ಆ್ಯಪ್ನಗರ

ಸಾಲ ಕಟ್ಟದಿದ್ರೆ ಜಾಮೀನ್ದಾರ್‌ರಿಗೆ ಸಂಕಷ್ಟ !

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮರು ಪಾವತಿಯಾಗದಿದ್ದರೆ ಜಾಮೀನುದಾರರಿಗೂ ಸಾಲ ಸಿಗುವುದಿಲ್ಲ. ಸರಕಾರವೇ ಸಾಲ ಪಾವತಿಸುತ್ತದೆಂದು ಕಾಯುತ್ತಾ ಕುಳಿತರೆ ಬಡ್ಡಿ ದೊಡ್ಡ ಕಗ್ಗಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Vijaya Karnataka 14 Aug 2019, 5:00 am
ರಾಘವೇಂದ್ರ ಮೇಗರವಳ್ಳಿ ,ತೀರ್ಥಹಳ್ಳಿ : ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮರು ಪಾವತಿಯಾಗದಿದ್ದರೆ ಜಾಮೀನುದಾರರಿಗೂ ಸಾಲ ಸಿಗುವುದಿಲ್ಲ. ಸರಕಾರವೇ ಸಾಲ ಪಾವತಿಸುತ್ತದೆಂದು ಕಾಯುತ್ತಾ ಕುಳಿತರೆ ಬಡ್ಡಿ ದೊಡ್ಡ ಕಗ್ಗಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
Vijaya Karnataka Web zamindar in trouble with debt default
ಸಾಲ ಕಟ್ಟದಿದ್ರೆ ಜಾಮೀನ್ದಾರ್‌ರಿಗೆ ಸಂಕಷ್ಟ !


ನಿಮ್ಮ ಸಾಲವನ್ನು ಸರಕಾರ ಕಟ್ಟುತ್ತೋ ಇಲ್ವೋಗೊತ್ತಿಲ್ಲ. ಸಾಲ ಕಟ್ಟದಿದ್ದರೆ ಬಡ್ಡಿ ಬೆಳೆಯುತ್ತದೆ. ಮೊದಲು ಸಾಲ ಕಟ್ಟಿ, ನೀವು ಬೆಳೆ ಸಾಲ ಕಟ್ಟಿಲ್ಲವೆಂದ್ರೆ ನಿಮ್ಮ ಜಾಮೀನುದಾರರಿಗೂ ಸಾಲವನ್ನು ಕೊಡುವುದಿಲ್ಲ. ಹೀಗೆಂದು, ತಾಲೂಕಿನಲ್ಲಿ ನಾಲ್ಕಾರು ದಿನಗಳಿಂದ ಸಾಲ ಕಟ್ಟುವಂತೆ ಕೆಲ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಯಲ್ಲಿ ರೈತರಿಗೆ ಒತ್ತಡ ಹೇರಲಾಗುತ್ತಿದೆ. ರೈತ, ಜಾಮೀನುದಾರರ ನಡುವೆ ಕಿಚ್ಚು ಹಚ್ಚುವ ಪ್ರಯತ್ನ ನಡೆದಿದೆ. ಸಾಲ ಕಟ್ಟಿಲ್ಲವೆಂದ್ರೆ ಮುಂದೆ ನಿಮಗೆ ಸಮಸ್ಯೆಯಾಗುತ್ತದೆ. ನಿಮ್ಮ ಸಾಲದ ಬಾಬ್ತು ಸರಕಾರ ಯಾವಾಗ ಹಣ ಕಟ್ಟತ್ತೋ ಹೇಳಲಿಕ್ಕೆ ಆಗುವುದಿಲ್ಲ. ಈ ರೀತಿ ಹೇಳುವ ಮೂಲಕ ಬ್ಯಾಂಕ್‌ ರೈತರಲ್ಲಿ ಗೊಂದಲ ಮೂಡಿಸುತ್ತಿದೆ.

ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಾಲಮನ್ನಾ ಕುರಿತು ಬರೆದ ಪತ್ರವನ್ನು ಹಿಡಿದು ಬ್ಯಾಂಕ್‌ಗೆ ಹೋಗುವ ರೈತರಿಗೆ ಸಾಲಕಟ್ಟಿ ಎಂಬ ಉತ್ತರ ಸಿಗುತ್ತಿದೆ. ಬ್ಯಾಂಕ್‌ಗೆ ಪತ್ರ ತಂದ್ರೆ ಸಾಲಮನ್ನಾ ಆಗುವುದಿಲ್ಲ. ಸಾಲದ ಖಾತೆಗೆ ಹಣ ಜಮಾ ಆದ್ರೆ ಮಾತ್ರ ಮನ್ನಾ ಆಗುತ್ತದೆ ಎಂಬ ಖಡಕ್‌ ಉತ್ತರ ಬ್ಯಾಂಕ್‌ನಲ್ಲಿ ರೈತರ ಕಿವಿಗೆ ಅಪ್ಪಳಿಸುತ್ತಿದೆ.

ಬಲವಂತದ ವಸೂಲಿ : ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸಾಲಮನ್ನಾ ಯೋಜನೆ ಈಗ ಗೊಂದಲ ಮೂಡಿಸಿದ್ದು ರೈತರಿಗೆ ಸಾಲ ಮರು ಪಾವತಿಗೆ ಬ್ಯಾಂಕ್‌ ಬಲವಂತ ಮಾಡುತ್ತಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಉರುಳುತ್ತಿದ್ದಂತೆ ಬ್ಯಾಂಕ್‌ ಸಾಲವಸೂಲಿಗೆ ಮುಂದಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪಡೆದ 1 ಲಕ್ಷ ರೂ ಸುಸ್ತಿ ಬೆಳೆ ಸಾಲಮನ್ನಾ ಕುರಿತಂತೆ ಸ್ವಯಂ ಘೋಷಣಾ ಆಧಾರ್‌ ದೃಢೀಕರಣ ಪತ್ರ ಸಲ್ಲಿಸಿರುವ ರೈತರಿಗೆ ಈಗ ಬ್ಯಾಂಕ್‌ನಲ್ಲಿ ಹೊಸ ತಲೆನೋವು ಶುರುವಾಗಿದೆ. ಬ್ಯಾಂಕ್‌ ವ್ಯವಸ್ಥಾಪಕ, ಸಿಬ್ಬಂದಿ ರೈತರಿಗೆ ಸಾಲ ಕಟ್ಟುವಂತೆ ಮೌಖಿಕವಾಗಿ ಹೇಳುತ್ತಿದ್ದು ನೋಟಿಸ್‌ ಕೊಡಲು ಸಿದ್ಧವಾಗಿಲ್ಲ. ಸಾಲ ಕಟ್ಟಲು ನೋಟಿಸ್‌ ಕೊಡಿ ಎಂದು ರೈತರು ಕೇಳಿದರೂ ವ್ಯವಸ್ಥಾಪಕ, ಸಿಬ್ಬಂದಿ ಒಪ್ಪುತ್ತಿಲ್ಲ.

ಸಾಲಕ್ಕೆ ಭರ್ಜರಿ ಬಡ್ಡಿ :
ಬ್ಯಾಂಕ್‌ನಲ್ಲಿ ಸುಸ್ತಿದಾರ ರೈತರು ಎದುರಿಸುತ್ತಿರುವ ಸಮಸ್ಯೆ ಒಂದೆರೆಡಲ್ಲ. ಸಾಲ ಸುಸ್ತಿ ಹಿನ್ನೆಲೆಯಲ್ಲಿ ಶೇ. 14ರಷ್ಟು ಬಡ್ಡಿ ಹಣವನ್ನು ಬ್ಯಾಂಕ್‌ಗೆ ಕಟ್ಟಬೇಕಾದ ಸಂದರ್ಭ ಎದುರಾಗಿದೆ. ನಿಗದಿ ಅವಧಿಯೊಳಗೆ ಬೆಳೆ ಸಾಲ ಕಟ್ಟಿದರೆ ಶೇ 7ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸಾಲ ಸುಸ್ತಿಗೊಂಡರೆ ನಿಯಮದಂತೆ ಶೇ 14ರಷ್ಟು ಬಡ್ಡಿ ಮೊತ್ತ ಕಟ್ಟುವುದು ಕಡ್ಡಾಯವಾಗಿದೆ. ಸಾಲಮನ್ನಾ ಯೋಜನೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ವಿಸ್ತರಣೆಗೊಂಡ ಹಿನ್ನೆಲೆಯಲ್ಲಿ ಸಾವಿರಾರು ರೈತರು ಸಾಲ ಕಟ್ಟಿಲ್ಲ. ಅಚ್ಚರಿ ಸಂಗತಿ ಎಂದರೆ, ಕೆಲ ರೈತರು ಅಭಿವೃದ್ಧಿ ಸಾಲದ ಕಂತು ಮೊತ್ತವನ್ನು ಬ್ಯಾಂಕ್‌ಗೆ ಕಟ್ಟಿಲ್ಲ. ಎಲ್ಲ ರೀತಿಯ ಸಾಲ ಮನ್ನಾ ಆಗದಂತೆ ಎಂಬ ನಿರೀಕ್ಷೆಯಲ್ಲಿ ಹಲವು ರೈತರು ಎಡವಟ್ಟು ಮಾಡಿಕೊಂಡಿದ್ದು ಈಗ ಶೇ 14ರ ಬಡ್ಡಿದರದಲ್ಲಿ ಅಭಿವೃದ್ಧಿ ಸಾಲ ಕಟ್ಟಬೇಕಾದ ಅನಿವಾರ‍್ಯತೆಗೆ ಸಿಕ್ಕಿಕೊಂಡಿದ್ದಾರೆ. ಸಹಕಾರ ಸಂಘಗಳಲ್ಲಿ ಸಾಲಮನ್ನಾ ಆಗಿದೆ, ಬ್ಯಾಂಕ್‌ನಲ್ಲಿ ಏಕೆ ಆಗಿಲ್ಲ ಎಂಬ ರೈತರ ಪ್ರಶ್ನೆಗೆ ಬ್ಯಾಂಕ್‌ನಲ್ಲಿ ಸಾಲ ಕಟ್ಟಿದರೆ ಬಚಾವ್‌ ಆಗುತ್ತೀರಾ ಎಂಬ ಉತ್ತರ ಸಿಗುತ್ತಿದೆ.

2008ರ ಸುಸ್ತಿದಾರ ರೈತ ಪಟ್ಟಿಯಲ್ಲಿಲ್ಲ..! : ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿ ಸಿದ್ದಪಡಿಸಿರುವ ಪಟ್ಟಿಯಲ್ಲಿ 2008-09 ನೇ ಸಾಲಿನ ಹಿಂದಿನ ವರ್ಷಗಳಲ್ಲಿ ಸಾಲಪಡೆದು ಸುಸ್ತಿಗೊಂಡ ರೈತರ ಹೆಸರಿಲ್ಲ. ಬ್ಯಾಂಕ್‌ನಲ್ಲಿ ಸುಮಾರು 11 ವರ್ಷದಿಂದ ಸಾಲ ಕಟ್ಟಲಾಗದೆ ಸುಸ್ತಿಗೊಂಡ ರೈತರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ರಾಜ್ಯ ಸರಕಾರ ಇಂತಹ ರೈತರಿಗೆ ಸಾಲಮನ್ನಾ ಯೋಜನೆ ಅನ್ವಯಿಸದಂತೆ ನಿಯಮ ರಚಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸಾವಿರಾರು ರೈತರು ರಾಜ್ಯ ಸರಕಾರದ ನಿಯಮದಿಂದ ಅನ್ಯಾಯಕ್ಕೆ ಒಳಗಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರತ್ತ ಈ ವರ್ಗದ ರೈತರು ದೃಷ್ಟಿ ಹಾಯಿಸುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ