ಆ್ಯಪ್ನಗರ

ಕೆರೆಗಳಿಗೆ ನೀರು ತುಂಬಿಸಲು ರಾಜ್ಯ ಸಮಾವೇಶ

ರಾಜ್ಯದ 38,608 ಕೆರೆಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಧಾರ್ಮಿಕ ಮುಖಂಡರನ್ನು ತುಮಕೂರಿನಲ್ಲಿ ಸೇರಿಸಿ ರಾಜ್ಯಮಟ್ಟದ ಬೃಹತ್‌ ಸಮಾವೇಶ ನಡೆಸುವ ಚಿಂತನೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

Vijaya Karnataka 1 Jul 2019, 5:00 am
ಬೆಂಗಳೂರು/ತುಮಕೂರು: ರಾಜ್ಯದ 38,608 ಕೆರೆಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಧಾರ್ಮಿಕ ಮುಖಂಡರನ್ನು ತುಮಕೂರಿನಲ್ಲಿ ಸೇರಿಸಿ ರಾಜ್ಯಮಟ್ಟದ ಬೃಹತ್‌ ಸಮಾವೇಶ ನಡೆಸುವ ಚಿಂತನೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.
Vijaya Karnataka Web july 6th state level conference in tumkur bjp state president b s yediyurappa
ಕೆರೆಗಳಿಗೆ ನೀರು ತುಂಬಿಸಲು ರಾಜ್ಯ ಸಮಾವೇಶ


ಸಂಸದ ಜಿ.ಎಸ್‌ ಬಸವರಾಜ್‌ ನಿಯೋಗದೊಂದಿಗೆ ಭಾನುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಚರ್ಚೆ ನಡೆಸಿದ ಅವರು, ಕರಾವಳಿ, ಮಲೆನಾಡು ಪ್ರದೇಶ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿಯೂ ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ. ರಾಜ್ಯದಾದ್ಯಂತ ಇರುವ ಎಲ್ಲಾ ಕೆರೆಗಳಿಗೆ ಮಳೆ ನೀರನ್ನು ಸಂಗ್ರಹಿಸುವ ಕೆಲಸವಾಗಬೇಕಿದೆ. ಕುಡಿಯುವ ನೀರಿಗಾಗಿ ನದಿ ನೀರಿನಿಂದ ತುಂಬಿಸುವುದು ಮತ್ತು ಮಲೆನಾಡು ಪ್ರದೇಶದಲ್ಲಿ ಕಿಂಡಿ ಯೋಜನೆ ಮಾಡುವ ಮೂಲಕ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿಗಾಗಿ ಶಾಶ್ವತವಾದ ಯೋಜನೆ ರೂಪಿಸುವ ಅಗತ್ಯವಿದೆ. ಜುಲೈ 6ರಂದು ತುಮಕೂರಿಗೆ ಭೇಟಿ ನೀಡಿ ಸಮಾವೇಶದ ಪೂರ್ವಭಾವಿ ಚರ್ಚೆ ನಡೆಸಲಾಗುವುದು ಎಂದು ಬಿಜೆಪಿ ಅಧ್ಯಕ್ಷರೂ ಆದ ಯಡಿಯೂರಪ್ಪ ಹೇಳಿದರು.

ಸಂಸದ ಜಿ.ಎಸ್‌. ಬಸವರಾಜ್‌ ಮಾತನಾಡಿ, ಕೆರೆ ತುಂಬಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಕೇಂದ್ರ ಸರಕಾರಕ್ಕೆ ಈ ಯೋಜನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಕೋರಲಾಗಿದೆ. ಕೆರೆಗಳಿಗೆ ನದಿ ನೀರು ತುಂಬಿಸುವ ಬಗ್ಗೆ ಪಕ್ಷದಿಂದ ಬೃಹತ್‌ ಆಂದೋಲನ ರೂಪಿಸಲಾಗುವುದು. ರಾಜ್ಯದ ಎಲ್ಲಾ ಭಾಗದಲ್ಲೂ ನೀರಿಗೆ ತೊಂದರೆಯಾಗಿದೆ. ಈ ತೊಂದರೆಗೆ ಪರಿಹಾರ ದೊರಕಿಸುವ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಪ್ರಧಾನಿ ಮತ್ತು ಜಲಶಕ್ತಿ ಸಚಿವರ ಬಳಿ ನಿಯೋಗ ಕೊಂಡೊಯ್ಯಬೇಕು ಎಂದು ಮನವಿ ಮಾಡಿದರು.

ಇದಕ್ಕೊಪ್ಪಿದ ಯಡಿಯೂರಪ್ಪ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮತ್ತು ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌ರೊಂದಿಗೆ ಸಮಾಲೋಚನೆ ನಡೆಸಿ ಕೇಂದ್ರ ಸರಕಾರದ ಯೋಜನೆಯಾಗಿ ಅಥವಾ ರಾಜ್ಯ ಮತ್ತು ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಜಾರಿ ಮಾಡಲೇಬೇಕು. ವಾಜಪೇಯಿ ಮತ್ತು ಮೋದಿಯವರ ಕನಸು ಸಹ ನದಿ ಜೋಡಣೆಯಾಗಿದೆ ಎಂದರು.

ಲಿಂಗನಮಕ್ಕಿ ಚರ್ಚೆ: ಅಭಿವೃದ್ಧಿ ರೆವೂಲ್ಯೂಷನ್‌ ಪೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್‌ ಮಾತನಾಡಿ, ಲಿಂಗನಮಕ್ಕಿ ಯೋಜನೆಗೆ ತಾವು ವಿರೋಧ ಮಾಡಿದ್ದೀರಿ. ಲಿಂಗನಮಕ್ಕಿಯಲ್ಲಿ ಸುಮಾರು 150 ಟಿಎಂಸಿ ನೀರು ಸಂಗ್ರಹ ಮಾಡಬಹುದು. ಜತೆಗೆ ಅಘಿನಾಶಿನಿ, ಬೇಡ್ತಿ, ವರದಾ ನೀರನ್ನು ಸಹ ಲಿಂಗನಮಕ್ಕಿಗೆ ಹಾಕಬಹುದಾಗಿದೆ. ವಿದ್ಯುತ್‌ನ್ನು ಯಾವ ಮೂಲದಿಂದಲಾದರೂ ಉತ್ಪತ್ತಿ ಮಾಡಬಹುದು. ಆದರೆ ನೀರನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪರಿಸರ ಹಾಳಾಗದಂತೆ ನೀರು ಪಡೆಯಲು ಆ ಭಾಗದ ಜನರಿಗೆ ಮನವರಿಕೆ ಮಾಡಬೇಕು ಎಂದು ಮನವಿ ಮಾಡಿದರು.

ನಿಯೋಗದಲ್ಲಿ ಗುರುಸಿದ್ದಪ್ಪ, ಶಿವರುದ್ರಯ್ಯ, ಬಿ.ಬಿ.ಮಹದೇವಪ್ಪ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ