ಆ್ಯಪ್ನಗರ

ಮದ್ಯ ನಿಷೇಧಕ್ಕೆ ಆಗ್ರಹಿಸಿ ಜ.30ಕ್ಕೆ ವಿಧಾನಸೌಧ ಮುತ್ತಿಗೆ

ಕರ್ನಾಟಕದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಆಗ್ರಹಿಸಿ ಸಾವಿರಾರು ಮಹಿಳೆಯರ ನೇತೃತ್ವದಲ್ಲಿ ಬೆಂಗಳೂರು ಚಲೋ ನಡೆಯುತ್ತಿದ್ದು, ಆಂದೋಲವನ್ನು ಮತ್ತಷ್ಟು ಬಲಗೊಳಿಸಲು ಜ.30 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಸಮಿತಿ ಅಧ್ಯಕ್ಷೆ ಸ್ವರ್ಣ ಭಟ್‌ ತಿಳಿಸಿದರು.

Vijaya Karnataka 28 Jan 2019, 9:40 pm
ಮದ್ಯನಿಷೇಧಕ್ಕೆ ಆಗ್ರಹಿಸಿ ಬೆಂಗಳೂರು ಚಲೋ; 500 ಮಹಿಳೆಯರಿಂದ ಜೈಲಿಗೆ ಪ್ರವೇಶ
Vijaya Karnataka Web demand for alcohol ban protest on jan 30th in front of the vidhana soudha
ಮದ್ಯ ನಿಷೇಧಕ್ಕೆ ಆಗ್ರಹಿಸಿ ಜ.30ಕ್ಕೆ ವಿಧಾನಸೌಧ ಮುತ್ತಿಗೆ


ತುಮಕೂರು: ಕರ್ನಾಟಕದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಆಗ್ರಹಿಸಿ ಸಾವಿರಾರು ಮಹಿಳೆಯರ ನೇತೃತ್ವದಲ್ಲಿ ಬೆಂಗಳೂರು ಚಲೋ ನಡೆಯುತ್ತಿದ್ದು, ಆಂದೋಲವನ್ನು ಮತ್ತಷ್ಟು ಬಲಗೊಳಿಸಲು ಜ.30 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಸಮಿತಿ ಅಧ್ಯಕ್ಷೆ ಸ್ವರ್ಣ ಭಟ್‌ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಸೇವನೆಯಿಂದಾಗುವ ಅನಾಹುತ ತಡೆಯಲು ಕರ್ನಾಟಕದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಬೇಕು ಎಂದು ಸಾವಿರಾರು ಮಹಿಳೆಯರು ಜ.19 ರಂದು ಚಿತ್ರದುರ್ಗದಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಈ ಜಾಥಾ ಮಹಾತ್ಮ ಗಾಂಧೀಜಿ ಹುತಾತ್ಮ ದಿನ ಜ.30ರಂದು ಬೆಂಗಳೂರು ತಲುಪಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ ಎಂದರು.

ಈಗಾಗಲೇ ಬೆಂಗಳೂರು ಚಲೋ ಪಾದಯಾತ್ರೆ ತುಮಕೂರಿಗೆ ಆಗಮಿಸಿದ್ದು ಹೋರಾಟ ತೀವ್ರಗೊಳಿಸುವುದಕ್ಕಾಗಿ ಶನಿವಾರ ಸಿದ್ಧಗಂಗಾ ಮಠದಲ್ಲಿ ಸಾಣೇಹಳ್ಳಿ ಶ್ರೀಗಳ ನೇತೃತ್ವದಲ್ಲಿ ಬಹಿರಂಗ ಸಭೆ ನಡೆಸಲಾಗಿದೆ. ಸಭೆಯಲ್ಲಿ ರಂಗಕರ್ಮಿ ಪ್ರಸನ್ನ, ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ, ಮದ್ಯ ನಿಷೇಧ ಆಂದೋಲನದ ರಾಜ್ಯ ಹೋರಾಟಗಾರ ಅಭಯ್‌ ಅವರು ಭಾಗವಹಿಸಿದ್ದರು. ಸಭೆಯ ನಿರ್ಣಯದಂತೆ ಮದ್ಯ ನಿಷೇಧ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಜೈಲ್‌ ಭರೋ ಚಳುವಳಿ: ಮದ್ಯ ನಿಷೇಧ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸಲು ಮತ್ತು ಮಹಿಳೆಯರಿಗೆ ಆಗುತ್ತಿರುವ ಸಮಸ್ಯೆಗಳಿಂದ ಮುಕ್ತರಾಗಲು ಜ.30ರಂದು ರಾಜ್ಯದ ಹೆಸರಾಂತ ಅನೇಕ ಗಣ್ಯರು 500 ಮಹಿಳೆಯರೊಂದಿಗೆ ಜೈಲ್‌ ಭರೋ ಚಳುವಳಿ ನಡೆಸಲಿದ್ದಾರೆ. ಉಳಿದಂತೆ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಇದೇ ಚಳುವಳಿ ಮುಂದುವರೆಯಲಿದೆ. ಸಂವಿಧಾನ ಉಲ್ಲಂಘನೆ ಮಾಡುತ್ತಿರುವ ಸರಕಾರಕ್ಕೆ ತಮ್ಮ ಗ್ರಾಮಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯದ ಬಾಟಲಿಗಳನ್ನು ತಂದು ರಾಶಿಹಾಕಿ ಸುಡಲಾಗುತ್ತದೆ ಎಂದರು.

ಕ್ಯಾರೆ ಎನ್ನದ ಸರಕಾರ: ಮದ್ಯ ನಿಷೇಧಕ್ಕೆ ಆಗ್ರಹಿಸಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ 2,500 ರಿಂದ 3,000 ಮಹಿಳೆಯರು ಚಿತ್ರದುರ್ಗದಿಂದ ನಡೆಸುತ್ತಿರುವ ಬೆಂಗಳೂರು ಚಲೋ ಪಾದಯಾತ್ರೆ 130 ಕಿಮೀ ಕ್ರಮಿಸಿ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಯಾವೊಬ್ಬ ಜನಪ್ರತಿನಿಧಿಯೂ, ಸರಕಾರವೂ, ವಿರೋಧ ಪಕ್ಷಷದವರೂ ಸಹ ನಮ್ಮ ತಮ್ಮ ಅಭಿಪ್ರಾಯ ಕೇಳಿಲ್ಲ ಮತ್ತು ಅವರ ಅಭಿಪ್ರಾಯ ತಿಳಿಸಿಲ್ಲ. ಇದರಿಂದ ಮಹಿಳೆಯರ ಕಿಚ್ಚು, ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ ಎಂದು ಸಮಿತಿಯ ಮೋಕ್ಷಮ್ಮ ಕಿಡಿಕಾರಿದರು.

ಯಾರ್ಯಾರ ಬೆಂಬಲ: ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮಕ್ಕೆ ರಾಜ್ಯದ ಜನತೆ, ಸಂಘ ಸಂಸ್ಥೆಗಳು, ಹೋರಾಟಗಾರರು, ವಿದ್ಯಾರ್ಥಿಗಳು, ಯುವಜನರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಕೈಜೋಡಿಸಿದ್ದು ಮತ್ತಷ್ಟು ಬಲಬಂದಿದೆ. ಅಲ್ಲದೇ ನಾಡಿನ ನಾನಾ ಶರಣ ಸಂತರು, ಸಾಹಿತಿಗಳು, ಚಿಂತಕರು, ವಿಮರ್ಶಕರು ಕೈ ಜೋಡಿಸಿದ್ದಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಂಗಕರ್ಮಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪ್ರಸನ್ನ, ಬೆಳಗಾವಿಯ ಸುವರ್ಣ, ಬಾದಾಮಿಯ ಗಂಗಮ್ಮ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ