ಆ್ಯಪ್ನಗರ

ದಂಪತಿಯ ಸುಪಾರಿ ಕೊಲೆ: ಪುತ್ರ ಸೇರಿ 6 ಮಂದಿಗೆ ಜೀವಾವಧಿ ಶಿಕ್ಷೆ

ಪ್ರೇಯಸಿಯೊಂದಿಗೆ ವಿವಾಹವಾಗಲು ಒಪ್ಪಲಿಲ್ಲವೆಂದು ಹೆತ್ತ ತಂದೆ ತಾಯಿಯನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಪುತ್ರ ಸೇರಿದಂತೆ 6 ಮಂದಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ

Vijaya Karnataka 20 Feb 2019, 5:00 am
ತುಮಕೂರು: ಪ್ರೇಯಸಿಯೊಂದಿಗೆ ವಿವಾಹವಾಗಲು ಒಪ್ಪಲಿಲ್ಲವೆಂದು ಹೆತ್ತ ತಂದೆ ತಾಯಿಯನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಪುತ್ರ ಸೇರಿದಂತೆ 6 ಮಂದಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
Vijaya Karnataka Web couple supari killing case life term punishment for 6 accused
ದಂಪತಿಯ ಸುಪಾರಿ ಕೊಲೆ: ಪುತ್ರ ಸೇರಿ 6 ಮಂದಿಗೆ ಜೀವಾವಧಿ ಶಿಕ್ಷೆ


ತುಮಕೂರಿನ ಅಶೋಕ ನಗರ ನಿವಾಸಿ, ಉದ್ಯಮಿ ಗೋಪಾಲ ಶೆಟ್ಟಿ ಹಾಗೂ ಪತ್ನಿ ರೂಪ ಗೋಪಾಲ ಶೆಟ್ಟಿ ಅವರು ಮನೆಯಲ್ಲಿ ಮಲಗಿದ್ದ ವೇಳೆ 2016ರ ಮಾರ್ಚ್‌ 14ರಂದು ರಾತ್ರಿ 1.45ರ ಸಮಯದಲ್ಲಿ ಭೀಕರವಾಗಿ ಕೊಲೆಯಾಗಿದ್ದರು. ಘಟನೆಯ ತನಿಖೆ ವೇಳೆ ಕೊಲೆಯಾದ ದಂಪತಿಯ ಏಕೈಕ ಪುತ್ರ ಧೀರಜ್‌ ಸ್ವತಃ ಸುಪಾರಿ ಕೊಟ್ಟು ತಂದೆ ತಾಯಿಯನ್ನು ಕೊಲೆ ಮಾಡಿಸಿದ್ದು ಬೆಳಕಿಗೆ ಬಂದಿತ್ತು. ಆಗಿನ ತನಿಖಾಧಿಕಾರಿ ಬಾಳೇಗೌಡ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಕೊಲೆಗೆ ಸುಪಾರಿ ನೀಡಿದ ಹಾಗೂ ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಧೀರಜ್‌, ನಂತರದ ಆರೋಪಿಗಳಾದ ಹಾಗೂ ಹತ್ಯೆಯಲ್ಲಿ ಭಾಗಿಯಾದ ಹರೀಶ, ಚಂದ್ರಮೌಳಿ, ರವಿ, ಆನಂದ್‌ ಹಾಗೂ ರಾಮಚಂದ್ರ ಅವರಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿದೆ. ಶಿಕ್ಷೆಗೊಳಗಾದ ಎಲ್ಲಾ ಆರೋಪಿಗಳು 25ರಿಂದ 30ರ ಆಸುಪಾಸಿನ ವಯಸ್ಸಿನವರಾಗಿದ್ದಾರೆ. ಶಿಕ್ಷೆಗೊಳಗಾದವರು 14 ವರ್ಷ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸುವುದು ಕಡ್ಡಾಯ, ಆ ನಂತರವಷ್ಟೇ ಸನ್ನಡತೆ ಪರಿಗಣಿಸುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್‌ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಆರ್‌.ಟಿ.ಅರುಣ ವಾದ ಮಂಡಿಸಿದ್ದರು.

ಮನೆಯಲ್ಲಿದ್ದು ಚೂರಿ ಹಾಕಿಸಿದ್ದ: ವೃದ್ಧ ದಂಪತಿ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಾಕಷ್ಟು ಸಿರಿವಂತರಾಗಿದ್ದ ಉದ್ಯಮಿ ಗೋಪಾಲ ಶೆಟ್ಟಿ ಹಾಗೂ ಪತ್ನಿ ರೂಪ ಗೋಪಾಲ ಶೆಟ್ಟಿ ಅವರಿಗೆ ಧೀರಜ್‌ ಒಬ್ಬನೇ ಮಗನಾಗಿದ್ದನು. ಧೀರಜ್‌, ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆಕೆಯನ್ನೇ ಮದುವೆ ಮಾಡಿಕೊಳ್ಳುವುದಾಗಿ ಮನೆಯಲ್ಲಿ ಹೇಳುತ್ತಿದ್ದನು. ಆದರೆ ದಂಪತಿಗಳಿಗೆ ಈ ಮದುವೆ ಇಷ್ಟವಿರಲಿಲ್ಲ. ಇಷ್ಟಪಟ್ಟವಳೊಂದಿಗೆ ಮದುವೆಯಾಗಲು ತಂದೆ ತಾಯಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಸಮಾಧಾನಗೊಂಡಿದ್ದ ಧೀರಜ್‌, ಮಾರ್ಚ್‌ 8,2016ರಂದು ಮುಂಗಡ ಹಣ ನೀಡಿ ಬೆಂಗಳೂರು ಮೂಲದ ಹಂತಕರಿಗೆ ಸುಪಾರಿ ನೀಡಿದ್ದನು. ಹತ್ಯೆಯಾದ ದಿನ ರಾತ್ರಿ ತಾನು ಮನೆಯಲ್ಲಿರಲಿಲ್ಲ, ಟೀ ಕುಡಿಯಲು ಹೊರಗಡೆ ಹೋಗಿದ್ದೆ ಎಂದು ಪೊಲೀಸರ ಬಳಿ ಸುಳ್ಳು ಹೇಳಿದ್ದನು. ತನಿಖೆ ಸಂದರ್ಭದಲ್ಲಿ ಹತ್ಯೆ ವೇಳೆ ಈತ ಮನೆಯಲ್ಲೇ ಇದ್ದ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಾಯಿ ಬಿಟ್ಟಿದ್ದನು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ