ಆ್ಯಪ್ನಗರ

ನಾಮದ ಚಿಲುಮೆಯಲ್ಲಿ ಸಿಸಿ ಟಿವಿ ಅಳವಡಿಸಲು ಭಯವೇಕೆ?

ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ನಾಮದ ಚಿಲುಮೆಯಲ್ಲಿ ಆಗುತ್ತಿರುವ ಅಕ್ರಮ, ಅವ್ಯವಸ್ಥೆಗಳನ್ನು ತಡೆಯಲೆಂದು ಹಿಂದಿನ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ ರಾಜ್‌ ಅವರ ಅವಧಿಯಲ್ಲಿ ಗಂಭೀರ ಪ್ರಯತ್ನಗಳಾಗಿದ್ದವು. ಆದರೆ ಆ ಪ್ರಯತ್ನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅರಣ್ಯ ಇಲಾಖೆ ಆಸಕ್ತಿ ವಹಿಸಲಿಲ್ಲ ಎನ್ನುವ ಅಂಶ ಬಯಲಾಗಿದೆ.

Vijaya Karnataka 24 Dec 2018, 5:00 am
ತುಮಕೂರು: ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ನಾಮದ ಚಿಲುಮೆಯಲ್ಲಿ ಆಗುತ್ತಿರುವ ಅಕ್ರಮ, ಅವ್ಯವಸ್ಥೆಗಳನ್ನು ತಡೆಯಲೆಂದು ಹಿಂದಿನ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ ರಾಜ್‌ ಅವರ ಅವಧಿಯಲ್ಲಿ ಗಂಭೀರ ಪ್ರಯತ್ನಗಳಾಗಿದ್ದವು. ಆದರೆ ಆ ಪ್ರಯತ್ನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅರಣ್ಯ ಇಲಾಖೆ ಆಸಕ್ತಿ ವಹಿಸಲಿಲ್ಲ ಎನ್ನುವ ಅಂಶ ಬಯಲಾಗಿದೆ.
Vijaya Karnataka Web
ನಾಮದ ಚಿಲುಮೆಯಲ್ಲಿ ಸಿಸಿ ಟಿವಿ ಅಳವಡಿಸಲು ಭಯವೇಕೆ?


ನಾಮದ ಚಿಲುಮೆ ಜಿಂಕೆ ವನದ ಅವ್ಯವಸ್ಥೆಗಳ ಕುರಿತು ವಿಕ ವರದಿ ಪ್ರಕಟಿಸಿದ ಬೆನ್ನಲ್ಲೇ ಸಾರ್ವಜನಿಕರು ಹಾಗೂ ಸ್ಥಳೀಯರು ಚಿಲುಮೆಯ ಇನ್ನಷ್ಟು ಲೋಪದೋಷಗಳ ಮಾಹಿತಿ ನೀಡಿದ್ದಾರೆ.

ನಾಮದ ಚಿಲುಮೆಯಲ್ಲಿ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎನ್ನುವುದನ್ನು ಈ ಹಿಂದಿನ ಡಿಸಿ ಕೆ.ಪಿ.ಮೋಹನ್‌ ರಾಜ್‌ ಗುರುತಿಸಿದ್ದರು. ಅಲ್ಲದೇ ಚಿಲುಮೆಯ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅರಣ್ಯ, ಪ್ರವಾಸೋದ್ಯಮ ಹಾಗೂ ಮುಜರಾಯಿ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.

ಈ ಸಭೆಯಲ್ಲಿ ಚಿಲುಮೆಯಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ, ಕುಡಿಯುವ ನೀರು, ಪ್ರವಾಸಿಗರು ತಂಗಲು ಅತಿಥಿಗೃಹ ವ್ಯವಸ್ಥೆ ಮಾಡುವುದು ಹಾಗೂ ಬಂದು ಹೋಗುವವರ ಮಾಹಿತಿಗಾಗಿ ಸಿಸಿ ಟಿವಿ ಅಳವಡಿಸುವುದು, ಸಿಸಿ ಟಿವಿ ನಿರ್ವಹಣೆಗೆ ಕಂಟ್ರೋಲ್‌ ರೂಂ ಸ್ಥಾಪಿಸಿ ಅಗತ್ಯ ಸಿಬ್ಬಂದಿ ನೇಮಕ ಮಾಡುವ ಬಗ್ಗೆ ಚರ್ಚೆಯಾಗಿತ್ತು.

ಯಾರ್ಯಾರು ಬರುತ್ತಾರೆ, ಎಷ್ಟೊತ್ತಿಗೆ ಹೋಗುತ್ತಾರೆ. ಬಂದವರನ್ನು ಸಿಬ್ಬಂದಿ ಎಷ್ಟೊತ್ತಿಗೆ ಹೊರಗೆ ಕಳುಹಿಸುತ್ತಾರೆ. ಇವೆಲ್ಲಾ ಅಂಶಗಳ ಬಗ್ಗೆ ಕಂಟ್ರೋಲ್‌ ರೂಂನಲ್ಲಿ ಮಾಹಿತಿ ಸಂಗ್ರಹಿಸಬೇಕು ಎಂದು ಮೋಹನ್‌ ರಾಜ್‌ ಸೂಚಿಸಿದ್ದರು. ಅಲ್ಲದೇ ಅನುದಾನ ಲಭ್ಯವಿಲ್ಲದಿದ್ದರೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ನೀಡಿದ್ದರು. ಸ್ವತಃ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಎಲ್ಲದರ ಬಗ್ಗೆ ಕ್ರಮ ವಹಿಸುವುದಾಗಿ ಸಮ್ಮತಿಸಿದ್ದರು. ಆದರೆ ಈವರೆಗೂ ಯಾವೊಂದು ಸೂಚನೆಯನ್ನು ಅರಣ್ಯ ಇಲಾಖೆ ಪಾಲಿಸಿಲ್ಲ.

ಮರ ಸುಡುವಂತಿಲ್ಲ: ನಾಮದ ಚಿಲುಮೆ ಜಿಂಕೆ ವನದಲ್ಲಿ ಸಿಬ್ಬಂದಿ ಮನಸ್ಸಿಗೆ ಬಂದಂತೆ ಬೆಂಕಿ ಹಚ್ಚುತ್ತಿರುವುದು ಕೂಡ ನಿಯಮ ಬಾಹಿರ. ನಿಯಮಗಳ ಪ್ರಕಾರ ಒಣಗಿದ ಮರಗಳನ್ನು ಕಡಿಯುವಾಗ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು, ಅಗ್ನಿಶಾಮಕ ದಳ ಸ್ಥಳದಲ್ಲಿ ಹಾಜರಿರಬೇಕು, ಒಣಗಿದ ಮರವನ್ನು ನೂರು ಮೀಟರ್‌ ಅಂತರದಲ್ಲಿ ಯಾವುದೇ ಮರಗಳಿಲ್ಲದ ಪ್ರದೇಶದಲ್ಲಿ ಕೊಂಡೊಯ್ದು ಸುಡಬೇಕು. ಆದರೆ ಇಲ್ಲಿ ಇವೆಲ್ಲವನ್ನು ಗಾಳಿಗೆ ತೂರಿ ಗಿಡ ಮರಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಅಕಸ್ಮಾತ್‌ ಬೆಂಕಿ ಹೆಚ್ಚಾದರೆ ಇಡೀ ನಾಮದ ಚಿಲುಮೆ ಜಿಂಕೆ ವನ ಹಾಗೂ ಅಕ್ಕಪಕ್ಕದ ಅರಣ್ಯ ಪ್ರದೇಶಗಳು ಬೆಂಕಿಗಾಹುತಿಯಾಗುತ್ತದೆ. ಈ ಅಪಾಯದ ಅರಿವೇ ಇಲ್ಲದಂತೆ ಅರಣ್ಯ ಇಲಾಖೆ ವರ್ತಿಸುತ್ತಿದೆ.

ಹೊಸ ವರ್ಷಾಚರಣೆ ನೆಪದಲ್ಲಿ ಪುಂಡಾಟ:
ನಾಮದ ಚಿಲುಮೆ ಪ್ರದೇಶದಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಪುಂಡರು ಹಾವಳಿ ನಡೆಸುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ. ಮಧ್ಯರಾತ್ರಿ ನಾಮದ ಚಿಲುಮೆ ಪ್ರದೇಶದಲ್ಲಿ ನಡು ರಸ್ತೆಯಲ್ಲಿ ಬೆಂಕಿ ಹಚ್ಚುತ್ತಾರೆ. ಮದ್ಯದ ಬಾಟಲಿಗಳನ್ನು ಒಡೆಯುತ್ತಾರೆ. ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಈ ಬಾರಿ ಸರಿಯಾದ ಸಮಯದಲ್ಲಿ ವಿಕ ವರದಿ ಪ್ರಕಟಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಬೇಕು, ಪುಂಡರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಸಿಸಿ ಟಿವಿ ಪರಿಹಾರ:
ನಾಮದ ಚಿಲುಮೆ ಅರಣ್ಯ ಪ್ರದೇಶದಲ್ಲಿ ಮೊದಲು ಪ್ಲಾಸ್ಟಿಕ್‌ ನಿಷೇಧಿಸಬೇಕು. ಅನಗತ್ಯವಾಗಿ ಬರುವ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಬೇಕು ಎಂದು ಸ್ಥಳೀಯ ನಿವಾಸಿ ಡಾ.ಚೇತನ್‌ ದಾಸರಹಳ್ಳಿ ಒತ್ತಾಯಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು ನಿತ್ಯ ದಂಡಿಯಾಗಿ ಚಿಲುಮೆಗೆ ಬರುತ್ತಾರೆ. ಬೆಳಗ್ಗೆ 9 ಗಂಟೆಗೆ ಬಂದವರು ಸಂಜೆ 5 ಗಂಟೆಯಾದರೂ ಹೊರಗೆ ಹೋಗುವುದಿಲ್ಲ. ಒಳಗೆ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವುದನ್ನು ಯಾವ ಸಿಬ್ಬಂದಿಯೂ ಗಮನಿಸುವುದಿಲ್ಲ. ಬಂದು ಹೋಗುವವರ ಮಾಹಿತಿ ಸಂಗ್ರಹಿಸುವುದಿಲ್ಲ. ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಬರುವವರು ಬ್ಯಾಗ್‌ನಲ್ಲಿ ಮದ್ಯದ ಬಾಟಲ್‌ ಗಳನ್ನಟ್ಟುಕೊಂಡು ಬರುತ್ತಾರೆ. ಯಾರೂ ಚೆಕ್‌ ಮಾಡುವುದಿಲ್ಲ. ಕುಡಿದವರು ಖಾಲಿ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ನಾಮದ ಚಿಲುಮೆಯಲ್ಲಿ ಅನೈತಿಕ ಚಟುವಟಿಕೆಗಳಾಗುತ್ತಿವೆ. ಪ್ರಾಣಿಗಳಿಗೆ ರಕ್ಷ ಣೆ ಇಲ್ಲ. ಹಾವು ಹಿಡಿಯುವವರು ಇಲ್ಲಿ ಪ್ರ್ಯಾಕ್ಟೀಸ್‌ ಮಾಡುತ್ತಿರುತ್ತಾರೆ. ಪ್ರಾಣಿಗಳಿಗೆ ಕುಡಿಯಲು ನೀರಿಲ್ಲ. ಈ ಎಲ್ಲಾ ಲೋಪದೋಷಗಳನ್ನು ಸರಿಪಡಿಸಲು ಮೊದಲು ಸಿಸಿ ಟಿವಿ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.


ವರದಿ ಕೇಳಿದ ಡಿಸಿ:
ನಾಮದ ಚಿಲುಮೆ ಜಿಂಕೆವನದ ಅಕ್ರಮ, ಅವ್ಯವಸ್ಥೆಗಳ ಬಗ್ಗೆ ವಿಕ ವರದಿ ಪ್ರಕಟಿಸಿದ ಬಳಿಕ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌, ಅಧಿಕಾರಿಗಳಿಂದ ವರದಿ ಕೇಳಿದ್ದಾರೆ. ಪ್ರಾದೇಶಿಕ ಅರಣ್ಯ ಇಲಾಖೆಯ ಡಿಎಫ್‌ಒ ಹಾಗೂ ಪ್ರವಾಸೋದ್ಯಮ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ನಾಮದ ಚಿಲುಮೆಯಲ್ಲಿ ಪ್ರವಾಸಿಗರಿಂದ ಹಣ ವಸೂಲಿ ಮಾಡಿ ಟಿಕೆಚ್‌ ನೀಡದಿರುವ ಬಗ್ಗೆ ಹಾಗೂ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ವಿಕ ಡಿ.19ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರಾದೇಶಿಕ ಅರಣ್ಯ ಇಲಾಖೆಯ ಡಿಎಫ್‌ಒ ರಾಮಲಿಂಗೇಗೌಡ ತಿಳಿಸಿದ್ದರು. ಆದರೆ ಈವರೆಗೂ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಕರೆ ಮಾಡಿದಾಗಲೂ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಸ್ವತಃ ಅಧಿಕಾರಿಗಳೇ ತಪ್ಪಿತಸ್ಥ ಸಿಬ್ಬಂದಿಯ ರಕ್ಷ ಣೆಗೆ ನಿಂತಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ