ಕುಣಿಗಲ್: ಮಂಜೂರಾಗಿ 19ವರ್ಷದಿಂದ ಹಲವು ತೊಡಕುಗಳ ಮಧ್ಯೆ ತೆವಳುತ್ತಾ ಸಾಗಿದ ಬಹು ನಿರೀಕ್ಷಿತ ಬೆಂಗಳೂರು-ಹಾಸನ ನಡುವಿನ ರೈಲು ಹಳಿ ಕಾಮಗಾರಿ ಅಂತಿಮ ಹಂತ ತಲುಪಿ ರೈಲು ಸಂಚಾರಕ್ಕೆ ಕ್ಷ ಣಗಣನೆ ಅಂಭವಾಗಿದೆ.
ಈ ಸಂಬಂಧ ಫೆಬ್ರವರಿ ತಿಂಗಳ 15ರ ನಂತರ ಬೆಂಗಳೂರು- ಹಾಸನ ರೈಲು ಸಂಚಾರ ಅರಂಭವಾಗುವುದು ಬಹುತೇಕ ಖಚಿತ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಇಲ್ಲಿವರೆಗೂ ರೈಲಿಗಾಗಿ ಈ ಭಾಗದ ಜನ ಕನಸು ಕಾಣುತ್ತಿದ್ದರು. ಈಗ ರೈಲು ಸಂಚಾರ ಆರಂಭವಾದರೆ ಇದೇ ಪ್ರಥಮ ಬಾರಿಗೆ ರೈಲು ಸಂಚಾರದ ಜನರ ಕನಸು ನನಸಾಗುವ ಕ್ಷ ಣ ಹತ್ತಿರವಾಗಿದೆ.
ರೈಲ್ವೆ ಹಳಿ ಕಾಮಗಾರಿಗೆ ರಾಮನಗರ ಜಿಲ್ಲೆಯ ಗುಡೇಮಾರನಹಳ್ಳಿ-ಲಕ್ಕೇನಹಳ್ಳಿ ಬಳಿ ಜಮೀನು ಸಂಬಂಧ ಇದ್ದ ತೊಡಕು ನಿವಾರಣೆಯಾಗಿದೆ. ಹಾಗಾಗಿ ಮುಂದಿನ ತಿಂಗಳಲ್ಲಿ ರೈಲು ಸಂಚಾರ ಪ್ರಾರಂಭವಾಗುವುದರಲ್ಲಿ ಅನುಮಾನವೇ ಇಲ್ಲ. ಈ ಮಾರ್ಗದ ರೈಲ್ವೆ ಕಾಮಗಾರಿ ಶೇ.99ರಷ್ಟು ಪೂರ್ಣಗೊಂಡಿರುವುದು ಇದಕ್ಕೆ ಪುಷ್ಠಿಯಾಗಿದೆ.
ಕೇಂದ್ರ ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳ ಪರಿಶೀಲನೆ ಬಾಕಿ ಉಳಿದಿದೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗುವ ನಿರೀಕ್ಷೆ ಇದೆ. ಸಂಸದ ಡಿ.ಕೆ. ಸುರೇಶ್, ಎಸ್.ಪಿ.ಮುದ್ದಹನುಮೇಗೌಡ, ಪುಟ್ಟರಾಜು ಅವರು ಉದ್ಘಾಟನೆಗಾಗಿ ಕುಣಿಗಲ್ ಇಲ್ಲವೇ ನಾಗಮಂಗಲದಲ್ಲಿ ಸ್ಥಳ ನಿಗದಿಪಡಿಸಿಲು ಉತ್ಸುಕರಾಗಿದ್ದಾರೆ ಎನ್ನಲಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹಾಸನ ಇಲ್ಲವೇ ಚನ್ನರಾಯಪಟ್ಟಣದಲ್ಲಿ ಉದ್ಘಾಟನೆ ಸಮಾರಂಭ ಮಾಡಲು ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ದೇವೇಗೌಡ ಅವರ ಕನಸಿನ ಕೂಸಾಗಿರುವ ಈ ಯೋಜನೆ ಈಡೇರಲು 19 ವರ್ಷಗಳೇ ತೆಗೆದುಕೊಂಡಿದ್ದು ವಿಪರ್ಯಾಸ. ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಗೌಡರು ಬೆಂಗಳೂರಿನಿಂದ ಹಾಸನ ಮಾರ್ಗದ ಮೂಲಕ ಮಂಗಳೂರಿಗೆ ತಲುಪಿಸಲು ಪ್ರಸ್ತಾವನೆ ಹಾಗೂ ಅದಕ್ಕಾಗಿ ಯೋಜನೆಯಲ್ಲಿ ಹಣವನ್ನೂ ಮೀಸಲಿರಿಸಿದ್ದರು. ಆದರೆ, ಸುದೀರ್ಘ ಕಾಲದ ಬಳಿಕ ಗೌಡರ ಕನಸು ನನಸಾಗುವ ಕಾಲ ಕೂಡಿ ಬರುತ್ತಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿದೆ.
ಏಕಕಾಲಕ್ಕೆ ಕೊಂಕಣ ರೈಲು ಮಾರ್ಗವನ್ನು ಕಡಿಮೆ ಅವಧಿಯಲ್ಲಿ ಸಂಪರ್ಕಿಸಬಲ್ಲ ಈ ಮಾರ್ಗ ಕಳೆದ 19 ವರ್ಷಗಳಿಂದಲೂ ಒಂದಲ್ಲ ಒಂದು ವಿಘ್ನಗಳನ್ನು ಎದುರಿಸುತ್ತಲೇ ಇದ್ದುದರಿಂದ ಮಾರ್ಗ ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ಕಾರಣವಾಗಿದೆ. ಸೋಲೂರು ಬಳಿ 630 ಮೀಟರ್ ಸುರಂಗ ಮಾರ್ಗ ಕೊರೆಯುವ ಕೆಲಸ ಪೂರ್ಣಗೊಂಡಿದೆ. ಬಜೆಟ್ನಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕಿಂತ ಸುಮಾರು 1110ಕೋಟಿ ರೂ.ಗಳನ್ನು ಈವರೆಗೂ ವ್ಯಯಿಸಲಾಗಿದೆ ಎನ್ನುತ್ತಾರೆ ರೈಲ್ವೆ ಇಲಾಖೆ ಅಧಿಕಾರಿಗಳು.
ಶ್ರವಣಬೆಳಗೋಳದಿಂದ ಸೋಲೂರು ಬಳಿಯ ಮಾಗಡಿ ಗಡಿಯ ತಿಪ್ಪಸಂದ್ರವರೆಗೂ ಪ್ರಾಯೋಗಿಕವಾಗಿ ಇಂಜಿನ್ಅನ್ನು ಈಗಾಗಲೇ ಎರಡರಿಂದ ಮೂರು ಬಾರಿ ಓಡಿಸಲಾಗಿದೆ. ಮಂಡ್ಯ ಜಿಲ್ಲೆಯ ಬಿ.ಜಿ. ನಗರದ ರೈಲ್ವೆ ನಿಲ್ದಾಣ, ಕುಣಿಗಲ್ ಬಳಿಯ ಎಡೆಯೂರು, ಕುಣಿಗಲ್ ಹಾಗೂ ಸೋಲೂರು ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿವೆ. ನೆಲಮಂಗಲ ಬಳಿಯ ಚಿಕ್ಕಬಾಣಾವರದವರೆಗೂ ರೈಲ್ವೆ ಸಂಚಾರ ನಡೆಯುತ್ತಿದೆ.
ಹಾಸನದಿಂದ ಬೆಂಗಳೂರುವರೆಗೂ ನಿರ್ಮಾಣವಾಗುತ್ತಿರುವ 183ಕಿಮೀ ಉದ್ದದ ಈ ಕಾಮಗಾರಿ ಪೂರ್ಣಗೊಂಡಿದ್ದು, ಬ್ರಾಡ್ ಗೇಜ್ ರೈಲುಗಳು ಓಡಾಡಲಿರುವ ಈ ಮಾರ್ಗದಲ್ಲಿ ಒಂದು ಗಂಟೆಗೆ 110ಕಿಮೀ ವೇಗದಲ್ಲಿ ರೈಲುಗಳು ಸಂಚರಿಸಲಿವೆ. ಈ ಮಾರ್ಗದುದ್ದಕ್ಕೂ ಮಾನವ ರಹಿತ ಹಾಗೂ ತಡೆ ರಹಿತ ರೈಲು ಸಂಚರಿಸಲಿವೆ. ಇದರಿಂದ ನೈರುತ್ಯ ರೈಲ್ವೆ ಮಾರ್ಗದ ಇತಿಹಾಸದಲ್ಲೇ ಮಾನವ ರಹಿತ ಲೆವೆಲ್ ಕ್ರಾಸಿಂಗ್ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಕರ್ನಾಟಕದಲ್ಲೇ ಮೊದಲ ಬಾರಿಗೆ ಇಂತಹ ಪ್ರಯತ್ನ ಇದಾಗಿದೆ ಎಂದು ರೈಲ್ವೆ ಮೂಲಕಗಳು ತಿಳಿಸಿವೆ.
ಲಾಭ ಏನು?:
ಉದ್ದೇಶಿತ ಯೋಜನೆ ಸಾಕಾರಗೊಂಡಲ್ಲಿ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಹಾಸನ, ಶ್ರವಣಬೆಳಗೊಳ, ಬೆಳ್ಳೂರು ಕ್ರಾಸ್, ಕುಣಿಗಲ್ ಮತ್ತಿತರ ಭಾಗಗಳಿಂದ ನಿತ್ಯ ಬೆಂಗಳೂರಿಗೆ ಓಡಾಡುವ ನೌಕರರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಆಸರೆಯಾಗಲಿದೆ. ರೈತರು ಮತ್ತು ವ್ಯಾಪಾರಸ್ಥರು ತಮ್ಮ ಸರಕು ಮತ್ತು ಸಾಗಣೆಗಳನ್ನು ಸುಲಭವಾಗಿ ಬೋಗಿಗಳಲ್ಲಿ ಬೆಂಗಳೂರಿಗೆ ಕೊಂಡೊಯ್ಯಬಹುದು. ಸಾರಿಗೆ ಬಸ್ ದರಕ್ಕಿಂತ ಅತ್ಯಂತ ಸುಲಭ ದರದಲ್ಲಿ ಟಿಕೆಟ್ ಲಭ್ಯವಾಗುವುದರಿಂದ ಎಲ್ಲ ವರ್ಗದ ಜನತೆಗೆ ಇದರಿಂದ ಲಾಭವಾಗಲಿದೆ. ಸರಕಾರಿ ನೌಕರರು, ಕಾರ್ಖಾನೆಗಳ ನೌಕರರು, ವಿದ್ಯಾರ್ಥಿಗಳು, ರೈತರು ಹಾಗೂ ಎಲ್ಲಾ ವರ್ಗದ ಜನರು ಪ್ರತಿನಿತ್ಯ ಸಂಚರಿಸಲು ಅತ್ಯಂತ ಉಪಯೋಗವಾಗಲಿದೆ. ಈ ಭಾಗದಲ್ಲಿ ರೈಗಾರಿಕೆಗಳು ಹೆಚ್ಚಾಗಿರುವುದರಿಂದ ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಸಹ ಬರಲಿದೆ. ಈ ಪ್ರದೇಶವು ಬೆಂಗಳೂರಿಗೆ ಸಮೀಪವಿರುವುದರಿಂದ ಬೆಂಗಳೂರಿನ ಜನವಸತಿ ಒತ್ತಡ ಕಡಿಮೆಯಾಗಲಿದ್ದು, ರೈಗಾರಿಕೆಗಳು ತೆರೆದುಕೊಳ್ಳುವುದರಿಂದ ವಿದ್ಯಾವಂತ ನಿರುದ್ಯೋಗಿಗಳಿಗೆ ಹೆಚ್ಚಿನ ಉದೋಗಾವಕಾಶಗಳು ಲಭ್ಯವಾಗಲಿವೆ.
ಈ ಭಾಗದಲ್ಲಿ ರೈಲ್ವೆ ಸಂಚಾರ ಇಲ್ಲದೇ ತುಂಬಾ ತೊಂದರೆಯಾಗಿತ್ತು. ಇಲ್ಲಿನ ಎಷ್ಟೋ ಮಂದಿ ರೈಲನ್ನು ನೋಡಿಲ್ಲದವರೂ ಇದ್ದಾರೆ. ಕಳೆದ 19 ವರ್ಷದಿಂದ ಕಾಮಗಾರಿ ನಡೆಯುತ್ತಲೇ ಇದೆ. ಯಾವಾಗ ರೈಲು ಬರುವುದೋ ಎಂದು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಮುಂದಿನ ತಿಂಗಳು ರೈಲು ಸಂಚಾರ ಅರಂಭವಾಗುತ್ತಿರುವುದು ಸಂತೋಷ ತಂದಿದೆ.
- ನಾಗೇಶ್, ತರಕಾರಿ ವ್ಯಾಪಾರಿ, ಕುಣಿಗಲ್
ಕುಣಿಗಲ್ ಭಾಗದಲ್ಲಿ ರೈಲ್ವೆ ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ಜತೆಗೆ ಶೇ.99 ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ರೈಲ್ವೆ ಸಂಚಾರ ಅರಂಭಿಸಲು ಸಿದ್ಧತೆ ನಡೆದಿದೆ. ನಿಗದಿತ ದಿನಾಂಕವನ್ನು ನಮ್ಮ ಮೇಲಾಧಿಕಾರಿಗಳು ತಿಳಿಸಲಿದ್ದಾರೆ. ಆದರೆ ಫೆಬ್ರವರಿ ತಿಂಗಳ 15ರ ನಂತರ 28ರ ಒಳಗೆ ರೈಲು ಸಂಚಾರ ಅರಂಭವಾಗುವ ಲಕ್ಷ ಣ ಹೆಚ್ಚಾಗಿದೆ.
- ಸತ್ಯನಾರಾಯಣ್, ರೈಲ್ವೆ ಅಧಿಕಾರಿ, ಕುಣಿಗಲ್