ಆ್ಯಪ್ನಗರ

ಕಟ್ಟಕಡೆಯ ವ್ಯಕ್ತಿಗೆ ಆದ್ಯತೆ ನೀಡುವುದೇ ಪ್ರಜಾಪ್ರಭುತ್ವ; ಅದೇ ಜನಪದ

ಸಿರಾದಲ್ಲಿ ನಡೆದ ಗಡಿನಾಡ ಜಾನಪದ ಸಮ್ಮೇಳನದಲ್ಲಿ ಬರಗೂರು ರಾಮಚಂದ್ರಪ್ಪ ಅಭಿಮತ

Vijaya Karnataka 21 Feb 2019, 5:00 am
ಸಿರಾ (ಬರಗೂರು):
Vijaya Karnataka Web democracy is the priority of the last person the same folklore
ಕಟ್ಟಕಡೆಯ ವ್ಯಕ್ತಿಗೆ ಆದ್ಯತೆ ನೀಡುವುದೇ ಪ್ರಜಾಪ್ರಭುತ್ವ; ಅದೇ ಜನಪದ


ಕಟ್ಟಕಡೆಯ ಮನುಷ್ಯನಿಗೆ ಮೊಟ್ಟ ಮೊದಲ ಆದ್ಯತೆ ನೀಡುವುದೇ ಪ್ರಜಾಪ್ರಭುತ್ವ, ಅದೇ ಜನಪದ. ಈ ಜನಪದವನ್ನು ಮೌಢ್ಯರಹಿತ ಸಂಸ್ಕೃತಿಯನ್ನಾಗಿ ರೂಪಿಸಲು, ಪ್ರಜಾಸತ್ತಾತ್ಮಕ ಸಮಾಜವನ್ನು, ಜನಪದ ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ತಾಲೂಕಿನ ಬರಗೂರಿನ ಶ್ರೀಆಂಜನೇಯ ವಿದ್ಯಾಸಂಸ್ಥೆ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ತು ವತಿಯಿಂದ ಬುಧವಾರ ಏರ್ಪಡಿಸಿದ್ದ ಗಡಿನಾಡ ಜಾನಪದ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ತೆ ವಹಿಸಿ ಮಾತನಾಡಿದ ಅವರು, ಜನಪದದಲ್ಲೂ ನಾವು ಮೇಲು ಕೀಳನ್ನು ಹುಡುಕುತ್ತೇವೆ. ಒಂದು ಮೇಲು ಇನ್ನೊಂದನ್ನು ಕೀಳು ಎನ್ನುತ್ತೇವೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ. ದೇಶದಲ್ಲಿ ಜಾತಿಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಸಂಘರ್ಷ ಮಾಡುತ್ತಿದ್ದೇವೆ. ರಾಜಕೀಯ ಪಕ್ಷ ಗಳ ಹೆಸರಿನಲ್ಲಿ ಸಂಘರ್ಷ ಮಾಡುತ್ತಿದ್ದೇವೆ. ಇಲ್ಲಿ ಎಲ್ಲರ ಮುಂದಿರುವುದು ಕೇವಲ ವೋಟು ಎನ್ನುವ ಸಂಖ್ಯೆ. ಸಂಸದರು ಮತ್ತು ಶಾಸಕರು ಕೇವಲ ಸಂಖ್ಯೆಗಳಾಗಿದ್ದಾರೆ. ಸರಕಾರ ನಡೆಸಲು ಎಷ್ಟು ಸಂಖ್ಯೆಗಳು ಬೇಕು ಎಂದು ಯೋಚಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳಲ್ಲ ಮುಖ್ಯ, ಮನುಷ್ಯರು ಮುಖ್ಯ. ಮನುಷ್ಯತ್ವವನ್ನು ಉಳ್ಳ ಮನುಷ್ಯನಿಂದ ಉತ್ತಮ ಆಡಳಿತ ನೀಡಲು ಸಾಧ್ಯ ಎಂದರು.

ಬಂಡವಾಳಶಾಯಿಗಳು: ಜನಪದರ ಭಕ್ತಿ ಭಾವುಕವಾದುದು. ಕಲ್ಲಿಟ್ಟು ದೇವಸ್ಥಾನ ಕಟ್ಟುವವರು ಬಂಡವಾಳದಾರರು. ಹಳ್ಳಿಯ ರೈತ ಉಳುಮೆ ಮಾಡುವಾಗ ನೇಗಿಲಿಗೆ ಪೂಜಿಸಿ ಮುಂದೆ ಹೋಗುತ್ತಾನೆ. ಅಲ್ಲಿ ನಿಜವಾದ ಭಕ್ತಿ ಇದೆ. ಜನಪದರು ದೇವರನ್ನು ಆರಾಧಿಸಲೂ ಬಲ್ಲರು, ದೇವರನ್ನು ಬೈಯಬಲ್ಲರು. ದೇವರ ಜತೆಯಲ್ಲಿ ಮಾತನಾಡುವ ಶಕ್ತಿ ಮತ್ತು ಧೈರ್ಯ ಇರುವುದು ಗ್ರಾಮೀಣ ಜನರಲ್ಲಿ ಮಾತ್ರ. ದೇವರನ್ನು ಮತ್ತು ಧರ್ಮವನ್ನು ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವವರು ಬಂಡವಾಳಶಾಯಿಗಳು ಎಂದರು.

ಗೌರವಿಸಬೇಕು: ನಮ್ಮಲ್ಲಿ ಬರೆಯುವ ಬರಹಗಾರರು ಬರೆಯದ ಬರಹಗಾರರಿಗೆ ಗೌರವ ಕೊಡಬೇಕು. ನರ್ತಿಸುವ ನೃತ್ಯಗಾರರು, ನರ್ತಿಸದವರ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಹಾಡುವವರು ಹಾಡುಗಾರರು, ಹಾಡದ ಹಾಡುಗಾರರ ಬಗ್ಗೆ ಗೌರವ ಕೊಡಬೇಕು. ಜನಪದ ಮೌಲ್ಯ ಎಂಬುದು ಕೇವಲ ಕಥೆಗಳಲ್ಲಿ ಅಷ್ಟೆ ಅಲ್ಲ ನಿಸರ್ಗದಲ್ಲಿದೆ ಎಂಬುದನ್ನು ಮರೆಯಬಾರದು. ಜನಪದ ಕಲಾವಿದರನ್ನು ಹೆಚ್ಚು ಗೌರವಿಸಬೇಕು. ಯಾವತ್ತು ಜನಪದ ಕಲಾವಿದರನ್ನು ಗೌರವಿಸುತ್ತೇವೆಯೋ ಅಂದು ಜನಪದ ಕಲೆಗೆ ಬೆಲೆ ಬರುತ್ತದೆ. ಇಂದು ಸರಕಾರಗಳು ಜನಪದ ಕಲಾವಿದರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇಂದು ಜನಪದ ಕಲಾವಿದರನ್ನು ಕೀಳು ಎಂದು ಭಾವಿಸಲಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ, ವಿದ್ಯಾವಂತರಾದವರು ಅವರನ್ನು ಗುರುತಿಸಿ ಗೌರವಿಸಬೇಕಿದೆ ಎಂದರು.

ಕನ್ನಡ ಜಾನಪದ ಪರಿಷತ್‌ ರಾಜ್ಯಾಧ್ಯಕ್ಷ ಡಾ.ಎಸ್‌.ಬಾಲಾಜಿ ಮಾತನಾಡಿ, ಜನಪದ ಕಲೆಯನ್ನು ಉಳಿಸಿ, ಅದರ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಸರಕಾರವು ಜನಪದ ಕಲಾವಿದರನ್ನು ಹೆಚ್ಚು ಗೌರವಿಸಬೇಕು. ಮಾಸಿಕ ಗೌರವಧನ ಹೆಚ್ಚಿಸಬೇಕು, ಪಠ್ಯದಲ್ಲಿ ಜನಪದ ಸೇರಿಸಬೇಕು, ಜನಪದ ಸಮ್ಮೇಳನಗಳನ್ನು ಪ್ರತಿ ವರ್ಷ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಏರ್ಪಡಿಸಲು ಸಹಕಾರ ನೀಡಬೇಕು ಎಂದರು.

ಸಂಸದ ಬಿ.ಎನ್‌.ಚಂದ್ರಪ್ಪ ಮಾತನಾಡಿ, ಜಾನಪದ ಕಲೆ ನಮ್ಮ ನಾಡಿನ ಜನರಲ್ಲಿ ಹಾಸುಹೊಕ್ಕಾಗಿದೆ. ಜನಪದ ಕಲಾವಿದರಲ್ಲಿ ಉತ್ತಮ ಮಾನವೀಯ ಗುಣಗಳನ್ನು ನಾವು ಕಾಣಬಹುದು. ಜಾನಪದ ಕಲೆ ಇಂದು ಉಳಿದಿರುವುದು ಗ್ರಾಮೀಣ ಜನರಿಂದ ಎಂದರು.

ಮೆರವಣಿಗೆ: ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರನ್ನು ಬರಗೂರು ಗ್ರಾಮ ಪಂಚಾಯಿತಿಯಿಂದ ನೊಳಂಬವಾಡಿ ವೇದಿಕೆಯವರೆಗೆ ನಾನಾ ಜಾನಪದ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಸಮ್ಮೇಳನದ ಸ್ಥಳಕ್ಕೆ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್‌, ಪ್ರೆಸಿಡೆನ್ಸಿ ಸಮೂಹ ಶಿಕ್ಷ ಣ ಸಂಸ್ಥೆಗಳ ಅಧ್ಯಕ್ಷ ಚಿದಾನಂದ್‌.ಎಂ.ಗೌಡ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ, ಅಂತಾರಾಷ್ಟ್ರೀಯ ಚಿತ್ರ ಕಲಾವಿದ ನಾರಾಯಣ್‌.ಎಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ, ಡಾ.ಮಂಜುನಾಥ ಬೇವಿನಕಟ್ಟಿ, ಕುವೆಂಪು ವಿವಿಯ ಡಾ.ಬಸವರಾಜ ನೆಲ್ಲಿಸರ, ಡಾ.ರಂಗಾರೆಡ್ಡಿ ಕೋಡಿರಾಂಪುರ, ಕಸಾಪ ತಾಲೂಕು ಅಧ್ಯಕ್ಷ ಡಾ.ನಂದೀಶ್ವರ್‌, ಜಿಲ್ಲಾ ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಶ್ರೀನಿವಾಸಮೂರ್ತಿ, ತಾಲೂಕು ಅಧ್ಯಕ್ಷ ಹೆಂದೊರೆ ಶಿವಣ್ಣ, ಕೊಟ್ಟ ಶಂಕರ್‌, ಜಯರಾಮಕೃಷ್ಣ, ಶೇಕ್‌ ಮಹಮದ್‌ ಅಲಿ, ಬಿ.ಆರ್‌.ದೇವರಾಜು ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ