ಆ್ಯಪ್ನಗರ

ಕಿಡಿಗೇಡಿಗಳಿಂದ ಆಶ್ರಯ ಬಡಾವಣೆ ಒತ್ತುವರಿ: ಸ್ಥಳೀಯರ ಆರೋಪ

450 ಮನೆಗಳಿರುವ ಪಾವಗಡದ ಕುಮಾರಸ್ವಾಮಿ ಬಡಾವಣೆಯಲ್ಲಿ ಆಶ್ರಯ ಫಲಾನುಭವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಆದರೆ ಇತ್ತೀಚೆಗೆ ಈ ಬಡಾವಣೆಯಲ್ಲಿ ಪುರಸಭೆಯ ಮಾಡಿ ಸದಸ್ಯ ಸೇರಿದಂತೆ ಕೆಲವು ಪ್ರಭಾವಿಗಳು ಜಾಗ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

Vijaya Karnataka 5 Jan 2019, 5:00 am
ಪಾವಗಡ:
Vijaya Karnataka Web asylum layout enclosure local residents
ಕಿಡಿಗೇಡಿಗಳಿಂದ ಆಶ್ರಯ ಬಡಾವಣೆ ಒತ್ತುವರಿ: ಸ್ಥಳೀಯರ ಆರೋಪ


450 ಮನೆಗಳಿರುವ ಪಾವಗಡದ ಕುಮಾರಸ್ವಾಮಿ ಬಡಾವಣೆಯಲ್ಲಿ ಆಶ್ರಯ ಫಲಾನುಭವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಆದರೆ ಇತ್ತೀಚೆಗೆ ಈ ಬಡಾವಣೆಯಲ್ಲಿ ಪುರಸಭೆಯ ಮಾಡಿ ಸದಸ್ಯ ಸೇರಿದಂತೆ ಕೆಲವು ಪ್ರಭಾವಿಗಳು ಜಾಗ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಮೂಲಸೌಕರ್ಯಗಳಿಂದ ವಂಚಿತವಾಗಿರುವ ಈ ಬಡಾವಣೆ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈ ಬಡಾವಣೆಗೆ 2003-04ರಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ತರಾತುರಿಯಲ್ಲಿ ಉದ್ಘಾಟನೆ ನೆರವೇರಿಸಿದ್ದರು. ಆನಂತರ ಈ ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿಗೆ ಎಷ್ಟು ಹಣ ಮಂಜೂರಾಗಿದೆ? ಎಷ್ಟು ವೆಚ್ಚವಾಗಿದೆ ಎಂಬ ವಿಷಯ ನಿರಂತರ ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿ ನಿರ್ಮಾಣವಾಗಿರುವ 400 ಮನೆಗಳಿಗೆ ಶೌಚಾಲಯಗಳಿಲ್ಲ. ಗೃಹಿಣಿಯರು, ವೃದ್ಧರು ಮತ್ತು ಮಕ್ಕಳು ಶೌಚಾಲಯ ಸೌಲಭ್ಯವಿಲ್ಲದೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಡಾವಣೆಗೆ ಶಾಸಕರ ವಿಶೇಷ ಅನುದಾನವಾಗಲಿ, ಸಂಸದರ ಅನುದಾನವಾಗಲಿ, ಪುರಸಭೆಯ ಅನುದಾನವಾಗಲಿ ಸಿಗುತ್ತಿಲ್ಲ. ಕಳೆದ 16 ವರ್ಷಗಳಿಂದ ಯಾವುದೇ ಮೂಲಸೌಕರ್ಯ ಒದಗಿಸದೆ ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ.

ಇಲ್ಲಿನ ನಿವಾಸಿಗಳಿಗೆ ನೀಡಿರುವ ಆಶ್ರಯ ಮನೆಗಳಿಗೆ ಸಮರ್ಪಕ ಸಂಖ್ಯೆ ನೀಡಿಲ್ಲ. ಎರಡು ಮನೆಗಳಿಗೆ ಒಂದೇ ನಂಬರ್‌ ನೀಡಿ, ಫಲಾನುಭವಿಗಳನ್ನು ಗೊಂದಲಕ್ಕೆ ಸಿಲುಕಿಸಲಾಗಿದೆ. ಬಡಾಣೆಯ ರಸ್ತೆ ಮಧ್ಯೆ ಹರಿಯುವ ಚರಂಡಿ ನೀರಿನ ದುರ್ನಾತ, ಇದೇ ನೀರನ್ನು ಕುಡಿಯಲು ಬರುವ ಹಂದಿಗಳ ಹಾವಳಿಯಿಂದ ನಿವಾಸಿಗಳ ಬದುಕು ದುಸ್ತರವಾಗಿದೆ.

ಚರಂಡಿ, ಶೌಚಾಲಯ, ರಸ್ತೆ, ವಿದ್ಯುತ್‌ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಇಲ್ಲಿನ ಪುರಸಭೆ ವಿಫಲವಾಗಿದೆ. ಕೆಲವು ಆಶ್ರಯ ಮನೆಗಳು ಖಾಲಿ ಬಿದ್ದಿದ್ದು, ಇಲ್ಲಿ ರಾತ್ರಿಪೂರ್ತಿ ಜೂಜು, ಮಟ್ಕ, ಕುಡಿತ, ವ್ಯಭಿಚಾರದಂತಹ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ನಿವಾಸಿಗಳಿಗೆ ಭದ್ರತೆ ಇಲ್ಲದಂತಾಗಿದೆ.

ಆಂಧ್ರದ ವಲಸೆಗಾರರಿಗೆ ಇಲ್ಲಿ ಕಾನೂನುಬಾಹಿರವಾಗಿ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಈಗಲಾದರೂ ಖಾಲಿ ಜಾಗ ಅಳತೆ ಮಾಡಿ, ಪುರಸಭೆಯ ಸ್ವತ್ತು ಎಂದು ನಾಮಫಲಕ ಹಾಕಬೇಕು. ಒತ್ತುವರಿ ಆಗಿರುವ ನಿವೇಶನ ಮತ್ತು ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಬೇಕು. ಇಲ್ಲಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಕುಮಾರಸ್ವಾಮಿ ಬಡಾವಣೆಯಲ್ಲಿ ಅಲ್ಪಸ್ವಲ್ಪ ಸರಕಾರಿ ಜಾಗ ಇರುವುದನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದರೂ ಪುರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದರಲ್ಲಿ ಪ್ರಭಾವಿಗಳ ಕೈವಾಡ ಇದೆ ಎಂಬುದು ಅನುಮಾನಕ್ಕೆ ಎಡೆಮಾಡಿದೆ.

- ಫಕ್ರುದ್ದೀನ್‌, ಕುಮರಸ್ವಾಮಿ ಬಡಾವಣೆಯ ನಿವಾಸಿ, ಪಾವಗಡ



ಈ ಬಡಾವಣೆಗೆ ಪುರಸಭೆ ಸದಸ್ಯರಾಗಲಿ, ಅಧಿಕಾರಿಗಳಾಗಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದರೆ ಚುನಾವಣೆ ಬಂದರೆ ಸಾಕು ಸುಳ್ಳು ಆಶ್ವಾಸನೆ ನೀಡುತ್ತಾರೆ ಅಷ್ಟೆ. ಆದರೆ ಈ ಬಾರಿ ಬಡಾವಣೆಯ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಯಾರಿಗೂ ಇಲ್ಲಿಗೆ ಕಾಲಿಡಲು ಬಿಡುವುದಿಲ್ಲ.

- ನಿವಾಸಿಗಳು, ಕುಮಾರಸ್ವಾಮಿ ಬಡಾವಣೆ, ಪಾವಗಡ



ಕುಮಾರಸ್ವಾಮಿ ಬಡಾವಣೆಯ ನಿವಾಸಿಗಳ ದೂರಿನ ಮೇರೆಗೆ ಸಿಬ್ಬಂದಿ ಜತೆ ಹೋಗಿ ಒತ್ತುವರಿ ಸ್ಥಳ ತೆರವುಗೊಳಿಸಲಾಗಿದೆ. ಇನ್ನೂ ಯಾವುದಾದರು ಸ್ಥಳ ಒತ್ತುವರಿಯಾಗಿರುವ ಕುರಿತು ನಿವಾಸಿಗಳು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು.

- ನವೀನ್‌ಚಂದ್ರ, ಮುಖ್ಯಾಧಿಕಾರಿ, ಪುರಸಭೆ, ಪಾವಗಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ