ಆ್ಯಪ್ನಗರ

ತುಮಕೂರು: ಸೋಂಕಿತ ಧರ್ಮ ಪ್ರಚಾರಕನ ಸಂಪರ್ಕದಲ್ಲಿದ್ದ 124 ಜನರಿಗೆ ಹೋಂ ಕ್ವಾರಂಟೈನ್‌

ಗುಜರಾತ್‌ ಮೂಲದ ಸೋಂಕಿತ ಪಿ 447ಯು ಸಂಚರಿಸಿರುವ ಈ ಎರಡು ಪ್ರದೇಶಗಳಿಗೆ ಆಶಾ ಮತ್ತು ಆರೋಗ್ಯ ಸಿಬ್ಬಂದಿ ಪ್ರತಿನಿತ್ಯ ಮನೆಮನೆಗೆ ತೆರಳಿ ಜ್ವರ, ಕೆಮ್ಮು ಮತ್ತು ಶೀತದಂತಹ ರೋಗ ಲಕ್ಷಣಗಳಿರುವ ಬಗ್ಗೆ ಸಮೀಕ್ಷೆ ನಡೆಸಲಿದ್ದಾರೆ.

Vijaya Karnataka Web 27 Apr 2020, 5:26 pm
ತುಮಕೂರು: ನಗರದ ಪೂರ್‌ಹೌಸ್‌ ಕಾಲೋನಿಯ ಮಸೀದಿಯಲ್ಲಿ ಏಪ್ರಿಲ್‌ 24ರಂದು ಪತ್ತೆಯಾದ ಗುಜರಾತ್‌ ಮೂಲದ ಕೊರೊನಾ ವೈರಸ್‌ ಸೋಂಕಿತ ಧರ್ಮ ಪ್ರಚಾರಕನೊಂದಿಗೆ ಸಂಪರ್ಕದಲ್ಲಿದ್ದ 124 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದ್ದು, ನಗರದಲ್ಲಿ ತೀವ್ರವಾದ ಆತಂಕ ಸೃಷ್ಟಿಯಾಗಿದೆ.
Vijaya Karnataka Web ಮಸೀದಿ
ಮಸೀದಿ


ಸೋಂಕಿತ ಧರ್ಮ ಪ್ರಚಾರಕನು ನಗರದ ಮೂರ್ನಾಲ್ಕು ಬಡಾವಣೆಗಳಿಗೆ ಆಟೊದಲ್ಲಿ ಪ್ರಯಾಣ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಈತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 37 ಮಂದಿ, ದ್ವಿತೀಯ ಹಂತದ ಸಂಪರ್ಕದಲ್ಲಿದ್ದ 87 ಮಂದಿ ಸೇರಿ 124 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಈ ಎಲ್ಲರ ಗಂಟಲು ಸ್ರಾವ ಮಾದರಿ ಸಂಗ್ರಹಿಸಿ,ಪರೀಕ್ಷೆಗೆ ಕಳುಹಿಸಲಾಗಿದೆ.

ಎರಡು ಬಡಾವಣೆ ಬಫರ್‌ ಜೋನ್‌

ಈ ವ್ಯಕ್ತಿ (ಪಿ 447)ಪ್ರಯಾಣಿಸಿರುವ ನಗರದ ಮರಳೂರುದಿಣ್ಣೆ ಮತ್ತು ಮಂಡಿಪೇಟೆಯನ್ನು ಬಫರ್‌ಜೋನ್‌ ಎಂದು ಪರಿಗಣಿಸಿ ಅಲ್ಲಿನ ನಿವಾಸಿಗಳಿಗೂ ಆರೋಗ್ಯ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ ಕುಮಾರ್‌ ಭಾನುವಾರ ಪ್ರಕಟಿಸಿದ್ದಾರೆ.

ಗುಜರಾತ್‌ ಮೂಲದ ಸೋಂಕಿತ ಪಿ 447ಯು ಸಂಚರಿಸಿರುವ ಈ ಎರಡು ಪ್ರದೇಶಗಳಿಗೆ ಆಶಾ ಮತ್ತು ಆರೋಗ್ಯ ಸಿಬ್ಬಂದಿ ಪ್ರತಿನಿತ್ಯ ಮನೆಮನೆಗೆ ತೆರಳಿ ಜ್ವರ, ಕೆಮ್ಮು ಮತ್ತು ಶೀತದಂತಹ ರೋಗ ಲಕ್ಷಣಗಳಿರುವ ಬಗ್ಗೆ ಸಮೀಕ್ಷೆ ನಡೆಸಲಿದ್ದಾರೆ. ಇವರು ಬಂದಾಗ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಿ 447 ಇದ್ದ ಪೂರ್‌ ಹೌಸ್‌ (ಪಿ.ಎಚ್‌) ಕಾಲೋನಿಯನ್ನು ಕಂಟೈನ್ಮೆಂಟ್‌ ಜೋನ್‌ ಆಗಿ ಪರಿವರ್ತಿಸಿದ್ದು, ಈ ಪ್ರದೇಶದಲ್ಲಿ452 ಮನೆಗಳಿವೆ. 1900ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಇವರಿಗೆ ಅಗತ್ಯವಿರುವ ವಸ್ತುಗಳನ್ನು ಹೊರಗಡೆಯಿಂದ ಪೂರೈಸಲಾಗುತ್ತಿದೆ. ಈ ವಸ್ತುಗಳನ್ನು ಕಂಟೈನ್ಮೆಂಟ್‌ ವಲಯದಲ್ಲಿಯೇ ಇರುವ 15 ಮಂದಿ ಸ್ವಯಂ ಸೇವಕರ ಮೂಲಕ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದು ರಂಜಾನ್‌ ತಿಂಗಳಾಗಿರುವುದರಿಂದ ಅಲ್ಲಿನ ನಿವಾಸಿಗಳಿಗೆ ಕಷ್ಟಕರವಾಗಿರಬಹುದು. ಕೋವಿಡ್‌ 19 ನಿಯಂತ್ರಿಸಬೇಕಾದರೆ ಜನರು ಇದನ್ನು ಸಹಿಸಿಕೊಳ್ಳಬೇಕು. ಕಂಟೈನ್ಮೆಂಟ್‌ ಜೋನ್‌ ಅಲ್ಲದೆ ಸುತ್ತಮುತ್ತಲಿನ 1ಕಿಮೀ. ವ್ಯಾಪ್ತಿಯನ್ನು ಇಂಟೆನ್ಸೀವ್‌ ಬಫರ್‌ ಜೋನ್‌ ಎಂದು ಪರಿಗಣಿಸಿದ್ದು, ಈ ವಲಯದಲ್ಲಿ860 ಮನೆಗಳಿವೆ. ಈ ವಲಯದಲ್ಲಿಆರೋಗ್ಯ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಪ್ರದೇಶಗಳಲ್ಲಿಮೇ 3ರವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. ಅಲ್ಲಿಯವರೆಗೂ ಯಾವುದೇ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ. ಕಂಟೈನ್ಮೆಂಟ್‌ ಜೋನ್‌ ಹೊರತುಪಡಿಸಿ ಬೇರೆಡೆಗಳಲ್ಲಿ ಸರಕಾರದ ನಿರ್ದೇಶನದಂತೆ ಕೆಲವೊಂದು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳೀದರು.

ಊರು ತುಂಬಾ ಓಡಾಡಿದ್ದಾನೆ

ಧರ್ಮ ಪ್ರಚಾರಕ್ಕಾಗಿ ಗುಜರಾತ್‌ನಿಂದ ಬಂದಿರುವ ಸೋಂಕಿತ ವ್ತಕ್ತಿ ಎಲ್ಲೆಲ್ಲಿ ಓಡಾಡಿದ್ದಾನೆ ಎಂದು ಜಿಲ್ಲಾಡಳಿತ ಮಾಹಿತಿ ಬಿಡುಗಡೆ ಮಾಡಿದೆ. ಅದರಂತೆ ಆತ ಮಾರ್ಚ್ 10ರಂದು ಗುಜರಾತ್‌ನ ಸೂರತ್‌ನಿಂದ ಗಾಂಧಿಧಾಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪಯಾಣಿಸಿ ಮಾರ್ಚ್ 12ರಂದು ತುಮಕೂರಿಗೆ ತಲುಪಿದ್ದಾನೆ. ಆಟೊದಲ್ಲಿಮಂಡಿಪೇಟೆಯ ಜಾಮೀಯಾ ಮಸೀದಿಗೆ ತೆರಳಿ, ಅಲ್ಲಿ ಮೂರು ದಿನ ಉಳಿದುಕೊಂಡಿದ್ದಾನೆ.

ಬಳಿಕ ಮಾರ್ಚ್ 15ರಂದು ಜಾಮೀಯಾ ಮಸೀದಿಯಿಂದ ಆಟೊದಲ್ಲಿ ಮರಳೂರು ದಿನ್ನೆಯ ರಹಮತ್‌ ನಗರದ ಖೂಬಾ ಮಸೀದಿಗೆ ತೆರಳಿದ್ದಾನೆ. ಅಲ್ಲಿ 8 ದಿನ ಉಳಿದುಕೊಂಡಿದ್ದಾನೆ. ಮಾರ್ಚ್ 22ರಂದು ಖೂಬಾ ಮಸೀದಿಯಿಂದ ಆಟೊದಲ್ಲಿ ಮಂಡಿಪೇಟೆಯ ಜಾಮೀಯಾ ಮಸೀದಿಗೆ ಮರಳಿದ್ದಾನೆ. ಈ ಮಂಡಿಪೇಟೆಯ ಮಸೀದಿಯಲ್ಲಿ ಒಂದು ದಿನ ಉಳಿದಿದ್ದು, 23ರಂದು ಆಟೊದಲ್ಲಿ ಪಿ.ಎಚ್‌ ಕಾಲೋನಿಯ ನಿಮ್ರಾ ಮಸೀದಿಗೆ ಬಂದಿದ್ದಾನೆ. ಬಳಿಕ ಏಪ್ರಿಲ್‌ 19 ರಂದು ಜಿಲ್ಲಾಸ್ಪತ್ರೆಗೆ ಕರೆ ತಂದು ಕೊರೊನಾ ವೈರಸ್‌ ತಪಾಸಣೆಗೆ ಆತನ ಗಂಟಲು ಹಾಗೂ ಮೂಗಿನ ಸ್ರಾವ ಮಾದರಿಯನ್ನು ಸಂಗ್ರಹಿಸಲಾಗಿದೆ. ಏ.23ರಂದು ನಿಮ್ರಾ ಮಸೀದಿಯಲ್ಲಿ ಕ್ವಾರಂಟೈನ್‌ ಆರಂಭಿಸಲಾಗಿದ್ದು, ಏ.24ರಂದು ಸೋಂಕು ಇರುವುದು ದೃಢಪಟ್ಟಿದೆ. ಬಳಿಕ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ