ಆ್ಯಪ್ನಗರ

ತುಮಕೂರು ಜನ ದೇವೇಗೌಡರ ಕೈಹಿಡಿಯಲಿಲ್ಲ ಏಕೆ?

ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡರ ಸೋಲಿಗೆ ಅನೇಕ ಕಾರಣಗಳಿವೆ

Vijaya Karnataka Web 26 May 2019, 8:16 pm
ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡರ ಸೋಲಿಗೆ ಅನೇಕ ಕಾರಣಗಳಿವೆ. ಮೊಟ್ಟ ಮೊದಲನೆಯದಾಗಿ ಹೇಮಾವತಿ ನೀರಿನ ಹಂಚಿಕೆ ವಿಚಾರದಲ್ಲಿ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಜನತೆ ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಿದ್ದಾರೆ. ಹೇಮಾವತಿ ನೀರನ್ನೇ ಪ್ರಮುಖವಾಗಿ ಅವಲಂಬಿಸಿರುವ ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳು ನೀರಿಲ್ಲದೆ ಒಣಗಿ ಹೋಗಿವೆ. ಇಷ್ಟಾದರೂ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರು ನೀರು ಹರಿಸಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಪ್ರಚಾರ ಮಾಡಿದ್ದರು. ಈ ವಾಸ್ತವವನ್ನು ಅಂಕಿ-ಅಂಶಗಳ ಸಮೇತ ಜನತೆಗೆ ಮನವರಿಕೆ ಮಾಡಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು.
Vijaya Karnataka Web hdd


ಜೆಡಿಎಸ್‌ನೊಂದಿಗಿನ ಮೈತ್ರಿಯನ್ನು ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ವಿರೋಧಿಸಿದ್ದರು. ಕಾಂಗ್ರೆಸ್‌ ಮಾಜಿ ಶಾಸಕರಾದ ಡಾ.ರಫೀಕ್‌ ಅಹ್ಮದ್‌, ಷಫಿ ಅಹಮದ್‌ ಸೇರಿದಂತೆ ಮುಂಚೂಣಿಯಲ್ಲಿದ್ದ ಅಲ್ಪಸಂಖ್ಯಾತರು ಬಹಿರಂಗವಾಗಿಯೇ ಮೈತ್ರಿಯನ್ನು ವಿರೋಧಿಸಿದ್ದರು. ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಅವರು ದೇವೇಗೌಡರ ಸ್ಪರ್ಧೆ ವಿರೋಧಿಸಿ ಬಂಡಾಯವಾಗಿ ನಾಮಪತ್ರ ಸಲ್ಲಿಸುವ ಮೂಲಕ ಮೈತ್ರಿಗೆ ಆರಂಭದಲ್ಲೇ ಸಾಕಷ್ಟು ಹೊಡೆತ ಕೊಟ್ಟಿದ್ದರು. ಪ್ರಚಾರ ಸಭೆಗಳಿಂದಲೂ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಇದರ ಫಲವಾಗಿ ತನಗೆ ಅಸ್ತಿತ್ವವೇ ಇಲ್ಲದ ಮಧುಗಿರಿಯಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ.

ದೇವೇಗೌಡರನ್ನು ಗೆಲ್ಲಿಸುವ ಹೊಣೆ ಹೊತ್ತಿದ್ದ ಸಚಿವರಾದ ಎಸ್‌.ಆರ್‌.ಶ್ರೀನಿವಾಸ್‌ ಹಾಗೂ ಡಾ.ಜಿ.ಪರಮೇಶ್ವರ್‌ ಅಬ್ಬರದ ಪ್ರಚಾರ ಸಭೆಗಳಿಗೆ ಮಾತ್ರ ಆದ್ಯತೆ ನೀಡಿದ್ದರು. ಬೂತ್‌ ಮಟ್ಟದಲ್ಲಿ ಆಗಬೇಕಾಗಿದ್ದ ಪ್ರಚಾರ ಆಗಿರಲಿಲ್ಲ. ದಲಿತರು ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವಲ್ಲಿ ಕೂಡಾ ಮೈತ್ರಿ ನಾಯಕರು ವಿಫಲರಾದರು. ಇವು ದೇವೇಗೌಡರ ಸೋಲಿಗೆ ಪ್ರಮುಖ ಕಾರಣವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ