*ಸಿರಾಜ್ ಅಹಮದ್ ಕೆಎ
ಕೊಡಿಗೇನಹಳ್ಳಿ
ಏಷ್ಯಾ ಖಂಡದಲ್ಲೇ ಅಪರೂಪದ ವನ್ಯಜೀವಿಗಳನ್ನು ಹೊಂದಿರುವ ಜಯಮಂಗಲಿ ವನ್ಯಧಾಮ ನೂರಾರು ಕೃಷ್ಣಮೃಗಗಳು, ನವಿಲುಗಳಿಂದ ಕೂಡಿದ್ದು, ಬೇಸಿಗೆಯಲ್ಲಿ ಪ್ರಕೃತಿ ವೀಕ್ಷಿಸಲು ಪ್ರವಾಸಿಗರಿಗೆ ಕೈ ಬೀಸಿ ಕರೆಯುತ್ತಿದೆ.
ಬಯಲುಸೀಮೆ ಪ್ರದೇಶದ ಸುಮಾರು 900 ಎಕರೆ ವ್ಯಾಪ್ತಿಯಲ್ಲಿ ಈ ವನ್ಯಧಾಮ ಆಕರ್ಷಣೀಯವಾಗಿದ್ದು, 2014ರ ಸರ್ವೆ ಪ್ರಕಾರ ಒಟ್ಟು 545 ಜಿಂಕೆಗಳು ಕಂಡು ಬಂದಿವೆ. ಕಳೆದ ವರ್ಷ ಮಳೆ ಕೈಕೊಟ್ಟಿದ್ದು ವನ್ಯ ಜೀವಿಗಳು ಆಹಾರ ಸಮತೋಲನಕ್ಕಾಗಿ ಕೃಷಿ ಭೂಮಿಯತ್ತ ಚದುರಿ ರೈತರ ಜಮೀನಿನತ್ತ ಲಗ್ಗೆ ಇಡುತ್ತಿದ್ದವು.
ಇವುಗಳ ಓಡಾಟದಿಂದ ಗ್ರಾಮ ಸುಭೀಕ್ಷೆ ಎಂಬ ನಂಬಿಕೆಯಿಂದ ರೈತರು ಮುಸುಕಿನ ಜೋಳ, ಅಲಸಂದೆ, ತೊಗರಿ ಬೆಳೆ ಇವುಗಳನ್ನು ಆಹಾರವಾಗಿ ಮೀಸಲಿಟ್ಟಿದ್ದರು. ಗಡಿಭಾಗದ ಪರಿಸರಕ್ಕೆ ವನ್ಯಧಾಮ ಅಮೂಲ್ಯವಾದ ಕಾಣಕೆಯಾಗಿದ್ದು, ಇದನ್ನು ರಕ್ಷಿಸಲು ಅರಣ್ಯ ಇಲಾಖೆ ಇದೀಗ ಪಣತೊಟ್ಟಿದೆ.
ಇತ್ತೀಚಿಗೆ ರಾಷ್ಟ್ರೀಯ ಪಕ್ಷಿ ನವಿಲು ಸಂತತಿ ಹೆಚ್ಚಾಗಿದ್ದು, ಇದರ ನರ್ತನ ನೋಡುಗರ ಕಣ್ಮನ ಸೆಳೆಯುತ್ತಿದೆ. ಇದರ ಜತೆ ಜಿಂಕೆ ಕಾಡುಹಂದಿ, ತೋಳ ಸೇರಿದಂತೆ ನೂರೆಂಟು ಪಕ್ಷಿಗಳ ಕಲರವದ ಜತೆ ಅಪರೂಪದ ಚಿಟ್ಟೆಗಳು ಕಾಣಿಸುತ್ತಿದ್ದು ವನ್ಯಮೃಗಳ ವೇಗದ ಓಟವೇ ಇವುಗಳ ಆಟ ಪಾಠವಾಗಿದೆ. ಮುಂದಿನ ತಲೆಮಾರು ನೋಡಲು ಇದು ಏಕೈಕ ತಾಣವಾಗಿದೆ.
ಇಲಾಖೆಯಿಂದ ಕಾಯಕಲ್ಪ
2016-17ರಲ್ಲಿ ನೀರಿನ ಅಭಾವದಿಂದ 60 ಎಕರೆ ವ್ಯಾಪ್ತಿಯಲ್ಲಿ ದ್ವಿದಳಧಾನ್ಯ ಹಾಗೂ ಹುಲ್ಲು ಬೆಳೆಯಲಾಗಿತ್ತು. 2017-18ನೇ ಸಾಲಿನಲ್ಲಿ 40 ಲಕ್ಷ ಅನುದಾನ ಬಿಡುಗಡೆಯಾದ ಕಾರಣ ನೂತನ 3 ಚೆಕ್ ಡ್ಯಾಂ, 6 ನೀರಿನ ತೊಟ್ಟಿಗಳ ನಿರ್ಮಾಣ, ಕಳ್ಳಬೇಟೆ ನಿಯಂತ್ರಣ ಶಿಬಿರ ಕೊಠಡಿ, ಶಿಥಿಲತಗೊಂಡ ಪರಗೋಲ ದುರಸ್ಥಿ, ನೀರಿನ ಪೈಪ್ ಲೈನ್ ಹಾಗೂ 3.5 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸಿಗರ ವಿಶ್ರಾಂತಿ ಗೃಹ ದುರಸ್ತಿ ಮಾಡಲಾಗಿದೆ. ನೀಲಗಿರಿ ತೆರವು ಮಾಡಲು ಸಿದ್ಧತೆ ನಡೆಯುತ್ತಿದ್ದು, ಈ ಜಾಗದಲ್ಲಿ ವನ್ಯ ಜೀವಿಗಳ ಆಹಾರಕ್ಕಾಗಿ 200 ಹೆಬ್ಬೆವು ಗಿಡ ಬೆಳೆಸಲಾಗುತ್ತಿದೆ. ನೆಡತೋಪು ನಿರ್ಮಿಸಿ ಹುಣಸೆ, ಅಕೇಶಿಯಾ, ಲಂಟನಾ, ಆಲಾ, ಬಸರಿ, ಬೇವು, ಹತ್ತಿ ಸೇರಿದಂತೆ ಒಟ್ಟು 1000 ಗಿಡ ಬೆಳೆಸಲು ಇಲಾಖೆ ತಯಾರಿಯಲ್ಲಿದೆ.
ಕಸದಿಂದ ಮುಕ್ತಿ ಪಡೆದ ವನ್ಯಧಾಮ:
ಬೆಂಗಳೂರಿನ ಬಿಬಿಎಂಪಿ ತ್ಯಾಜ್ಯವನ್ನು ವಿಲೇವಾರಿ ಮಾಡಲು ಇಲ್ಲಿನ ಸುಮಾರು 900 ಎಕರೆ ಜಾಗದ ಸ್ಥಳ ಪರಿಶೀಲನೆ ಮಾಡಿ, ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿತ್ತು. ಡಿಸೆಂಬರ್ 17, 2016ರಂದು ಬಿಬಿಎಂಪಿ ಅಧಿಕಾರಿಗಳ ಭೇಟಿ ನೀಡಿದ್ದು ಇಲ್ಲಿನ ರೈತರಲ್ಲಿ ಸಂಚಲನ ಮೂಡಿಸಿತ್ತು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಡಾ: ಹೆಚ್.ಎಸ್. ದೊರೆಸ್ವಾಮಿ ಭೇಟಿಯಾಗಿ 30ಕ್ಕೂ ಹೆಚ್ಚು ಗ್ರಾಮಗಳ ರೈತರೊಂದಿಗೆ ಹೋರಾಟ ಮಾಡಿದ ಪ್ರತಿಫಲವಾಗಿ ಇಂದು ತ್ಯಾಜ್ಯದಿಂದ ಮುಕ್ತಿಯಾಗಿ ವನ್ಯಜೀವಿಗಳ ರಕ್ಷೆಯಾಗಿದೆ.
ಹೋಗಲು 2 ಮಾರ್ಗ
1 ಬೆಂಗಳೂರು, ಯಲಹಂಕ, ಡಿಕ್ರಾಸ್ ಗೌರಿಬಿದನೂರು ಮೂಲಕ ಕೊಡಿಗೇನಹಳ್ಳಿ ತಲುಪಬೇಕಿದ್ದು, ಇಲ್ಲಿಂದ 12 ಕಿಮೀ ದೇವರತೋಪು, ಎಂಎಂ ಹೊಸಹಳ್ಳಿ ಬಳಿ ಬಲಕ್ಕೆ ತಿರುಗಿ 2 ಕಿಮೀ ದೂರ ಸಾಗಿದರೆ ವನ್ಯಧಾಮ ತಲುಪಬಹುದು.
2 ಬೆಂಗಳೂರು ದಾಬಸ್ಪೇಟೆ ಮೂಲಕ ಬಂದರೆ 120 ಕಿಮೀ. ಪ್ರಯಾಣಿಸಬೇಕಿದೆ. ಕೊರಟಗೆರೆ, ಮಧುಗಿರಿ ಪುರವರಕ್ಕೆ ಹೋಗಿ ಎಡಕ್ಕೆ ತಿರುಗಿ 12 ಕಿಮೀ. ಚಲಿಸಿದರೆ ವನ್ಯಧಾಮಕ್ಕೆ ತಲುಪಬಹುದು.
ನೂತನ ಬೋರ್ ಕೊರೆಸಿದ್ದು ನೀರಿನ ಲಭ್ಯತೆ ಇದೆ. ಈ ಬಾರಿ 100 ಎಕರೆ ವ್ಯಾಪ್ತಿಯಲ್ಲಿ ಹುರಳಿ, ಜೋಳ, ಅಲಸಂಧೆ ಸೇರಿದಂತೆ ಮೇವು ಬೆಳೆಸಲು ಸಿದ್ಧತೆ ಮಾಡಲಾಗಿದೆ. ಹುಲ್ಲು ಬೆಳೆಯಲು ಸ್ಟ್ರಿಂಕ್ಲರ್ ವ್ಯವಸ್ಥೆ ಮಾಡಬೇಕಿದೆ. ತುರ್ತಾಗಿ 50 ಲಕ್ಷ ರೂ. ಅನುದಾನದ ಬೇಡಿಕೆ ಇದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಅನುಕೂಲಕರವಾಗಿದೆ. ವನ್ಯಜೀವಿಗಳಿಗೆ ಯಾವುದೇ ತೊಂದರೆ ಇಲ್ಲ.
- ಚಿನ್ನಪ್ಪ, ಆರ್ಎಫ್ಒ, ಮಧುಗಿರಿ
ಸೂಚನಾಫಲಕಗಳಿಲ್ಲದೆ ಗೌರಿಬಿದನೂರು ಮುಖಾಂತರ ಬರುವ ಪ್ರವಾಸಿಗರು ದಿಕ್ಕುತಪ್ಪುತ್ತಿದ್ದಾರೆ. ಹೊಸಹಳ್ಳಿ ಗ್ರಾಮದಿಂದ ವನ್ಯಧಾಮದವರೆಗೆ ರಸ್ತೆ ಇಕ್ಕೆಲಗಳಲ್ಲಿ ಸೀಮೆ ಜಾಲಿ ಗಿಡಗಳು ಬೆಳೆದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸಂಪೂರ್ಣ ರಸ್ತೆ ಹದಗೆಟ್ಟಿದ್ದು, ಜಲ್ಲಿ ಕಲ್ಲುಗಳು ಎದ್ದು ಧೂಳಿನಿಂದ ಅಸಹನೆಗೆ ಕಾರಣವಾಗಿದೆ. ಇಲಾಖೆ ಮೂದಲು ಜಿಂಕೆ ಮತ್ತು ನವಿಲುಗಳ ಬಗ್ಗೆ ಪರಿಪೂರ್ಣ ಸರ್ವೆ ನಡೆಸಿ ಅದರ ಆಧಾರದ ಮೇಲೆ ಮೂಲಸೌಲಭ್ಯ ಒದಗಿಸಬೇಕಿದೆ.
- ಡಾ.ಕೆ.ಎನ್.ಸಿಂಹ, ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ರಾಜ್ಯ ಗೌರವಾಧ್ಯಕ್ಷ