ಆ್ಯಪ್ನಗರ

ಮನೆಯವರೊಂದಿಗೆ ವಾಸ್ತವ್ಯ ಹೂಡಿರುವ ನಾಗರಹಾವು

ಹುತ್ತದಲ್ಲಿ ವಾಸ್ತವ್ಯ ಹೂಡಬೇಕಾದ ಹಾವೊಂದು ಮಾಯಸಂದ್ರದ ಕೆಂಪಮ್ಮ ಎಂಬ ರೈತ ಮಹಿಳೆಯೊಬ್ಬರ ಮನೆಯಲ್ಲಿ ಕಳೆದ 24 ಗಂಟೆಗಳಿಂದ ಮನೆಯ ಸದಸ್ಯರೊಂದಿಗೆ ಠಿಕಾಣಿ ಹೂಡಿರುವ ಪ್ರಸಂಗ ನಡೆದಿದೆ.

ವಿಕ ಸುದ್ದಿಲೋಕ 6 Feb 2017, 9:45 am

ತುರುವೇಕೆರೆ: ಹುತ್ತದಲ್ಲಿ ವಾಸ್ತವ್ಯ ಹೂಡಬೇಕಾದ ಹಾವೊಂದು ಮಾಯಸಂದ್ರದ ಕೆಂಪಮ್ಮ ಎಂಬ ರೈತ ಮಹಿಳೆಯೊಬ್ಬರ ಮನೆಯಲ್ಲಿ ಕಳೆದ 24 ಗಂಟೆಗಳಿಂದ ಮನೆಯ ಸದಸ್ಯರೊಂದಿಗೆ ಠಿಕಾಣಿ ಹೂಡಿರುವ ಪ್ರಸಂಗ ನಡೆದಿದೆ.

ಮಾಯಸಂದ್ರ ಹೋಬಳಿ ಕೇಂದ್ರವಾಗಿದ್ದು, ಅಲ್ಲಿ ಕೆಂಪಮ್ಮ ಹಾಗೂ ಮಗಳು ಕುಮಾರಿ, ಮೊಮ್ಮಗ ಸಿದ್ದೇಗೌಡ ಅವರ ಕುಟುಂಬಕ್ಕೆ ಅತಿಥಿ ಎಂಬಂತೆ ರಥಸಪ್ತಮಿ ಶುಕ್ರವಾರ ಸಂಜೆ ನಿಜವಾದ ನಾಗರ ಪ್ರತ್ಯಕ್ಷ ವಾಗಿದೆ. ಜನ ಗಾಬರಿಗೊಂಡು ಹಾವು ಮನೆ ಪ್ರವೇಶಿಸಿದ್ದನ್ನು ಕೆಂಪಮ್ಮ ಅವರಿಗೆ ತಿಳಿಸುವ ವೇಳೆಗೆ ಮನೆ ಹೊಕ್ಕಿದ್ದ ಉರಗ ಸ್ವಸ್ಥಾನವಾಗಿ ಸುರಳಿ ಸುತ್ತಿ ಎಡೆ ಬಿಚ್ಚಿ ಪಲ್ಲಂಗ ಹಾಕಿ ಕುಳಿತಿದೆ. ಇದ್ಯಾವುದಕ್ಕೂ ಗಾಬರಿಯಾಗದ ಕೆಂಪಮ್ಮ, ಅದು ನಮ್ಮ ಮನೆಗೆ ಬಂದ ನಿರೀಕ್ಷಿತ ಅತಿಥಿ ಎಂದು ಶ್ರದ್ಧಾಭಕ್ತಿಯೊಂದಿಗೆ ಊದುಬತ್ತಿ ಹಚ್ಚಿ ಕೈ ಮುಗಿದು ಅದೇ ತಾನಾಗಿ ತೆರಳಿದೆ ಎಂದು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಸಂಜೆ ಮೊಬ್ಬುಗತ್ತಲಾಗಿ ರಾತ್ರಿ ಬಂದರೂ ಜಪ್ಪಯ್ಯ ಎನ್ನದ ನಾಗಪ್ಪ, ಅಲ್ಲಿಯೇ ಮೂಲೆಯಲ್ಲಿ ಮಲಗಿದೆ.

ಮನೆ ಹೊಕ್ಕಿರುವ ನಾಗರಹಾವಿನ ಸುದ್ದಿ ಬಾಯಿಂದ ಬಾಯಿಗೆ ಕಾಡ್ಗಿಚ್ಚಿನಂತೆ ಹಬ್ಬಿ, ಅಪಾರ ಜನಜಂಗುಳಿ ಮನೆ ಎದುರು ಜಮಾಯಿಸಿದೆ. ಬಂದವರೆಲ್ಲಾ ಭಯಭೀತರಾಗಿ ಹಾವನ್ನು ದೂರದಿಂದ ವೀಕ್ಷಿಸುತ್ತಿದ್ದರೆ, ಅಜ್ಜಿ ಕೆಂಪಮ್ಮ ಅದು ತಮ್ಮ ಮನೆಯ ಬಂಧು ಎಂಬಂತೆ ಪಕ್ಕದಲ್ಲೇ ಕುಳಿತು ಅದು ಹಾನಿಕಾರಕವಲ್ಲ ಎಂದು ಧೈರ್ಯ ತುಂಬುತ್ತಾರೆ. ಇದು ಸಹಜ ಎಂಬಂತೆ ಹಾವು ಆಗಾಗ ಎಡೆಬಿಚ್ಚಿ ತನ್ನ ನೈಜ ಸ್ವರೂಪವನ್ನು ಹಲವರಿಗೆ ತೋರಿಸಿತ್ತಾದರೂ ಯಾರ ಮೇಲೂ ಬುಸುಗುಡುತ್ತಿಲ್ಲ, ಕಚ್ಚೂ ಇಲ್ಲ. ಬಂದವರೆಲ್ಲಾ ಇದೊಂದು ಸಾಧು ನಾಗರಹಾವೆಂದು ಬಣ್ಣಿಸುತ್ತಾ ಕೈ ಮುಗಿದು ಯಥಾಶಕ್ತಿ ದಕ್ಷಿಣೆ ಹಾಕಿ ಹೊರ ನಡೆದಿದ್ದಾರೆ. ಎಂದಿನಂತೆ ಶುಕ್ರವಾರ ರಾತ್ರಿ ಕೆಂಪಮ್ಮ ಕುಟುಂಬದ ಮೂವರು ಸಹಜವಾಗಿ ಮಲಗಿದ್ದಾರೆ. ಶನಿವಾರ ಬೆಳಗ್ಗೆ ಎದ್ದಾಗಲೂ ನಾಗರ ಅದೇ ಸ್ಥಾನದಲ್ಲಿ ಶಾಂತವಾಗಿ ಕುಳಿತಿದ್ದು ಜನರನ್ನು ನಿಬ್ಬೆರಗಾಗಿಸಿದೆ. ಸಂಜೆಯಾದರೂ ಹಾವು ಮನೆ ಬಿಟ್ಟು ಕದಲಿಲ್ಲ, ಯಾರಿಗೂ ತೊಂದರೆಯನ್ನೂ ಮಾಡಿಲ್ಲ.

Vijaya Karnataka Web cobra enters into a house
ಮನೆಯವರೊಂದಿಗೆ ವಾಸ್ತವ್ಯ ಹೂಡಿರುವ ನಾಗರಹಾವು


ಈ ಬಗ್ಗೆ ಮನೆಯೊಡತಿ ಕೆಂಪಮ್ಮ ಮಾತನಾಡಿ ನಮ್ಮ ಎದುರಿನ ಮೈದನ ಮನೆಯ ಪಕ್ಕ ಬಿಳಿಯಕ್ಕದ ಗಿಡವಿತ್ತು, ನಾನು ಅದನ್ನು ಪೂಜಿಸುತ್ತಿದ್ದೆ, ಆಗಾಗ ಈ ನಾಗರಹಾವು ಅಲ್ಲಿ ಕಾಣಿಸುತ್ತಿತ್ತು. ಈಗ್ಯೆ 2 ವರ್ಷದ ಹಿಂದೆ ಗಿಡವನ್ನು ಕಡಿದು ಮನೆ ನಿರ್ಮಿಸಲಾಗಿದೆ. ಆಗಿನಿಂದ ಈ ವರೆಗೆ ಹಲವು ಬಾರಿ ಈ ಹಾವು ನಮ್ಮ ಮನೆಗೆ ಬಂದು ಹೋಗುತ್ತಿತ್ತು, ಆದರೆ ಈಗಿನಂತೆ ಯಾವಾಗಲೂ ದಿನಗಟ್ಟಲೆ ಉಳಿದಿರಲಿಲ್ಲ. ಹಾಗೂ ಈ ಹಾವು ಯಾರಿಗೂ ತೊಂದರೆ ಕೊಡುವುದಿಲ್ಲವೆನ್ನುತ್ತಾರೆ.

- ಕೆಂಪಮ್ಮ, ಮನೆಯೊಡತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ