ಆ್ಯಪ್ನಗರ

ರೈಲಿನ ಹುಟ್ಟುಹಬ್ಬ ಆಚರಣೆ

ತುಮಕೂರು ನಗರದ ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ಶನಿವಾರ ತುಮಕೂರು-ಬೆಂಗಳೂರು ಫಾಸ್ಟ್‌ ಪ್ಯಾಸೆಂಜರ್‌ ರೈಲಿನ ಹುಟ್ಟುಹಬ್ಬ ಆಚರಿಸಲಾಯಿತು.

Vijaya Karnataka 4 Aug 2019, 9:53 am
ತುಮಕೂರು: ತುಮಕೂರಿನಲ್ಲಿ ಶನಿವಾರ ವಿಶಿಷ್ಟ ಕಾರ್ಯಕ್ರಮವೊಂದು ನಡೆಯಿತು. ಅದು ರೈಲಿನ ಹುಟ್ಟುಹಬ್ಬ! ಸಾಮಾನ್ಯವಾಗಿ ಎಲ್ಲೂ ನಡೆಯದ ರೈಲಿನ ಹುಟ್ಟುಹಬ್ಬವನ್ನು ನಗರದ ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಕಳೆದ ಆರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.
Vijaya Karnataka Web train birthday


ಬೆಂಗಳೂರಿಗೆ ನಿತ್ಯ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಲೆಂದು ನೈಋುತ್ಯ ರೈಲ್ವೇ ಅಧಿಕಾರಿಗಳ ಮನವೊಲಿಸಿ, ತುಮಕೂರು-ಬೆಂಗಳೂರು ಫಾಸ್ಟ್‌ ಪ್ಯಾಸೆಂಜರ್‌ ರೈಲು ಬೇಡಿಕೆ ಈಡೇರಿಸಿಕೊಳ್ಳಲಾಗಿತ್ತು. ತೊಂದರೆ ನಿವಾರಣೆಗೆ ಆರಂಭಿಸಲಾದ ಈ ರೈಲಿನಿಂದಾಗಿ ಬಹಳ ಅನುಕೂಲವಾಗಿತ್ತು. ನೂತನ ರೈಲು ಆರಂಭಕ್ಕೆ ಕಾರಣವಾಗಿದ್ದ ಪ್ರಯಾಣಿಕರು ವೇದಿಕೆಯೊಂದನ್ನು ಸ್ಥಾಪಿಸಿಕೊಂಡು ರೈಲ್ವೆ ಪ್ರಯಾಣಿಕರಿಗೆ ಅಗತ್ಯವಾಗಿರುವ ಅನುಕೂಲಗಳನ್ನು ಒದಗಿಸುತ್ತ ಬಂದಿದ್ದಾರೆ.

ಅದೇ ಸಂದರ್ಭದಲ್ಲಿ ಹುಟ್ಟಿಕೊಂಡದ್ದು, ತಮ್ಮ ಸಂಕಷ್ಟ ನಿವಾರಣೆಗೆ ಆರಂಭಗೊಂಡ ರೈಲಿಗೆ ಜನ್ಮ ದಿನಾಚರಣೆ. ರೈಲು ಆರಂಭಗೊಂಡ ಆ.3 ರಂದು ಪ್ರತಿವರ್ಷವೂ ರೈಲಿಗೆ ಹುಟ್ಟು ಹಬ್ಬ ಆಚರಿಸಿ ಪ್ರಯಾಣಿಕರೊಂದಿಗೆ ವೇದಿಕೆ ಪದಾಧಿಕಾರಿಗಳು ಸಂಭ್ರಮಿಸುತ್ತಿದ್ದಾರೆ. ಅದೇ ರೀತಿ ಶನಿವಾರ ಬೆಳ್ಳಂಬೆಳಗ್ಗೆಯೇ ನಿಲ್ದಾಣಕ್ಕೆ ಆಗಮಿಸಿದ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಯಾಣಿಕರ ಸಹಕಾರದೊಂದಿಗೆ ರೈಲಿಗೆ ಬಾಳೆ ಕಂದು, ಮಾವಿನ ಸೊಪ್ಪು ಕಟ್ಟಿ, ಹೂವಿನಿಂದ ಅಲಂಕರಿಸಿದರು. ಬಲೂನ್‌ ಬಂಟಿಂಗ್ಸ್‌ಗಳನ್ನೂ ಕಟ್ಟಿ ಖುಷಿಪಟ್ಟರು. ಸುಮಾರು 8 ಗಂಟೆಗೆ ರೈಲಿನ ಚಾಲಕ ವಿ.ಎನ್‌. ಪ್ರಸಾದ್‌ ಹಾಗೂ ಸಹಚಾಲಕ ವಿಶ್ವೇಶ್ವರ್‌ ಪ್ರಸಾದ್‌ ಮತ್ತು ಗಾರ್ಡ್‌ ಎನ್‌. ಕೆ. ನಿರಾಲ ಅವರಿಂದ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಅಲ್ಲದೆ ಪ್ರಯಾಣಿಕರಿಗೆ ಕೇಕ್‌ ವಿತರಿಸಲಾಯಿತು. ನಂತರ ಅದೇ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ ವೇದಿಕೆಯ ಪದಾಧಿಕಾರಿಗಳು ಎಲ್ಲ ಪ್ರಯಾಣಿಕರಿಗೂ ಸಿಹಿ ವಿತರಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ರೈಲ್ವೇ ಸುರಕ್ಷಾ ಪಡೆಯ ಉಪನಿರೀಕ್ಷ ಕ ಕುಬೇರಪ್ಪ ಮತ್ತು ತುಮಕೂರು ರೈಲ್ವೇ ವ್ಯವಸ್ಥಾಪಕ ರಮೇಶ್‌ ಬಾಬು ಮತ್ತು ಸಿಬ್ಬಂದಿ, ಡಿಆರ್‌ಯುಸಿಸಿ ಸದಸ್ಯ ಟಿ.ಆರ್‌. ರಘೋತ್ತಮರಾವ್‌ ಮತ್ತಿತರರಿದ್ದರು.

ಪ್ರತಿಭಾ ಪುರಸ್ಕಾರ: ವೇದಿಕೆ ಆರಂಭದ ಆರನೇ ವರ್ಷಾಚರಣೆ ಅಂಗವಾಗಿ ಆ.11 ರಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ವೇದಿಕೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಕೀಲು, ಮೂಳೆ ಮತ್ತು ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ಇದರೊಂದಿಗೆ ರೈಲ್ವೇ ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಪ್ರಯಾಣಿಕರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಂಸದ ಜಿ.ಎಸ್‌.ಬಸವರಾಜ್‌ ಉದ್ಘಾಟಿಸಲಿದ್ದು, ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಪ್ರತಿಭಾ ಪುರಸ್ಕಾರ ವಿತರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ