*ಆರ್.ಸತ್ಯನಾರಾಯಣ್
ತುರುವೇಕೆರೆ: ಸಂಮೃದ್ಧ ತೆಂಗು, ಸಿಹಿ ಕೊಬ್ಬರಿಯೊಂದಿಗೆ ಕಲ್ಪತರು ನಾಡೆಂದೇ ಹೆಸರಾದ ತುರುವೇಕೆರೆ ರಾಜಕೀಯವಾಗಿಯೂ ರಾಜ್ಯಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲೂ ತುರುವೇಕೆರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ವಿಜಯಮಾಲೆ ಯಾರಿಗೆ ಒಲಿಯುವುದು ಎಂಬುದು ಕುತೂಹಲ ಕೆರಳಿಸಿದೆ.
ಪ್ರಾಕೃತಿಕ ಮಳೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ತಾಲೂಕು ಬರದ ದವಡೆಗೆ ಸಿಲುಕಿರುವುದು ಒಂದೆಡೆಯಾದರೆ, ಹೇಮಾವತಿ ನಾಲೆ ಕ್ಷೇತ್ರಕ್ಕೆ ವರವೂ ಹೌದು, ಶಾಪವೂ ಹೌದು ಎಂಬಂತಾಗಿದೆ. ತಾಲೂಕಿಗೆ ನಿಗದಿಪಡಿಸಿದ ಪ್ರಮಾಣದ ನೀರು ಹರಿದಲ್ಲಿ ಮಾತ್ರ ಕೃಷಿ ಪ್ರದಾನ ತುರುವೇಕೆರೆ ಕೃಷಿಕರು ತಮ್ಮ ಬದುಕು ಹಸನಾಗಿಸಿಕೊಳ್ಳಬಹುದು. ಇಲ್ಲದಿದ್ದರೆ ಸದಾ ನಿರುದ್ಯೋಗದ ಸಮಸ್ಯೆಯೊಂದಿಗೆ ರಾಜಕೀಯವೇ ಪೂರ್ಣ ಪ್ರಮಾಣದ ಉದ್ಯೋಗವಾಗಲಿದೆ.
ತುರುವೇಕೆರೆ ರಾಜಕಾರಣ:
1952ರಿಂದ ಬಾಣಸಂದ್ರ ದಿವಂಗತ ಹುಚ್ಚೇಗೌಡರಿಂದ (2 ಬಾರಿ) ಆರಂಭಗೊಂಡು ಈ ವರೆಗೆ ಭೈರಪ್ಪಾಜಿ (3 ಬಾರಿ), ರಾಮಕೃಷ್ಣಯ್ಯ (2 ಬಾರಿ), ಎಸ್.ಆರ್.ರುದ್ರಪ್ಪ, ಎಚ್.ಬಿ.ನಂಜೇಗೌಡ (ತಲಾ 1ಬಾರಿ) ಹಾಗೂ ಎಂ.ಟಿ.ಕೃಷ್ಣಪ್ಪ (3 ಬಾರಿ) ಈ ಎಲ್ಲರೂ ಒಕ್ಕಲಿಗರೇ ಆಗಿ ಕ್ಷೇತ್ರದ ಆಡಳಿತದ ಚುಕ್ಕಾಣಿ ಹಿಡಿದವರಾಗಿದ್ದಾರೆ. ಇವರನ್ನು ಹೊರತು ಪಡಿಸಿದಂತೆ ತಾಳ್ಕೆರೆ ಸುಬ್ರಹ್ಮಣ್ಯಂ, ಎಂ.ಎನ್.ರಾಮಣ್ಣ, ಎಂ.ಡಿ.ಲಕ್ಷ್ಮೇನಾರಾಯಣ್ ಒಂದು ಬಾರಿಗೆ ಶಾಸಕರಾಗಿದ್ದು, ಬರೀ ನೆನಪಾಗಿ ಉಳಿದಿದೆ. ಪ್ರಸ್ತುತ ಸಹ ಕ್ಷೇತ್ರದಲ್ಲಿ 65,760 ಮತ ಹೊಂದಿರುವ ಒಕ್ಕಲಿಗರೇ ನಿರ್ಣಾಯಕರಾಗಿದ್ದು, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷ ದ ಒಕ್ಕಲಿಗರ ಅಭ್ಯರ್ಥಿಗಳೊಂದಿಗೆ ಹಲವು ಪಕ್ಷೇತರರು ಸೇರಿಕೊಂಡಿದ್ದಾರೆ.
ಒಟ್ಟು ಮತದಾರರು: 1,81,160
ಒಕ್ಕಲಿಗರು: 65,760
ಲಿಂಗಾಯಿತರು: 35,000
ಪ.ಜಾತಿ, ಪ.ಪಂಡ: 30,000
ಮುಸ್ಲಿಂ: 10,000
ಇತರೆ ಸಣ್ಣ ಸಮುದಾಯಗಳು ಸೇರಿ: 40,000
ಕಣದಲ್ಲಿರುವ ಅಭ್ಯರ್ಥಿಗಳು:
ಕ್ಷೇತ್ರದಲ್ಲಿ ಹಾಲಿ ಜೆ.ಡಿ.ಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಕಳೆದ ಭಾರಿ ಪರಾಜಿತರಾದ ಮಸಾಲಾ ಜಯರಾಮ್ ಬಿಜೆಪಿಯಿಂದ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಮುಖಂಡ ಚೌದ್ರಿ ರಂಗಪ್ಪ, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಸಮಾಜ ಸೇವಕ ನಾರಾಯಣಗೌಡ ಹಾಗೂ ತಾಪಂ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ಗೌಡ, ಇವರೊಂದಿಗೆ ಇನ್ನೂ ಆರು ಜನ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಪಕ್ಷ ಗಳ ವರ್ಚಸ್ಸು :
ಜೆಡಿಎಸ್ಗೆ ದಬ್ಬೇಘಟ್ಟ ಹೋಬಳಿ ಭದ್ರಕೋಟೆಯಾಗಿದ್ದು ಕಳೆದ ಇಪ್ಪತ್ತು ವರ್ಷಗಳಿಂದ ಜಿಲ್ಲಾ ಹಾಗೂ ತಾಪಂ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಈ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ಕುಮಾರ್ ಈ ಮೂವರು ಕ್ಷೇತ್ರಕ್ಕೆ ಭೇಟಿ ನೀಡಿ, ಹಲವು ಪ್ರಚಾರಸಭೆ ನಡೆಸಿ, ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ. ಆದರೂ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳೂ ತೀವ್ರ ಸ್ಪರ್ಧೆಯೊಡ್ಡಿದ್ದು, ಜೆಡಿಎಸ್ ಅಭ್ಯರ್ಥಿಗಳಿಗೆ ಗೆಲುವು ಕಷ್ಟವಾಗಿದೆ.
ಒಕ್ಕಲಿಗರನ್ನೇ ಪ್ರಧಾನವಾಗಿ ಹೊಂದಿರುವ ಮಾಯಸಂದ್ರ ಹೋಬಳಿಯವರೇ ಆಗಿರುವ ಕಾರಣ ಚೌದ್ರಿ ರಂಗಪ್ಪ ಹಾಗೂ ಎಂ.ಟಿ.ಕೃಷ್ಣಪ್ಪ ನಡುವೆ ಸಮಬಲ ಹೋರಾಟದ ನಿರೀಕ್ಷೆಯಿದೆ. ಹೋಬಳಿಯ ಒಕ್ಕಲಿಗ ಮತಗಳನ್ನು ಇವರಿಬ್ಬರು ಹಂಚಿಕೊಂಡರೆ ಇನ್ನುಳಿದ ಸಮುದಾಯದ ಮತಗಳನ್ನು ಯಾರು ಹೆಚ್ಚು ಸೆಳೆಯಲಿದ್ದಾರೆ ಎಂಬುದು ನಿರ್ಣಾಯಕ. ಕಳೆದ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದ ಜಯಲಕ್ಷ್ಮಿ ಜಯರಾಮ್ ಹಾಗೂ 4 ತಾಪಂಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿತ್ತು. ಈ ಲೆಕ್ಕಾಚಾರದಲ್ಲಿ ಕಾಂಗ್ರೆಸಿಗರು ಒಗ್ಗೂಡಿ ಪ್ರಚಾರದಲ್ಲಿರುವುದರಿಂದ ಮಾಯಸಂದ್ರ ಹೋಬಳಿಯಲ್ಲಿ ಕಾಂಗ್ರೆಸ್ ಮುನ್ನಡೆ ಪಡೆಯುವ ಸಾಧ್ಯತೆಯೂ ಇದೆ. ಕಳೆದ ಭಾರಿ ಪರಾಭವಗೊಂಡ ಮಸಾಲಾ ಜಯರಾಮ್ ಇಲ್ಲಿ ಅನುಕಂಪದ ನಿರೀಕ್ಷೆಯಲ್ಲಿದ್ದಾರೆ.
ಕ್ಷೇತ್ರದ ಲಿಂಗಾಯಿತ ವರ್ಗ ಅಧಿಕವಾಗಿರುವ ದಂಡಿನಶಿವರ ಹೋಬಳಿಯಲ್ಲಿ ಕಳೆದ ಭಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಸಾಲಾ ಜಯರಾಮ್ ಭಾರಿ ಮುನ್ನಡೆ ಸಾಧಿಸಿದ್ದರು. ಈಗ ಅದೇ ಅಸ್ತಿತ್ವವನ್ನು ಅವರು ಪ್ರಸ್ತುತ ಬಿಜೆಪಿಯಲ್ಲೂ ಸಾಧಿಸಿದ್ದಾರೆ. ಜಿಪಂನಲ್ಲಿ ಜೆಡಿಎಸ್ ಪ್ರಭುತ್ವ ಇದ್ದರೆ, ತಾಪಂ ಸ್ಥಾನಗಳಲ್ಲೂ ಜೆಡಿಎಸ್ ಸಿಂಹಪಾಲು ಪಡೆದಿದೆ. ಇಲ್ಲಿನ ಹಲವು ಕೆರೆಗಳಿಗೆ ನೀರು ತುಂಬಿಸಿದ್ದು ಶಾಸಕರಿಗೆ ವರವಾಗುವ ಸಾಧ್ಯತೆಯಿದೆ. ಈ ನಡುವೆ ಕಾಂಗ್ರೆಸ್ ಹಿಂದುಳಿದ ವರ್ಗ, ಒಕ್ಕಲಿಗ ಪಾಳಯವನ್ನು ಸೆಳೆಯುವಲ್ಲಿ ಮುಂದಾಗಿದೆ.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕಸಬಾ ಹೋಬಳಿಯಲ್ಲಿ ಒಕ್ಕಲಿಗ, ಲಿಂಗಾಯಿತ ಹಾಗೂ ಅಹಿಂದ ವರ್ಗದ ಮತಗಳೂ ಸಮಬಲವಾಗಿದ್ದು ಮೂರು ಪಕ್ಷ ಗಳು ತೀವ್ರ ಪೈಪೋಟಿ ಒಡ್ಡಿವೆ. ಇಲ್ಲಿ ಮೂರು ಪಕ್ಷ ಗಳಿಗೆ ಸಮಾನ ಅವಕಾಶಗಳಿವೆ. ಇಲ್ಲಿನ 1 ಜಿಪಂ ಹಾಗೂ 3 ತಾಪಂ ಕಾಂಗ್ರೆಸ್ ಪಾಲಾಗಿದ್ದು ಕಾಂಗ್ರೆಸ್ಗೆ ಸಹಕಾರಿಯಾಗಲಿದೆ.
ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಒಕ್ಕಲಿಗ ಮತದಾರರ ಪ್ರಭಾವ ದಟ್ಟವಾಗಿದೆ. ಬಿಜೆಪಿ ಅಭ್ಯರ್ಥಿ ಇದೇ ಹೋಬಳಿಯವರಾಗಿದ್ದು ಜಿಪಂ ಮತ್ತು ತಾಪಂಗಳಲ್ಲಿ ಜಯಗಳಿಸಿ ತಮ್ಮ ಅಸ್ತಿತ್ವ ಸಾಬೀತುಪಡಿಸಿದ್ದಾರೆ. ಆದರೆ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಈ ಹೋಬಳಿ ಜೆಡಿಎಸ್ಗೆ ಭಾರಿ ಮುನ್ನಡೆ ನೀಡಿತ್ತು. ಈ ಭಾರಿ ಜೆಡಿಎಸ್ ಮತ್ತು ಬಿಜೆಪಿ ಸಮಬಲದ ನಿರೀಕ್ಷೆಯಲ್ಲಿವೆ. ಒಟ್ಟಾರೆ ಕ್ಷೇತ್ರದಾದ್ಯಂತ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸಮಬಲದ ನಿರೀಕ್ಷೆಯಲ್ಲಿದ್ದು ಮೂವರಲ್ಲಿ ಯಾರು ಗೆದ್ದರೂ ಸಹ ಕಡಿಮೆ ಮತಗಳ ಅಂತರದಲ್ಲಿರಲಿದೆ.
ಒಟ್ಟಾರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಿದ್ದು, ಮೂರು ಪಕ್ಷ ಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಜತೆಗೆ ಪಕ್ಷೇತರರಾದ ನಾರಾಯಣಗೌಡ ಹಾಗೂ ರಮೇಶ್ಗೌಡ ಅಭಿಮಾನಿಗಳ ಜತೆ ಹಳ್ಳಿ ಹಳ್ಳಿ ಸುತ್ತುತ್ತಿದ್ದು, ಪಕ್ಷ ಗಳ ಅಭ್ಯರ್ಥಿಗಳಿಗೆ ತೊಡರುಗಾಲಾಗುವ ಸಂಭವವಿದೆ.