ಆ್ಯಪ್ನಗರ

ಕೊರಟಗೆರೆ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಸನ ವ್ಯವಸ್ಥೆ ಇಲ್ಲದೇ ಪರದಾಡಿದ ಅಧಿಕಾರಿ ವರ್ಗ

ಉಪಮುಖ್ಯಮಂತ್ರಿ ಸ್ವಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಸರಕಾರಿ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ... ಕ್ಷೇತ್ರದ ಅಭಿವೃದ್ಧಿಗಾಗಿ ಆಯವ್ಯಯ ಮಂಡನೆಗೆ ಮೊದಲು ಯಾವ ಅಧಿಕಾರಿ ಅನುದಾನಕ್ಕಾಗಿ ನನ್ನ ಬಳಿ ಬಂದಿದ್ದೀರಾ!! ಸರಕಾರದ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಅಸಡ್ಡೆ ಏಕೆ? ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ಅಧಿಕಾರಿಗಳ ವಿರುದ್ಧ ಗುಡುಗಿದರು.

Vijaya Karnataka 19 Sep 2018, 5:00 am
ಕಾರ್ಯಕ್ರಮ ಅನುಷ್ಠಾನಕ್ಕೆ ಅಸಡ್ಡೆ; ಪರಮೇಶ್ವರ್‌ ಕೆಂಡ
Vijaya Karnataka Web officers favored without seat arrangements at koratagere taluk panchyat progress review meeting
ಕೊರಟಗೆರೆ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಸನ ವ್ಯವಸ್ಥೆ ಇಲ್ಲದೇ ಪರದಾಡಿದ ಅಧಿಕಾರಿ ವರ್ಗ


ಕೊರಟಗೆರೆ: ಉಪಮುಖ್ಯಮಂತ್ರಿ ಸ್ವಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಸರಕಾರಿ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ... ಕ್ಷೇತ್ರದ ಅಭಿವೃದ್ಧಿಗಾಗಿ ಆಯವ್ಯಯ ಮಂಡನೆಗೆ ಮೊದಲು ಯಾವ ಅಧಿಕಾರಿ ಅನುದಾನಕ್ಕಾಗಿ ನನ್ನ ಬಳಿ ಬಂದಿದ್ದೀರಾ!! ಸರಕಾರದ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಅಸಡ್ಡೆ ಏಕೆ? ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ಅಧಿಕಾರಿಗಳ ವಿರುದ್ಧ ಗುಡುಗಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ನಾನಾ ಇಲಾಖೆಗಳ ಪ್ರಗತಿ ಪರಿಶೀಲನಾ ಪ್ರಥಮ ಸಭೆಯಲ್ಲಿ ಮಾತನಾಡಿ, 'ಸರಕಾರ ರಚನೆಯಾಗಿ 100 ದಿನ ಕಳೆದಿದೆ. ಯಾರಾದರೂ ಕ್ಷೇತ್ರದ ಸಮಸ್ಯೆಯ ಬಗ್ಗೆ ನನ್ನ ಬಳಿ ಬಂದು ತಿಳಿಸಿದ್ದೀರಾ... ಜನರ ಕೆಲಸ ಮಾಡುವ ಆಸಕ್ತಿ ಇದ್ದರೆ ಮಾತ್ರ ನನ್ನ ಕ್ಷೇತ್ರದಲ್ಲಿ ಇರಬೇಕು. ಇಲ್ಲವಾದರೆ ನಿಮಗೆ ಬೇಕಾದ ಕಡೆ ವರ್ಗಾವಣೆ ಮಾಡಿಸಿಕೊಳ್ಳಿ, ನನಗೇನು ಬೇಜಾರಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲು ರಾಜಕೀಯ ಮುಖಂಡರಿಂದ ನಾನು ಮಾಹಿತಿ ಕಲೆಹಾಕಬೇಕೇ? ಸರಕಾರಿ ಅಧಿಕಾರಿಗಳು ಏನು ಮಾಡುತ್ತೀದ್ದಿರಾ... ಎಂದು ಬೇಸರ ವ್ಯಕ್ತಪಡಿಸಿದರು.

'ರೀ ತಹಸೀಲ್ದಾರ್‌ ಇನ್ಮುಂದೆ ಸಾರ್ವಜನಿಕರಿಂದ ನನಗೆ ಯಾವುದೇ ದೂರು ಬರಬಾರದು. ಅಬಕಾರಿ ಅಧಿಕಾರಿ ಪ್ರತಿದಿನ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಿ. ಅಧಿಕಾರಿ ವರ್ಗ ತಾಲೂಕು ಕೇಂದ್ರದಲ್ಲಿಯೇ ವಾಸ ಮಾಡಬೇಕು. ಬೆಂಗಳೂರು ಮತ್ತು ತುಮಕೂರು ನಗರದಿಂದ ಬರುವ ಅಧಿಕಾರಿಗಳಿಂದ ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸ ಆಗುವುದಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಯನ್ನು ತಕ್ಷ ಣ ಪೂರ್ಣಗೊಳಿಸಿ' ಎಂದು ಸೂಚಿಸಿದರು.

ಅಧಿಕಾರಿಗಳ ವಿರುದ್ಧ ಕೆಂಡ: 'ಕ್ಷೇತ್ರದ ಅಭಿವೃದ್ಧಿಯ ಅಂಕಿ-ಅಂಶ ಮತ್ತು ಪ್ರಗತಿಯ ಮಾಹಿತಿ ನೀಡದ ತಹಸೀಲ್ದಾರ್‌, ತಾಪಂ ಇಒ, ಬಿಇಒ, ಕೃಷಿ, ಸಿಡಿಪಿಒ, ಆಹಾರ, ಪಶು, ರೇಷ್ಮೆ, ನೀರಾವರಿ, ಬೆಸ್ಕಾಂ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ಸಭೆಯಲ್ಲಿ ಕೆಂಡಕಾರಿದರು. ನನಗೆ ನಿಮ್ಮ ಕಾರಣ ಬೇಕಿಲ್ಲ. ನನ್ನ ಕ್ಷೇತ್ರ ಶೇ.100ರಷ್ಟು ಅಭಿವೃದ್ಧಿ ಆಗಬೇಕು. ಅದಕ್ಕೆ ಪೂರಕವಾದ ಕ್ರಮ ಕೈಗೊಳ್ಳಿ. ಇಲ್ಲವಾದರೆ ಪರಿಣಾಮ ಎದುರಿಸಲು ಸಿದ್ಧರಾಗಿ' ಎಂದು ಎಚ್ಚರಿಕೆ ನೀಡಿದರು.

ನೋಟಿಸ್‌ ಜಾರಿ ಮಾಡಿ: 'ಡಿಸಿಎಂ ಬರುವ ಸಭೆಗೆ ಸರಕಾರಿ ಅಧಿಕಾರಿಗಳು ಗೈರುಹಾಜರಾದರೆ ಇನ್ನು ಇಲಾಖೆಯಲ್ಲಿ ಅವರು ಹೇಗೆ ಕೆಲಸ ಮಾಡುತ್ತಾರೇ? ಕೊರಟಗೆರೆ ಕ್ಷೇತ್ರಕ್ಕೆ ಒಳಪಡುವ ತುಮಕೂರು ಮತ್ತು ಮಧುಗಿರಿ ಅಧಿಕಾರಿಗಳೂ ಸಭೆಗೆ ಬರಬೇಕು. ಇಂದು ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ಈಗ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿ. ಮುಂದಿನ ಸಭೆಯಲ್ಲಿ ಗೈರುಹಾಜರಾದ ಅಧಿಕಾರಿಗಳನ್ನು ಅಮಾನತು ಮಾಡಿ' ಎಂದು ಜಿಲ್ಲಾಧಿಕಾರಿಗೆ ಆದೇಶ ಮಾಡಿದರು.

ಸಂಸದ ಮುದ್ದಹನುಮೇಗೌಡ ಮಾತನಾಡಿ, ಬರಗಾಲದಿಂದ ರೈತರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಂದಾಯ ಮತ್ತು ಕೃಷಿ ಇಲಾಖೆ ಬರಪರಿಸ್ಥಿತಿ ಎದುರಿಸಲು ಸಿದ್ಧರಾಗಿ. ಡಿಸಿಎಂ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಸಾಕಷ್ಟು ಅನುದಾನ ಹರಿದುಬರಲಿದೆ. ಕ್ಷೇತ್ರದಲ್ಲಿ ಯಾರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲವೊ ಅವರು ನಮಗೆ ಬೇಡ' ಎಂದು ಖಡಕ್‌ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌, ಜಿಪಂ ಸಿಇಒ ಅನೀಸ್‌ ಕಣ್ಮಣಿಜಾಯ್‌, ಎಎಸ್‌ಪಿ ಡಾ.ಶೋಭಾರಾಣಿ, ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಎಸಿ ವೆಂಕಟೇಶಯ್ಯ, ತಹಸೀಲ್ದಾರ್‌ ನಾಗರಾಜು, ಬಿಇಒ ಚಂದ್ರಶೇಖರ್‌, ಕೃಷಿ ಅಧಿಕಾರಿ ನೂರ್‌ಆಜಾಂ, ಪಿಡಬ್ಲ್ಯುಡಿ ಎಇಇ ಜಗದೀಶ್‌, ಬೆಸ್ಕಾಂ ಎಇಇ ನಾಗರಾಜು, ಸಿಪಿಐ ಮುನಿರಾಜು ಮತ್ತಿತರರು ಇದ್ದರು.

ಸಭೆಯಲ್ಲಿ 3 ಗಂಟೆ ನಿಂತೇ ಇದ್ದ ಅಧಿಕಾರಿ ವರ್ಗ:

ಸಭೆಯಲ್ಲಿ 25ಕ್ಕೂ ಹೆಚ್ಚು ಅಧಿಕಾರಿಗಳ ಜತೆ ಪತ್ರಕರ್ತರು ಸಭೆಯಲ್ಲಿ ಸುಮಾರು 3 ಗಂಟೆಗೂ ಹೆಚ್ಚು ಕಾಲ ನಿಂತುಕೊಂಡೇ ಇದ್ದರು. ಸಭೆ ಇರುವ ಬಗ್ಗೆ ಪತ್ರಕರ್ತರಿಗೆ ತಾಪಂಯಿಂದ ಮಾಹಿತಿ ನೀಡಿರಲಿಲ್ಲ. ಆಸನ ಇಲ್ಲದೇ ನಿಂತಿರುವ ಅಧಿಕಾರಿಗಳನ್ನು ಗಮನಿಸಿದ ಪರಮೇಶ್ವರ್‌, ಮುಂದೆ ಈಗಾಗದಂತೆ ಎಚ್ಚರ ವಹಿಸಲು ಇಒ ಶಿವಪ್ರಸಾದ್‌ಅವರಿಗೆ ಸೂಚನೆ ನೀಡಿದ ಪ್ರಸಂಗ ನಡೆಯಿತು.

ವಿಶೇಷ ಗಮನಕ್ಕೆ ಡಿಸಿಗೆ ಸೂಚನೆ:

ತಾಲೂಕಿನಲ್ಲಿ ಒಟ್ಟು 40,619 ಕುಟುಂಬಗಳಿವೆ. 40,924 ಬಿಪಿಎಲ್‌ ಕಾರ್ಡ್‌ ಮತ್ತು 449 ಎಪಿಎಲ್‌ ಸೇರಿ ಒಟ್ಟು 43,707 ಪಡಿತರ ಚೀಟಿಯನ್ನು ಕುಟುಂಬಕ್ಕಿಂತ ಹೆಚ್ಚು ನೀಡಲಾಗಿದೆ. ಬಡವರಿಗೆ ನೀಡಿರುವ ಮನೆಗಳ ವಿಚಾರದಲ್ಲಿ ಲೋಪದೋಷ ಕಂಡುಬಂದಿದೆ. ಸರಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಪರಿಸ್ಥಿತಿಯ ಬಗ್ಗೆ ಸೂಕ್ತ ದಾಖಲೆ ನೀಡಿ. ಗ್ರಾಮೀಣ ಪ್ರದೇಶದ ರಸ್ತೆ ಕಾಮಗಾರಿಗೆ ಅನುದಾನದ ಅಂಕಿ-ಅಂಶ ಸಿದ್ಧಪಡಿಸಿ. ಕುಡಿಯುವ ನೀರಿಗಾಗಿ ವಿಶೇಷ ಗಮನ ಹರಿಸಿ, ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌ ಅವರಿಗೆ ಡಿಸಿಎಂ ಸೂಚನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ