*ಸಿರಾಜ್ ಅಹಮದ್ ಕೆ.ಎ.
ಕೊಡಿಗೇನಹಳ್ಳಿ
ಬೇಸಿಗೆ ಮುನ್ನವೇ ಜಲಕ್ಷಾಮ ಎದುರಾಗಿದ್ದು ಜಿಲ್ಲೆಯ ಗಡಿಭಾಗದಲ್ಲಿ ಮಳೆ ಕೊರತೆಯಿಂದ ಹಿಂದೆಂದೂ ಕಾಣದ ಬರಗಾಲಕ್ಕೆ ತುತ್ತಾದ ಜನತೆ ನೀರಿಗಾಗಿ ಆತಂಕ ಪಡುವಂತೆ ಮಾಡಿದೆ.
ತಾಲೂಕಿನ ಗಡಿಭಾಗದಲ್ಲಿ ಸುಮಾರು 30 ರಿಂದ 36 ಡಿಗ್ರಿಯಂತೆ ಬಿಸಿಲಿನ ತಾಪಮಾನ ದಿನೇ ದಿನೆ ಏರುತ್ತಿದ್ದು ನೀರಿನ ಅಂತರ್ಜಲ ಪಾತಾಳಕ್ಕೆ ಕುಸಿಯತೊಡಗಿದೆ. ಈ ಭಾಗದ ಸುತ್ತಮುತ್ತಲಿನ ಕೆರಗಳೆಲ್ಲಾ ಖಾಲಿಯಾಗಿ ಅದರ ತುಂಬ ಸೀಮೆ ಜಾಲಿ ಗಿಡಗಳು ಬೆಳೆದು ನಿಂತಿವೆ.
ಕೆರೆಯ ಆಸುಪಾಸಿನಲ್ಲಿ 1300 ಅಡಿ ಬೋರ್ ಕೊರೆಸಿದರೂ ನೀರು ಸಿಗುವುದು ಗಗನಕುಸುಮವಾಗಿದೆ. ಬರಗಾಲ ಎಂಬ ಭೂತಾಟಕ್ಕೆ ರೈತರ ಜಮೀನಿನಲ್ಲಿ ಬಿತ್ತಿದ ಬೆಳೆಗಳು ಒಣಗಿಹೋಗಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕನಿಷ್ಠ ನಿತ್ಯ ಬಳಕೆ ಹಾಗೂ ಕುಡಿಯಲೂ ನೀರಿಲ್ಲದಂತಹ ಸ್ಥಿತಿ ಎದುರಾಗಿದೆ.
ಈ ಭಾಗದ ಕೆರಗಳಿಗೆ ಯಾವುದೆ ಜಲ ಮೂಲವಿಲ್ಲದಾಗಿದ್ದು ಕನಿಷ್ಠ ಈ ಭಾಗದ ದೊಡ್ಡಮಾಲೂರು ಕೆರೆಗೆ ಹೇಮಾವತಿ ಅಥವಾ ಎತ್ತಿನಹೊಳೆ ಹರಿದು ಬಂದರೆ ಮುಂದಿನ ದಿನಗಳಲ್ಲಿ ನೀರಿನ ಬವಣೆಗೆ ಅಂತ್ಯ ಕಾಣಬಹುದಾಗಿದೆ.
ಹಗಲಿರುಳು ಸಾಹಸ
ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಪ್ರತಿದಿನ ಒಂದಲ್ಲಾ ಒಂದು ಕೇರಿಯಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನದಲ್ಲಿದ್ದಾರೆ. ಪೂರ್ವದಲ್ಲಿ ಬೋರ್ ಕೊರೆಸಿ ಸಮಸ್ಯೆ ಬಗೆಹರಿಸಿದರೆ, ಪಶ್ಚಿಮದಲ್ಲಿ ಸಮಸ್ಯೆ ಉದ್ಭವವಾಗುತ್ತಿದೆ. ಇದರ ನಡುವೆ ಸಭೆಗಳು, ವಿಡಿಯೋ ಕಾನ್ಫರೆನ್ಸ್ ಹಾಗೂ ಕಚೇರಿ ಕೆಲಸ ಮಾಡುವ ಅಧಿಕಾರಿಗಳಿಗೆ ಬರ ನಿರ್ವಹಣೆಗೆ ಸಮಯ ಸಾಕಾಗುತ್ತಿಲ್ಲಾ. ಹೆಸರು ಹೇಳಲಿಚ್ಛಿಸಿದ ಅಧಿಕಾರಿಗಳು ಈ ಬಗ್ಗೆ ತಮ್ಮ ನೋವು ಬಿಚ್ಚಿಟ್ಟಿದ್ದಾರೆ.
ಟ್ಯಾಂಕರ್ ಮೂಲಕ ಸರಬರಾಜು
ನೀರಿಗಾಗಿ ಸಿಟ್ಟಿಗೆದ್ದ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪಂಚಾಯತಿಗೆ ಬೀಗ ಹಾಕುವುದು ಮಾಮೂಲಿಯಾಗಿಬಿಟ್ಟಿದೆ. ಇದರಿಂದ ಎಚ್ಚೆತ್ತ ಇಲಾಖೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ನೀರಿನ ವ್ಯವಸ್ಥೆ ಕಲ್ಪಿಸಿದೆ. ನೀರಿಲ್ಲದ ಪರಿಣಾಮ ಕನಿಷ್ಠ ಒಂದು ಟ್ರ್ಯಾಕ್ಟರ್ ತುಂಬಲು 2 ಗಂಟೆಯಾಗುತ್ತಿದ್ದು, ಪ್ರತಿ ದಿನ ಹೆಚ್ಚೆಂದರೆ 4 ರಿಂದ 5 ಲೋಡ್ ತುಂಬ ಬಹುದಾಗಿದೆ. ಕೆಲವೆಡೆ ನೀರಿದ್ದರು ಟ್ಯಾಂಕರ್ ದಂಧೆ ನಡೆಯುತ್ತಿರುವ ಆರೋಪ ಕೇಳಿ ಬರುತ್ತಿದೆ.
ಮೇಲಾಗಿ ಮಳೆ ಪ್ರಮಾಣದಲ್ಲಿ ಕೂಡ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಹಾಗಾಗಿ, ಅಂತರ್ಜಲಮಟ್ಟದಲ್ಲಿ ತೀವ್ರ ಕುಸಿತ ಉಂಟಾಗಿದೆ.
ಪಂಚಾಯಿತಿವಾರು ಬೋರ್ ಸ್ಥಿತಿಗತಿ
ಪಂಚಾಯಿತಿ-ಒಟ್ಟು -ಚಾಲ್ತಿ-ಸ್ಥಗಿತ-2019ರಲ್ಲಿ ಕೊರೆಸಿದ್ದು
ಕೊಡಿಗೇನಹಳ್ಳಿ-22-14-08-4
ಚಿಕ್ಕಮಾಲೂರು- 16-07-09-8
ದೊಡ್ಡಮಾಲೂರು-20-13-07-6
ಮುದ್ದೇನಹಳ್ಳಿ-42-20-22-7
ಚಿಕ್ಕದಾಳವಟ್ಟ -24-12-12-2
ಕಲಿದೇವಪುರ-33-23-10-7
ಶುದ್ಧ ನೀರಿನ ಘಟಕಗಳು
ಪಂಚಾಯಿತಿ-ಒಟ್ಟು-ಚಾಲ್ತಿ-ಸ್ಥಗಿತ
ಕೊಡಿಗೇನಹಳ್ಳಿ-5-1-4
ಚಿಕ್ಕಮಾಲೂರು-5-2-3
ದೊಡ್ಡಮಾಲೂರು-5-5-0
ಮುದ್ದೇನಹಳ್ಳಿ-6-5-1
ಕಲಿದೇವಪುರ-3-3-0
ಚಿಕ್ಕದಾಳವಟ್ಟ-6-5-1
ಮಳೆ ಇಲ್ಲದೆ ನೀರಿನ ಸಮಸ್ಯೆ ಉದ್ಭವವಾಗಿದೆ. ಈ ಬಗ್ಗೆ ದೂರು ಬಂದಲ್ಲಿ ತಕ್ಷ ಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಅವಶ್ಯಕತೆ ಇದ್ದ ಕಡೆ ಬೋರ್ ಕೊರೆಸಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವಂತೆ ತಿಳಿಸುತ್ತೇನೆ.
- ಎಂ.ವಿ. ವೀರಭದ್ರಯ್ಯ, ಶಾಸಕ
ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದು, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಸಮಸ್ಯೆ ಬಗೆಹರಿಸುತ್ತಿದ್ದೇವೆ. ಸೋಮವಾರ ಮತ್ತೊಮ್ಮೆ ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ. ನವಗ್ರಾಮಕ್ಕೆ ಮತ್ತೆರಡು ಬೋರ್ ಕೊರೆಸಲು ತೀರ್ಮಾನಿಸಲಾಗಿದೆ.
- ರಮೇಶ್ ಬಾಬು, ತಹಸೀಲ್ದಾರ್
ವಿಕೋಪ ಪರಿಸ್ಥಿತಿ ಬರುವ ಮುನ್ನ ಮುಂಜಾಗೃತೆ ಕೈಗೊಂಡಿದ್ದರೆ ಇಂತಹ ಸ್ಥಿತಿ ಎದುರಾಗುತ್ತಿರಲಿಲ್ಲ. ಕಳೆದ ಆರು ತಿಂಗಳಿಂದ ಕೂಲಿ ಬಿಟ್ಟು ನೀರಿಗಾಗಿ ಸುತ್ತುವಂತಾಗಿದೆ. ಬೋರ್ ಕೊರೆಸುವವರೆಗೂ ಪ್ರತಿ ಬೀದಿಗೆ 4 ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕು.
- ರಾಮದಾಸ್, ನವಗ್ರಾಮ, ಕೊಡಿಗೇನಹಳ್ಳಿ