ಆ್ಯಪ್ನಗರ

ಕಚ್ಚಾಡದೇ ಏಕತೆಯಿಂದ ಕಾರ್ಯೋನ್ಮುಖರಾಗಿ

ಪರಸ್ಪರರಲ್ಲಿ ಎಷ್ಟೇ ವೈಮನಸ್ಸು ಇದ್ದರೂ ಅವೆಲ್ಲವುಗಳನ್ನು ಬದಿಗೊತ್ತಿ ಪಕ್ಷದ ಸಂಘಟನೆಗೆ ಕಾರ್ಯಕರ್ತರು, ಮುಖಂಡರು ಒಗ್ಗೂಡುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Vijaya Karnataka 19 Jul 2018, 5:00 am
ಶಿವಮೊಗ್ಗ : ಪರಸ್ಪರರಲ್ಲಿ ಎಷ್ಟೇ ವೈಮನಸ್ಸು ಇದ್ದರೂ ಅವೆಲ್ಲವುಗಳನ್ನು ಬದಿಗೊತ್ತಿ ಪಕ್ಷದ ಸಂಘಟನೆಗೆ ಕಾರ್ಯಕರ್ತರು, ಮುಖಂಡರು ಒಗ್ಗೂಡುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
Vijaya Karnataka Web 18SMG19


ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದ್ದು, ಇದೆರೆಡೆಗೆ ವಿಶೇಷ ಗಮನಹರಿಸಬೇಕಿದೆ. ಈ ಸಲ ಶಿವಮೊಗ್ಗ ಪಾಲಿಕೆಯ ಚುಕ್ಕಾಣಿ ಹಿಡಿಯುವುದೇ ನಮ್ಮ ಮುಂದಿರುವ ಉದ್ದೇಶವಾಗಿದ್ದು, ಪಕ್ಷದ ಹಿತಕ್ಕಾಗಿ ಎಲ್ಲರೂ ಒಗ್ಗೂಡಬೇಕಿದೆ ಎಂದು ಕರೆ ನೀಡಿದರು.

ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಆರರಲ್ಲಿ ಬಿಜೆಪಿ ಜಯಗಳಿಸಿದ್ದು, ಭದ್ರಾವತಿಯಲ್ಲಿ ಜಯಗಳಿಸುವುದಕ್ಕೂ ಸಾಕಷ್ಟು ಪ್ರಯತ್ನಿಸಲಾಗಿದೆ. ಆದರೆ, ಕಾರಣಗಳಿಂದಾಗಿ ಸ್ಥಾನ ಕೈತಪ್ಪಿದೆ. ಯಾವುದೇ ಕಾರಣಕ್ಕೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ನಗರಸಭೆಯನ್ನು ಕೈಬಿಡುವುದಿಲ್ಲ. ಇದಕ್ಕಾಗಿ ಭೇದ, ವೈಮನಸ್ಸು ಮರೆತು ಏಕತೆಯಿಂದ ಚುನಾವಣೆ ಎದುರಿಸಬೇಕಿದೆ ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಮಿತ್ತ ಜಿಲ್ಲೆಯಲ್ಲಿ ಜು.20ರಿಂದ ಪ್ರವಾಸ ಕೈಗೊಳ್ಳಲಿದ್ದೇನೆ. ಅಂದು ಬೆಳಗ್ಗೆ 11ಕ್ಕೆ ಸೊರಬ, ಮಧ್ಯಾಹ್ನ 12ಕ್ಕೆ ಸಾಗರ ಹಾಗೂ 3ಕ್ಕೆ ಹೊಸನಗರಕ್ಕೆ ಭೇಟಿ ನೀಡಲಿದ್ದೇನೆ. 21ರಂದು ಶಿವಮೊಗ್ಗದಲ್ಲಿ ಜಿಲ್ಲಾ ಕಾರ್ಯಕಾರಿ ಸಭೆ ಕರೆಯಲಾಗಿದೆ. 22ರಂದು ತೀರ್ಥಹಳ್ಳಿಯಲ್ಲಿ ಸಭೆ ನಡೆಸಲಾಗುವುದು. ಜತೆಗೆ, ಅತಿವೃಷ್ಟಿಯಿಂದಾದ ಹಾನಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರಕಾರವು ಅಮೃತ್‌ ಯೋಜನೆ ಅಡಿ ಜಿಲ್ಲೆಗೆ 324 ಕೋಟಿ ಮತ್ತು ಭದ್ರಾವತಿಗೆ 141 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅನುದಾನದಿಂದ ನಾನಾ ಪ್ರಗತಿ ಕಾಮಗಾರಿಗಳು ಕೈಗೆತ್ತಿಕೊಳ್ಳಬೇಕಿದ್ದು, ಯಾವುದೇ ಅವ್ಯವಹಾರಗಳು ನಡೆಯದ ರೀತಿಯಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದರು.

* ಶ್ವೇತಪತ್ರ ಹೊರಡಿಸಿ

ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್‌ವೈ, 'ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಈ ಹಿಂದೆಯೇ ಮುಖ್ಯಮಂತ್ರಿಗೆ ಆಗ್ರಹಿಸಿದ್ದೆ. ಅದನ್ನು ಕಿವಿಗೆ ಹಾಕಿಕೊಳ್ಳದೇ ಬಜೆಟ್‌ ಮಂಡಿಸಿದ್ದಾರೆ. ಅಧಿವೇಶನದಲ್ಲೂ ಗಂಭೀರವಾದ ವಿಷಯಗಳ ಬಗ್ಗೆ ಚರ್ಚಿಸದೇ ಮುಕ್ತಾಯಗೊಳಿಸಿದ್ದಾರೆ. ಈಗಲಾದರೂ ರಾಜ್ಯದ ಅರ್ಥಸ್ಥಿತಿಯ ಬಗ್ಗೆ ಬಹಿರಂಗವಾಗಿ ಮಾಹಿತಿ ನೀಡಬೇಕು' ಎಂದು ಒತ್ತಾಯಿಸಿದರು.

ಇತ್ತೀಚೆಗೆ ಮಂಡಿಸಿಲಾದ ಬಜೆಟ್‌ನಲ್ಲಿ ಸಾಲ ಮನ್ನಾ ಮಾಡಲಾಗಿದ್ದು, ಸಾಕಷ್ಟು ಗೊಂದಲಗಳಿವೆ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರಶ್ನಿಸಿದರೆ, ಹಾರಿಕೆ ಉತ್ತರಗಳನ್ನು ನೀಡುತ್ತಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವಧಿಯಲ್ಲಿ ಸಾಲ ಮನ್ನಾ ಬಾಬ್ತು 4 ಸಾವಿರ ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ. ಹೀಗಾದರೆ, ಸಹಕಾರ ಸಂಘಗಳ ಮೇಲಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ರಾಜ್ಯ ಸರಕಾರ ಯೋಚಿಸಬೇಕು ಎಂದು ಹೇಳಿದರು.

* ಕಾದು ನೋಡುವ ತಂತ್ರ

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ಗೊಂದಲವಿದ್ದು, ಸರಕಾರ ಮುಂದುವರಿಯುವ ವಿಶ್ವಾಸವಿಲ್ಲ. ಹೀಗಾಗಿ, ಕಾದು ನೋಡುವ ತಂತ್ರ ಬಳಸುತಿದ್ದೇವೆ. ಆಗಸ್ಟ್‌ ಅಂತ್ಯದವರೆಗೆ ಏನು ಬೇಕಾದರೂ ರಾಜಕೀಯ ಬೆಳವಣಿಗೆಗಳು ಸಂಭವಿಸಬಹುದಾದ ವಾತಾವರಣ ಸದ್ಯಕ್ಕಿದೆ ಎಂದರು.

ಶಾಸಕರಾದ ಕೆ.ಎಸ್‌.ಈಶ್ವರಪ್ಪ, ಆರಗ ಜ್ಞಾನೇಂದ್ರ, ಕುಮಾರ್‌ ಬಂಗಾರಪ್ಪ, ಅಶೋಕ್‌ ನಾಯ್ಕ್‌, ಆಯನೂರು ಮಂಜುನಾಥ್‌, ಪಕ್ಷದ ಪ್ರಮುಖರಾದ ಹರತಾಳು ಹಾಲಪ್ಪ, ಕೆ.ಜಿ.ಕುಮಾರಸ್ವಾಮಿ, ಬಿ.ವೈ.ರಾಘವೇಂದ್ರ, ರುದ್ರೇಗೌಡ, ಚನ್ನಬಸಪ್ಪ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ