ಆ್ಯಪ್ನಗರ

ಪ್ರಿಯಕರ ಜತೆ ಓಡಿ ಹೋಗಲು ಸಹಕರಿಸಿದ್ದ ಮಹಿಳೆ ಕೊಲೆ

ಮಾವಿನ ತೋಟದಲ್ಲಿ ಕೆಲಸಕ್ಕೆ ಬಂದ ಪ್ರಿಯತಮನ ಜತೆ ನ.26ರಂದು ಪರಾರಿಯಾದ ಯುವತಿಯ ಪೋಷಕರು, ಮಾವಿನ ತೋಟದ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆ ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

Vijaya Karnataka 4 Dec 2018, 5:00 am
ಕೊರಟಗೆರೆ: ಮಾವಿನ ತೋಟದಲ್ಲಿ ಕೆಲಸಕ್ಕೆ ಬಂದ ಪ್ರಿಯತಮನ ಜತೆ ನ.26ರಂದು ಪರಾರಿಯಾದ ಯುವತಿಯ ಪೋಷಕರು, ಮಾವಿನ ತೋಟದ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆ ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
Vijaya Karnataka Web the murder of a woman who helped her run along with her lovers
ಪ್ರಿಯಕರ ಜತೆ ಓಡಿ ಹೋಗಲು ಸಹಕರಿಸಿದ್ದ ಮಹಿಳೆ ಕೊಲೆ


ತಾಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾಪಂ ವ್ಯಾಪ್ತಿಯ ಸೋಂಪುರ ಗ್ರಾಮದ ದ್ವಾರಕರಾಧ್ಯನ ಮಡದಿ ಭಾಗ್ಯಮ್ಮ (35) ಕೊಲೆಯಾದ ದುರ್ದೈವಿ. ಮೃತ ಮಹಿಳೆ ಸಂಸಾರದ ನಿರ್ವಹಣೆಗಾಗಿ ಕಳೆದ ಎರಡು ವರ್ಷಗಳಿಂದ ತಿಗಳರಪಾಳ್ಯ ಸಮೀಪದ ದೀಪಕ್‌ ಎಂಬುವರ ಮಾವಿನ ಎಸ್ಟೇಟ್‌ನಲ್ಲಿ ಗಂಡನ ಜತೆ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಬೆಂಗಳೂರು ಮೂಲದ ದೀಪಕ್‌ ಎಂಬುವರಿಗೆ ಸೇರಿದ ಮಾವಿನ ಎಸ್ಟೇಟ್‌ನಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಮಾವಿನ ಕಾಯಿ ಕೀಳಲು ಬಂದ ಮಂಡ್ಯ ಮೂಲದ ಕೃಷ್ಣ ಮತ್ತು ತಿಗಳರಪಾಳ್ಯ ಗ್ರಾಮದ ವರಲಕ್ಷ್ಮೀ ನಡುವೆ ಸ್ನೇಹ ಬೆಳೆದಿದೆ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದೆ. ಹುಡುಗ ಮತ್ತು ಹುಡುಗಿ ಮತ್ತೆ ಸಂಪರ್ಕಿಸಲು ಭಾಗ್ಯಮ್ಮ ಮೊಬೈಲ್‌ ನೀಡಿದ್ದರು ಎಂಬ ಆರೋಪ ಇದೆ.

ತಿಗಳರಪಾಳ್ಯದ ಮಲ್ಲೇಶಪ್ಪನ ಮಗಳಾದ ವರಲಕ್ಷ್ಮೀ ನ.26ರಂದು ಮನೆಯಿಂದ ಕಾಣೆಯಾದ ಹಿನ್ನೆಲೆ ಕೊರಟಗೆರೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ದೂರಿನಲ್ಲಿ ಎಸ್ಟೇಟ್‌ನ ಭಾಗ್ಯಮ್ಮನ ಮೇಲೆ ಪೋಷಕರು ಅನುಮಾನ ವ್ಯಕ್ತಪಡಿಸಿದಾಗ, ಪೊಲೀಸರು ಆಕೆಯ ವಿಚಾರಣೆ ನಡೆಸಿದ್ದಾರೆ. ಆಗ ಯುವತಿಗೆ ಮೊಬೈಲ್‌ ನೀಡಿ ಹುಡುಗನ ಜತೆ ಹೋಗಲು ಭಾಗ್ಯಮ್ಮ ಸಹಾಯ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.

ಯುವತಿ ಪರಾರಿ ಆಗಲು ಮೊಬೈಲ್‌ ನೀಡಿದ ಕಾರಣಕ್ಕಾಗಿ ರೊಚ್ಚಿಗೆದ್ದ ಯುವತಿ ತಂದೆ ಮಲ್ಲೇಶಪ್ಪ ಸೇರಿ 8 ಜನರ ತಂಡ ಭಾನುವಾರ ಮಧ್ಯಾಹ್ನ ಎಸ್ಟೇಟ್‌ಗೆ ನುಗ್ಗಿ ಭಾಗ್ಯಮ್ಮ ಮತ್ತು ಧ್ವಾರಕರಾಧ್ಯನಿಗೆ ರಾಡು, ದೊಣ್ಣೆ ಮತ್ತು ಕಲ್ಲಿನಿಂದ ಹಿಗ್ಗಾಮುಗ್ಗಾ ಥಳಿಸಿ ರೂಂಗೆ ತಳ್ಳಿ ಬೀಗ ಹಾಕಿದ್ದಾರೆ. ನಂತರ ಪೊಲೀಸರ ಸಹಾಯದಿಂದ ಪ್ರಜ್ಞೆ ತಪ್ಪಿದ್ದ ಭಾಗ್ಯಮ್ಮನನ್ನು ಆಂಬ್ಯುಲೆನ್ಸ್‌ ಮೂಲಕ ಕೊರಟಗೆರೆ ಆಸ್ಪತ್ರೆಗೆ ದಾಖಲಿಸಿ ನಂತರ ತುಮಕೂರಿಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಮೃತ ಭಾಗ್ಯಮ್ಮ ಮೂಲತಃ ಕೋಳಾಲ ಹೋಬಳಿ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದ ವಾಸಿ. ಒಬ್ಬಳು ಹೆಣ್ಣು ಮಗಳು ಇದ್ದಾಳೆ. ಘಟನೆ ತಿಳಿದ ಮೃತ ಮಹಿಳೆಯ ತವರು ಮನೆಯ ಷೋಷಕರು ತಿಗಳರಪಾಳ್ಯ ಗ್ರಾಮಕ್ಕೂ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಗಂಡನ ದೂರಿನ ಮೇಲೆ ತಿಗಳರಪಾಳ್ಯದ ಮಲ್ಲೇಶಪ್ಪ, ಶ್ರೀಧರ, ಚಂದ್ರಶೇಖರ, ಲಕ್ಷ್ಮೀದೇವಮ್ಮ, ನರಸಮ್ಮ ಈ ಐವರ ಮೇಲೆ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ