ಆ್ಯಪ್ನಗರ

ಆನ್‌ಲೈನ್‌ ವ್ಯಾಪಾರ ವಿರೋಧಿಸಿ ಔಷಧ ಅಂಗಡಿಗಳ ಬಂದ್‌

ರಾಷ್ಟ್ರೀಯ ಔಷಧಿ ವ್ಯಾಪಾರಿಗಳ ಸಂಘ ಹಾಗೂ ರಾಜ್ಯ ಔಷಧ ವ್ಯಾಪಾರಿಗಳ ಸಂಘ ಶುಕ್ರವಾರ ಕರೆ ನೀಡಿದ್ದ ಔಷಧ ಅಂಗಡಿಗಳ ಬಂದ್‌ಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Vijaya Karnataka 29 Sep 2018, 4:22 pm
ಆನ್‌ಲೈನ್‌ ವ್ಯಾಪಾರವನ್ನು ಡ್ರಗ್‌ ಕಂಟ್ರೋಲ್‌ ಆ್ಯಕ್ಟ್ಗೆ ತರಲು ವಿರೋಧ; ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ಪ್ರತಿಭಟನೆ;
Vijaya Karnataka Web pharmacists shut shops to protest online drugs sale
ಆನ್‌ಲೈನ್‌ ವ್ಯಾಪಾರ ವಿರೋಧಿಸಿ ಔಷಧ ಅಂಗಡಿಗಳ ಬಂದ್‌


ತುಮಕೂರು: ಔಷಧಿ ವ್ಯಾಪಾರಿಗಳ ಪ್ರಬಲ ವಿರೋಧದ ನಡುವೆಯೂ ಕೇಂದ್ರ ಸರಕಾರ ಆನ್‌ಲೈನ್‌ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ತಿದ್ದುಪಡಿ ಮಸೂದೆಯನ್ನು ಡ್ರಗ್‌ ಕಂಟ್ರೋಲ್‌ ಆ್ಯಕ್ಟ್ಗೆ ತರಲು ಹೊರಟಿರುವುದನ್ನು ವಿರೋಧಿಸಿ ರಾಷ್ಟ್ರೀಯ ಔಷಧಿ ವ್ಯಾಪಾರಿಗಳ ಸಂಘ ಹಾಗೂ ರಾಜ್ಯ ಔಷಧ ವ್ಯಾಪಾರಿಗಳ ಸಂಘ ಶುಕ್ರವಾರ ಕರೆ ನೀಡಿದ್ದ ಔಷಧ ಅಂಗಡಿಗಳ ಬಂದ್‌ಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಮೆಡಿಕಲ್‌ ಸ್ಟೋರ್‌ಗಳನ್ನು ಹೊರತುಪಡಿಸಿ ಉಳಿದಂತೆ ಹೊರಗಿನ ಎಲ್ಲಾ ಖಾಸಗಿ ಔಷಧ ಅಂಗಡಿಗಳನ್ನು ಬಂದ್‌ ಮಾಡುವ ಮೂಲಕ ಔಷಧಿ ವ್ಯಾಪಾರಿಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

ನಗರದ ಟೌನ್‌ಹಾಲ್‌ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಂಡಿತ ಜವಾಹರ್‌, ಆನ್‌ಲೈನ್‌ ವ್ಯಾಪಾರದಿಂದ ರೋಗಿಗಳು ಮತ್ತು ಔಷಧ ವ್ಯಾಪಾರಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೇಂದ್ರ ಸರಕಾರ ಇ ಫಾರ್ಮಸಿ ಹೆಸರಿನಲ್ಲಿ ಆನ್‌ಲೈನ್‌ ವ್ಯಾಪಾರಕ್ಕೆ ಅವಕಾಶ ನೀಡಿದರೆ ಔಷಧ ಅಂಗಡಿಗಳ ವ್ಯಾಪಾರಿಗಳಿಗಷ್ಟೇ ಅಲ್ಲದೆ ರೋಗಿಗಳು, ಗ್ರಾಹಕರಿಗೂ ತೀವ್ರ ತೊಂದರೆಯಾಗಲಿದೆ ಎಂದರು.

ಪ್ರಸ್ತುತ ಔಷಧ ವ್ಯಾಪಾರ ಬಿಕ್ಕಟ್ಟಿನಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಇ ಫಾರ್ಮಸಿ ಹೆಸರಿನಲ್ಲಿ ಆನ್‌ಲೈನ್‌ ವ್ಯಾಪಾರಕ್ಕೆ ಅನುಮತಿ ನೀಡಿದರೆ ಆನ್‌ಲೈನ್‌ ಮಾರಾಟದಿಂದ ರೋಗಿಗಳಿಗೆ ಔಷಧಿಯ ಗುಣಮಟ್ಟದ ಕುರಿತು ಯಾವುದೇ ಖಾತ್ರಿ ಇರುವುದಿಲ್ಲ. ಜತೆಗೆ ಸರಿಯಾದ ಮಾರ್ಗದರ್ಶನವೂ ಸಹ ದೊರೆಯುವುದಿಲ್ಲ. ಅಲ್ಲದೆ ಆನ್‌ಲೈನ್‌ನಿಂದ ಮನುಷ್ಯರ ಮನಸ್ಸು ಮತ್ತು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಮಾದಕ ಔಷಧಗಳ ಬಳಕೆ ಹೆಚ್ಚಾಗಿ, ಜನರ ಬದುಕುವ ಹಕ್ಕನ್ನೇ ಕಸಿದುಕೊಂಡಂತಾಗುತ್ತದೆ. ಇದು ಸಂವಿಧಾನ ವಿರೋಧಿಯೂ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಸುಮಾರು 40 ಲಕ್ಷ ದಷ್ಟು ಔಷಧ ವ್ಯಾಪಾರಿಗಳು ಇದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇವರಿಂದ ಸಮಾಜಕ್ಕೆ ಯಾವುದೇ ತೊಂದರೆಯಾಗಿಲ್ಲ. ಕೇಂದ್ರ ಸರಕಾರ ನಮ್ಮ ವಿರೋಧದ ನಡುವೆಯೂ ಆನ್‌ಲೈನ್‌ ವ್ಯಾಪಾರಕ್ಕೆ ಅವಕಾಶ ನೀಡಿ, ಕುಟುಂಬಗಳನ್ನು ಬೀದಿಗೆ ತರಲು ಹೊರಟಿದೆ. ಈ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎನ್‌.ಎಸ್‌. ಅನಂತ್‌, ಪದಾಧಿಕಾರಿಗಳಾದ ಮಂಜುನಾಥ್‌, ಶ್ಯಾಮ್‌, ಗೋಪಾಲ್‌, ರಮೇಶ್‌ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ