ತುಮಕೂರು: ರಾಜಕಾರಣಿ ಪಕ್ಷ ಬದಲಾಯಿಸಿದರೆ ಅದು ಸುದ್ದಿಯಾಗುತ್ತದೆ. ಸೂರ್ಯ ಪಥ ಬದಲಾಯಿಸಿದರೆ ಅದು ಹಬ್ಬವಾಗುತ್ತದೆ ಎಂದು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಂಕ್ರಾಂತಿ ಅಂಗವಾಗಿ ಹಿರೇಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಮಾವಾಸ್ಯೆ ಕಾರ್ಯಕ್ರಮ ಮತ್ತು ವೃದ್ಧ ಸಂಗೀತ ಕಚೇರಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಾವೆಲ್ಲ ಮಕರ ಸಂಕ್ರಾಂತಿ ಹಾಗೂ ಉತ್ತರಾಯಣ ಕಾಲದ ಪ್ರಭೆ, ಪ್ರಭಾವಳಿಯಲ್ಲಿ ಇದ್ದೇವೆ. ಮಕರ ಸಂಕ್ರಾಂತಿ, ಇದು ಪರ್ವಕಾಲವಾದರೆ ಉತ್ತರಾಯಣವಿದು ಪುಣ್ಯಕಾಲ. ಉತ್ತರಾಯಣವಿದು ಸೂರ್ಯದೇವ ಪಥ ಬದಲಾಯಿಸುವ ಕಾಲಘಟ್ಟ ಎಂದರು.
'ಸೂರ್ಯ ಪಥ ಬದಲಾಯಿಸುವುದು' ಇದು ಬರೀ ಭೂಗೋಲ ಮಟ್ಟದ ಸುದ್ದಿಯಲ್ಲ. ಅದು ಖಗೋಲ ಮಟ್ಟದ ಸುದ್ದಿ. ಸೂರ್ಯದೇವ ತಾನು ಪಥ ಬದಲಾಯಿಸುವ ಮೂಲಕ ಹತ್ತು ಹಲವು ಬದಲಾವಣೆಗೆ ನಾಂದಿ ಹಾಡುತ್ತಾನೆ. ಸೂರ್ಯ, ಪಥ ಬದಲಾಯಿಸುತ್ತಿರುವ ಹಾಗೆಯೇ ಹಗಲುಗಳು ಹಿಗ್ಗಿಕೊಳ್ಳುತ್ತವೆ. ರಾತ್ರಿಗಳು ಕುಬ್ಜವಾಗುತ್ತವೆ. ಸೂರ್ಯದೇವ ಉತ್ತರಾಯಣ ಕಾಲದಲ್ಲಿ ಇನ್ನಷ್ಟು, ಮತ್ತಷ್ಟು ಓಜಸ್ವಿಯಾಗಿ, ತೇಜಸ್ವಿಯಾಗಿ ಪ್ರಜ್ವಲಿಸುತ್ತಾನೆ. ಆತನ ವರ್ಚಸ್ಸು ಇನ್ನಷ್ಟು ಹೆಚ್ಚಿಕೊಳ್ಳುತ್ತದೆ ಎಂದು ತಿಳಿಸಿದರು.
ನಮ್ಮೆಲ್ಲ ಭೂ ಪರಿವಾರಕ್ಕೆ ಸೂರ್ಯನೇ ಅಧಿದೇವತೆ. ಸೂರ್ಯನ ಪಥ ಬದಲಾವಣೆಯದು ನಮಗದೇಕೆ ಅಷ್ಟೊಂದು ಆಪ್ತವೆನಿಸುತ್ತದೆ ಎಂದರೆ ನಾವುಗಳು ವಾಸಮಾಡಿರುವ ಈ ಭೂಮಿಯು ಸೂರ್ಯ ಪರಿವಾರದ ಸದಸ್ಯ. ನಮ್ಮ ಭೂಮಿ ಇದು, ಸೌರಮಂಡಲದ ಆಜೀವ ಸದಸ್ಯತ್ವವನ್ನು ಪಡೆದುಕೊಂಡಿದೆ. ನಮ್ಮೆಲ್ಲರ ತಾಯಿ ಭೂದೇವಿ ಸೂರ್ಯ ಪರಿವಾರದ ಸದಸ್ಯೆ. ಸೌರಮಂಡಲ ಅವಳ ತವರುಮನೆ ಅದು ಕಾರಣವಾಗಿ ಭೂಮಿಯು ಸೂರ್ಯನಿಗೆ 'ಜೈ' ಹೇಳಿಕೊಂಡಿರುತ್ತದೆ. ಭೂಚರರಾದ ನಮ್ಮ ಮೇಲೆ ಸೂರ್ಯೋದಯ ಸೂರ್ಯಾಸ್ತಮಾನಗಳು ಭಾರೀ ಪ್ರಭಾವವನ್ನು ಬೀರುತ್ತವೆ. ನಮ್ಮದು ಸೌರಮಾನಪ್ರಿಯ ಜಾಯಮಾನ. ನಾವೆಲ್ಲ ಸೌರಮಾನಸರು. ನಾವೆಲ್ಲರೂ ಸೂರ್ಯೋಪಾಸಕರು.
ನಾವೆಲ್ಲರೂ ತಂಪು ತಂಪಾಗಿರುವ ಚಂದ್ರನನ್ನು ಇಷ್ಟಪಟ್ಟರೂ ಕೂಡ ನಾವುಗಳು ಸೂರ್ಯ ಪಕ್ಷಪಾತಿಗಳು, ಸೂರ್ಯಪರರು ಮತ್ತು ಸೂರ್ಯಪರಮನಸ್ಕರು. 'ಸನ್ ಬರ್ನ್'ಗೆ ಸಿಕ್ಕಾಪಟ್ಟೆ ಹೆದರಿಕೊಂಡರೂ ಸಹ ನಾವು ಯಾವಾಗಲೂ ಸೂರ್ಯನ ಪರವಾಗಿಯೇ 'ಬ್ಯಾಟಿಂಗ್' ಮಾಡಿಕೊಂಡಿರುತ್ತೇವೆ ಎಂದರು.