ಆ್ಯಪ್ನಗರ

ದೃಷ್ಟಿ ವಿಶೇಷಚೇತನ ವಸಂತ್‌ ಸಾಧನೆ

ಸಂಪೂರ್ಣ ದೃಷ್ಟಿ ಇಲ್ಲದಿದ್ದರೂ ಎದೆಗುಂದದೆ ಒಳ್ಳೆಯ ಗುರಿ, ಛಲ, ಆತ್ಮ ವಿಶ್ವಾಸ ಹಾಗೂ ಅದಕ್ಕೆ ತಕ್ಕೆ ಶ್ರಮ ಪಟ್ಟು ಸಾಧನೆ ಮಾಡಿದ ವಿಶೇಷಚೇತನ ಪಟ್ಟಣ ಸಮೀಪದ ಅರಕೆರೆ ಗ್ರಾಮದ ಬಿ.ಎಸ್‌.ವಸಂತ್‌.

Vijaya Karnataka 2 May 2019, 5:00 am
ಹೊಳೆಹೊನ್ನೂರು: ಸಂಪೂರ್ಣ ದೃಷ್ಟಿ ಇಲ್ಲದಿದ್ದರೂ ಎದೆಗುಂದದೆ ಒಳ್ಳೆಯ ಗುರಿ, ಛಲ, ಆತ್ಮ ವಿಶ್ವಾಸ ಹಾಗೂ ಅದಕ್ಕೆ ತಕ್ಕೆ ಶ್ರಮ ಪಟ್ಟು ಸಾಧನೆ ಮಾಡಿದ ವಿಶೇಷಚೇತನ ಪಟ್ಟಣ ಸಮೀಪದ ಅರಕೆರೆ ಗ್ರಾಮದ ಬಿ.ಎಸ್‌.ವಸಂತ್‌.
Vijaya Karnataka Web SMR-1HHR1

ಈತ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 603(ಶೇ.96.48) ಅಂಕಗಳಿಸಿ ದೃಷ್ಟಿ ವಿಶೇಷಚೇತನರ ವಿಭಾಗದಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಕನ್ನಡ-122, ಇಂಗ್ಲೀಷ್‌ 97, ಹಿಂದಿ-96, ಅರ್ಥಶಾಸ್ತ್ರ-98, ರಾಜ್ಯಶಾಸ್ತ್ರ-93 ಹಾಗೂ ಸಮಾಜ ವಿಜ್ಞಾನ-97 ಅಂಕ ಪಡೆದಿದ್ದಾನೆ.

ರೈತ ಕುಟುಂಬದ ವಸಂತ್‌ ಹುಟ್ಟಿನಿಂದಲೂ ಕೊಂಚ ದೃಷ್ಟಿ ದೋಷ ಹೊಂದಿದ್ದನು. ತಜ್ಞರಲ್ಲಿ ತೋರಿಸಿ ಕನ್ನಡಕ ಕೊಡಿಸಲಾಗಿತ್ತು. ಇದರಿಂದ ಅಷ್ಟೇನು ಪರಿಣಾಮ ಆಗದಿದ್ದರೂ ಅರಕೆರೆ ಗ್ರಾಮದ ಸರಕಾರಿ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಇತರೆ ವಿದ್ಯಾರ್ಥಿಗಳಂತೆ ಶಾಲೆಯಲ್ಲಿ ಕಲಿತ. 8ನೇ ತರಗತಿಗೆ ಸೇರಿ 3 ತಿಂಗಳು ಶಾಲೆಗೆ ಹೋಗುತ್ತಿದ್ದ. ದುರದೃಷ್ಟವಶಾತ್‌ ಕ್ರಮೇಣ ದೃಷ್ಟಿ ಕ್ಷೀಣಿಸುತ್ತಾ ಬಂತು. ಇದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಏನನ್ನಾದರು ಸಾಧಿಸುವುದಾಗಿ ತಾನೇ ಪೋಷಕರಿಗೆ ಧೈರ್ಯ ತುಂಬಿದ್ದಾನೆ. ಬಳಿಕ ಶಿವಮೊಗ್ಗದ ಶ್ರೀಶಾರದಾದೇವಿ ಅಂಧರ ವಿಕಾಸ ಕೇಂದ್ರಕ್ಕೆ ದಾಖಲಿಸಲಾಯಿತು. ಬ್ರೈಲ್‌ ಲಿಪಿ ಅರಿಯದ ವಸಂತ್‌ಗೆ 1ನೇ ತರಗತಿಗೆ ಸೇರಿಸಿಕೊಂಡು ಬ್ರೈಲ್‌ಲಿಪಿ ಕಲಿಸಲಾಯಿತು. ಬುದ್ಧಿವಂತನಾಗಿದ್ದ ವಸಂತ್‌ ಉತ್ತಮ ಕಲಿಕೆಯಿಂದಾಗಿ 4ನೇ ತರಗತಿ, ಅಲ್ಲಿಂದ 8 ಹಾಗೂ 10ನೇ ತರಗತಿಗೆ ನೇರ ಪ್ರವೇಶ ಪಡೆದ. ನಿರಂತರ ಕಲಿಕೆಯಿಂದಾಗಿ ಇಂದು ಉತ್ತಮ ಸಾಧನೆ ದಾಖಲಿಸಿ, ಹೆತ್ತವರಿಗೂ ಸಂತಸ ತಂದಿದ್ದಾನೆ. ತಂದೆ ಬಿ.ಆರ್‌.ಶಿವಪ್ರಕಾಶ್‌ ರೈತ, ತಾಯಿ ಲಲಿತಾ ಗೃಹಿಣಿ.

----
ಸಾಧಿಸುವ ಛಲವಿದ್ದರಿಂದ ಉತ್ತಮ ಫಲಿತಾಂಶದ ಬಗ್ಗೆ ನಿರೀಕ್ಷೆ ಇತ್ತು. ನನ್ನ ಸಾಧನೆಗೆ ಪೋಷಕರು ಹಾಗೂ ಶಾಲೆ ಶಿಕ್ಷ ಕರ ಸಹಕಾರ ಅವಿಸ್ಮರಣೀಯ. ಇನ್ನೂ ಹೆಚ್ಚು ಸಾಧನೆ ಮಾಡಿ ಇಂಗ್ಲಿಷ್‌ ಉಪನ್ಯಾಸಕನಾಗುವ ಆಸೆ ಇದೆ.
-ಬಿ.ಎಸ್‌.ವಸಂತ್‌, ದೃಷ್ಟಿ ವಿಶೇಷಚೇತನ ವಿದ್ಯಾರ್ಥಿ.

--------
ಮಗನ ದೃಷ್ಟಿ ಹೀನತೆಯಿಂದಾಗಿ ನಮ್ಮ ಜೀವನವೇ ಅಂಧಕಾರದಲ್ಲಿ ಮುಳುಗಿದಂತೆ ಭಾಸವಾಯಿತು. ಆದರೆ ಮಗನ ಧೈರ‍್ಯ, ಆತ್ಮ ವಿಶ್ವಾಸದ ಮಾತು ಹಾಗೂ ಪರಿಶ್ರಮದಿಂದಾಗಿ ನಮ್ಮ ಮನದಲ್ಲಿ ಬೆಳಕು ಕಾಣಲಾರಂಭಿಸಿತು. ಮಗನ ಸಾಧನೆ ಮನಸ್ಸಿಗೆ ಎಲ್ಲಿಲ್ಲದ ಸಂತಸ ತಂದಿದೆ.
-ಬಿ.ಆರ್‌.ಶಿವಪ್ರಕಾಶ್‌, ಬಿ.ಎಸ್‌.ವಸಂತ್‌ ತಂದೆ.

----------
ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಅಭ್ಯಾಸದಲ್ಲಿ ಎಂದೂ ಹಿಂದೆ ಬೀಳುತ್ತಿರಲಿಲ್ಲ. ಉತ್ತಮ ವಿದ್ಯಾರ್ಥಿಯಾಗಿದ್ದ. ಪೋಷಕರಿಗೆ ಶಿಕ್ಷ ಣದ ಮೌಲ್ಯ ತಿಳಿಸಿದ್ದು ಮಗನ ಉತ್ತಮ ಸಾಧನೆಗೆ ಪೂರಕವಾದ ಸಹಕಾರ ಮಾಡಿದ್ದಾರೆ. ಈತನ ಸಾಧನೆ ಸಂಸ್ಥೆಗೆ ಕೀರ್ತಿ ತಂದಿದ್ದು ನಮಗೆ ತೃಪ್ತಿ ತಂದಿದೆ.
-ಎ.ಟಿ.ಆಶಾ, ಮುಖ್ಯಶಿಕ್ಷ ಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ