ಆ್ಯಪ್ನಗರ

ರಂಗಾಪುರ ಶ್ರೀಗಳಿಗೆ ಅದ್ಧೂರಿ ಗುರುವಂದನೆ

ವಸಂತಮಾಸದಂತೆ ಸಿಂಗಾರಗೊಂಡಿದ್ದ ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಸೋಮವಾರ ಕೆರೆಗೋಡಿ ರಂಗಾಪುರ ಶ್ರೀಗಳಿಗೆ ಅದ್ಧೂರಿಯಾಗಿ ಗುರುವಂದನೆ ನಡೆಯಿತು.

Vijaya Karnataka 20 Nov 2018, 6:12 pm
ತಿಪಟೂರು: ವಸಂತಮಾಸದಂತೆ ಸಿಂಗಾರಗೊಂಡಿದ್ದ ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಸೋಮವಾರ ಕೆರೆಗೋಡಿ ರಂಗಾಪುರ ಶ್ರೀಗಳಿಗೆ ಅದ್ಧೂರಿಯಾಗಿ ಗುರುವಂದನೆ ನಡೆಯಿತು.
Vijaya Karnataka Web guruvandane to rangapura shree
ರಂಗಾಪುರ ಶ್ರೀಗಳಿಗೆ ಅದ್ಧೂರಿ ಗುರುವಂದನೆ


ಹಳೆ ವಿದ್ಯಾರ್ಥಿಗಳು, ಭಕ್ತಾದಿಗಳು ಸೇರಿ ವಿಜೃಂಭಣೆಯ ಬೈಕ್‌ ರಾರ‍ಯಲಿಯ ಮೂಲಕ ತಿಪಟೂರಿನ ಗ್ರಾಮದೇವತೆ ಕೆಂಪಮ್ಮ ದೇವಾಲಯದ ಬಳಿ ಸಮಾವೇಶಗೊಂಡು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಉತ್ಸವವು 1001 ಪೂರ್ಣಕುಂಭ ಸ್ವಾಗತದೊಂದಿಗೆ, ಕಹಳೆ, ನಗಾರಿವಾದ್ಯ, ನಂದಿಧ್ವಜ ಸೇರಿದಂತೆ ನಾನಾ ಜಾನಪದ ಕಲಾತಂಡಗಳೊಂದಿಗೆ ವೇದಿಕೆಗೆ ಆಗಮಿಸಿ, ನಾಡಿನ ಮಠಾಧೀಶರು ಮತ್ತು ಒಂದು ಲಕ್ಷ ದಷ್ಟು ಭಕ್ತಸಾಗರದ ಸಮ್ಮುಖದಲ್ಲಿ ಅದ್ಧೂರಿಯಾಗಿ ಗುರುವಂದನೆ ನೆರವೇರಿಸಲಾಯಿತು.

ಎಲ್ಲ ಮಠಗಳು ಹಲವಾರು ರೀತಿಯಲ್ಲಿ ಜನರ ಸೇವೆ ಮಾಡುತ್ತಿವೆ. ಆದರೆ ಕೆರೆಗೋಡಿ ರಂಗಾಪುರ ಸುಕ್ಷೇತ್ರದಲ್ಲಿ 5 ವಿಧಗಳಾದ ಅನ್ನ, ಆಚಾರ, ಅರಿವು, ಆರಂಭ, ಆರೈಕೆ ಇವೆಲ್ಲವನ್ನು ಮಾಡುತ್ತಿರುವ ಮಹಾನ್‌ ಮಠವಾಗಿದೆ ಎಂದು ಸಾಹಿತಿ ಈಚನೂರು ಶಾಂತವೀರಯ್ಯ ಹೇಳಿದರು.

ಸಿರಿಗೆರೆ ಬೃಹನ್ಮಠಾಧ್ಯಕ್ಷ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾನು ಇಂದು ಮೊದಲ ಬಾರಿಗೆ ಸೋಮವಾರದ ನನ್ನ ಕಾಯಕವಾದ ನ್ಯಾಯ ತೀರ್ಪನ್ನು ಬಿಟ್ಟು ಇಲ್ಲಿಗೆ ಬಂದಿದ್ದೇನೆಂದರೆ ನಾವು ಇಲ್ಲಿನ ಸ್ವಾಮಿಗಳ ಮೇಲಿಟ್ಟಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಭಗವಂತನ ಸೃಷ್ಟಿಯಲ್ಲಿ, ಸೂರ್ಯ, ಚಂದ್ರ, ಪ್ರಕೃತಿ, ಗೋವು, ಕಲ್ಪವೃಕ್ಷ ಪರೋಪಕಾರಕ್ಕಾಗಿ ನಿರ್ಮಿಸಿರುವಂತೆ ಇಲ್ಲಿನ ರಂಗಾಪುರ ಶ್ರೀಗಳು ನಿಮ್ಮೆಲ್ಲರ ಉಪಕಾರಕ್ಕಾಗಿ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇಂದು ಇಲ್ಲಿರುವ ಭಕ್ತರನ್ನು ನೋಡಿದರೆ ಗುರುವಿನ ಗುಲಾಮರಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರವಾಣಿಯು ನನಗೆ ನೆನಪಾಗುತ್ತಿದೆ ಎಂದರು.

ಗುರುವಂದನೆ ಸ್ವೀಕರಿಸಿದ ರಂಗಾಪುರ ಶ್ರೀ, ಇಂದು ನಮ್ಮ ಮಠ ಈ ಎತ್ತರಕ್ಕೆ ಏರಬೇಕಾದರೆ ನಮ್ಮ ವೃತ್ತಿಯಾದ ಭಿಕ್ಷಾಟನೆಯಿಂದಲೇ ಹೊರತು ಇನ್ನಾವುದರಿಂದಲೂ ಅಲ್ಲ. ನಮ್ಮ ಪರಂಪರೆಯೇ ಭಿಕ್ಷಾಟನೆ. ಸಕಲರಿಗೂ ಲೇಸನ್ನೇ ಬಯಸುವುದು ಬಹಳ ಮುಖ್ಯ ಎಂದು ತಿಳಿಸಿದರು.

ಸಮಾರಂಭದಲ್ಲಿ ಕಾಡಸಿದ್ಧೇಶ್ವರ ಮಠದ ಕರಿವೃಷಭದೇಶಿಕೇಂದ್ರ ಸ್ವಾಮೀಜಿ, ಗವಿಮಠದ ಚಂದ್ರಶೇಖರನಾಥ ಸ್ವಾಮೀಜಿ, ಗೋಡೆಕೆರೆ ಸಿದ್ಧರಾಮದೇಶಿಕೇಂದ್ರ ಸ್ವಾಮೀಜಿ, ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ, ಕುಪ್ಪೂರು ಗದ್ದಿಗೆಯ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಡಾ. ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ, ಮಾಡಾಳು ರುದ್ರಮುನಿ ಸ್ವಾಮೀಜಿ, ಕೋಡಿಹಳ್ಳಿ ಮಠದ ಬಸವಭೃಂಗೀಶ್ವರ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸೇರಿದಂತೆ ನಾನಾ ಮಠಗಳ ಮಠಾಧೀಶರು, ರಾಜಕೀಯ ಮುಖಂಡರು, ಭಕ್ತ ವೃಂದದವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ