ಆ್ಯಪ್ನಗರ

ಮಾಸಾಶನ ನಿರಾಕರಣೆ: ವಿಶೇಷ ಚೇತನ ಆತ್ಮಹತ್ಯೆ

ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದ ವಿಶೇಷ ಚೇತನ ಯುವಕನೊಬ್ಬ ಮಾಸಾಶನ ಸೌಲಭ್ಯ ನಿರಾಕರಣೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ತುಮಕೂರು ತಾಲೂಕಿನ ಬೆಳಧರ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಿಂಗಯ್ಯನಪಾಳ್ಯದಲ್ಲಿ ನಡೆದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಮೃತ ಯುವಕನನ್ನು ಧರಣಿ ಎಂದು ಗುರುತಿಸಲಾಗಿದೆ.

Vijaya Karnataka Web 12 Feb 2019, 3:12 pm
ತುಮಕೂರು: ಮಾಸಾಶನ ಸೌಲಭ್ಯ ನೀಡಲು ತಹಸೀಲ್ದಾರ್ ನಿರಾಕರಿಸಿದರು ಎಂದು ನೊಂದ ವಿಶೇಷ ಚೇತನ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

ತುಮಕೂರು ತಾಲೂಕು ಬೆಳಧರ ಗ್ರಾಪಂ ವ್ಯಾಪ್ತಿಯ ಲಿಂಗಯ್ಯನಪಾಳ್ಯ ನಿವಾಸಿ ನಾಗರಾಜಪ್ಪ ಎಂಬುವರ ಪುತ್ರ ಧರಣಿ ಸೋಮವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೂ‌ ಮುನ್ನ ಈತ ಸ್ಥಳೀಯರಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದು, ಅದನ್ನು ಸ್ಥಳೀಯರೊಬ್ಬರು ವೀಡಿಯೋ ಮಾಡಿದ್ದಾರೆ. ವೀಡಿಯೋದಲ್ಲಿ 'ಮಾಸಾಶನ ನವೀಕರಣ ಮಾಡಿ ಕೊಡಲು ತಹಸೀಲ್ದಾರ್ ನಿರಾಕರಿಸಿದರು. ವಾರ್ಷಿಕ ಆದಾಯ 15 ಸಾವಿರವಿದೆ ಎಂದು ಕೋರಾ ಗ್ರಾಪಂನಲ್ಲಿ ಆದಾಯ ಪ್ರಮಾಣ ಪತ್ರ ನೀಡಿದ್ದಾರೆ. ಹೀಗಾಗಿ ನವೀಕರಣ ಮಾಡಲಾಗುವುದಿಲ್ಲ ಎಂದು ತಹಸೀಲ್ದಾರ್ ಹೇಳಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ' ಎಂದು ಹೇಳಿಕೆ ನೀಡಿದ್ದಾನೆ. ಬಳಿಕ ಮನೆಗೆ ತೆರಳಿ ವಿಷ ಸೇವಿಸಿದ್ದಾನೆ.


ಸೋಮವಾರ ತುಮಕೂರು ತಹಸೀಲ್ದಾರ್ ಕಚೇರಿಗೆ ಬಂದಿದ್ದ ಈತ, ಅಧಿಕಾರಿಗಳ ಉತ್ತರದಿಂದ ನೊಂದು ಬೆಳಧರ ಬಸ್ ನಿಲ್ದಾಣದ ಬಳಿ ಅಳುತ್ತ ಕುಳಿತಿದ್ದ ಎನ್ನಲಾಗಿದೆ. ಈ ವೇಳೆ ಅಲ್ಲಿನ ಸ್ಥಳೀಯರು, ಈತನನ್ನು ಮಾತನಾಡಿಸಿ ವೀಡಿಯೋ ಮಾಡಿದ್ದಾರೆ.

ತನಿಖೆಗೆ ಜಿಲ್ಲಾಧಿಕಾರಿ ಆದೇಶ:ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಮೃತನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ. ವೀಡಿಯೋದಲ್ಲಿ ಯುವಕ ಹೆಸರಿಸಿರುವ ವ್ಯಕ್ತಿ ತಹಸೀಲ್ದಾರ್ ಅಲ್ಲ, ಆತ ಡಾಟಾ ಎಂಟ್ರಿ ಆಪರೇಟರ್ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ