ಅಕ್ರಮವಾಗಿ ಸಾಗಿಸುತ್ತಿದ್ದ 2.98 ಕೋಟಿ ರೂ. ಜಪ್ತಿ
ಖಾಸಗಿ ಬಸ್ನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸುಮಾರು 2.98 ಕೋಟಿ ರೂ. ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿರುವ ಘಟನೆ ನಗರದ ಕ್ಯಾತ್ಸಂದ್ರ ಜಾಸ್ ಟೋಲ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ತುಮಕೂರು: ಖಾಸಗಿ ಬಸ್ನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸುಮಾರು 2.98 ಕೋಟಿ ರೂ. ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿರುವ ಘಟನೆ ನಗರದ ಕ್ಯಾತ್ಸಂದ್ರ ಜಾಸ್ ಟೋಲ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಗಜಾನನ ಸ್ಲೀಪಿಂಗ್ ಕೋಚ್ ಖಾಸಗಿ ಬಸ್ನಲ್ಲಿ ಹಣ ಸಾಗಿಸುತ್ತಿರುವ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಕರೆ ಬಂದಿದೆ. ಈ ಕರೆ ಆಧರಿಸಿ ಎಸ್ಪಿ ದಿವ್ಯಾ ಗೋಪಿನಾಥ್ ಸೂಚನೆ ಮೇರೆಗೆ ಕ್ಯಾತ್ಸಂದ್ರ ಠಾಣೆ ಸಿಪಿಐ ರಾಘವೇಂದ್ರ ಎಸ್.ಗೌಡ, ಎಸ್ಐ ರಾಜು ಡಿ.ಎಲ್ ಅವರು ಕ್ಯಾತ್ಸಂದ್ರ ಸಮೀಪವಿರುವ ಟೋಲ್ ಬಳಿ ಸೆಕ್ಟರ್ ಸರ್ವೇಲೆನ್ಸ್ ಅಧಿಕಾರಿ ಗಂಗಾಧರ್, ಬಿ.ಸಮೀರ್, ಪ್ಲೈಯಿಂಗ್ ಟೀಂನ ಪ್ರಶಾಂತ ಕೂಡ್ಲಿಗಿ ಅವರ ತಂಡ ಮಧ್ಯರಾತ್ರಿ 12.15ಕ್ಕೆ ಬಂದ ಬಸ್ನ ತಪಾಸಣೆ ನಡೆಸಿದರು. ಆಗ ಸ್ಲೀಪರ್ ಕೋಚ್ ಕೆಳಗೆ ಎರಡು ಬ್ಯಾಗ್ ಮತ್ತು ಬಾಕ್ಸ್ ದೊರೆತಿದ್ದು, ಅದರಲ್ಲಿ 2000ರೂ. ಮುಖಬೆಲೆಯ 97 ಬಂಡಲ್ ಮತ್ತು 500 ರೂ. ಮುಖಬೆಲೆಯ 209 ಬಂಡಲ್ನ 2.98 ಕೋಟಿ ರೂ. ನಗದು ಪತ್ತೆಯಾಗಿದ್ದು, ವಾರಸುದಾರರಿಲ್ಲದ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗ-ಸೊರಬ ಮಾರ್ಗವಾಗಿ ಶಿರಸಿಗೆ ತಲುಪುವ ಗಜಾನನ ಸ್ಲೀಪಿಂಗ್ ಕೋಚ್ ಬಸ್ ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಹೊರಟಿತ್ತು. ಇಷ್ಟು ಹಣ ಯಾರಿಗೆ ಸೇರಿದ್ದು ಎಂಬ ಮಾಹಿತಿ ಇಲ್ಲ. ಬಸ್ನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ತಪಾಸಣೆ ವೇಳೆ ಹಣದ ಬಗ್ಗೆ ಯಾರೂ ಖಚಿತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪೊಲೀಸರು ತುಮಕೂರು ಉಪವಿಭಾಗಾಧಿಕಾರಿ ವಶಕ್ಕೆ ನೀಡಿದ್ದಾರೆ.
ತಪಾಸಣೆ ವೇಳೆ ಹಣ ಸಿಕ್ಕಿದ ತಕ್ಷಣ ಬಸ್ ಅನ್ನು ಠಾಣೆಗೆ ಕರೆದೊಯ್ದು ವಶಕ್ಕೆ ಪಡೆದುಕೊಳ್ಳಲಾಗಿದೆ. ಸೋಮವಾರ ಬೆಳಿಗ್ಗೆ ಎಸ್ಪಿ ಡಾ. ದಿವ್ಯಾಗೋಪಿನಾಥ್, ಡಿವೈಎಸ್ಪಿ ನಾಗರಾಜ್, ಐಟಿ ಅಧಿಕಾರಿ ಭುವನೇಶ್ವರಿ, ತಾಪಂ ಇಒ ನಾಗಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಸ್ನಲ್ಲಿ ಊರು ಸೇರಬೇಕಾದ ಪ್ರಯಾಣಿಕರು ಕ್ಯಾತ್ಸಂದ್ರ ಪೊಲೀಸ್ ಠಾಣೆ ಮುಂದೆ ಇರಬೇಕಾಯಿತು. ಎಸ್ಪಿ ದಿವ್ಯಾ ಗೋಪಿನಾಥ್ ಪ್ರಯಾಣಿಕರನ್ನು ಸಿದ್ಧಗಂಗಾ ಮಠಕ್ಕೆ ಕರೆದೊಯ್ದ ಪ್ರಯಾಣಿಕರಿಗೆ ತಿಂಡಿ ವ್ಯವಸ್ಥೆ ಮಾಡಿಸಿ ವಿಚಾರಣೆ ನಡೆಸಿ ಮಧ್ಯಾಹ್ನ 1.30ರ ಸುಮಾರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಳುಹಿಸಲಾಯಿತು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಅನುಮತಿ ಪಡೆದು ಹಣವನ್ನು ಖಜಾನೆಯಲ್ಲಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.