ಆ್ಯಪ್ನಗರ

ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ಚರ್ಚೆಗೆ ಗ್ರಾಸ

'ಮದುವೆ ವಿಷಯದಲ್ಲಿ ಮಾತು ಕೇಳದ ಮಗಳ ಕೈಯ್ಯೋ, ಕಾಲೋ ಮುರಿದುಬಿಡಿ' ಎಂದು ಸ್ವಾಮೀಜಿಯೊಬ್ಬರು ನೀಡಿದ್ದ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Vijaya Karnataka 16 Jul 2019, 5:00 am
ತುಮಕೂರು: 'ಮದುವೆ ವಿಷಯದಲ್ಲಿ ಮಾತು ಕೇಳದ ಮಗಳ ಕೈಯ್ಯೋ, ಕಾಲೋ ಮುರಿದುಬಿಡಿ' ಎಂದು ಸ್ವಾಮೀಜಿಯೊಬ್ಬರು ನೀಡಿದ್ದ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web strong protest to veerabhadra shivaacharya swamiji statement women activists file memorandum to tumkur dc
ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ಚರ್ಚೆಗೆ ಗ್ರಾಸ


ವೀರಶೈವ ಲಿಂಗಾಯತ ಸಮಿತಿ ಆಯೋಜಿಸಿದ್ದ ಯುವ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆಯನ್ನು ಚಿಂತಕರು, ಮಹಿಳಾ ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದಾರೆ.

ಮಾತು ಕೇಳದ ಮಗಳಿಗೆ ಕೈಕಾಲು ಮುರಿಯಿರಿ ಎಂಬ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ತುಮಕೂರು ಜೀವಪರ ಮಹಿಳಾ ಹೋರಾಟಗಾರರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಮಹಿಳಾ ಹೋರಾಟಗಾರರು, ಮಾತು ಕೇಳದ ಮಗಳನ್ನು ಹೊಡೆದು ಬಡಿಯಿರಿ ಎಂಬ ಹೇಳಿಕೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಜತೆಗೆ ಪ್ರಚೋದನಾತ್ಮಕ ಹೇಳಿಕೆಯಾಗಿದ್ದು ನಾನಾ ಜೀವಪರ ಮಹಿಳಾ ಸಂಘಟನೆಗಳು ಸಿಡಿಮಿಡಿ ವ್ಯಕ್ತಪಡಿಸಿವೆ. ಅಖಿಲ ಭಾರತ ಸಾಂಸ್ಕೃತಿಕ ಸಂಘಟನೆ, ವರದಕ್ಷಿಣೆ ವಿರೋಧಿ ವೇದಿಕೆ, ಅಭಿಮುಖ ಸಂಘಟನೆ, ಮಹಿಳಾ ಸಾಂತ್ವನ ಕೇಂದ್ರ ಸೇರಿದಂತೆ ಹಲವು ಸಂಘಟನೆಗಳ ಮಹಿಳಾ ಹೋರಾಟಗಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಪ್ರತಿನಿತ್ಯ ಮರ್ಯಾದ ಹತ್ಯೆಗಳು, ಸ್ತ್ರೀ ಭ್ರೂಣ ಹತ್ಯೆಗಳು ಅತ್ಯಾಚಾರ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಬಸವತತ್ವ ಅನುಯಾಯಿಗಳಾದ ಸ್ವಾಮೀಜಿ ಹೇಳಿಕೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. 21ನೇ ಶತಮಾನದಲ್ಲೂ ಮಹಿಳೆಯರನ್ನು ಲಿಂಗ ತಾರತಮ್ಯದ ದೃಷ್ಟಿಕೋನದಲ್ಲಿ ಅಳೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ನಿಯೋಗದಲ್ಲಿ ಮಂಜುಳಾ, ಸುಲೋಚನಾ, ಪ್ರವೀಣಿ, ಕಲ್ಯಾಣಿ, ಸುಧಾ, ಮೇಘ, ವರದಕ್ಷಿಣೆ ವಿರೋಧಿ ವೇದಿಕೆಯ ಪಾರ್ವತಮ್ಮ ರಾಜ್‌ಕುಮಾರ್‌, ಗಂಗಲಕ್ಷ್ಮಿ ಹಾಜರಿದ್ದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಸ್ವಾಮೀಜಿ ಹೇಳಿದ್ದೇನು? 'ಪೋಷಕರೊಬ್ಬರು ಮಗಳನ್ನು ಕರೆದುಕೊಂಡು ಬಂದಿದ್ದರು. ಆಕೆ ಇಷ್ಟಪಟ್ಟ ಹುಡುಗನನ್ನೇ ಮದುವೆ ಆಗುವುದಾಗಿ ಹಟ ಹಿಡಿದಿದ್ದಳು. ನಿನಗೆ ಎಂಥ ಗಂಡು ಬೇಕು ಹೇಳು, ಹುಡುಕಿಕೊಡುತ್ತೇವೆ. ಆದರೆ ನಿನ್ನ ಆಯ್ಕೆ ಬಿಟ್ಟುಬಿಡು ಎಂದು ನಾವು ಎಷ್ಟೇ ಬುದ್ಧಿವಾದ ಹೇಳಿದರೂ ಕೇಳಲಿಲ್ಲ. ನನಗೆ ಮದುವೆ ಇಲ್ಲ ಅಂದರೆ ಹೇಳಿ ಮನೆಲೇ ಇರುತ್ತೇನೆ. ಇಷ್ಟ ಪಟ್ಟ ಹುಡುಗನೊಂದಿಗೆ ಬಿಟ್ಟರೆ ಬೇರೆಯವರೊಂದಿಗೆ ಮದುವೆಯಾಗುವುದಕ್ಕೆ ಒಪ್ಪಿಕೊಳ್ಳುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದಳು. ಆಕೆ ಮದುವೆಯಾಗಿ ಮನೆಯಲ್ಲೇ ಇದ್ದರೆ ಬಂಧುಗಳು ಕಾರಣ ಕೇಳುತ್ತಾರೆ. ಉತ್ತರಿಸಲು ತಂದೆ-ತಾಯಿಗೆ ಮುಜುಗರ ಆಗಬಹುದು. ಹಾಗಾಗಿ ಮಾತು ಕೇಳದ ಮಗಳ ಕೈಯ್ಯೋ, ಕಾಲೋ ಮುರಿದುಬಿಡಿ. ಅಂಗವಿಕಲತೆಯ ಕಾರಣಕ್ಕೆ ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ' ಎಂದು ಕಾರಣ ಹೇಳಬಹುದು ಎಂದು ನಿದರ್ಶನವೊಂದರ ಕಥೆಯನ್ನು ವಿವರಿಸಿರುವ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ