿ.ಎಸ್‌.ಭೂಮಿಕಾ ವಂದಿಸಿದರು.
---------

ಅರ್ಧ ಲೀಟರ್‌ ಕುಕ್ಕರ್‌ ಸಂಸ್ಕೃತಿ

ಅವಿಭಕ್ತ ಕುಟುಂಬಗಳು ಅಸ್ತಿತ್ವದಲ್ಲಿದ್ದಾಗ ಮಾನವೀಯ ಮೌಲ್ಯಗಳು, ಜನರ ಕಣ್ಣೀರು ಒರೆಸುವ ಸಂಸ್ಕೃತಿ ಬದುಕುಳಿದಿತ್ತು. ಆದರೆ, ವಿಭಕ್ತ ಕುಟುಂಬಗಳು ಹೆಚ್ಚಾದಂತೆ ಅರ್ಧ ಲೀಟರ್‌ ಕುಕ್ಕರ್‌ ಸಂಸ್ಕೃತಿ ರೂಪುಗೊಂಡಿದೆ. ಇದರೊಂದಿಗೆ, ಯಾರಿಗೂ ಯಾರೂ ಬೇಡವೆಂಬ ಸಂಕೀರ್ಣ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಮೋಹನ್‌ ಚಂದ್ರಗುತ್ತಿ ತಿಳಿಸಿದರು.

===

ವಿದ್ಯಾರ್ಥಿಗಳು ಹೆತ್ತವರ ಕಷ್ಟ, ಹಸಿವು, ಬಡತನವನ್ನು ನೆನಪಿನಲ್ಲಿಟ್ಟುಕೊಂಡು ಶಾಲೆ, ಕಾಲೇಜಿನ ಮೆಟ್ಟಿಲು ಹತ್ತಬೇಕು. ಆಗ ಮಾತ್ರ ಉಜ್ವಲ ಭವಿಷ್ಯ ಹೊಂದಲು ಸಾಧ್ಯ.

- ಡಾ.ಮೋಹನ್‌ ಚಂದ್ರಗುತ್ತಿ, ಪ್ರಾಧ್ಯಾಪಕ, ಸಹ್ಯಾದ್ರಿ ಕಲಾ ಕಾಲೇಜು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ