ಆ್ಯಪ್ನಗರ

ಸಿದ್ದಗಂಗಾ ಶ್ರೀಗಳ ಸ್ಥಿತಿ ಗಂಭೀರ, ದರ್ಶನ ದಿಢೀರ್ ಸ್ಥಗಿತ

ಶ್ರೀಗಳ ದೇಹದಲ್ಲಿ ಪ್ರೋಟಿನ್ ಅಂಶ ಕಡಿಮೆಯಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಗರಿಷ್ಠ ಪ್ರಯತ್ನ ನಡೆಸಿದ್ದಾರೆಂದು ಅವರು ತಿಳಿಸಿದ್ದಾರೆ.

Vijaya Karnataka Web 21 Jan 2019, 1:54 pm
ತುಮಕೂರು: ಸಿದ್ದಗಂಗಾ ಮಠದ ಡಾ.ಶಿವಕುಮಾರ್ ಶ್ರೀ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಸ್ಥಿತಿ ಗಂಭೀರವಾಗದೆ ಎಂದು ವೈದ್ಯ ಡಾ.ಪರಮೇಶ್ ತಿಳಿಸಿದ್ದಾರೆ.
Vijaya Karnataka Web siddaganga shree


ಶ್ರೀಗಳ ದೇಹದಲ್ಲಿ ಪ್ರೋಟಿನ್ ಅಂಶ ಕಡಿಮೆಯಾಗುತ್ತಿದೆ. ವೈದ್ಯರು ಗರಿಷ್ಠ ಪ್ರಯತ್ನ ನಡೆಸಿದ್ದಾರೆಂದು ಅವರು ಹೇಳಿದರು.

ಇನ್ನು ಎರಡು ಗಂಟೆಯ ಬಳಿಕ ಶ್ರೀಗಳ ಆರೋಗ್ಯ ಸಂಬಂಧಿಸಿದಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಶ್ರೀಗಳ ದೇಹದಲ್ಲಿ ಪ್ರೋಟಿನ್ ಅಂಶ 2ಕ್ಕಿಂತ ಕಡಿಮೆ ಇದ್ದು, 60-70ರಷ್ಟು ಬಿಪಿ ಇದೆ. ಹೀಗಾಗಿ ಚಿಕಿತ್ಸೆ ಫಲಕಾರಿಯಾಗುತ್ತೋ, ಇಲ್ಲವೋ ಎಂದು ಒಂದೆರಡು ಗಂಟೆಯಲ್ಲಿ ಗೊತ್ತಾಗುತ್ತದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ತಿಳಿಸಿದ್ದಾರೆ.


ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ, ಪಾಠ, ಪ್ರವಚನಗಳು ಸ್ಥಗಿತವಾಗಿದ್ದು, ಮಕ್ಕಳಿಗೆ ಶ್ರೀಗಳ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ.

ವಿದ್ಯಾರ್ಥಿಗಳಿಂದ ಪ್ರಾರ್ಥನೆ

ಮಠದ ಆವರಣದಲ್ಲಿ ಸೋಮವಾರ ಬೆಳಗ್ಗೆ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಶ್ರೀಗಳ ಆರೋಗ್ಯ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು‌.

ಸಿದ್ಧಗಂಗಾ ಶ್ರೀಗಳ ದರ್ಶನ ದಿಢೀರ್ ಸ್ಥಗಿತ

ಸಿದ್ಧಗಂಗಾ ಮಠಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ಶ್ರೀಗಳ ದರ್ಶನವನ್ನು ದಿಢೀರ್ ಸ್ಥಗಿತಗೊಳಿಸಲಾಗಿದೆ.

ಮಠದಲ್ಲಿ ಸಕಲ ಸಿದ್ಧತೆ

ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅವರ ಆಪ್ತ ವೈದ್ಯ ಡಾ.ಪರಮೇಶ್ ಅವರು ಮಾಹಿತಿ ನೀಡಿದ ಬೆನ್ನಲ್ಲೇ ಮಠದಲ್ಲಿ ವಿವಿಧ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.


ಪಾರ್ಕಿಂಗ್ ಸಿದ್ಧತೆ

ಮಠದ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಿದ್ಧತೆ ಮಾಡಲಾಗುತ್ತಿದ್ದು, ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ ಪಾರ್ಕಿಂಗ್ ವ್ಯವಸ್ಥೆ ಪರಿಶೀಲಿಸಿದ್ದಾರೆ.

LED ಪರದೆ ವ್ಯವಸ್ಥೆ

ಶ್ರೀಗಳ ದರ್ಶನಕ್ಕೆ ಅನುಕೂಲವಾಗುವಂತೆ ಭಾರಿ ಗಾತ್ರದ ಎಲ್‌ಇಡಿ ಪರದೆಯನ್ನು ಮಠದ ಆವರಣದಲ್ಲಿ ಅಳವಡಿಸಲಾಗುತ್ತಿದೆ. 1 ಕಿಮೀ ದೂರದವರೆಗೆ ಗೋಚರವಾಗುವಂತಹ ಬೃಹತ್ ಪರದೆ ಇದಾಗಿದೆ.



ಮಠದತ್ತ ಧಾವಿಸಿದ ಸಿಎಂ

ಶ್ರೀಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದಿನ ಎಲ್ಲ ಕಾರ್ಯಕ್ರಮಗಳನ್ನು ಬದಿಗೊತ್ತಿ ನೇರವಾಗಿ ಸಿದ್ದಗಂಗಾ ಮಠದತ್ತ ಪ್ರಯಾಣ ಬೆಳೆಸಿದ್ದಾರೆ.

ಮಠದಲ್ಲೇ ಬೀಡು ಬಿಟ್ಟಿರುವ ಗಣ್ಯರು

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ವೈದ್ಯರ ತಂಡ ಮಠದಲ್ಲೇ ಬೀಡು ಬಿಟ್ಟಿದ್ದಾರೆ.

ಮಠದತ್ತ ದೌಡಾಯಿಸಿದ ಕೈ ನಾಯಕರು

ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಮಠದತ್ತ ದೌಡಾಯಿಸಿದ್ದಾರೆ. ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ನಾಯಕರು ಶ್ರೀಗಳ ಆರೋಗ್ಯ ವಿಚಾರಣೆ ನಡೆಸಿದ್ದಾರೆ.


ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ

ಮಠದ ಆವರಣದಲ್ಲಿ ಹಿಂದೆಂಗಿಂತಲೂ ಬಿಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದೆ. ಐಜಿಪಿ ದಯಾನಂದ್ ನೇತೃತ್ವದಲ್ಲಿ ಎಸ್ಪಿಗಳಾದ ತುಮಕೂರು ಎಸ್‌ಪಿ ಕೋನ ವಂಶಿ ಕೃಷ್ಣ, ತುಮಕೂರಿನ ಹಿಂದಿನ ಎಸ್‌ಪಿ ಡಾ.ದಿವ್ಯಾ ವಿ.ಗೋಪಿನಾಥ್, ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ 6 ಮಂದಿ ಎಸ್‌ಪಿ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸರನ್ನು ಮಠದ ಪರಿಸರ, ಸುತ್ತಮುತ್ತಲಿನ ಆಯಾ ಕಟ್ಟಿನ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.


ಮಠದ ಎಲ್ಲ ಮುಖ್ಯ ದ್ವಾರದಲ್ಲಿಯೂ ಎಸ್‌ಪಿ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜಿಲ್ಲಾ ಮಟ್ಟದ ಎಲ್ಲ ಸರಕಾರಿ ಅಧಿಕಾರಿಗಳು ಮಠಕ್ಕೆ ಬರುವಂತೆ ಡಿಸಿ ಸೂಚನೆ ನೀಡಿದ್ದಾರೆ.


ಮಠದ ಮುಖ್ಯ ದ್ವಾರದ ಬಳಿ ಸಾರ್ವಜನಿಕ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಠದ ಆವರಣ ಪ್ರವೇಶಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಅಷ್ಟೆ ಅಲ್ಲದೆ, ಮಠದ ಆವರಣದಲ್ಲಿ ನಿಲ್ಲಿಸಲಾಗಿದ್ದ ಸಾರ್ವಜನಿಕರ ವಾಹನಗಳನ್ನು ತೆರವುಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ