ಆ್ಯಪ್ನಗರ

ಮೋದಿ ಪ್ರಧಾನಿಯಾಗಿದ್ದೇ ಬಹುಜನರ ತಪಸ್ಸು: ವಿಜಯೇಂದ್ರ

ಪ್ರಧಾನಿ ಮೋದಿ ಒಬ್ಬ ಪುಣ್ಯಾತ್ಮರಾಗಿದ್ದು, ಅವರ ಆಡಳಿತ ಅವಧಿಯಲ್ಲಿ ದೇಶ ಅಭಿವೃದ್ಧಿಯ ಉತ್ತುಂಗಕ್ಕೆ ತಲುಪುತಿದೆ. ಬಹು ಮುಖ್ಯವಾಗಿ ಶ್ರೀರಾಮ ಮಂದಿರ ನಿರ್ಮಾಣ, ಕಾಶ್ಮೀರದಲ್ಲಿ ಉಗ್ರರ ಭಯ ತಪ್ಪಿಸಿದೆ.

Vijaya Karnataka Web 17 Sep 2021, 9:08 pm
ಶಿವಮೊಗ್ಗ: ನರೇಂದ್ರ ಮೋದಿ ಪ್ರಧಾನಿ ಆಗಿರುವುದು ಬಹುಜನರ ತಪಸ್ಸಿನ ಫಲ ಎಂದು ನಾನು ಭಾವಿಸಿದ್ದೇನೆ. ಅವರು ಪ್ರಧಾನಿಯಾದ ಮೇಲೆ ಬದಲಾವಣೆಗಳ ಮಹಾಪೂರವೇ ಆಗಿದೆ ಎಂದು ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
Vijaya Karnataka Web ಬಿವೈ ವಿಜಯೇಂದ್ರ
ಬಿವೈ ವಿಜಯೇಂದ್ರ


ನಗರದ ಬಿಜೆಪಿ ಕಚೇರಿಯಲ್ಲಿ ಮೋದಿ ಅವರ 71ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಬಿಜೆಪಿ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ಮೋದಿ ಒಬ್ಬ ಪುಣ್ಯಾತ್ಮರಾಗಿದ್ದು, ಅವರ ಆಡಳಿತ ಅವಧಿಯಲ್ಲಿ ದೇಶ ಅಭಿವೃದ್ಧಿಯ ಉತ್ತುಂಗಕ್ಕೆ ತಲುಪುತಿದೆ. ಬಹು ಮುಖ್ಯವಾಗಿ ಶ್ರೀರಾಮ ಮಂದಿರ ನಿರ್ಮಾಣ, ಕಾಶ್ಮೀರದಲ್ಲಿ ಉಗ್ರರ ಭಯ ತಪ್ಪಿಸಿದೆ. 370ನೇ ವಿಧಿ ತೆಗೆದು ಹಾಕಿದ್ದು, ಅಭಿವೃದ್ಧಿಗೆ ಒತ್ತು ಕೊಟ್ಟಿದ್ದು, ಕೊರೊನಾದಂತಹ ಸಂದರ್ಭದಲ್ಲಿ ಜಗತ್ತೇ ಅಚ್ಚರಿಪಡುವಷ್ಟು ಉಚಿತವಾಗಿ ಲಸಿಕೆ ನೀಡಿರುವುದು ಇವೆಲ್ಲವೂ ಅವರ ಆಡಳಿತದಲ್ಲಿ ಒಂದು ವಿಸ್ಮಯವನ್ನೇ ಮೂಡಿಸಿವೆ. ಹಾಗಾಗಿ ಮೋದಿ ಒಬ್ಬ ಸಂತ ಎಂದರು.

ಕಾಂಗ್ರೆಸ್‌ನಿಂದ ತಿರುಕನ ಕನಸು

ಮೋದಿ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳದ ಕಾಂಗ್ರೆಸ್‌ನವರು ವಿನಾಕಾರಣ ದೂಷಣೆ ಮಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಅವರಂತೂ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿಯವರದ್ದು ನಾಟಕದ ಹಿಂದುತ್ವ ಎಂದು ಹೇಳುತ್ತಿದ್ದಾರೆ. ಈ ದೇಶದ ಜನರಿಗೆ ಯಾರು ನಾಟಕ ಮಾಡುತ್ತಾರೆ ಎಂದು ಗೊತ್ತಿದೆ. ಅಧಿಕಾರ ಕಳೆದುಕೊಂಡು ಹಪಹಪಿಸುತ್ತಿರುವ ಕಾಂಗ್ರೆಸ್‌ ತಿರುಕನ ಕನಸು ಕಾಣುತ್ತಿದೆ. ವ್ಯಕ್ತಿ ಒಂದು ಶಕ್ತಿಯಾಗಿ ಬೆಳೆಯುವುದನ್ನು ಅವರ ಕೈಲಿ ಸಹಿಸಲು ಆಗುತ್ತಿಲ್ಲ ಎಂದು ಟೀಕಿಸಿದರು.

ಮೋದಿ ಅವರ ಜನ್ಮದಿನದ ಅಂಗವಾಗಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಇಡೀ ದಿನ ಕಾರ್ಯಕ್ರಮ ಆಯೋಜಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಡಿ. ಮೇಘರಾಜ್‌ ಹೇಳಿದರು.

ಬೆಳಗ್ಗೆ ಗಣಪತಿ ದೇವಸ್ಥಾನದಲ್ಲಿ ಅವರ ಜನ್ಮದಿನಕ್ಕೆ ಶುಭಾಶಯ ಕೋರಿ ವಿಶೇಷ ಪೂಜೆ ನೆರವೇರಿಸುವುದರಿಂದ ಹಿಡಿದು ಸಂಜೆಯವರೆಗೆ ಸೇವಾ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಮೋದಿ ಅವರ ಸಾಧನೆಗಳ ಬಗ್ಗೆ ತಿಳಿಸುವುದು ಮತ್ತು ಕಾರ್ಯಕರ್ತರಲ್ಲಿ ಸಂಘಟನೆ ಮನೋಭಾವ ಬೆಳೆಸುವ ಉದ್ದೇಶದಿಂದ ಇಡೀ ಜಿಲ್ಲಾದ್ಯಂತ ಕಾರ್ಯಕ್ರಮ ಮುಂದುವರಿಯಲಿವೆ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ, ಪ್ರಮುಖರಾದ ಆರ್‌.ಕೆ. ಸಿದ್ದರಾಮಣ್ಣ, ಗಿರೀಶ್‌ ಪಟೇಲ್‌, ಎಸ್‌.ಎಸ್‌.ಜ್ಯೋತಿಪ್ರಕಾಶ್‌, ಎಸ್‌. ರುದ್ರೇಗೌಡ, ಪವಿತ್ರಾ ರಾಮಯ್ಯ, ಎಸ್‌.ದತ್ತಾತ್ರಿ, ಡಿ.ಎಸ್‌. ಅರುಣ್‌, ಸುನೀತಾ ಅಣ್ಣಪ್ಪ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ