ಕೊರಟಗೆರೆ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಗೆಲುವಿಗೆ ಪೂರಕ ವಾತಾವರಣ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಕಸಬಾ, ಪುರವರ ಹಾಗೂ ಹೊಳವನಹಳ್ಳಿ ಹೋಬಳಿಗಳಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ಪರ ಚುನಾವಣಾ ಪ್ರಚಾರ ಮಾಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಕೈಗೆ ಸಿಗುವುದಿಲ್ಲ ಎಂಬ ಅಪಪ್ರಚಾರ ಮಾಡಿ ವಿರೋಧಿಗಳು ಅವರ ಸೋಲಿಗೆ ಕಾರಣರಾಗಿದ್ದರು. ಈ ಬಾರಿ ಕಳೆದ ಎಂಟತ್ತು ತಿಂಗಳುಗಳಿಂದ ನಿರಂತರವಾಗಿ ಕ್ಷೇತ್ರದಲ್ಲಿ ಓಡಾಡಿದ್ದಾರೆ. ಪರಿಷತ್ ಸದಸ್ಯರಾಗಿ, ಗೃಹ ಸಚಿವರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುಂದೆಯೂ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವ ಯೋಜನೆ ಹೊಂದಿದ್ದಾರೆ. ಜನರಿಗೂ ಪರಮೇಶ್ವರ್ ವಿರೋಧಿಗಳ ಅಪಪ್ರಚಾರ ಹಾಗೂ ವಾಸ್ತವತೆಯ ಅರಿವಾಗಿದೆ. ಹೀಗಾಗಿ ವಿರೋಧಿಗಳ ಮಾತಿಗೆ ಜನರು ಬೆಲೆ ಕೊಡುವುದಿಲ್ಲ. ಒಟ್ಟಾರೆ ಕ್ಷೇತ್ರದಲ್ಲಿ ಧನಾತ್ಮಕ ಅಂಶಗಳು ಹೆಚ್ಚಾಗಿವೆ ಎಂದರು.
ಕ್ಷೇತ್ರದಲ್ಲಿ ಜನರೊಂದಿಗೆ ಮಾತನಾಡಿದಾಗ ಹಾಲಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ ಹೀಗಿದ್ದರೂ ಕೇವಲ ಜಾತಿ ಮುಂದಿಟ್ಟುಕೊಂಡು ಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ಜನರನ್ನು ಕತ್ತಲಿನಲ್ಲಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಈ ಬಾರಿ ಇಂತಹ ಕಣ್ಕಟ್ಟಿನ ರಾಜಕೀಯಕ್ಕೆ ಜನ ಮರುಳಾಗೋದಿಲ್ಲ. ಜನರು ಅಭಿವೃದ್ಧಿಯನ್ನು ಬಯಸಿದ್ದಾರೆ ಎಂದು ಹೇಳಿದರು.
ಕಳೆದ ಎಂಟು ತಿಂಗಳಿನಿಂದಲೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತಮಗೆ ಮುಂದೆ ಅವಕಾಶ ಸಿಕ್ಕಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವ ಬಗ್ಗೆ ಜನರಲ್ಲಿ ಭರವಸೆ ಮೂಡಿಸಿದ್ದಾರೆ. ಹೀಗಾಗಿ ಜನರು ಈ ಭಾರಿ ಪರಮೇಶ್ವರ್ ವಿರೋಧಿಗಳ ಕುತಂತ್ರಕ್ಕೆ ಮಣಿಯುವುದಿಲ್ಲ ಎಂಬ ವಿಶ್ವಾಸ ಮೂಡಿಸಿದ್ದಾರೆ ಎಂದೂ ಸಹ ಅವರು ಹೇಳಿದರು.
ಕ್ಷೇತ್ರದಲ್ಲಿ ಪರಮೇಶ್ವರ್ ರವರ ಭರವಸೆಯ ನುಡಿಗಳು ಜನರ ಮನಮುಟ್ಟಿವೆ. ಕ್ಷೇತ್ರದಲ್ಲಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಜನರ ಮನಸ್ಸನ್ನು ಸೆಳೆದಿವೆ. ಹೀಗಾಗಿ ಕ್ಷೇತ್ರದಲ್ಲಿ ಈ ಬಾರಿ ಪರಮೇಶ್ವರ್ ಅವರಿಗೆ ಮತದಾರರಿಂದ ಭಾರಿ ಬೆಂಬಲ ದೊರೆಯುತ್ತದೆ. ಕ್ಷೇತ್ರದ ಜನತೆ ಪರಮೇಶ್ವರ್ ಅವರ ಗೆಲುವನ್ನು ಬಯಸಿದ್ದಾರೆ ಎಂದು ಪ್ರೊ. ಬಿ.ಕೆ. ಚಂದ್ರಶೇಖರ್ ನುಡಿದರು.
ಈಗಾಗಲೇ ಕ್ಷೇತ್ರದ ಮತದಾರರು ಪರಮೇಶ್ವರ್ ಅವರ ಗೆಲುವಿಗೆ ಬೆಂಬಲ ನೀಡುವ ವಾಸ್ತವತೆ ಕಂಡುಬಂದಿದೆ. ಹೀಗಾಗಿ ವಿರೋಧಿಗಳ ಯಾವುದೇ ಕುತಂತ್ರಕ್ಕೆ ಕ್ಷೇತ್ರದ ಜನತೆ ಕಿವಿಗೊಡದೆ ಪರಮೇಶ್ವರ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದೂ ತಿಳಿಸಿದರು.