ಆ್ಯಪ್ನಗರ

ಜೆಡಿಎಸ್‌ ಶಾಸಕರ ಬಿಜೆಪಿ ಹೊಗಳಿಕೆ, ಜಿಟಿಡಿ ಆಯ್ತು ಈಗ ಗುಬ್ಬಿ ಶಾಸಕರ ಸರದಿ

“ನಮ್ಮ ಪಕ್ಷದ ರೀತಿ ಬಿಜೆಪಿಯಲ್ಲಿ ಅತೃಪ್ತರು ಕಿತ್ತಾಡುವುದು, ರಾಜೀನಾಮೆ ಕೊಡುವುದು ನಡೆಯುವುದಿಲ್ಲ. ಬಿಜೆಪಿಯವರಿಗೆ ಅವರದ್ದೇ ಆದ ಸಿದ್ಧಾಂತ ಇದೆ. ಶಿಸ್ತು ಇದೆ. ಹೈಕಮಾಂಡ್ ಬಿಗಿಯಾಗಿದೆ. ಹಾಗಾಗಿ ಸರ್ಕಾರ ಪೂರ್ಣ ಅವಧಿ ಮಗಿಸಲಿದೆ,” - ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌.

Vijaya Karnataka Web 13 Sep 2019, 8:23 pm
ತುಮಕೂರು: ಹಿರಿಯ ಜೆಡಿಎಸ್‌ ನಾಯಕ ಜಿ.ಟಿ. ದೇವೇಗೌಡ ಬಿಜೆಪಿಯನ್ನು ಹಾಡಿ ಹೊಗಳಿದ್ದು, ಹೊಗಳುತ್ತಿರುವುದು ಹಳೇ ಕಥೆ. ಇದೀಗ ಈ ಸಾಲಿಗೆ ಮತ್ತೋರ್ವ ದಳ ಶಾಸಕರು ಸೇರ್ಪಡೆಯಾಗಿದ್ದಾರೆ.
Vijaya Karnataka Web SR Srinivas


ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ರಾಜ್ಯ ಬಿಜೆಪಿ ಸರಕಾರಕ್ಕೆ ಪೂರ್ಣ ಅಂಕ ನೀಡಿದ್ದಾರೆ. ಸ್ವತಃ ಬಿಜೆಪಿಗರಿಗೆ ಈ ಧೈರ್ಯ ಇದೆಯೋ ಗೊತ್ತಿಲ್ಲ, ಆದರೆ ಶ್ರೀನಿವಾಸ್‌ ಮಾತ್ರ ‘ನೂರಕ್ಕೆ ನೂರು ರಾಜ್ಯ ಬಿಜೆಪಿ ಸರಕಾರ ಇನ್ನುಳಿದ ಅವಧಿ ಪೂರೈಸಲಿದೆ’ ಎಂದಿದ್ದಾರೆ.

“ನಮ್ಮ ಪಕ್ಷದ ರೀತಿ ಬಿಜೆಪಿಯಲ್ಲಿ ಅತೃಪ್ತರು ಕಿತ್ತಾಡುವುದು, ರಾಜೀನಾಮೆ ಕೊಡುವುದು ನಡೆಯುವುದಿಲ್ಲ. ಬಿಜೆಪಿಯವರಿಗೆ ಅವರದ್ದೇ ಆದ ಸಿದ್ಧಾಂತ ಇದೆ. ಶಿಸ್ತು ಇದೆ. ಹೈಕಮಾಂಡ್ ಬಿಗಿಯಾಗಿದೆ. ಹಾಗಾಗಿ ಸರ್ಕಾರ ಪೂರ್ಣ ಅವಧಿ ಮಗಿಸಲಿದೆ,” ಎಂದು ಅವರು ಇದಕ್ಕೆ ವಿವರಣೆ ಬೇರೆ ನೀಡಿದ್ದಾರೆ.

ತಮ್ಮ ಮಾತಿನ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿದ ಅವರು, “ನಾನು ಎಲ್ಲವನ್ನೂ ತಿಳಿದುಕೊಂಡೇ ಹೇಳಿದ್ದು. ಬೇರೆ ಪಕ್ಷಕ್ಕೂ ಬಿಜೆಪಿಗೂ ಹೋಲಿಕೆ ಮಾಡಬೇಡಿ. ಬಿಗಿಯಾದ ಹೈ ಕಮಾಂಡ್ ಇರೋದ್ರಿಂದ ಅವರು ಹೇಳಿದ ರೀತಿಯಲ್ಲಿ ರಾಜ್ಯದಲ್ಲಿ ಸರಕಾರ ನಡೀತಿದೆ,” ಎಂದಿದ್ದಾರೆ. “ಆರಂಭದಲ್ಲಿ ಅಸಮಾಧಾನ ಹೊರಹಾಕಿದ್ದ ಸಿ.ಟಿ.ರವಿ, ಉಮೇಶ್ ಕತ್ತಿ, ಆರ್. ಅಶೋಕ್ ಈಗ ಬಾಲ ಮುದುಡಿಕೊಂಡು ಸುಮ್ಮನಾಗಿಲ್ಲವೇ? ಹಾಗಾಗಿ ಬಿಜೆಪಿ ಸರ್ಕಾರಕ್ಕೆ ಏನೂ ಆಗಲ್ಲ,” ಎಂದವರು ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿರುವ ಅವರು, “ಪಕ್ಷದ ನಡವಳಿಕೆಯಿಂದ ನನಗೆ ಬೇಜಾರಾಗಿದೆ. ಮುಂದಿನ ದಿನದಲ್ಲಿ ಎಲ್ಲವನ್ನು ಹೇಳುತ್ತೇನೆ. ತನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ. ಏಕೆ ಕೊಟ್ಟಿಲ್ಲ ಎಂದು ಕುಮಾರಸ್ವಾಮಿಗೆ ಗೊತ್ತು. ಮೈತ್ರಿ ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಅಲ್ಲಿ ಅವರ ನಡವಳಿಕೆ ಮುಖ್ಯವಾಗಿತ್ತು. ಆ ಸಂದರ್ಭದಲ್ಲಿ ಅವರು ಸರಿಯಾಗಿ ನಡೆದುಕೊಂಡಿಲ್ಲ. ಹಾಗಂತ ದೇವೇಗೌಡರು ನಿರಂತರ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಬಗ್ಗೆ ನಾನು ಏನು ಹೇಳಲ್ಲ. ಅವರು ದೊಡ್ಡ ನಾಯಕರು,” ಎಂದು ಎಸ್. ಆರ್‌. ಶ್ರೀನಿವಾಸ್ ವ್ಯಂಗ್ಯವಾಡಿದ್ದಾರೆ.

ಇನ್ನು ಶ್ರೀನಿವಾಸ್‌ ಕುಮಾರಸ್ವಾಮಿ ಆಪ್ತ ಎಂದವರಿಗೆ ಉತ್ತರ ನೀಡಿರುವ ಅವರು, “ನನ್ನ ಮನಸ್ಸಿನಲ್ಲಿರೋದು ಏನು ಎಂದು ನಿಮಗೆ ಹೇಗೆ ಗೊತ್ತಾಗುತ್ತದೆ. ಎದುರಿಗೆ ನಗ್ತಾ ಮಾತಾಡ್ತಿವಿ, ಸಿಕ್ಕಿದಾಗಲೆಲ್ಲಾ ಚೆನ್ನಾಗಿ ಮಾತಾಡ್ತಿವಿ ಅಂದ್ರೆ ಅವರ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ಎಂದು ಹೇಗೆ ಹೇಳ್ತಿರಾ?” ಎಂಬುದಾಗಿ ಮರು ಪ್ರಶ್ನೆ ಹಾಕಿದ್ದಾರೆ. ಆದರೆ ನಾನು 7 ಜನರೊಂದಿಗೆ ಬಿಜೆಪಿಗೆ ಹೋಗುತ್ತೇನೆ ಅನ್ನುವ ವದಂತಿ ಸುಳ್ಳು ಎಂದಿರುವ ಅವರು, ಈ ಅವಧಿಯಲ್ಲಿ ಯಾವ ಕಾರಣಕ್ಕೂ ಪಕ್ಷ ತೊರೆಯಲ್ಲ ಎಂದಿದ್ದಾರೆ.

“ವಿಧಾನಸಭೆಯ ಈ ಅವಧಿವರೆಗೂ ಪಕ್ಷದಲ್ಲಿ ಇರುತ್ತೇನೆ ಎಂದು ಹೇಳಿ ಬಂದಿದ್ದೇನೆ. ಈ ಸಮಯದಲ್ಲಿ ಪಕ್ಷ ಬಿಡುವುದಿಲ್ಲ ಎಂದು ಕುಮಾರಸ್ವಾಮಿಗೆ ಹೇಳಿದ್ದೇನೆ. ಈ ಅವಧಿ ಬಳಿಕ ರಾಜಕೀಯ ನಿವೃತ್ತಿ ಪಡೀಬೇಕು ಎಂದುಕೊಂಡಿದ್ದೇನೆ,” ಎಂಬುದಾಗಿ ಅವರು ತಮ್ಮ ಭವಿಷ್ಯದ ನಿರ್ಧಾರಗಳನ್ನು ಬಿಚ್ಚಿಟ್ಟಿದ್ದಾರೆ.

ಇದು ಶಾಸಕರು ಬಿಜೆಪಿಯತ್ತ ವಾಲುತ್ತಿರುವುದರ ಬಹಿರಂಗ ಸೂಚನೆಯಾ ಎಂಬ ಪ್ರಶ್ನೆ ಈ ಹಂತದಲ್ಲಿ ಉದ್ಭವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ