ಆ್ಯಪ್ನಗರ

ರೈತ ವಿರೋಧಿ ಕಾಯಿದೆ ಖಂಡಿಸಿ ಹೆದ್ದಾರಿ ಬಂದ್‌

ರಾಜ್ಯ ಸರಕಾರ ರೈತರ ಹೋರಾಟವನ್ನು ಪೊಲೀಸ್‌ ಬಲದ ಮೂಲಕ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ರಾಜ್ಯ ಸರಕಾರ ಭೂಸ್ವಾಧೀನ ಕಾಯಿದೆ ತಿದ್ದುಪಡಿಯನ್ನು ಕೈಬಿಡಬೇಕು. ಇದನ್ನು ಹಿಂಪಡೆಯುವವರೆಗೂ ಹೋರಾಟ ನಿಲ್ಲದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್‌ ಎಚ್ಚರಿಕೆ ನೀಡಿದರು.

Vijaya Karnataka 11 Jun 2019, 5:00 am
ತುಮಕೂರು: ರಾಜ್ಯ ಸರಕಾರ ರೈತರ ಹೋರಾಟವನ್ನು ಪೊಲೀಸ್‌ ಬಲದ ಮೂಲಕ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ರಾಜ್ಯ ಸರಕಾರ ಭೂಸ್ವಾಧೀನ ಕಾಯಿದೆ ತಿದ್ದುಪಡಿಯನ್ನು ಕೈಬಿಡಬೇಕು. ಇದನ್ನು ಹಿಂಪಡೆಯುವವರೆಗೂ ಹೋರಾಟ ನಿಲ್ಲದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್‌ ಎಚ್ಚರಿಕೆ ನೀಡಿದರು.
Vijaya Karnataka Web farmers opposing land acquisition act protest in streets
ರೈತ ವಿರೋಧಿ ಕಾಯಿದೆ ಖಂಡಿಸಿ ಹೆದ್ದಾರಿ ಬಂದ್‌


ನಗರದ ಹೊರವಲಯದ ಕ್ಯಾತ್ಸಂದ್ರ ಟೋಲ್‌ ಬಳಿ ರೈತ ವಿರೋಧಿ ಭೂಸ್ವಾಧೀನ ತಿದ್ದುಪಡಿ ಕಾಯಿದೆಯನ್ನು ರಾಜ್ಯ ಸರಕಾರ ಕೂಡಲೇ ಹಿಂಬಪಡೆಯಬೇಕು, ಸರಕಾರಿ ಉಪಯೋಗಕ್ಕೆ ರೈತರ ಭೂಮಿ ಪಡೆಯುವಾಗ ಬಾಡಿಗೆ ರೂಪದಲ್ಲಿ ಪಡೆಯಲು ಒತ್ತಾಯಿಸುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಬೀದಿಗೆ ತಳ್ಳುತ್ತಿದೆ. ಈ ದೇಶಕ್ಕೆ ಅನ್ನ, ಹಾಲು ನೀಡುವ ರೈತರ ವಿರುದ್ಧ ಸರಕಾರಗಳು, ವೈಜ್ಞಾನಿಕ ಪರಿಹಾರ ನೀಡದೆ ಹಿಡಿಗಂಟಿನ ರೂಪದಲ್ಲಿ ಬಿಡಿಗಾಸು ನೀಡಿ ಅಪಮಾನ ಮಾಡುತ್ತಿದೆ. ಈ ಕಾಯಿದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಖಾರವಾಗಿ ಹೇಳಿದರು.

ಸರಕಾರಕ್ಕೆ ಎಚ್ಚರಿಕೆ: ಕೇಂದ್ರ ಸರಕಾರ 2013ರಲ್ಲಿ ರೈತರ ಹಿತದೃಷ್ಟಿಯನ್ನಿಟ್ಟುಕೊಂಡು ಜಾರಿಗೆ ತಂದಿದ್ದ ಭೂ ಸ್ವಾಧೀನ ಕಾಯಿದೆಗೆ, ಮಣ್ಣಿನ ಮಕ್ಕಳೆಂದು ಹೇಳುವ ಎಚ್‌.ಡಿ.ಕುಮಾರಸ್ವಾಮಿ ಅವರು ಉದ್ಯಮಿಗಳ ಪರವಾದ ನಿಲುವುಗಳನ್ನು ತಾಳಿ, ಹಲವು ಮಾರ್ಪಾಡುಗಳನ್ನು ಮಾಡಿದ್ದಾರೆ. ಇದರಿಂದ ಸಣ್ಣ ಸಣ್ಣ ಹಿಡುವಳಿದಾರರು ಇರುವ ಭೂಮಿ ಕಳೆದುಕೊಂಡು ಬೀದಿಪಾಲಾಗುವ ಸ್ಥಿತಿ ಬಂದಿದೆ. ರೈತ ವಿರೋಧಿ ಧೋರಣೆಗಳನ್ನು ತಾಳಿ ಸಿದ್ದರಾಮಯ್ಯ ಸರಕಾರ ಅನುಭವಿಸಿದ ಹಿನ್ನಡೆಯನ್ನೇ ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರಕಾರವೂ ಇದೇ ಸ್ಥಿತಿ ಅನುಭವಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಬೀದಿಗೆ ತಳ್ಳಿದ ಸರಕಾರ:
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್‌ ಮಾತನಾಡಿ, ರಾಜ್ಯ ಸರಕಾರ ಭೂ ಮಾಲೀಕರು ಮತ್ತು ಉದ್ದಿಮೆದಾರರ ನಡುವಿನ ದಲ್ಲಾಳಿಯಂತೆ ಕೆಲಸ ಮಾಡುತ್ತಿದೆ. ರೈತರ ಫಲವತ್ತಾದ ಭೂಮಿ ವಶಪಡಿಸಿಕೊಂಡು ರಿಯಲ್‌ಎಸ್ಟೇಟ್‌ ಉದ್ಯಮಿಗಳಿಗೆ ನೀಡಿ, ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಇದು ಖಂಡನೀಯ. ಮುಂದಿನ ದಿನಗಳಲ್ಲಿ ಈ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಮ್ಮಿಕೊಂಡಿದ್ದ ಹೆದ್ದಾರಿ ತಡೆಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ನಗರದ ಜಾಸ್‌ಟೋಲ್‌ ಬಳಿ ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ರಸ್ತೆ ತಡೆದ ರೈತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಟೋಲ್‌ ಬಳಿ ಸಮಾವೇಶಗೊಂಡ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ರೈತರು, ಹೆದ್ದಾರಿ ತಡೆದು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಕೂಡಲೇ ರಾಜ್ಯ ಸರಕಾರ ಭೂಸ್ವಾಧೀನ ಕಾಯಿದೆಗೆ ತಂದಿರುವ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಧನಂಜಯ ಆರಾಧ್ಯ, ಕೊರಟಗೆರೆ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಸಿದ್ದರಾಜು, ತುರುವೇಕೆರೆ ತಾಲೂಕು ಅಧ್ಯಕ್ಷ ಹಳೆಸಂಪಿಗೆ ಕೀರ್ತಿ, ಪ್ರಸನ್ನ, ಲಕ್ಕಣ್ಣ, ಬೆಟ್ಟೇಗೌಡ, ವೆಂಕಟೇಶ್‌ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. 45 ನಿಮಿಷಗಳಿಗೂ ಹೆಚ್ಚು ಕಾಲ ಹೆದ್ದಾರಿ ತಡೆದ ರೈತರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ